ಒಂದನೇ ಬುಕ್ಕರಾಯನ ಶಾಸನ ಪಾಠ ಮತ್ತು ಅರ್ಥ

ಸೂಚನೆ:- ಇಲ್ಲಿನ ವಿವರಗಳನ್ನು "ಧರ್ಮಸಮದೃಷ್ಟಿ" ಎಂಬ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ನೀಡಲಾಗಿದೆ.


ಶಾಸನ ವಿಜಯನಗರ ಸಾಮ್ರಾಜ್ಯ ಆರಂಭವಾದ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಹುಟ್ಟಿದೆ. ಇದರ ಕಾಲ ಕ್ರಿ..೧೩೬೮. ಒಮ್ಮೆ ವೈಷ್ಣವರಿಗೂ ಜೈನರಿಗೂ ಜಗಳವಾಗಿ ಜೈನರಿಗೆ ಹಲವು ತೊಂದರೆಗಳಾದುವು. ಜೈನರು ವೀರ ಬುಕ್ಕರಾಯನಲ್ಲಿಗೆ ದೂರನ್ನು ಕೊಂಡೊಯ್ಯಲು ಆತ ಎರಡು ಧರ್ಮಗಳಾದರೂ ಒಂದೇ ಭೇದವೆಣಿಸಲಾಗದು ಎಂದು ಹೇಳಿ ಎರಡು ಪಂಗಡದ ಧುರೀಣರನ್ನು ಕೈ ಕೈ ಹಿಡಿಸಿ ಸ್ನೇಹ ಉಂಟು ಮಾಡಿ, ಒಡಂಬಡಿಕೆಯನ್ನು ಶಾಸನ ಮಾಡಿ ನಿಲ್ಲಿಸಿದನು. ವಿಜಯನಗರದ ಬುಕ್ಕರಾಯನ ಧರ್ಮ ಸಮದೃಷ್ಠಿಗೆ ಶಾಸನ ಸಾಕ್ಷಿಯಾಗಿದೆ. ಶಾಸನವನ್ನು ಶ್ರವಣ ಬೆಳಗೊಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳುತ್ತರಾಭಿಮುಖವಾಗಿ ಸ್ಥಾಪಿಸಲಾಗಿದೆ. ಈಗಲೂ ಸಹ ಶ್ರವಣ ಬೆಳಗೊಳಕ್ಕೆ ಭೇಟಿ ನೀಡಿದಾಗ ಇದನ್ನು ನೋಡಬಹುದಾಗಿದೆ.

 

ಬುಕ್ಕರಾಯನ ಶಾಸನ ಪಾಠವು ದೇವಚಂದ್ರನ (೧೭೭೦-೧೮೪೧) ರಾಜಾವಳಿ ಕಥಾಸಾರದಲ್ಲಿ

(ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ,೧೯೮೮,ಪು.೧೯೮-೧೯೯)ಕೂಡ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಬಂದಿದೆ.

ಶಾಸನ ಪಾಠ ಹೀಗಿದೆ....

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ

ಪಾಷಂಡ ಸಾಗರ ಮಹಾವಡಬಾ ಮುಖಾಗ್ನಿಃ

ಶ್ರೀ ರಂಗರಾಜ ಚರಣಾಂಬಜಮೂಲದಾಸಃ

ಶ್ರೀ ವಿಷ್ಣು ಲೋಕಮಣಿಮಂಡಪ ಮಾರ್ಗದಾಯೀ

ರಾಮಾನುಜೋ ವಿಜಯತೇ ಯತಿರಾಜರಾಜಃ

ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು|| ೧೦ ಬೃಹಸ್ಪತಿವಾರ ಸ್ವಸ್ತಿ|| ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರಗಂಡ ಶ್ರೀ ವೀರಬುಕ್ಕರಾಯನು ಪೃಥ್ವೀರಾಜ್ಯಮಂಮಾಡುತ್ತಾ ಇರುವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬುಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರುಮಲೆ ಪೆರುಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರುಮಣಿ ತಿರುವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರುಕುಲ ಜಾಂಬವ ಕುಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಜೈನ ದರ್ಶನಕ್ಕೆ ಪೂರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರುದುಗಳು ಸಲುವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು.

ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು. ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು. ವೈಷ್ಣವರೂ ಜೈನರು ಒಂದು ಭೆದವಾಗಿ ಕಾಣಲಾಗದು. ಶ್ರೀ ತಿರುಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .

ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು. ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು. ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂಡಿ ಸಂಘನಾಯಕ ಪಟ್ಟಮಂ ಕಟ್ಟಿದರು .

 

ಶಾಸನದ ಪಠ್ಯ -ಅರ್ಥ

ಒಳ್ಳೆಯದಾಗಲಿ, ನಾಸ್ತಿಕರೆಂಬ ಸಮುದ್ರವನ್ನು ಬತ್ತಿಸುವ ಬಡವಾಗ್ನಿಯಾಗಿ, ಶ್ರೀರಂಗನಾಥನ ಪಾದಕಮಲಗಳ ಸೇವಕರಾಗಿ, ಶ್ರೀ ವಿಷ್ಣು ಸನ್ನಿಧಿಯೆಂಬ ರತ್ನ ಮಂಟಪಕ್ಕೆ ಮಾರ್ಗದಾಯಕರಾಗಿ ಇರುವ ಯತಿರಾಜರಾಜರಾದ ರಾಮಾನುಜಾಚಾರ್ಯರಿಗೆ ಜಯವಾಗಲಿ.

ಶಕವರ್ಷ ೧೨೯೦ ನೆಯ ಕೀಲಕನಾಮ ಸಂವತ್ಸರಸದ ಭಾದ್ರಪದ ಮಾಸದ ಶುಕ್ಲಪಕ್ಷದ ದಶಮಿಯ ಗುರುವಾರದಂದು ಶ್ರೀ ಮನ್ಮಹಾಮಂಡಳೇಶ್ವರನೂ ಶತ್ರು ರಾಜರನ್ನೂ ಸದೆಬಡಿಯುವವನೂ, ನುಡಿದಂತೆ ನಡೆಯದ ರಾಜರ ದರ್ಪವನ್ನು ಮುರಿಯುವವನೂ ಆದ ಶ್ರೀ ಬುಕ್ಕರಾಯನು ರಾಜ್ಯಭಾರ ಮಾಡುತ್ತಿರುವಾಗ ಜೈನರಿಗೂ ಶ್ರೀವೈಷ್ಣವರಿಗೂ (ಒಂದು ಸಲ) ವಾಗ್ವಾದವಾಯಿತು.

ಆಗ ಆನೆಯಗೊಂದಿ, ಹೊಸಪಟ್ಟಣ, ಪೆನುಗೊಂಡೆ, ಕಲ್ಲೆಹ -ಇವುಗಳನ್ನು ಒಳಗೊಂಡ ಎಲ್ಲ ನಾಡುಗಳ ಜೈನ ಮತೀಯರು (ಭವ್ಯಜನಂಗಳು) ಬುಕ್ಕರಾಯನಿಗೆ ಶ್ರೀವೈಷ್ಣವರು (ಭಕ್ತರು) ಮಾಡುವ ಅನ್ಯಾಯಗಳನ್ನು ವಿಜ್ಞಾಪಿಸಿಕೊಂಡರು. ಕೋವಿಲ್ ತಿರುಮಲೆ ಪೆರುಮಾಳ್, ಕೋಯಿಲ್ ತಿರುನಾರಾಯಣಪುರ -ಇವೇ ಮುಖ್ಯವಾದ (ಕ್ಷೇತ್ರಗಳ) ಸಕಲಾಚಾರ್ಯರು, ಸಕಲ ಸಮಯಿಗಳು, ಸಕಲ ಸಾತ್ವಿಕರು, ಮೋಷ್ಠಿಕರು(ಅಕ್ಕಸಾಲಿಗರು), ತಿರುಪಣಿ ತಿರುವಿಡಿ  ತಣ್ಣೀರವರು (ನೀರು ಒದಗಿಸಿವ ಜಲಗಾರರು), ನಾಲ್ವತ್ತೆಂಟು ಜನಗಳು, ಸಾಮಂತ ಬೋವರುಗಳು, ತಿರಿಕುಲ ಜಾಂಬವ ಕುಲ ಒಳಗೊಂಡ ಹದಿನೆಂಟು ನಾಡುಗಳ ಶ್ರೀವೈಷ್ಣವರನ್ನು ಬರಮಾಡಿಕೊಂಡು ಮಹಾರಾಜನು ವೈಷ್ಣವರ ಕೈಯಲ್ಲಿ ಜೈನರ ಕೈಯನ್ನು ಹಿಡಿದು ಕೊಟ್ಟು, ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು.

ಜೈನಧರ್ಮಕ್ಕೆ ಹಿಂದೆ ಸಲ್ಲುತ್ತಿದ್ದಂತೆ (ಪೂರ್ವಮರ್ಯಾದೆಯಲು) ಪಂಚಮಹಾವಾದ್ಯಗಳು (ಶೃಂಗವಾದ್ಯ, ತಮಟೆ, ಶಂಖ, ಭೇರಿ, ಜಯಘಂಟೆ) ಕಳಶವು ಸಲ್ಲುವುದು. ಶ್ರೀ ವೈಷ್ಣವರ ಕಡೆಯಿಂದ ಜೈನಧರ್ಮಕ್ಕೆ ಯಾವುದೇ ಹಾನಿಯಾಗಲಿ ವೃದ್ಧಿಯಾಗಲಿ ಆದರೆ ಅದು ವೈಷ್ಣವ ಧರ್ಮಕ್ಕೆ ಆದ ಹಾನಿಯೆಂದು ವೃದ್ಧಿಯೆಂದು ಶ್ರೀವೈಷ್ಣವರು ತಿಳಿಯಬೇಕು. ನಿಯಮದಂತೆ (ಮರ್ಯಾದೆಯಲು) ರಾಜ್ಯದಲ್ಲಿರುವ ಎಲ್ಲಾ ಬಸದಿಗಳಲ್ಲಿ ಶ್ರೀ ವೈ ಷ್ಣವರೇ ಶಾಸನವನ್ನು ಹಾಕಿಸಿ ಇದನ್ನು ಪಾಲಿಸಬೇಕು. ಚಂದ್ರ ಸೂರ್ಯರು ಇರುವವರೆಗೆ ವೈಷ್ಣವ ಧರ್ಮವು ಜೈನಧರ್ಮವನ್ನು ರಕ್ಷಿಸಿಕೊಂಡು ಬರತ್ತದೆ. ವೈಷ್ಣವ ಧರ್ಮ ಜೈನಧರ್ಮಗಳು ಒಂದೇ, ಅವುಗಳ ನಡುವೆ ಭೇದವಿಲ್ಲ. ಅದನ್ನು ಬೇರೆ ಬೇರೆ ಎಂದು ತಿಳಿಯಬಾರದು. ಶ್ರೀ ತಿರುಮಲೆ ತಾತಯ್ಯನವರು ರಾಜಯದ ಎಲ್ಲ ಜೈನಮತೀಯರ ಅನುಮತಿಯಂತೆ ಶ್ರವಣ ಬೆಳುಗೊಳ ಕ್ಷೇತ್ರದಲ್ಲಿ (ಬೆಳುಗೊಳ ತೀರ್ಥದಲ್ಲಿ) ವೈಷ್ಣವ (=ವಿಷ್ಣುದೇವಾಲಯ) ಅಂಗರಕ್ಷೆಗೆ (ಎಂದರೆ ಕಾವಲಿನ ವ್ಯವಸ್ಥೆಗಾಗಿ) ರಾಜ್ಯದಲ್ಲಿರುವ ಎಲ್ಲ ಜೈನರು ಬಾಗಿಲುಗಟ್ಟಳೆಯಾಗಿ (ಪ್ರತಿಮನೆಯವರು) ಮನೆಮನೆಗೆ ವರ್ಷಕ್ಕೆ ಒಂದು ಹಣ ಎಂದು ಕೊಡಬೇಕು. ಹಾಗೆ ಸಂಗ್ರಹಿಸಿದ ಹೊನ್ನಿನಿಂದ ದೇವರ ಕಾವಲಿಗೆ ಇಪ್ಪತ್ತು ಜನರನ್ನು ನೇಮಿಸಬೇಕು. ಉಳಿದ ಹೊನ್ನಿನಿಂದ ಜೀರ್ಣಜಿನಾಲಯಗಳಿಗೆ ಸುಣ್ಣವನ್ನು ಬಳಿಸಬೇಕು. ನಿಯಮದಂತೆ ಚಂದ್ರ ಸೂರ್ಯರು ಇರುವವರೆಗೆ ಪ್ರತಿವರ್ಷ ಹೊನ್ನನ್ನು ಕೊಟ್ಟು ಕೀರ್ತಿಯನ್ನು ಪುಣ್ಯವನ್ನು (ಜೈನರು ಅರ್ಜಿಸಿಕೊಳ್ಳಲಿ) ಹೀಗೆ ಮಾಡಿದ ಕಟ್ಟಳೆಯನ್ನು ಯಾರು ಮೀರಿದರೂ ಆತ ರಾಜದ್ರೋಹಿ. ಜೈನಸಂಘ-ವೈಷ್ಣವ ಸಮಾಜಗಳಿಗೆ ದ್ರೋಹಿ, ಮುನಿಯಾಗಲಿ, ಗ್ರಾಮೀಣನಾಗಲಿ ಧರ್ಮವನ್ನು ಯಾರಾದರೂ ಕೆಡಿಸಿದರೆ ಅವರು ಗಂಗಾನದಿಯ ದಡದಲ್ಲಿ ಹಸುವನ್ನೂ ಬ್ರಾಹ್ಮಣನ್ನೂ ಕೊಂದ ಪಾಪಕ್ಕೆ ಗುರಿಯಾಗುತ್ತಾರೆ.

ತಾನು ಕೊಟ್ಟದ್ದಾಗಲಿ, ಬೇರೆಯವರು ಕೊಟ್ಟದ್ದಾಗಲಿ ಅಪಹರಿಸಿದ್ದಾದರೆ ಅಂಥವನು ಭೂಮಿಯಲ್ಲಿ ಅರವತ್ತು ಸಾವಿರ ಕ್ರಿಮಿಯಾಗಿ ಹುಟ್ಟುತ್ತಾನೆ



Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources