ಅಧ್ಯಾಯ 2: ಕರ್ನಾಟಕದಲ್ಲಿ ಆರಂಭಿಕ ರಾಜಮನೆತನಗಳು - ಕರ್ನಾಟಕದಲ್ಲಿ ಮೌರ್ಯರು
ಲಿಖಿತ ದಾಖಲೆಗಳು ಲಭ್ಯವಾದ ನಂತರದ ಕಾಲವನ್ನು ಇತಿಹಾಸದ ಆರಂಭ ಕಾಲ ಅಥವಾ ಐತಿಹಾಸಿಕ ಕಾಲ ಎಂದು ಕರೆಯುವರು. ಕರ್ನಾಟಕದಲ್ಲಿ ಈ ಕಾಲಘಟ್ಟವು ಅಶೋಕನ ಶಾಸನಗಳಿಗಿಂತ ಎರಡು ಶತಮಾನಗಳ ಹಿಂದೆಯೇ ಆರಂಭವಾಗಿದೆ. ಅಂದರೆ ಸು. ಸಾ.ಶ.ಪೂ 500 . ರಷ್ಟು ಹಿಂದಿನ ಸಾಹಿತ್ಯದ ತುಣುಕುಗಳು ಲಭ್ಯವಾಗಿವೆ. ಕರ್ನಾಟಕದ ಅಶೋಕನ ಶಾಸನಗಳ ಕಾಲವು ಸಾ.ಶ.ಪೂ 259-58 ಎಂದು ಗುರ್ತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಅವನ ಶಾಸನಗಳು ಮೌರ್ಯರ ದಕ್ಷಿಣ ಗಡಿಯನ್ನು ತಿಳಿಸುತ್ತವೆ. (ಬ್ರಹ್ಮಗಿರಿ, ಅಶೋಕ ಸಿದ್ದಾಪುರ & ಜಟಿಂಗ ರಾಮೇಶ್ವರ) ಇಸಿಲ ಎಂಬುದು ಈ ಪ್ರಾಂತ್ಯಕ್ಕಿದ್ದ ಅಂದಿನ ಹೆಸರು. ಸುವರ್ಣಗಿರಿ ಅದರ ರಾಜಧಾನಿ; ಅಂದರೆ ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ನಂಬಲಾಗಿದೆ. ಸು. ಸಾ.ಶ.ವ. 1500 ವರ್ಷಗಳಷ್ಟು ಹಿಂದಿನ ಕನ್ನಡ ಕೃತಿ ʼಸಿಂಗಿರಾಜ ಪುರಾಣʼ ದಲ್ಲಿ ಪಟ್ಟದಕಲ್ಲು ಕುರಿತು ಮಾಹಿತಿ ನೀಡುವಾಗ ಇದು ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಅದಕ್ಕೂ ಹಿಂದೆ 11ನೆ ಶತಮಾನದ ಕೆಲವು ದಾಖಲೆಗಳ ಪ್ರಕಾರ ನಂದರು ಕುಂತಳದಲ್ಲೂ (ಬನವಾಸಿ) ಅಧಿಕಾರ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಾರಣ ಚಿತ್ರದುರ್ಗ ಮತ್ತು ಅದರ ಮೇಲಣ ಪ್ರದೇಶಗಳು ಮೌರ್ಯರು ಮತ್ತು ಅವರಿಗೂ ಹಿಂದೆ ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಇದರಿಂದ ದೃಢವಾಗುತ್ತದೆ. ಏಕೆಂದರೆ ಮೌರ್ಯರು ಇಡೀ ನಂದ ಸಾಮ್ರಾಜ್ಯವನ್ನು ಗೆದ್ದಿದ್ದರಿಂದ ಅವರ ನಂತರ ಅಧಿಕಾರಕ್...