ಬಾದಾಮಿ ಚಾಲುಕ್ಯರ ರಾಜಕೀಯ ಇತಿಹಾಸ

ಮಾಹಿತಿ ಮೂಲ:- ಕಣಜ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಜಾಲತಾಣ.

ಪೀಠಿಕೆ:-  ಆರಂಭದಲ್ಲಿ ಬನವಾಸಿಯ ಕದಂಬರ ಮಾಂಡಲಿಕರಾಗಿದ್ದ ಚಾಲುಕ್ಯರು ಬನವಾಸಿಯ ಕದಂಬರನ್ನು ಪರಾಜಯಗೊಳಿಸಿ ತಮ್ಮ ಸ್ವತಂತ್ರ ಆಳ್ವಿಕೆ ಆರಂಭಿಸಿದರು. ಕದಂಬರಾಗಲಿ, ಗಂಗರಾಗಲಿ ತಮ್ಮ ರಾಜ್ಯವನ್ನು ಒಂದು ಸಾಮ್ರಾಜ್ಯವಾಗಿ ಬೆಳೆಸಲಾಗದೆ ಹೋದರು. ಆದರೆ ಚಾಲುಕ್ಯರು ಕದಂಬರನ್ನು ಪೂರ್ಣವಾಗಿ ಪದಚ್ಯುತರನ್ನಾಗಿ ಮಾಡಿದ್ದಲ್ಲದೇ ಗಂಗರನ್ನು ತಮ್ಮ ಅಧೀನರನ್ನಾಗಿ ಮಾಡಿಕೊಂಡರು.

ಮೂಲದ ಕುರಿತ ಅಭಿಪ್ರಾಯಗಳು

ಪೌರಾಣಿಕ ಮೂಲ:- ವಾತಾಪಿ ಅಥವಾ ಬಾದಾಮಿಯನ್ನು ರಾಜಧಾನಿಯನ್ನಾಗಿ ಹೊಂದಿದ್ದ ಪ್ರಾಚೀನ ಚಾಲುಕ್ಯರ ಶಾಸನಗಳು ಇವರ ಮೂಲದ ವಿಷಯದಲ್ಲಿ ಮೌನವಾಗಿವೆ. ಆದರೆ ವೆಂಗಿಯ ಪೂರ್ವ ಚಾಲುಕ್ಯರ ಹಾಗೂ ಕಲ್ಯಾಣದ ಪಶ್ಚಿಮ ಚಾಲುಕ್ಯರ ೧೧-೧೨ನೇ ಶತಮಾನದ ಶಾಸನಗಳಲ್ಲಿ ಈ ಮನೆತನದ ಮೂಲದ ವಿಷಯವಾಗಿ ಕೆಲವು ಕತೆಗಳು ಕಂಡುಬರುತ್ತವೆ. ಕಲ್ಯಾಣದ ಚಾಲುಕ್ಯರ ಶಾಸನಗಳು ಮತ್ತು ಬಿಲ್ಹಣನ ವಿಕ್ರಮಾಂಕದೇವಚರಿತಂ ಎಂಬ ಕೃತಿಗಳಿಂದ ತಿಳಿಯುವಂತೆ, ಚಾಲುಕ್ಯ ಎಂಬ ಹೆಸರು ಬಂದದ್ದು ಚುಲುಕ ಎಂಬುದರಿಂದ. ಅದಕ್ಕೆ ಅಂಗೈಯ ಹಳ್ಳ ಎಂದು ಅರ್ಥ. ಬ್ರಹ್ಮನು ಒಮ್ಮೆ ಸಂಧ್ಯೋಪಾಸನೆ ಮಾಡುತ್ತಿದ್ದಾಗ, ಭೂಮಿಯಲ್ಲಿ ಒಂದೇ ಸಮನೆ ಕೆಡಕು ಹೆಚ್ಚುತ್ತಿರುವುದರಿಂದ ಅದನ್ನು ಕೊನೆಗೊಳಿಸಲು ಒಬ್ಬ ವೀರನನ್ನು ಅನುಗ್ರಹಿಸಬೇಕೆಂದು ಇಂದ್ರನು ಬ್ರಹ್ಮನನ್ನು ಕೋರಿದನು. ಆಗ ಬ್ರಹ್ಮನು ತನ್ನ ಚುಲುಕ ಅಂದರೆ ಅಂಗೈಯನ್ನು ನೋಡಿದನು. ಅಲ್ಲಿಂದ ಒಬ್ಬ ಮಹಾಪರಾಕ್ರಮಿ ಹುಟ್ಟಿಬಂದನು. ಅವನೇ ಚಾಲುಕ್ಯರ ಮೂಲಪುರುಷ. ಚುಲಕದಿಂದ ಜನಿಸಿದವನಾದ್ದರಿಂದ ಅವನಿಗೆ ಚಾಲುಕ್ಯ ಎಂಬ ಹೆಸರಾಯಿತು. ಗುಜರಾತಿನ ಚಾಲುಕ್ಯರಲ್ಲೂ ಇದೇ ರೀತಿಯ ಕತೆಯಿದೆ.

ಉತ್ತರದ ಮೂಲ:- ಆದರೆ, ಪೂರ್ವಚಾಲುಕ್ಯರ (ವೆಂಗಿ) ಶಾಸನಗಳು ಬೇರೆ ಕತೆಯನ್ನು ಹೇಳುತ್ತವೆ. ಅದರಂತೆ, ಮಹತ್ವಾಕಾಂಕ್ಷೆಯಿದ್ದ ಅಯೋಧ್ಯೆಯ ವಿಜಯಾದಿತ್ಯನೆಂಬ ರಾಜನು ದಕ್ಷಿಣಾಪಥವನ್ನು ಜಯಿಸುವ ಸಲುವಾಗಿ ದಕ್ಷಿಣಕ್ಕೆ ಬಂದನು. ಆದರೆ ಪಲ್ಲವರ ತ್ರಿಲೋಚನ ಪಲ್ಲವನೊಂದಿಗೆ ನಡೆದ ಯುದ್ಧದಲ್ಲಿ ಅವನು ಮರಣ ಹೊಂದಿದನು. ಆಗ ಗರ್ಭಿಣಿಯಾಗಿದ್ದ ಪತ್ನಿಯೂ ಸೇರಿದಂತೆ ಅವನ ಆಪ್ತ ಪರಿವಾರವು ಮುಡಿವೇಮೂ ಎಂಬ ಬ್ರಾಹ್ಮಣ ಅಗ್ರಹಾರವೊಂದರಲ್ಲಿ ಆಶ್ರಯ ಪಡೆಯಿತು. ಅಲ್ಲಿ ವಿಷ್ಣುಭಟ್ಟ ಸೋಮಯಾಜಿ ಎಂಬ ಬ್ರಾಹ್ಮಣನು ಅವರನ್ನು ನೋಡಿಕೊಂಡನು. ಸೂಕ್ತಕಾಲದಲ್ಲಿ ರಾಣಿಯು ಗಂಡು ಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ವಿಷ್ಣುವರ್ಧನ ಎಂದು ಹೆಸರಿಡಲಾಯಿತು. ಮುಂದೆ ಈ ಬಾಲಕನಿಗೆ ತನ್ನ ಜನ್ಮವಿವರ, ತಂದೆಯ ವಿಚಾರ ಎಲ್ಲಾ ತಿಳಿದು, ಅವನು ಅಲ್ಲೇ ಸಮೀಪದಲ್ಲಿದ್ದ ಚಾಲುಕ್ಯ ಎಂಬ ಬೆಟ್ಟದ ಮೇಲಕ್ಕೆ ಹೋಗಿ ಅಲ್ಲಿ ಕಾರ್ತಿಕೇಯ, ನಾರಾಯಣ, ಸಪ್ತಮಾತೃಕೆಯರು ಮತ್ತು ನಂದಭಗವತೀ ಮೊದಲಾದ ದೇವ ದೇವಿಯರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದನು. ಅವರಿಂದ ಅಪಾರಶಕ್ತಿಯನ್ನು ವರವಾಗಿ ಪಡೆದು ತನ್ನ ಮೊದಲಿನ ರಾಜತ್ವವನ್ನು ಗಳಿಸಲು ಸಮರ್ಥನಾದನು.

ಅಲ್ಲದೇ, ಪೂರ್ವಚಾಲುಕ್ಯರ ಶಾಸನಗಳು ಇನ್ನೂ ಒಂದು ಪೌರಾಣಿಕ ಸಂದರ್ಭವನ್ನು ವಿವರಿಸುತ್ತವೆ. ಭಗವಾನ್ ನಾರಾಯಣ(ವಿಷ್ಣು)ನಿಂದ ೫೨ ಜನ ರಾಜರು ವಿಜಯಾದಿತ್ಯನವರೆಗೆ ಅಯೋಧ್ಯೆಯಲ್ಲಿ ಆಳಿದರು. ಆಮೇಲೆ ಅಲ್ಲಿಂದ ದಕ್ಷಿಣಕ್ಕೆ ಬಂದರು. ಅಲ್ಲಿ ದಕ್ಷಿಣಾಪಥದಲ್ಲಿ ೧೬ ಜನ ರಾಜರು ಆಳಿದರು. ಆಮೇಲೆ ಅವರು ದುರ್ಬಲರಾದರು. ಈ ವಂಶದಲ್ಲಿ ಜನಿಸಿದ ಜಯಸಿಂಹನೆನ್ನುವವನು ಬಲವನ್ನು ಕೂಡಿಸಿಕೊಂಡು ರಾಷ್ಟ್ರಕೂಟನ ಮಗ ಇಂದ್ರನನ್ನು ಸೋಲಿಸಿದನು. ಈ ಕತೆಯು ತರ್ಕಸಮ್ಮತವಾಗಿಲ್ಲ.

ತೆಲುಗು ಮೂಲ:- ಕೆ. ವಿ. ರಮೇಶ್‌ರವರು ಹೀಗೆ ಅಭಿಪ್ರಾಯಪಡುತ್ತಾರೆ: “ಚಾಲುಕ್ಯರ ಅಯೋಧ್ಯೆಯ ಸಂಬಂಧವನ್ನು ಸಾರಾಸಗಟಾಗಿ ನಿರಾಕರಿಸುವುದರಿಂದ ಇತಿಹಾಸಕಾರರು, ಸುವ್ಯವಸ್ಥಿತವಾದ ಸಾಮೂಹಿಕ ವಲಸೆ ಎಂಬಂತೆ ತೋರುವ ಘಟನೆಯನ್ನು ನೋಡಲಾರದೆ ಹೋಗಿದ್ದಾರೆ. ವಾತಾಪಿಯಲ್ಲಿ ನೆಲೆಸುವುದಕ್ಕಿಂತ ಮೊದಲು ಅವರು ಉತ್ತರದಿಂದ ಗುಜರಾತ್ ಮತ್ತು ಮಹಾರಾಷ್ಟ್ರಗಳ ಮಾರ್ಗವಾಗಿ ಬಂದಿರುವುದು ಸಾಧ್ಯ. ಕ್ರಿ.ಶ.೨ನೆಯ ಶತಮಾನದ್ದೆಂದು ಹೇಳಲಾಗಿರುವ, ನಾಗಾರ್ಜುನಕೊಂಡದಲ್ಲಿ ದೊರೆತ ಪ್ರಾಕೃತ ಭಾಷೆಯ ಒಂದು ಸಣ್ಣ ಶಾಸನದಲ್ಲಿ ಒಬ್ಬ ಮಹಾಸಾಮಂತ ಮತ್ತು ಮಹಾತಳವಾರ ವಾಸಿಷ್ಠಪುತ್ರ ಖಂಡಚೆಲಿಕಿ ರಮ್ಮಾಣಕನೆಂಬುವವನನ್ನು ಉಲ್ಲೇಖಿಸಿದೆ. ಅವನು ಇಕ್ಷ್ವಾಕು ಮನೆತನಕ್ಕೆ ಸೇರಿದವನೆಂದು ಹೇಳಲಾಗಿದೆ. ಇದೇ ಚೆಲಿಕಿ/ಚಾಲುಕ್ಯ ಎಂಬ ಪದದ ಮೊದಲನೆಯ ಉಲ್ಲೇಖ.

ವಿದೇಶೀ ಮೂಲ:- ಮಧ್ಯ ಏಷ್ಯಾದಲ್ಲಿನ ಸೆಲ್ಯುಸಿಡ್‌ ಮತ್ತು ಅರ್ಸೆಸಿಡೆ ಎಂಬ ಎರಡು ರಾಜಮನೆತನಗಳವರು ಭಾರತದ ವಾಯುವ್ಯ ಭಾಗದ ಮೂಲಕ ಮುಂದೆ ದಕ್ಷಿಣಕ್ಕೆ ಬಂದು ನೆಲೆಸಿರಬಹುದು ಎಂಬುದು ಕೆಲ ವಿದೇಶೀ ವಿದ್ವಾಂಸರ ಅಭಿಪ್ರಾಯ. ಸೆಲ್ಯುಸಿಡ್‌ ಎಂಬ ಪದದಿಂದಲೆ ಚಾಲುಕ್ಯ ಎಂಬ ಪದೋತ್ಪತ್ತಿ ಆಗಿದೆ ಎಂತಲೂ ಹಾಗೂ ಸೆಲ್ಯುಸಿಡ್‌ ಮತ್ತು ಅರ್ಸೆಸಿಡೆಗಳ ನಡುವಿನ ಪಾರಂಪರಿಕ ವೈಷಮ್ಯದ ಕಾರಣದಿಂದಲೇ ಮುಂದೆ ಚಾಲುಕ್ಯರು ಮತ್ತು ಪಲ್ಲವರ ನಡುವೆ ನಡೆದ ನಿರಂತರ ಯುದ್ಧಗಳಿಗೆ ಕಾರಣ ಎಂಬುದಾಗಿ ಅವರು ವಾದಿಸುತ್ತಾರೆ. ಇಲ್ಲಿ ಅರ್ಸೆಸಿಡೆಗಳೆಂದರೆ ಪರ್ಷಿಯಾ ಭಾಗದಲ್ಲಿ ಪ್ರಾಚೀನ ಕಾಲದಲ್ಲಿದ್ದ ಪಹಲ್ಲವ ಎಂಬ ರಾಜಮನೆತನದವರು ಎಂದು ಹೇಳಲಾಗಿದೆ.

ಕನ್ನಡ ಮೂಲ: ಚಲುಕಿ ಎಂಬ ಮೂಲಪದ ಕನ್ನಡದ್ದು. ಚಲ್ಕಿ, ಸಲುಕಿ ಅಥವಾ ಸಲ್ಕಿ ಎಂದರೂ ಅದೇ. ಸಲ್ಕಿ ಎನ್ನುವುದು ಒಂದು ಕೃಷಿ ಉಪಕರಣದ ಹೆಸರು. ಚಾಲುಕ್ಯ ಪ್ರದೇಶದ ರೈತರು ಅದನ್ನು ಉಪನಾಮವಾಗಿ ಉಪಯೋಗಿಸಿರಬಹುದು. ಇಂದೂ ನಾವು ಸಲ್ಕೆಪ್ಪ, ಗುದ್ಲೆಪ್ಪ ಮೊದಲಾದ ಹೆಸರುಗಳನ್ನು ನೋಡುತ್ತೇವೆ. ಆದ್ದರಿಂದ, ಈ ಚಾಲುಕ್ಯರು ಮೊದಲು ಕೃಷಿಕರಾಗಿದ್ದೂ ನಿಧಾನವಾಗಿ ಅಧಿಕಾರಕ್ಕೆ ಏರಿ  ಒಂದು ರಾಜ್ಯದ ಅರಸರಾದರು. ಪರಂಪರೆಯಿಂದ ಬಂದಿದ್ದ ರೂಢಿಯಂತೆ ತಮ್ಮ ಕುಟುಂಬಕ್ಕೆ ಪೌರಾಣಿಕ ನಾಯಕರೊಂದಿಗೆ ಸಂಬಂಧ ಕಲ್ಪಿಸಿ ಅದಕ್ಕೆ ಪಾವಿತ್ರ್ಯವನ್ನು ಸಾಮಾಜಿಕ ಸ್ಥಾನಗೌರವವನ್ನೂ ಕೊಡಲು ಪ್ರಯತ್ನಿಸಿದರು. ಈ ಸಿದ್ಧಾಂತವನ್ನು ಇನ್ನಷ್ಟು ವಿಚಾರ ಮಾಡಬಹುದು. ಪುಲಿಕೇಶಿ, ಬಿಟ್ಟರಸ ಎಂಬುವಂತಹ ರಾಜರ ಹೆಸರುಗಳಾಗಲಿ, ನೋಡುತ್ತಗೆಲ್ವೊಂ ಮೊದಲಾದ ಬಿರುದುಗಳಾಗಲಿ ಕನ್ನಡ ಮೂಲವನ್ನು ಸೂಚಿಸುತ್ತವೆ. ಚಾಲುಕ್ಯರು ಕನ್ನಡ ಲಿಪಿಗೂ ಭಾಷೆಗೂ ಉದಾರ ಆಶ್ರಯ ನೀಡಿದರು. ಕನ್ನಡದ ಶಾಸನ ಸಾಹಿತ್ಯವು ವಿಕಾಸಗೊಂಡಿತು. ಚಾಲುಕ್ಯ ಸೈನ್ಯವನ್ನು ಪರಾಕ್ರಮಯುತವಾದು ದೆಂದು ಪರಿಗಣಿಸಿ ರಾಷ್ಟ್ರಕೂಟರು ಅವರನ್ನು ‘ಕರ್ನಾಟಬಲ ಎಂದು ಕರೆದರು. ಈ ಚಾಲುಕ್ಯರು ವರಾಹವನ್ನು ತಮ್ಮ ರಾಜಲಾಂಛನವಾಗಿರಿಸಿಕೊಂಡಿದ್ದರು. ಅವರ ಶಾಸನಗಳ ಪ್ರಾರಂಭದಲ್ಲಿ ಸಾಮಾನ್ಯವಾಗಿ ವಿಷ್ಣುಸ್ತುತಿಯು ಕಂಡುಬರುತ್ತದೆ. ಅಲ್ಲದೆ ತಾವು ಹಾರೀತಿಪುತ್ರರೆಂದೂ, ಮಹಾಸೇನ, ಅಂದರೆ ಭಗವಾನ್ ಕಾರ್ತಿಕೇಯನ ಮತ್ತು ತಮ್ಮ ಕುಟುಂಬದ ಏಳಿಗೆಯನ್ನು ಅನುಗ್ರಹಿಸಿದ ಸಪ್ತಮಾತೃಕೆಯರ ಆರಾಧಕರೆಂದು ಹೇಳಿಕೊಳ್ಳುತ್ತಾರೆ. ವೈದಿಕ ಧರ್ಮವನ್ನು ಅವರು ಪೋಷಿಸಿದರು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪೋಷಣೆ ನೀಡಿ ಅವರು ತಮ್ಮ ಧರ್ಮ ಸಹಿಷ್ಣುತೆಯನ್ನು ಮೆರೆದರು.

ರಾಜಕೀಯ ಇತಿಹಾಸ

ಜಯಸಿಂಹ (ಸು.೫೦೦೫೨೦) ಮತ್ತು ರಣರಾಗ (೫೨೦೫೪೦)

ಈಗ ತಿಳಿದಿರುವಂತೆ ಅವರ ಮೊದಲ ರಾಜ ಜಯಸಿಂಹ. ಅವನನ್ನು ಕುರಿತು ಏನೂ ತಿಳಿದಿಲ್ಲ. ಅವನು ಕದಂಬರಿಗೆ ಸಾಮಂತನಾಗಿದ್ದಿರಬಹುದು. ಅವನೊಬ್ಬ ದೊಡ್ಡ ಪರಾಕ್ರಮಿ. ಅನೇಕ ಯುದ್ಧದಲ್ಲಿ ಜಯಲಕ್ಷ್ಮಿಯನ್ನು ತನ್ನವಳನ್ನಾಗಿಸಿಕೊಂಡಿದ್ದನು. ಆದರೆ ಅವನು ಮಾಡಿದ ಯುದ್ಧಗಳಾಗಲಿ, ಸೋಲಿಸಿದ ವೈರಿಗಳಾಗಲಿ ತಿಳಿಯುವುದಿಲ್ಲ. ಆದರೆ ಅವುಗಳಲ್ಲಿ ಒಂದು, ಬಾದಾಮಿಗೆ ಬರುವ ದಾರಿಯಲ್ಲಿ ಗುಜರಾತಿನಲ್ಲಿ ರಾಷ್ಟ್ರಕೂಟ ಇಂದ್ರನೊಂದಿಗೆ ಮಾಡಿದ ಯುದ್ಧವಾಗಿರಬೇಕು. ಈ ಸಾಮಾನ್ಯ ಹೇಳಿಕೆಯಿಂದ ನಮಗೆ ಯಾವ ಚಿತ್ರವೂ ದೊರಕುವುದಿಲ್ಲ. ಆತನ ಹಿರಿಯಮಗನ ಹೆಸರು ಬುದ್ಧವರ್ಮನ್ ಎಂದು ಹೇಳಲಾಗಿದೆ. ಅವನಿಗೆ ರಣವಿಕ್ರಾಂತ ಎಂಬ ಹೆಸರೂ ಇದ್ದಿತು. ಇವನೂ ರಣರಾಗನೂ ಒಬ್ಬನೆಯೋ ಅಲ್ಲವೋ ತಿಳಿಯದು. ಜಯಸಿಂಹನ ನಂತರ ಅವನ ಮಗ ರಣರಾಗನು ಪಟ್ಟಕ್ಕೆ ಬಂದನು. ತಂದೆಯೆಂತೆಯೇ ಅವನು ಹಲವು ಯುದ್ಧಗಳಲ್ಲಿ ಪಾಲುಗೊಂಡನು. ವೈರಿಗಳಲ್ಲಿ ಭೀತಿಯನ್ನು ಬಿತ್ತಿದನು. ತನ್ನ ಜನರ ಪ್ರೇಮವನ್ನು ಸಂಪಾದಿಸಿದನು. ಅವನು ಶಿವಭಕ್ತನಾಗಿದ್ದನು. ಈ ಇಬ್ಬರೂ ರಾಜರ ಆಡಳಿತಾವಧಿ ಒಟ್ಟು 4೦ ವರ್ಷ (ಸು. ೫೦೦-೫೨೦ ಮತ್ತು ೫೨೦ರಿಂದ ೫೪೦). ಎಂದು ಹೇಳಲಾಗಿದೆ. ಇಬ್ಬರನ್ನೂ ನೃಪ ಅಥವಾ ರಾಜ ಎಂದಷ್ಟೇ ಕರೆಯಲಾಗಿದೆ.

ಒಂದನೇ ಪುಲಕೇಶಿ (೫೪೦೫೬೬)

ಪುಲಕೇಶಿಯು ರಣರಾಗನ ಪ್ರೀತಿಯ ಮಗ. ಪೊಲಕೇಶಿ, ಪೊಲೆಕೇಶಿ, ಪೊಲಿಕೇಶಿ, ಪುಲಿಕೇಶಿ ಎಂದೆಲ್ಲಾ ರೂಪಗಳಿಂದ ಉಚ್ಚರಿಸುವ ಈ ಹೆಸರಿನ ಅರ್ಥವೇನೆಂಬುದು ಸ್ಪಷ್ಟವಾಗುವುದಿಲ್ಲ. ‘ಹುಲಿಯ ಕೂದಲುಳ್ಳವನು ‘ಕಾಂತಿಯುಕ್ತವಾದ ಕೂದಲುಳ್ಳವನು ‘ಹುಲಿ-ಸಿಂಹ ಇತ್ಯಾದಿಯಾಗಿ ಅರ್ಥಗಳನ್ನು ಕಲ್ಪಿಸಲಾಗಿದೆ. ರಮೇಶ್ ಅವರು ಸರಳವಾದ ಒಂದು ವಿವರಣೆ ಕೊಟ್ಟಿದ್ದಾರೆ. ಅವರ ಪ್ರಕಾರ ಪೊಲೆ ಎನ್ನುವುದು ತಮಿಳಿನ ಪುವೈ ಎಂಬುದರೊಂದಿಗೆ ಸಂಬಂಧಿಸಿದೆ. ಅದಕ್ಕೆ ಇರುವ ಹಲವು ಅರ್ಥಗಳಲ್ಲಿ ಒಂದು ‘ಗಂಟು ಹಾಕುವುದು ಎಂದು. ಕೇಶಿನ್ ಎಂದರೆ ತಲೆಗೂದಲುಳ್ಳವನು ಹಾಗಾಗಿ ಅದಕ್ಕೆ ತಲೆಗೂದಲನ್ನು ಗಂಟು ಹಾಕಿಕೊಂಡವನು ಎಂದು ಅವರು ಅರ್ಥ ಮಾಡಿದ್ದಾರೆ. ಇದೂ ಇತರ ತಮಿಳು ಮತ್ತು ಸಂಸ್ಕೃತಗಳಿಂದಲೋ, ಕನ್ನಡ, ಸಂಸ್ಕೃತ ಮತ್ತಿತರ ದ್ರಾವಿಡ ಭಾಷೆ ಮತ್ತು ಸಂಸ್ಕೃತದಿಂದಲೋ ಬಂದಿರುವ ಅರ್ಥ. ಒಪ್ಪಿಕೊಳ್ಳಲು ಅರ್ಹವಾಗಿಲ್ಲ.

ಒಂದನೇ ಪುಲಕೇಶಿಯೇ ವಾಸ್ತವವಾಗಿ ಚಾಲುಕ್ಯ ರಾಜ್ಯದ ಸ್ಥಾಪಕನೆನ್ನಬೇಕು. ಕದಂಬರನ್ನು ಸೋಲಿಸಿದ ಮೇಲೆ ಬಹುಬೇಗ ಕರ್ನಾಟಕದಲ್ಲಿ ಈ ರಾಜ್ಯವು ಬೆಳೆಯಿತು. ರಣವಿಕ್ರಮನೆಂದೂ ಹೆಸರಾಗಿದ್ದ ಅವನನ್ನು ಎಲ್ಲರಿಗೂ ಮಾದರಿಯಾಗುವ ಉತ್ತಮ ನಡವಳಿಕೆಗಾಗಿ ಸತ್ಯಾಶ್ರಯ ಎಂದೂ ಶ್ರೀಪೃಥ್ವೀವಲ್ಲಭ ಎಂದೂ ವರ್ಣಿಸಿದರು. ಅವನು ಮಾನವಧರ್ಮಶಾಸ್ತ್ರ, ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಇತಿಹಾಸಗಳಲ್ಲಿ ಕೋವಿದನಾಗಿದ್ದನು. ದುರ್ಭೇದ್ಯವಾದ ಒಂದು ಕೋಟೆಯನ್ನು ಕಟ್ಟಿಸಿದನು. ಶ್ರೌತನಿಯಮ ಗಳಿಗನುಗುಣವಾಗಿ ಅಶ್ವಮೇಧವನ್ನೂ ಇತರ ಕೆಲವು ಯಜ್ಞಗಳನ್ನೂ ಆಚರಿಸಿದನು. ಅಗ್ನಿಷ್ಟೋಮ, ವಾಜಪೇಯ, ಬಹುಸುವರ್ಣ ಮತ್ತು ಪುಂಡರೀಕ ಯಜ್ಞಗಳನ್ನು ಮಾಡಿ ಪ್ರತಿ ಸಂಕ್ರಾಂತಿಯಂದು ಷೋಡಶ ಮಹಾದಾನಗಳನ್ನು ಮಾಡಿದನು. ಇವೆಲ್ಲ ಅವನ ಸಾಮ್ರಾಟ ಸ್ಥಾನಗೌರವವನ್ನು ಸೂಚಿಸುತ್ತವೆ. ಬಾದಾಮಿಯಲ್ಲಿ ಅಜೇಯವೆನಿಸಿದ ಒಂದು ಕೋಟೆಯನ್ನು ಕಟ್ಟಿಸಿದನು. ಸೇಂದ್ರಕವಂಶದ ಶ್ರೀವಲ್ಲಭದೇವಿಯೂ, ಇಂದು ಕಾಂತಿಯೂ ಅವನ ಇಬ್ಬರು ರಾಣಿಯರು. ಜಯಸಿಂಹನಿಗೆ ಬುಧವರ್ಮನೆಂಬ ಹಿರಿಯ ಮಗನಿದ್ದನೆಂದೂ, ಅವನ ಬಿರುದು ರಣವಿಕ್ರಾಂತ ಎಂದೂ, ಆದ್ದರಿಂದ ಕೈರಾ ಫಲಕಗಳಲ್ಲಿ ಉಲ್ಲೇಖವಾಗುವ ವಿಜಯರಾಜನು ಪುಲಕೇಶಿಯ ಬಲಅಣ್ಣನಾಗಿರಬೇಕೆಂದೂ ರಮೇಶ್ ವಾದ ಮಾಡುತ್ತಾರೆ. ಒಂದನೇ ಪುಲಕೇಶಿಯ ಹಿರಿಯಮಗ ಪೂಗವರ್ಮ, ಇನ್ನಿಬ್ಬರು ಕೀರ್ತಿವರ್ಮ ಮತ್ತು ಮಂಗಳೇಶ. ತಮಿಳಿನಲ್ಲಿ ಪುಗಳ್ ಎಂದರೆ ‘ಕೀರ್ತಿ ಎಂದರ್ಥ. ಆದ್ದರಿಂದ ಪೂಗವರ್ಮ, ಒಂದನೇ ಕೀರ್ತಿವರ್ಮ ಒಬ್ಬರೇ ಎಂದು ರಮೇಶ್ ಹೇಳುವುದನ್ನು ಒಪ್ಪುವುದು ಕಷ್ಟ. ಕೀರ್ತಿವರ್ಮನು ಕತ್ತಿ-ಅರಸ ಎಂದೂ ಹೆಸರಾಗಿದ್ದಾನೆ.

ಒಂದನೇ ಪುಲಕೇಶಿಯು ಮಹಾಕೂಟ ದೇವಾಲಯವನ್ನು ಕಟ್ಟಿಸಿದನು. ಇದೇ ಹೊಸಮಹಾಕೂಟದಲ್ಲಿರುವ ಮಕುಟೇಶ್ವರ ದೇವಾಲಯ. ಮಂಗಳೇಶ ಶಾಸನದಲ್ಲಿ ಅವನ ತಂದೆ ಮತ್ತು ಅಣ್ಣ ಒಂದನೇ ಕೀರ್ತಿವರ್ಮರು ಮಕುಟೇಶ್ವರನಾಥ ದೇವಾಲಯಕ್ಕೆ ದಾನ ಮಾಡಿದುದನ್ನು ಸ್ಪಷ್ಟವಾಗಿ ಹೇಳಿದೆ.

ಒಂದನೆ ಕೀರ್ತಿವರ್ಮ 566-96

ಒಂದನೇ ಪುಲಕೇಶಿಯ ಹಿರಿಯ ಮಗನಾದ ಒಂದನೇ ಕೀರ್ತಿವರ್ಮನು ತನಗೆ ದೊರೆತ ರಾಜ್ಯವನ್ನು ವಿಸ್ತರಿಸುವ ಕಾರ್ಯವನ್ನು ಕೈಗೊಂಡನು. ನಳರು, ಮೌರ್ಯರು ಮತ್ತು ಕದಂಬರನ್ನು ಸೋಲಿಸಿ ಅವರ ರಾಜ್ಯಗಳನ್ನು ಸೇರಿಸಿಕೊಂಡನು. ಅಲ್ಲದೆ, ಉತ್ತರದಲ್ಲಿ ಅಂಗ, ವಂಗ, ಮಗಧ, ಕಳಿಂಗ, ಮಟ್ಟೂರ ಮತ್ತು ವದ್ರಕರನ್ನೂ; ದಕ್ಷಿಣದಲ್ಲಿ ವೈಜಯಂತ, ಕೇರಳ, ಗಂಗ, ಮೂಷಕ, ಪಾಂಡ್ಯ, ದ್ರಮಿಳ, ಚೋಳಿಯ ಮತ್ತು ಅಳುಕರನ್ನೂ ಗೆದ್ದನೆಂದು ವರ್ಣಿಸಲಾಗಿದೆ. ಉತ್ತರದಲ್ಲಿ ಗುಪ್ತರ ಅವನತಿಯ ನಂತರ ಹೆಸರಿಸಬಹುದಾದ ದೊಡ್ಡ ಶಕ್ತಿ ಯಾವುದೂ ಇರಲಿಲ್ಲ. ಅವರೆಲ್ಲ ಸಣ್ಣ ಸಣ್ಣ ವಿಭಾಗಗಳಾಗಿ ರೂಢಿಯ ಪಟ್ಟಿಗೆ ಸೇರಿದವರಾಗಿದ್ದರು. ಕದಂಬರು (ಗೋವಾದ ಸುತ್ತಮುತ್ತ ಇದ್ದ), ಕೊಂಕಣದ ಮೌರ್ಯರು, ದಕ್ಷಿಣ ಕನ್ನಡದ ಆಳುಪರು (ಆಳುಕರು) ತಮ್ಮದೇ ದೃಷ್ಟಿಯಿಂದ ಬಲಶಾಲಿಗಳಾದ ಅರಸರಾಗಿದ್ದರು. ಅವರನ್ನು ಪುಲಕೇಶಿಯು ಪರಾಜಯಗೊಳಿಸಬೇಕಾಯಿತು. ಕದಂಬರನ್ನೇನೋ ಅವನು ಮೊದಲೇ ಪದಚ್ಯುತಗೊಳಿಸಿದ್ದನು. ಆದರೆ ಪೂರ್ತಿಯಾಗಿ ಅವರನ್ನು ಸೋಲಿಸಿರಲಿಲ್ಲ. ಮನೆತನದ ಕೆಲವು ಸದಸ್ಯರು ಇನ್ನೂ ಕೆಲವು ಸ್ಥಾನಗಳಲ್ಲಿ ಮುಂದುವರಿದಿದ್ದರು. ದಕ್ಷಿಣ ಕರ್ನಾಟಕದಲ್ಲಿ ಗಂಗವಂಶದ ದುರ್ವಿನೀತನು ಆಳುತ್ತಿದ್ದನು. ನಳರು ಬಳ್ಳಾರಿ-ಕರ್ನೂಲು ಪ್ರದೇಶದಲ್ಲಿ ಆಳುತ್ತಿದ್ದರು. ಸೇಂದ್ರಕರು ಚಾಲುಕ್ಯರ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು. ಶ್ರೀವಲ್ಲಭಸೇನಾ ನಂದರಾಜನು ತನ್ನ ಮಗಳನ್ನು ಕೀರ್ತಿವರ್ಮನಿಗೆ ಮದುವೆ ಮಾಡಿಕೊಟ್ಟನು. ಕೀರ್ತಿವರ್ಮನೂ ಬಹುಸುವರ್ಣ, ಅಗ್ನಿಷ್ಟೋಮ ಮೊದಲಾದ ಯಜ್ಞಗಳನ್ನು ಆಚರಿಸಿದನು. ಅವನ ತಮ್ಮ ಮಂಗಳೇಶನು ಬಾದಾಮಿಯಲ್ಲಿ ಒಂದು ಗುಹಾದೇವಾಲಯ(ವಿಷ್ಣುಗೃಹ)ವನ್ನು ನಿರ್ಮಿಸಿದನು. ಅದರಿಂದ ಬಂದ ಪುಣ್ಯವು ತನ್ನ ಅಣ್ಣನಿಗೆ ಸೇರಲಿ ಎಂದು ಬಯಸಿದನು. ಈ ಸಂದರ್ಭದಲ್ಲಿ ನಾರಾಯಣಬಲಿಯ ಭಾಗವಾಗಿ ಲಾಂಜಿಗೇಶ್ವರ ಎಂಬ ಗ್ರಾಮವನ್ನು ದಾನವಾಗಿ ಕೊಟ್ಟನು. ಸಾಮಾನ್ಯವಾಗಿ ಯಾರಾದರೂ ಅಸಹಜವಾದ ಸಾವನ್ನಪ್ಪಿದರೆ ಅವರ ಅಂತಿಮಕ್ರಿಯೆಗಳ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆದ್ದರಿಂದ, ಕೀರ್ತಿವರ್ಮನು ಬಹುಶಃ ಯಾವುದೋ ಅಪರಿಹಾರ್ಯಗಳಿಗೆ ಬಲಿಯಾಗಿ ಅಸಹಜವಾದ ಸಾವನ್ನು ಪಡೆದನು ಎಂದು ಸೂಚಿಸಬಹುದಾಗಿದೆ.

ಕೀರ್ತಿವರ್ಮನಿಗೆ ಸೇನಂದರಾಜನ ಮಗಳಲ್ಲಿ ಎರಡನೇ ಪುಲಕೇಶಿ ಎಂಬ ಮಗನು ಜನಿಸಿದನು. ಇತರ ಪುತ್ರರು ವಿಷ್ಣುವರ್ಧನ, ಧಾರಾಶ್ರಯ, ಜಯಸಿಂಹ ಮತ್ತು ಬುದ್ಧವರಸ. ಮಕ್ಕಳು ಇನ್ನೂ ಪ್ರಾಪ್ತವಯಸ್ಕರಾಗಿರಲಿಲ್ಲವಾದ್ದರಿಂದ ರಾಜ್ಯದ ಆಡಳಿತದ ಹೊಣೆಯನ್ನು ತನ್ನ ತಮ್ಮ ಮಂಗಳೇಶನಿಗೆ ಅವನು ವಹಿಸಿದನು. ಕೀರ್ತಿವರ್ಮನಿಗೆ ರಣಪರಾಕ್ರಮ ಎಂಬ ಬಿರುದು ಪ್ರಿಯವಾದರೆ, ಅವನ ತಮ್ಮನು ಉರುರಣ ಪರಾಕ್ರಮ ಎಂಬ ಬಿರುದನ್ನು ಧರಿಸಿದನು. ಬಾದಾಮಿ ಗುಹಾಶಾಸನದ ಕಾಲ ಕ್ರಿ.ಶ.೫೭೮, ಅಂದರೆ ಶಕ ೫೦೦ ಅದು ಕೀರ್ತಿವರ್ಮನ ಆಳಿಕೆಯ ೧೨ನೇ ವರ್ಷ. ಆದ್ದರಿಂದ ಅವನು ಕ್ರಿ.ಶ. ೫೬೬ರಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿರ ಬೇಕು.

ಮಂಗಳೇಶ (೫೯೬೬೧೦)

ಮಂಗಳೇಶನು ಪಟ್ಟಕ್ಕೆ ಬಂದನೆಂದು ಸಾಂಪ್ರದಾಯಿಕವಾಗಿ ಹೇಳುವ ಕಾಲ ಕ್ರಿ.ಶ. ೫೯೭-೯೮. ಆದರೆ ಈಗ ಅವನು  ೫೯೧-೯೨ರಲ್ಲಿ ಆಳತೊಡಗಿದನು ಎಂದು ವಾದ ಮಾಡಲಾಗಿದೆ. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನ ಗೋವಾ ಫಲಕಗಳಲ್ಲಿ ಆಳ್ವಿಕೆಯ ೨೦ನೇ ವರ್ಷ ಎಂದು ಹೇಳಿರುವುದು ಮಂಗಳೇಶನ ಆಳಿಕೆಯೇ ಇರಬೇಕು. ಈ ೨೦ನೇ ವರ್ಷವನ್ನು ಶಕವರ್ಷ ೫೩೨ (ಕ್ರಿ.ಶ.೬೧೦) ಎಂದು ಹೇಳಲಾಗಿದೆ. ಅಂದರೆ ಮಂಗಳೇಶನ ಆಳಿಕೆಯು ೫೯೧-೯೨ರಲ್ಲಿ ಯಾವಾಗಲೋ ಪ್ರಾರಂಭವಾಗಿರಬೇಕು. ಮೇಲೆ ಉಲ್ಲೇಖಿಸಿದ ಬಾದಾಮಿ ಗುಹಾಶಾಸನದಲ್ಲಿ ಮಂಗಳೇಶನು ಕ್ರಿ.ಶ. ೫೭೮ರಲ್ಲಿ, ತನ್ನ ಅಣ್ಣನು ಗತಿಸಿದ ಮೇಲೆ, ಪಟ್ಟಕ್ಕೆ ಬಂದನು ಎಂದು ಹೇಳಿದೆ. ಕೀರ್ತಿವರ್ಮನು ರಾಜ್ಯಭಾರವನ್ನು ವಿಶ್ವಸ್ಥನಾಗಿ ಆಳುತ್ತಿರಬೇಕೆಂದು ತಮ್ಮನಿಗೆ ವಹಿಸಿಕೊಟ್ಟಾಗ ಎರಡನೇ ಪುಲಕೇಶಿಗೆ ಬಹುಶಃ ೭-೮ವರ್ಷ ವಯಸ್ಸಾಗಿದ್ದಿರಬೇಕು. ಹಾಗಾಗಿ ಮಂಗಳೇಶನು ವಾಸ್ತವವಾಗಿ ರಾಜಪ್ರತಿನಿಧಿ ಎಂಬಂತೆ ಆಡಳಿತವನ್ನು ನಡೆಸಿದನು.

ತುಂಬಾ ಆಶೋತ್ತರಗಳನ್ನು ಹೊಂದಿದ್ದವನಾದ್ದರಿಂದ ಮಂಗಳೇಶನು ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಉತ್ತರದ ದಂಡಯಾತ್ರೆಯನ್ನು ಕೈಗೊಂಡನು. ಭಾಗೀರಥಿ ನದಿಯ ದಂಡೆಯ ಮೇಲೆ ವಿಜಯಸ್ತಂಭವನ್ನು ನೆಡಿಸಬೇಕೆಂದು ಅವನು ಯೋಜನೆ ಹಾಕಿದ್ದನು. ಆದರೆ ಮಹಾಕೂಟದಲ್ಲಿ ಅದನ್ನು ಸ್ಥಾಪಿಸುವುದರಿಂದ ತೃಪ್ತನಾಗಬೇಕಾಯಿತು. ಶಂಕರಗಣ ಮತ್ತು ಬುಧವರ್ಮ ಎಂಬ ಕಲಚೂರಿ ರಾಜರನ್ನು ಅವನು ಸೋಲಿಸಿದನು. ಶಂಕರಗಣನು ಯುದ್ಧರಂಗದಲ್ಲಿ ಸತ್ತನು. ಚಾಲುಕ್ಯ ವಂಶಕ್ಕೇ ಸೇರಿದ್ದ, ಬಹುಶಃ ಬುಧವರ್ಮನೊಂದಿಗೆ ಸೇರಿಕೊಂಡಿದ್ದ ಸ್ವಾಮಿರಾಜನೂ ಸೋತನು. ಇವನು ಬಹುಶಃ ರೇವತಿ ದ್ವೀಪದ ಅರಸನಿರಬೇಕು. ಇದಕ್ಕಾಗಿಯೇ ಮಂಗಳೇಶನು ಒಂದು ನೌಕಾಪಡೆಯನ್ನು ಕಟ್ಟಬೇಕಾಯಿತು. ಮುಂದೆ ಈ ಪ್ರದೇಶವನ್ನು ಮಂಗಳೇಶನ ಸಾಮಂತ ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನು ಆಳುತ್ತಿದ್ದನು. ಶಾಸನಗಳಲ್ಲಿ ಮಂಗಳೇಶನು ದೃಢನಿರ್ಧಾರ, ಬಲ, ಸತ್ವ, ಧೈರ್ಯ, ಸ್ಥಿರಚಿತ್ತ, ಪೌರುಷ ಮತ್ತು ತ್ಯಾಗ(ಮತಿಬಲ-ಉತ್ಸಾಹ-ಧೈರ್ಯ-ಸ್ಥೈರ್ಯ-ವೀರ್ಯ-ಗಾಂಭೀರ್ಯ ಮತ್ತು ತ್ಯಾಗ)ಗಳನ್ನು ಉಳ್ಳವನಾಗಿದ್ದನು. ಜೊತೆಗೆ ಮಾಧುರ್ಯ ಹಾಗೂ ಗಾಂಭೀರ್ಯಗಳನ್ನು ಹೊಂದಿದ್ದನು ಎಂದು ವರ್ಣಿಸಲಾಗಿದೆ. ಅವನನ್ನು ಸಿಂಹವಿಕ್ರಮನೆಂದೂ, ರಾಜನ ಶಕ್ತಿತ್ರಯಗಳನ್ನು (ಪ್ರಭುಶಕ್ತಿ, ಉತ್ಸಾಹಶಕ್ತಿ, ಮಂತ್ರಶಕ್ತಿ) ಹೊಂದಿದ್ದನೆಂದೂ ಕೊಂಡಾಡಲಾಗಿದೆ.

ಅಧಿಕಾರಕ್ಕಾಗಿ ನಡೆದ ಅಂತಃಕಲಹ

ಅಧಿಕಾರದ ರುಚಿ ಹತ್ತಿದ್ದ ಮಂಗಳೇಶನಿಗೆ ಸಿಂಹಾಸನವನ್ನು ಪ್ರಾಪ್ತವಯಸ್ಕನಾಗಿದ್ದ ತನ್ನ ಅಣ್ಣನ ಮಗ ಎರಡನೇ ಪುಲಕೇಶಿಗೆ ವಹಿಸಿಕೊಡುವ ವಿಚಾರ ಹಿಡಿಸಲಿಲ್ಲ. ಅವನು ತನ್ನ ಮಗನಿಗೆ ಸಿಂಹಾಸನವನ್ನು ಕೊಡಬೇಕೆಂದು ಬಯಸಿರಬಹುದು. ಹಾಗಾಗಿ ರಾಜಕುಮಾರ ಪುಲಕೇಶಿಯು ದಂಗೆಯೇಳಬೇಕಾಯಿತು. ಇದಕ್ಕಾಗಿ ಅವನು ದೇಶತ್ಯಾಗ ಮಾಡಿ ಹೊರಕ್ಕೆ ಹೋಗಿ, ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಿಕೊಂಡು ಕೊನೆಗೆ ಚಿಕ್ಕಪ್ಪನ ಮೇಲೆ ಎರಗಿದನು. ಮಂಗಳೇಶನಿಂದ ಪೆಟ್ಟು ತಿಂದಿದ್ದ ಗಂಗ, ದಮಿಳ, ಚೋಳ, ಆಳುಪ ರಾಜರು ಈಗ ಎರಡನೇ ಪುಲಕೇಶಿಗೆ ಬೆಂಬಲವಾದರು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನಾಡನೂರಿನ ಎಳ್ಪತ್ತುಸಿಂಬಿಗೆ ಎಂಬಲ್ಲಿ ನಡೆದ ಯುದ್ಧದಲ್ಲಿ ಎರೆಯನು (ಇಮ್ಮಡಿ ಪುಲಕೇಶಿ) ಮಂಗಳೇಶನನ್ನು ಎದುರಿಸಿದನು. ಈ ವೇಳೆಯಲ್ಲಿ ಬಾಣರು ರಾಜಕುಮಾರ ಇಮ್ಮಡಿ ಪುಲಕೇಶಿಗೆ ಆಶ್ರಯ ನೀಡಿದ್ದರಾದ್ದರಿಂದ ಮಂಗಳೇಶನು ಬಾಣ ರಾಜ್ಯದ ಮೇಲೆ ಆಕ್ರಮಣ ಮಾಡಿದನು. ಯುದ್ಧವು ಭೀಕರವಾಗಿತ್ತು. ಮಂಗಳೇಶನು ಯುದ್ಧದಲ್ಲಿ ಹತನಾದನು. ಪುಲಕೇಶಿ ಸಿಂಹಾಸನವನ್ನೇರಿದನು. ಒಡನೆಯೇ ಕೆಲವು ಅಧೀನ ರಾಜರ ದಂಗೆಯನ್ನು ಅವನು ಎದುರಿಸಬೇಕಾಯಿತು. ಐಹೊಳೆ ಶಾಸನವು ಅವರನ್ನು ಅಪ್ಪಾಯಿಕ ಮತ್ತು ಗೋವಿಂದ ಎಂದು ಹೆಸರಿಸುತ್ತದೆ.

ಮಂಗಳೇಶನ ಕೊಡುಗೆಗಳು:- ಮಹಾಕೂಟೇಶ್ವರ ದೇವಾಲಯವನ್ನು ಶ್ರೀಮಂತಗೊಳಿಸಿದ ಹಾಗೂ ಐಹೊಳೆಯ ರಾವಳಫಡಿ ಗುಹಾಲಯವನ್ನು ನಿರ್ಮಿಸಿದ ಕೀರ್ತಿ ಮಂಗಳೇಶನಿಗೆ ಸಲ್ಲುತ್ತದೆ. ರಮೇಶ ಅವರ ಪ್ರಕಾರ ರಾವಳಫಡಿಯು ರಾಜಕೂಟ ಪ್ರತಿಮಾಗೃಹ. ಅಲ್ಲಿರುವ ನಟರಾಜನ ಶಿಲ್ಪವು ಈ ವೇಳೆಗಾಗಲೇ ದೈವತ್ವಕ್ಕೆ ಏರಿದ್ದ ಮಂಗಳೇಶನ ಮೂರ್ತರೂಪ ಎಂದು ಹೇಳಲಾಯಿತು. ಹಾಗೆಯೇ ಅಲ್ಲಿನ ಚಿಕ್ಕಗುಡಿ ಎಂಬ ಇನ್ನೊಂದು ದೇವಾಲಯವು ಒಂದನೇ ಕೀರ್ತಿವರ್ಮನ ದೇವಾಲಯವೆಂದು ಹೇಳಲಾಗಿದೆ. ಇವೆಲ್ಲ ಕೇವಲ ಊಹಾಪೋಹಗಳು, ವಾಸ್ತವತೆಯ ಆಧಾರವಿಲ್ಲದವು.

ಎರಡನೇ ಪುಲಕೇಶಿಯು ನ್ಯಾಯಯುತವಾಗಿ ತನಗೆ ಸೇರಬೇಕಾಗಿದ್ದ ರಾಜ್ಯವನ್ನು ತನ್ನ ಚಿಕ್ಕಪ್ಪನಿಂದ ಸು.ಕ್ರಿ.ಶ.೬೧೦ರಲ್ಲಿ ಕಿತ್ತುಕೊಳ್ಳಬೇಕಾಯಿತು. ಸಿಂಹಾಸನಕ್ಕೆ ಬಂದ ಒಡನೆಯೇ ರಾಜ್ಯವನ್ನು ವಿಸ್ತರಿಸಲು ಅವನು ದಂಡಯಾತ್ರೆಗಳನ್ನು ಕೈಗೊಂಡನು.

ಇಮ್ಮಡಿ ಪುಲಕೇಶಿ ಸಾ.ಶ.ವ. ೬೧೦೬೪೨

ಪಟ್ಟಕ್ಕೆ ಬಂದೊಡನೆಯೇ ರಾಜ್ಯದ ಒಳಗೂ ಹೊರಗೂ ಅವನು ದಂಗೆಗಳನ್ನು ಎದುರಿಸಬೇಕಾಯಿತು. ರಾಜ್ಯದಲ್ಲಿದ್ದ ಗೊಂದಲ ಮತ್ತು ಅವ್ಯವಸ್ಥೆಗಳ ಪ್ರಯೋಜನವನ್ನು ಪಡೆದ ಇಬ್ಬರು ನಾಯಕರಾದ ಅಪ್ಪಾಯಿಕ ಮತ್ತು ಗೋವಿಂದ, ಇತರ ಹಲವರ ಜೊತೆಗೆ ದಂಗೆಯೆದ್ದರು. ಭೀಮಾ ನದಿಯ ಬಳಿಯಲ್ಲಿ ನಡೆದ ಯುದ್ಧದಲ್ಲಿ ಪುಲಕೇಶಿಯ ಅಗಾಧ ಸೇನೆಯೆದುರಿಗೆ ಅವರು ನಿಲ್ಲಲು ಸಾಧ್ಯವಾಗಲಿಲ್ಲ. ಭೀತಿಯಿಂದ ಅಪ್ಪಾಯಿಕನು ಓಡಿಹೋದನು. ಇನ್ನೊಬ್ಬನು ಶರಣಾದನು. ಅಪ್ಪಾಯಿಕನು ಕಲಚೂರಿ ಶಂಕರಗಣನ ಕೈ ಕೆಳಗಿದ್ದ ಒಬ್ಬ ರಾಜ, ಸಿರಿಹುಲ್ಲಕ ಕುಟುಂಬಕ್ಕೆ ಸೇರಿದವನೆಂದು ಊಹಿಸಲಾಗಿದೆ.

ಹೀಗೆ ಹಠಾತ್ತನೆ ದಂಗೆ ಸಂಭವಿಸಿದ್ದರಿಂದ ಪುಲಕೇಶಿಯು ಒಂದು ಚೈತ್ರಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿದನು. ಮೊದಲನೆಯ ಬಲಿ ಕದಂಬರಾಜ. ಕೀರ್ತಿವರ್ಮನು ಕದಂಬರನ್ನು ಸೋಲಿಸಿದ್ದನಾದರೂ ಅವರಿನ್ನೂ ಸ್ವತಂತ್ರರಾಜ್ಯದ ಕನಸು ಕಾಣುತ್ತಿದ್ದರು. ಬನವಾಸಿ ಮತ್ತು ಇತರ ಕೋಟೆಗಳನ್ನು ಚಾಲುಕ್ಯರಾಜನು ಗೆದ್ದುಕೊಂಡನು. ಆಮೇಲೆ ಅವನು ತುಳುನಾಡಿನ ಆಳುಪರ ಕಡೆಗೆ ನಡೆದು ಅವರನ್ನು ಸೋಲಿಸಿದನು. ಗಂಗರೂ ಶರಣಾಗತರಾಗಿ ತಮ್ಮ ಭಂಡಾರವನ್ನು ಅವನಿಗೆ ಒಪ್ಪಿಸಿದರು. ಗಂಗನು ದುರ್ವಿನೀತನೆಂದು ವಿದ್ವಾಂಸರು ಗುರುತಿಸಿದ್ದಾರೆ. ಆದ್ದರಿಂದ ಒಂದನೇ ಪುಲಕೇಶಿಯ ತಾತ ಜಯಸಿಂಹನ ಸಮಕಾಲೀನ ನಾಗಿರಬೇಕು. ಆದರೆ ಇಲ್ಲಿ ಉಕ್ತನಾದ ಗಂಗನು ಮುಷ್ಕರನ ತಮ್ಮ ಪೊಲವೀರನಾಗಿರಬಹುದು. ಪುಲಕೇಶಿಯು ಮೊದಲು ಗಂಗರನ್ನು ಗೆದ್ದು, ಆಮೇಲೆ ಕದಂಬರ ಬನವಾಸಿಯನ್ನು ಆಕ್ರಮಿಸಿಕೊಂಡನೆಂದು ಹೇಳುವುದು ಹೆಚ್ಚು ಸಮಂಜಸವಾಗುತ್ತದೆ. ಅಲ್ಲಿಂದ ಮುಂದೆ ಪುಲಕೇಶಿಯ ಗುರಿಯಾದದ್ದು ಕೊಂಕಣ. ಅಲ್ಲಿ ಮೌರ್ಯವಂಶದ ಕೆಲವರು ಅಧಿಕಾರದಲ್ಲಿದ್ದರು. ಆದಾದ ಮೇಲೆ ಗೆದ್ದುಕೊಂಡ ಪುರಿಯನ್ನು ಮುಂಬಯಿ ಬಳಿ ಇರುವ ಎಲಿಫೆಂಟಾ ದ್ವೀಪ ಎಂದು ಗುರುತಿಸಲಾಗಿದೆ. ಅದು ಬಂದರು ನಗರವಾಗಿತ್ತು. ಅದನ್ನು ಗೆಲ್ಲಲು ಪುಲಕೇಶಿಯು ಒಂದು ನೌಕಾಪಡೆಯನ್ನು ಕಟ್ಟಬೇಕಾಯಿತು. ಲಾಟ, ಮಾಳವ ಮತ್ತು ಗೂರ್ಜ ದೇಶದ ಅರಸರು ಪ್ರತಿಭಟನೆಯಿಲ್ಲದೆ ಶರಣಾಗತರಾದರು. ಹರ್ಷನು ಉತ್ತರಾಪಥೇಶ್ವರನಾಗಿ ಅಧಿಕಾರದಲ್ಲಿ ಬೆಳೆಯುತ್ತಿದ್ದು, ಪುಲಕೇಶಿಯ ಮೇಲೆ ದಂಡೆತ್ತಿ ಬರುತ್ತಿದ್ದುದರಿಂದ ಲಾಟ ಮೊದಲಾದ ಈ ಅರಸರು ತಾವಾಗಿ ಪುಲಕೇಶಿಯ ಪ್ರಭುತ್ವವನ್ನು ಒಪ್ಪಿಕೊಂಡರು ಎಂದು ಊಹಿಸಬಹುದು.

ಪುಲಕೇಶಿಯು ಕನೌಜಿನ ಹರ್ಷನನ್ನು ಸೋಲಿಸಿದ್ದು ಕ್ರಿ.ಶ. ೬೧೩ಕ್ಕಿಂತ ಮೊದಲು. ಒಂದು ನೂರು ಯುದ್ಧಗಳನ್ನು ಮಾಡಿದ್ದ ವೈರಿರಾಜನನ್ನು ಸೋಲಿಸಿ ಅವನು ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಚೀನಾದೇಶದ ಪ್ರವಾಸಿ ಹ್ಯೂಯೆನ್‌ತ್ಸಾಂಗ್ ಹೇಳುವಂತೆ, ಅವನ ಆಳ್ವಿಕೆಯ ಮೊದಲ ಆರು ವರ್ಷಗಳು (ಸು.೬೦೬-೬೧೨) ಯುದ್ಧಗಳಲ್ಲಿ ಮತ್ತು ದಂಡಯಾತ್ರೆಗಳಲ್ಲಿ ಕಳೆದವು. ಪುಲಕೇಶಿಯ ಪ್ರಾಬಲ್ಯವು ದಿನೇ ದಿನೇ ಬೆಳೆಯುತ್ತಿದ್ದು, ಹರ್ಷನು ತನ್ನ ರಾಜ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಅವನನ್ನು ದಂಡಿಸಬೇಕೆಂದು ಬಯಸಿದನು.

ಸಕಲ ಉತ್ತರಾಪಥೇಶ್ವರನು ದಕ್ಷಿಣಾಪಥೇಶ್ವರನನ್ನು ಜಯಿಸಲು ಬಯಸಿದನು. ಆದರೆ ಹರ್ಷನು ಸೋತದ್ದನ್ನು ಐಹೊಳೆ ಶಾಸನವು ಸಂದೇಹವೇ ಇಲ್ಲದ ಮಾತುಗಳಲ್ಲಿ ಹೇಳುತ್ತದೆ. ಬಹಿರಂಗವಾಗಿ ಶ್ರೀಮಂತರಾಗಿದ್ದ ಸಾಮಂತರ ನೆರವನ್ನು ಪಡೆದಿದ್ದ ಹರ್ಷನು ಇಮ್ಮಡಿ ಪುಲಕೇಶಿಗೆ ಸೋತು ತನ್ನ ‘ಹರ್ಷವನ್ನು ಕಳೆದುಕೊಂಡನು. ಹ್ಯೂಯೆನ್‌ತ್ಸಾಂಗ್ ಹೇಳುತ್ತಾನೆ: “ಹಿರಿಯ ದೊರೆ ಶೀಲಾದಿತ್ಯನು ಈ ಸಮಯದಲ್ಲಿ ಪೂರ್ವದಲ್ಲಿ ಆಕ್ರಮಣ ಮಾಡಿದ್ದನು. ಪಶ್ಚಿಮವೂ ಇದರ ದೂರದ ಮತ್ತು ಸಮೀಪದ ರಾಜ್ಯಗಳೂ ಅವನಿಗೆ ವಿಧೇಯವಾಗಿದ್ದವು. ಆದರೆ ಮೊ-ಹ-ಲ-ಚವು (ಮಹಾರಾಷ್ಟ್ರ) ಅವನಿಗೆ ಅಧೀನವಾಗಲು ನಿರಾಕರಿಸಿತು.” ಅವನ ಜೀವನ ಚರಿತ್ರಕಾರ ಬಾಣನು ಬರೆಯುತ್ತಾನೆ: “ರಾಜನು ಐದು ಖಂಡಗಳಿಂದ ಸೇನೆಯನ್ನು ಸಂಗ್ರಹಿಸಿಕೊಂಡು, ಎಲ್ಲಾ ದೇಶಗಳ ಅತ್ಯುತ್ತಮ ನಾಯಕರನ್ನು ಕರೆಸಿಕೊಂಡು ತಾನೇ ಸೇನೆಯ ಮುಖ್ಯನಾಗಿ ಈ ಜನರನ್ನು ದಂಡಿಸಿ ಸೋಲಿಸಲು ನಡೆದನು, ಆದರೆ ಅದು ನಿಷ್ಫಲವಾಯಿತು. ಈ ವಿಜಯದಿಂದ ಪುಲಕೇಶಿಯು ಪರಮೇಶ್ವರ ಎಂಬ ಬಿರುದನ್ನು ಗಳಿಸಿದನು.”

ಇದರೊಂದಿಗೆ ಪುಲಕೇಶಿಯ ಯುದ್ಧ ಸಾಹಸಗಳ ಮೊದಲನೆಯ ಹಂತವು ಮುಕ್ತಾಯವಾಯಿತು. ಅಲ್ಲದೆ ಇದರಿಂದ ಅವನು ಮಹಾರಾಷ್ಟ್ರಕತ್ರಯ ಎಂದು ಪ್ರಸಿದ್ಧವಾದ ಪ್ರದೇಶದ ಪ್ರಭುವಾದನು. ಇದರಲ್ಲಿ ೯೯,೦೦೦ ಹಳ್ಳಿಗಳಿದ್ದವು. ಈ ಪ್ರದೇಶವು ಯಾವುದು ಎಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸಾಮಾನ್ಯವಾಗಿ ಒಪ್ಪಿರುವಂತೆ ಅದರಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಕೊಂಕಣ ಈ ಮೂರು ಭಾಗಗಳೂ ಸೇರಿದ್ದವು. ಸ್ವಲ್ಪ ಕಾಲ ರಾಜ್ಯದಲ್ಲಿ ಎಲ್ಲವೂ ಶಾಂತವಾಗಿತ್ತು. ಪುಲಕೇಶಿಯು ಆಡಳಿತ ಮತ್ತು ಪ್ರಜಾಕಲ್ಯಾಣದ ಕಡೆಗೆ ಗಮನ ಕೊಟ್ಟನು.

ಆಮೇಲೆ ಮತ್ತೆ ಅವನು ವಿಜಯೋದ್ಯೋಗದ ಎರಡನೆಯ ಹಂತವನ್ನು ಪ್ರಾರಂಭಿಸಿದನು. ಈ ಸಾರಿ ಅವನು ಪೂರ್ವಮುಖವಾಗಿ ನಡೆದನು. ಕೋಸಲದ ರಾಜರು ಅವನ ಮಹಾ ಪರಾಕ್ರಮದ ಬಗೆಗೆ ಕೇಳಿದ್ದರು. ಆಗ ಕೋಸಲದಲ್ಲಿ ಪಾಂಡುವಂಶೀ ಎಂಬ ಮನೆತನದ ಒಬ್ಬ ಸದಸ್ಯನು ರಾಜ್ಯವಾಳುತ್ತಿದ್ದನು. ಅವರ ಮೇಲೆ ಪ್ರಭುತ್ವ ಹೊಂದಿದ್ದವರು ಪೂರ್ವ ಗಂಗರು. ಅವರು ಒರಿಸ್ಸಾ ಪ್ರದೇಶದಲ್ಲಿ ಆಳುತ್ತಿದ್ದರು. ಆಗ ಅದು ಕಳಿಂಗ ದೇಶವೆನಿಸಿತ್ತು. ಪುಲಕೇಶಿಯು ಈ ಎರಡು ರಾಜ್ಯಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಆಮೇಲೆ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಪಿಷ್ಟಪುರ ಅಥವಾ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೀಠಾಪುರಂ ಕೋಟೆಯನ್ನು ಆಕ್ರಮಿಸಿಕೊಂಡನು. ಆಗ ಕುನಾಲವು ವೆಂಗಿ ದೇಶದ ಭಾಗವಾಗಿತ್ತು (ಇದು ಏಲೂರು ಬಳಿಯ ಕೊ್ಲೇರು ಎಂದು ಹೇಳಲಾಗಿದೆ). ಆಗ ಈ ಪ್ರದೇಶವೆಲ್ಲವೂ ವಿಷ್ಣುಕುಂಡಿ ರಾಜ್ಯದ ಭಾಗವಾಗಿದ್ದಿತು. ಆಗ ಕೊಲ್ಲೇರು ಪ್ರದೇಶದಲ್ಲಿ ವಿಪರೀತ ಗೊಂದಲ. ಅವ್ಯವಸ್ಥೆ ಉಂಟಾಗಿದ್ದು ಪುಲಕೇಶಿಗೆ ದಾಳಿ ಮಾಡಲು ಆಮಿಷವೊಡ್ಡಿತು. ಅದು ಬಹು ಅಪಾಯಕಾರಿಯಾದ ಪ್ರದೇಶವಾಗಿತ್ತು ಎಂದು ಶಂಕರನಾರಾಯಣ್ ವಾದಿಸುತ್ತಾರೆ. ಕೊಳ್ಳೆ, ಸುಲಿಗೆಗಳಿಗೆ ಹೆಸರಾದ ಅದು ‘ಯಾರಿಗೂ ಸೇರದ ಭೂಮಿ ಆಗಿತ್ತು. ಅದುವರೆಗೆ ಅಲ್ಲಿ ಪ್ರಭಾವಶಾಲಿಗಳಾಗಿದ್ದ ವಿಷ್ಣುಕುಂಡಿನರು ರಾಜಕೀಯ ರಂಗದಿಂದ ಮರೆಯಾಗಿದ್ದರು. ಚಾಲುಕ್ಯರಿಗೆ ಪ್ರತಿಭಟನೆ ಕೊಡಬಹುದಾಗಿದ್ದ ಏಕೈಕ ಶಕ್ತಿ ಪಲ್ಲವರು. ಪಲ್ಲವ ಮಹೇಂದ್ರ ವರ್ಮನ ಸಾಮಂತನಾದ ಪೃಥ್ವೀಯುವರಾಜನು, ಪೃಥ್ವೀ ಧ್ರುವರಾಜನೆಂದೂ ಇವನಿಗೆ ಹೆಸರು ಕೊಲ್ಲೇರುವನ್ನು ನೋಡಿಕೊಳ್ಳುತ್ತಿದ್ದನು. ಪುಲಕೇಶಿಯು ಈ ಯುದ್ಧದಲ್ಲಿ ಬಹು ಸಂಖ್ಯೆಯ ಆನೆಗಳನ್ನು ಉಪಯೋಗಿಸಿರಬಹುದು. ಕೊಲ್ಲೇರುವಿನ ಮೇಲೆ ಅವನು ಮಾಡಿದ ದಾಳಿ ಯಶಸ್ವಿಯಾಯಿತು. ಪೃಥ್ವೀ ಯುವರಾಜನು ಅವನಿಗೆ ಬಲವಾದ ಯುದ್ಧವನ್ನೇನೋ ಕೊಟ್ಟನು. ಪುಲಕೇಶಿಯು ತನ್ನ ಮಾವ, ರಾಣಿ ಕದಂಬಾಳ ತಂದೆ ಮಂಗಳಪುರ(ಮಂಗಳೂರು)ದ ಅಳುಪ ಮಹಾರಾಜನನ್ನು ಕರೆಸಿಕೊಳ್ಳಬೇಕಾಯಿತು. ಯುದ್ಧದಲ್ಲಿ ಈ ಅಳುಪ ಮಹಾರಾಜನು ಪ್ರಾಣ ಬಿಟ್ಟನು. ಅವನ ನೆನಪಿಗಾಗಿ, ರಾಣಿ ಕದಂಬಾಳ ಬಯಕೆಯಂತೆ ಪುಲಕೇಶಿಯು ಒಂದು ಗ್ರಾಮವನ್ನು ಅಗ್ರಹಾರವಾಗಿ ದಾನ ಮಾಡಿದನು. ಪುಲಕೇಶಿಯ ಸೈನ್ಯವು ಅಜೇಯವಾಗಿತ್ತು. ಪಲ್ಲವ ರಾಜನು-ಬಹುಶಃ ಮಹೇಂದ್ರವರ್ಮ-ತನ್ನ ರಾಜಧಾನಿ ಕಾಂಚಿಯ ಕೋಟೆ ಗೋಡೆಗಳ ಹಿಂದೆ ಆಶ್ರಯ ಪಡೆಯಬೇಕಾಯಿತು.

ಪುಲಕೇಶಿಯು ಈ ವೆಂಗಿ ಪ್ರದೇಶವನ್ನು ತನ್ನ ತಮ್ಮ ಕುಬ್ಜ ವಿಷ್ಣುವರ್ಧನನಿಗೆ ಸ್ವತಂತ್ರವಾಗಿ ಆಳುವಂತೆ ವಹಿಸಿಕೊಟ್ಟನು. ಹೀಗೆ ಪೂರ್ವದ ವೆಂಗಿ ಚಾಲುಕ್ಯ ಮನೆತನವು ಅಸ್ತಿತ್ವಕ್ಕೆ ಬಂದಿತು.

ಪಲ್ಲವ ಮಹೇಂದ್ರವರ್ಮನ ನಂತರ ರಾಜನಾದ ಅವನ ಮಗ ನರಸಿಂಹವರ್ಮನು ಪುಲಕೇಶಿಯ ವಿರುದ್ಧ ಸಂಗಮ ಮನೆತನಗಳ ರಾಜರನ್ನು ಒಟ್ಟುಗೂಡಿಸಿ ಯುದ್ಧಕ್ಕೆ ತೊಡಗಿದನು.  ಈ ವೇಳೆಯಲ್ಲಿ ನರಸಿಂಹವರ್ಮನ ನೆರವು ಯಾಚಿಸಿ ಕಂಚಿಗೆ ಬಂದಿದ್ದ ಸಿಂಹಳದ ಮಾನವರ್ಮನು ಸಹಾ ಇವರೊಂದಿಗೆ ಸೇರಿಕೊಂಡನು. ನರಸಿಂಹವರ್ಮನು ಆರಂಭದಲ್ಲಿ ಪೆರಿಯಾಳ, ಮಣಿಮಂಗಳ ಮತ್ತು ಶೂರಮಾರ ಮೊದಲಾದ ಕಡೆಗಳಲ್ಲಿ ಪುಲಕೇಶಿಯೊಂದಿಗೆ ಯುದ್ಧ ಮಾಡಿದುದಾಗಿ ತಿಳಿದುಬರುತ್ತದೆ. ಇವುಗಳಲ್ಲಿ ಮಣಿಮಂಗಳವು ಕಾಂಚಿಯಿಂದ ಪೂರ್ವಕ್ಕೆ ೩೫ ಕಿ.ಮೀ. ದೂರದಲ್ಲಿದೆ. ನಿಜವಾಗಿಯೂ ಈ ಯುದ್ಧಗಳು ನಡೆದಿದ್ದರೆ ಅವು ಪುಲಕೇಶಿಗೆ ಅನುಕೂಲವಾಗಿರಲಿಲ್ಲ. ವೈರಿಯು ಬಾದಾಮಿಯವರೆಗೂ ಪುಲಕೇಶಿಯನ್ನು ಅಟ್ಟಿಸಿಕೊಂಡು ಬಂದನು. ನಗರವನ್ನು ವಶಪಡಿಸಿಕೊಂಡು ಅಲ್ಲಿ ಒಂದು ವಿಜಯಸ್ತಂಭವನ್ನು ನೆಡಿಸಿದನು. ಈ ರಾಜನು ಸುಂದರವಾದ ವಾತಾಪಿ ನಗರವನ್ನು ನಾಶ ಮಾಡಿದನು.

ಪುಲಕೇಶಿಯು ತನ್ನ ರಾಜಧಾನಿಯಲ್ಲಿಯೇ ಪಲ್ಲವರಿಂದ ಪರಾಭವ ಹೊಂದಬೇಕಾಯಿತು. ಆಮೇಲೆ ಏನಾಯಿತೆನ್ನುವುದು ತಿಳಿಯುವುದಿಲ್ಲ. ಬಹುಶಃ ಅವನು ಸತ್ತುಹೋಗಿರಬಹುದು.

ಗೆದ್ದ ನರಸಿಂಹವರ್ಮನು ಬಾದಾಮಿಯ ಗುಹೆಯ ತಳಹದಿಯ ಶಾಸನವೊಂದರಲ್ಲಿ ಗ್ರಂಥಾಕ್ಷರಗಳು ಮತ್ತು ಸಂಸ್ಕೃತಗಳಲ್ಲಿ ಒಂದನೇ ಪುಲಕೇಶಿಯ ಶಾಸನದ ಮೇಲೆಯೇ ತನ್ನ ಶಾಸನವನ್ನು ಕೆತ್ತಿಸಿದನು. ಅದರಂತೆ ಪಲ್ಲವರಾಜನು ವಾತಾಪಿಕೊಂಡ ಎಂಬ ಬಿರುದನ್ನು ಧರಿಸಿದ್ದನು ಎಂದು ತಿಳಿದುಬರುತ್ತದೆ.

ವಿದೇಶಗಳಲ್ಲಿ ಪುಲಕೇಶಿಯ ಕೀರ್ತಿ

ಇರಾನಿನ ಎರಡನೇ ಖುಸ್ರೋ ಇಮ್ಮಡಿ ಪುಲಕೇಶಿಯ ಸಮಕಾಲೀನ. ಅವರಿಬ್ಬರ ನಡುವೆ ಪತ್ರ ವ್ಯವಹಾರವಿತ್ತು. ಅರಬ್ ಇತಿಹಾಸಕಾರ ತಬರಿಯ ಪ್ರಕಾರ ಖುಸ್ರೋ ತನ್ನ ಮಗನಿಗೆ ಪುಲಕೇಶಿಯ ಬಗೆಗೆ ತಿಳಿಸಿದನು. ಅಜಂತ ಗುಹೆಯಲ್ಲಿರುವ ಒಂದು ಚಿತ್ರದಲ್ಲಿ ಪುಲಕೇಶಿಯು ಇರಾನಿನ ರಾಯಭಾರಿಯನ್ನು ತನ್ನ ಆಸ್ಥಾನಕ್ಕೆ ಸ್ವಾಗತಿಸುತ್ತಿರುವ ದೃಶ್ಯವಿದೆ. ಬಹುಶಃ ಇದು ತಬರಿಯ ಮೇಲ್ಕಂಡ ಹೇಳಿಕೆಯನ್ನು ಪುಷ್ಟೀಕರಿಸುತ್ತದೆ.

ಹ್ಯೂಯೆನ್‌ತ್ಸಾಂಗ್ ವರ್ಣನೆ

ರಾಜಧಾನಿ ಬಾದಾಮಿ ನಗರವನ್ನು ಹ್ಯೂಯೆನ್‌ತ್ಸಾಂಗ್ ಸೊಗಸಾಗಿ ವರ್ಣಿಸಿದ್ದಾನೆ: ನಗರದ ಸುತ್ತಳತೆಯು ೩೦ ಲೀ. ಇದ್ದಿತು. ಮಣ್ಣು ಸಮೃದ್ಧವಾಗಿದೆ, ಫಲವತ್ತಾಗಿದೆ. ವಿಪುಲವಾಗಿ ಧಾನ್ಯಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಜನರು ಎತ್ತರವಾಗಿದ್ದಾರೆ, ದಾರ್ಢ್ಯವುಳ್ಳವರು, ಮೂಢನಂಬಿಕೆಗಳನ್ನುಳ್ಳವರು. ಅವರನ್ನು ಅಪಮಾನಿಸುವವರಿಗೆ ಪ್ರಾಣಕ್ಕೆ ಎರವಾಗುವ ಅಪಾಯವಿದೆ. ಚೈನಾದ ಪ್ರವಾಸಿಗನ ವರ್ಣನೆ ಸಂಪೂರ್ಣವಾಗಿ ಸರಿಯಾಗಿರ ಲಾರದು.

ಇಮ್ಮಡಿ ಪುಲಕೇಶಿಯ ಪತನಾನಂತರ ಮುಂದಿನ ೧೩ ವರ್ಷ ರಾಜ್ಯವು ಕತ್ತಲೆಯುಗದಲ್ಲಿತ್ತು. ಆಗ ಏನು ನಡೆಯಿತೆಂಬುದನ್ನು ಊಹಿಸಬೇಕು ಅಷ್ಟೆ. ಅವನ ಹಿರಿಯಮಗ ಆದಿತ್ಯವರ್ಮ ಮತ್ತು ಅವನ ಮಗ ಅಭಿನವಾದಿತ್ಯರು ಸುವ್ಯವಸ್ಥೆಯನ್ನು ಮೂಡಿಸಲು ಪ್ರಯತ್ನಿಸಿದರು. ಆದರೆ ಅದು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಮೂರನೆ ಮಗ ಒಂದನೇ ವಿಕ್ರಮಾದಿತ್ಯನು, ಕಳೆದುಹೋದ ರಾಜ್ಯವನ್ನು ಮರಳಿ ಗಳಿಸುವ ಗುರುತರ ಹೊಣೆಗಾರಿಕೆಯನ್ನು ಹೊತ್ತುಕೊಂಡನು.

ರಾಜ್ಯಲಕ್ಷ್ಮಿಯ ಪುನರ್‌ಸ್ಥಾಪನೆ

ಒಂದನೇ ವಿಕ್ರಮಾದಿತ್ಯ (೬೫೫೬೮೧)

ತನ್ನ ಭುಜಬಲದ ಮೇಲೆ ವಿಶ್ವಾಸವಿದ್ದ ವಿಕ್ರಮಾದಿತ್ಯ ಮುನ್ನುಗ್ಗಿ ಇತರ ಹಕ್ಕುದಾರರನ್ನೆಲ್ಲ ಗೆದ್ದು ತನ್ನನ್ನು ರಾಜನೆಂದು ಘೋಷಿಸಿಕೊಂಡನು. ಇದು ೧೨ ವರ್ಷವಾದ ನಂತರ ಕ್ರಿ.. ೬೫೪-೫೫ರಲ್ಲಿ. ಅವನು ಮೂವರು ರಾಜರನ್ನು ಅವನಿಪತಿತ್ರಯ(ಸೋಲಿಸಿದನು). ಮೂವರು ರಾಜರು ಯಾರೆಂಬ ಬಗೆಗೆ ಭಿನ್ನಾಭಿಪ್ರಾಯಗಳಿವೆ. ವಿಕ್ರಮಾದಿತ್ಯನು ಕ್ರಿ.. ೬೫೪-೫೫ರಲ್ಲಿ ಸಿಂಹಾಸನವನ್ನೇರುವುದಕ್ಕೆ ಮೊದಲು ಮಹಾರಾಷ್ಟ್ರ-ಕರ್ನಾಟಕ, ಆಂಧ್ರ ಮತ್ತು ಕೊಂಕಣ, ಮಹಾರಾಷ್ಟ್ರ-ಗುಜರಾತ್, ಚೇರ, ಚೋಳರನ್ನು ಸೋಲಿಸಬೇಕಾಗಿತ್ತು. ರಾಜ್ಯವನ್ನು ಮರಳಿ ಗಳಿಸಿದುದರ ನೆನಪಿಗಾಗಿ ಮೊದಲು ಬ್ರಾಹ್ಮಣರಿಗೂ ದೇವಾಲಯ ಗಳಿಗೂ ನೀಡಿದ್ದ ದಾನ-ದತ್ತಿಗಳನ್ನು ನವೀಕರಿಸಿದನು. ರಾಜಕೀಯ ಶೂನ್ಯತೆಯ ಅವಧಿಯಲ್ಲಿ ಬಹುಶಃ ದಾನಗಳನ್ನು ದುರುಪಯೋಗಪಡಿಸಿಕೊಂಡಿರಬಹುದು. ಅವೆಲ್ಲವನ್ನೂ ಸರಿಪಡಿಸಿದ ಮೇಲೆ ವಿಕ್ರಮಾದಿತ್ಯನು ಪರಮೇಶ್ವರ ಎಂಬ ಬಿರುದನ್ನು ಧರಿಸಿದನು.

ರಾಜನಾದ ಮೇಲೆ ಒಂದನೇ ವಿಕ್ರಮಾದಿತ್ಯನು ಪಲ್ಲವ, ಕೇರಳ(ಚೇರ), ಚೋಳ, ಪಾಂಡ್ಯ ಮತ್ತು ಸಿಂಹಳ ರಾಜರನ್ನು ಸೋಲಿಸಿದನು ಎಂದು ವರ್ಣಿಸಲಾಗಿದೆ. ತನ್ನ ಸ್ಥಾನವನ್ನು ಸುಭದ್ರಪಡಿಸಿಕೊಂಡು, ಅಜೇಯವಾದ ಸೇನೆಯನ್ನು ಕೂಡಿಸಿಕೊಂಡು ಸುಮಾರು ಕ್ರಿ.. 67೦ರಲ್ಲಿ ಅವನು ಪಲ್ಲವರ ಮೇಲೆ ಯುದ್ಧವನ್ನು ಸಾರಿ ಕಾಂಚೀಪುರದ ಪಶ್ಚಿಮಕ್ಕೆ ಮಲ್ಲಿಯೂರು ಎಂಬಲ್ಲಿ ಶಿಬಿರ ಹೂಡಿದನು. ನರಸಿಂಹವರ್ಮ, ಎರಡನೇ ಮಹೇಂದ್ರವರ್ಮ ಮತ್ತು ಪರಮೇಶ್ವರವರ್ಮ ಎಂಬ ಮೂವರು ಪಲ್ಲವ ರಾಜರ ಮೇಲೆ ಯುದ್ಧ ಮಾಡಿದನು. ಕ್ರಿ.. ೬೭೪ರಲ್ಲಿ ಉರಗಪುರ-ಇಂದಿನ ತಿರುಚನಾಪಳ್ಳಿ ಜಿಲ್ಲೆಯ ಉರೈಯೂರು ಅನ್ನು ಹಿಡಿದನು. ಯುದ್ಧಗಳಲ್ಲಿ ಅವನ ಮಗ ವಿನಯಾದಿತ್ಯನು ತುಂಬಾ ಸಹಾಯ ಮಾಡಿದನು. ಅಲ್ಲದೆ ತಂದೆಯ ಣತಿಯಂತೆ ತಾನೇ ಪಾಂಡ್ಯರ ಮೇಲೆ ಯುದ್ಧಕ್ಕೆ ಹೋದನು. ಕೇರಳದ ರಾಜನು ಶರಣಾದನು. ಆದರೆ ಪಾಂಡ್ಯ ಅರಿಕೇಸರಿ ಮಾರವರ್ಮನು  ಪ್ರತಿಭಟಿಸಲು ವಿನಯಾದಿತ್ಯನು ಅವನನ್ನು ಸೋಲಿಸಿದನು. ಸಿಂಹಳವನ್ನು ಗೆದ್ದನೆನ್ನುವುದು ಉತ್ಪ್ರೇಕ್ಷೆಯಿರಬಹುದು.

ಆದರೆ ಹಲವು ಲಕ್ಷಗಳಿದ್ದ ಚಾಲುಕ್ಯ ಸೇನೆಯನ್ನು ಅಟ್ಟಿ ಓಡಿಸಿದುದಾಗಿ ಪಲ್ಲವರಾಜ ಪರಮೇಶ್ವರವರ್ಮನು ಹೇಳಿಕೊಳ್ಳುತ್ತಾನೆ. ಇದು ಬಹುಶಃ ಪೆರುವಳನಲ್ಲೂರಿನಲ್ಲಿ ನಡೆದ ಯುದ್ಧದಲ್ಲಾಗಿರಬಹುದು. ಎಲ್ಲಾ ಯುದ್ಧಗಳಲ್ಲಿ ವಿಕ್ರಮಾದಿತ್ಯನಿಗೆ ಅವನ ಮಗ ವಿನಯಾದಿತ್ಯ ಹಾಗೂ ಮೊಮ್ಮಗ ವಿಜಯಾದಿತ್ಯರ ಸಮರ್ಥವಾದ ಬೆಂಬಲ ದೊರಕಿತು. ವಿಜಯಾದಿತ್ಯನನ್ನು ರಾಜಧಾನಿಯ ರಕ್ಷಣೆಗೆ, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಇರಿಸಲಾಗಿತ್ತು. ವಿಕ್ರಮಾದಿತ್ಯನಿಗೆ ಗಂಗ ವಂಶದ ಗಂಗಮಹಾದೇವಿ ಎಂಬ ಹೆಸರಿನ ಒಬ್ಬ ಪತ್ನಿಯಿದ್ದಳು. ಗದ್ವಾಲ್ ಫಲಕಗಳು ಆಕೆಯನ್ನು ರಾಣಿ ಎಂದು ಉಲ್ಲೇಖಿಸುವುದಿಲ್ಲ, ‘ಮಹಾದೇವಿಎಂದು ಮಾತ್ರ ಹೇಳುತ್ತವೆ. ಆಕೆಯು ವಿಕ್ರಮಾದಿತ್ಯನ ಗೌರವಾನ್ವಿತ ರಾಣಿಯಾಗಿದ್ದಳೆಂಬುದನ್ನು ಇದು ಸೂಚಿಸುತ್ತದೆ ಎಂದು ರಮೇಶ್ ಭಾವಿಸುತ್ತಾರೆ. ವಿಕ್ರಮನ ಹಿರಿಯ ಸೋದರ ಚಂದ್ರಾದಿತ್ಯನಿಗೆ ವಿಜಯಭಟ್ಟಾರಿಕೆ ಎಂಬ ಪತ್ನಿಯಿದ್ದಳು. ಅವಳನ್ನು ವಿಜಯಮಹಾದೇವಿ ಎಂದು ವರ್ಣಿಸಲಾಗಿದೆ. ಈಕೆ ಬರೆಯಿಸಿದ ನೆರೂರು ಶಾಸನದಿಂದಲೇ ಒಂದನೇ ವಿಕ್ರಮಾದಿತ್ಯನ ಪಟ್ಟಾಭಿಷೇಕದ ಮಾಹಿತಿ ಲಭ್ಯವಾಗುತ್ತದೆ. ಆಗ ಆಕೆ ಮಹಾರಷ್ಟ್ರದ ಸತಾರಾ ಪ್ರಾಂತ್ಯವನ್ನು ಪರಿಪಾಲಿಸುತ್ತಿದ್ದಳು.

ಜಯಸಿಂಹವರ್ಮನು ಎರಡನೇ ಪುಲಕೇಶಿಯ ಇನ್ನೊಬ್ಬ ಮಗ. ಅವನು ಗುಜರಾತಿನಲ್ಲಿ ಆಳುತ್ತಿದ್ದನು. ಅಲ್ಲಿ ಚಾಲುಕ್ಯರ ಒಂದು ಶಾಖೆಯು ಆಳತೊಡಗಿತು. ಅವನ ಮಗ ಶ್ರೀಯಾಶ್ರಯ ಶಿಲಾದಿತ್ಯನು ಕ್ರಿ.. ೬೭೦ಕ್ಕಿಂತ ಮೊದಲು ಪಟ್ಟಕ್ಕೆ ಬಂದನು. ತನ್ನ ದೊಡ್ಡಪ್ಪ ಮೊದಲನೆಯ ವಿಕ್ರಮಾದಿತ್ಯನ ನಂತರವೂ ಬದುಕಿದ್ದನು.

ವಿನಯಾದಿತ್ಯ (೬೮೧೬೯೬)

ಕ್ರಿಸ್ತಶಕ ೬೮೧ರಲ್ಲಿ ಒಂದನೇ ವಿಕ್ರಮಾದಿತ್ಯನ ನಂತರ ವಿನಯಾದಿತ್ಯನು ಪಟ್ಟಕ್ಕೆ ಬಂದನು. ಅವನ ಮಗ ವಿಜಯಾದಿತ್ಯನು ತಂದೆ-ತಾತರಿಬ್ಬರೂ ಯುದ್ಧಗಳಲ್ಲಿ ನಿರತರಾಗಿದ್ದಾಗ ರಾಜಧಾನಿಯಲ್ಲಿ ಉಳಿದುಕೊಂಡಿದ್ದನು. ವಿನಯಾದಿತ್ಯ ಹದಿನೈದು ವರ್ಷಗಳ ಆಳ್ವಿಕೆಯು ಶಾಂತಯುತವಾಗಿತ್ತು. ಅವನನ್ನು ವಾತ್ಸಲ್ಯದ ಯುಧಿಷ್ಟಿರನೆಂದೂ, ಸಂಪದಭ್ಯುದಯದಲ್ಲಿ ವಾಸುದೇವನೆಂದೂ, ಆಶ್ರಯ ನೀಡುವುದರಲ್ಲಿ ಪರುಶರಾಮನೆಂದೂ, ಭರತನೆಂದೂ ಕೊಂಡಾಡಲಾಗಿದೆ. ಇವನು ತನ್ನ ಕಾಲದಲ್ಲಿ ಲಾಟದ ಮೇಲೆ ದಾಳಿ ಮಾಡಿದ್ದ ಮಾಳವ ರಾಜ ವಜ್ರಟನ ಮೇಲೆ ದಂಡೆತ್ತಿ ಹೋದನು. ಯುದ್ಧದಲ್ಲಿ ವಿಜಯಾದಿತ್ಯನು ಮುಖ್ಯವಾದ ಪಾತ್ರವನ್ನು ನಿರ್ವಹಿಸಿದನು. ವಿನಯಾದಿತ್ಯನ ಕಾಲದಲ್ಲಿ ಅವನ ಮಗ ವಿಜಯಾದಿತ್ಯನು ಉತ್ತರ ಭಾರತದ ಮೇಲೆ ದಾಳಿ ಮಾಡಿ ಸಕಲೋತ್ತರಪಥನಾಥನಿಂದ ಅವನ ರಾಜಲಾಂಛನಗಳನ್ನು ಕಸಿದುಕೊಂಡನೆಂದು ಹೇಳಲಾಗಿದೆ. ಈ ಸಕಲೋತ್ತರಪಥನಾಥನು ಬಹುಶಃ ಕನೋಜದ ಯಶೋವರ್ಮನಿರಬೇಕೆಂದು R.C ಮಜೂಮದಾರರ ಅಭಿಪ್ರಾಯ. ಶತ್ರುವನ್ನು ನಾಶಪಡಿಸಿದ ಮೇಲೆ ರಾಜಕುಮಾರನು ತನ್ನ ತಂದೆಗೆ ಗಂಗಾ ಮತ್ತು ಯಮುನಾ ವಿಗ್ರಹಗಳನ್ನೂ, ಪಾಳಿಧ್ವಜ, ನಗಾರಿ, ಭೇರಿ ಇತ್ಯಾದಿ ರಾಜಲಾಂಛನಗಳನ್ನೂ ನೀಡಿದನು. ಆದರೆ ದುರದೃಷ್ಟವಶಾತ್, ಹಿಮ್ಮೆಟ್ಟುತ್ತಿದ್ದ ವೈರಿಯು ವಿಜಯಾದಿತ್ಯನನ್ನು ಸೆರೆಹಿಡಿದನು. ಇದು ಸುಮಾರು ಕ್ರಿ..೬೮೬ರಲ್ಲಿ ನಡೆದಿರಬಹುದು. ಮತ್ತೆ ೬೯೧ರ ವೇಳೆಗೆ ಅವನು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಎರುಪುಂದಲೆಯಲ್ಲಿ ಶಿಬಿರ ಹೂಡಿದ್ದುದನ್ನು ನೋಡುತ್ತೇವೆ. ಶತೃವಿನ ಸೆರೆಯಿಂದ ತಪ್ಪಿಸಿಕೊಂಡು ಬರಲು ಅವನಿಗೆ ಹೆಚ್ಚುಕಡಿಮೆ ಐದು ವರ್ಷಗಳು ಹಿಡಿದವು.

ವಿಜಯಾದಿತ್ಯ (೬೯೬೭೩೩)

ವಿಜಯಾದಿತ್ಯನು ಪಟ್ಟಕ್ಕೆ ಬಂದದ್ದು ಕ್ರಿ.. ೬೯೬ ರಲ್ಲಿ. ಅವನು ೩೮ ವರ್ಷಗಳ ಸುದೀರ್ಘ ಆಳಿಕೆಯನ್ನು ನಡೆಸಿದನು. ಅವನ ಆಳ್ವಿಕೆಯ ಅವಧಿಯನ್ನು ಪ್ರಜಾ ಕಲ್ಯಾಣದ ಕಾಲಾವಧಿ ಎಂದು ವರ್ಣಿಸಲಾಗಿದೆ. ದೇವಾಲಯಗಳಿಗೆ ಉದಾರವಾಗಿ ದಾನ ಮಾಡಿದನು. ಬ್ರಹ್ಮದೇಯಗಳನ್ನು (ಅಗ್ರಹಾರ) ಸ್ಥಾಪಿಸಿದನು. ಆಲಂಪುರ ಪ್ರಶಸ್ತಿಯು ಹೇಳುವಂತೆ: ಬಡವರಿಗೆ, ಅಸಹಾಯಕರಿಗೆ, ಅನಾಥರಿಗೆ ಕೊಡಬೇಕಾದಷ್ಟು ದಾನಧರ್ಮಗಳನ್ನು ಮಾಡಿದನು(ದೀನನಾಥ ದಾರಿದ್ರ್ಯೇಭ್ಯ). ಬಹುಶಃ ಇದು ಕಾಲದ ವಿಶೇಷವಾದ ಆದರ್ಶಗುಣವಾಗಿತ್ತು. ಕೆರೆಗಳನ್ನು ತೋಡಿಸಿ ನೀರಾವರಿಯನ್ನು ಪ್ರೋತ್ಸಾಹಿಸಿದನು. ಹಲವು ಧರ್ಮಗಳ ಅನುಯಾಯಿಗಳನ್ನು ಅವನು ರಕ್ಷಿಸಿದನು. ಅವರು ಬೌದ್ಧರಾಗಲಿ, ಜೈನರಾಗಲಿ, ಭಾಗವತರಾಗಲಿ ಅವನ ಆಶ್ರಯವನ್ನು ಪಡೆದರು. ಬಾದಾಮಿಯ ಜಂಬುಲಿಂಗ ದೇವಾಲಯದಲ್ಲಿ ಕ್ರಿ.. ೬೯೯ರಲ್ಲಿ ರಾಜಮಾತೆ ವಿನಯವತಿಯು ಬ್ರಹ್ಮ, ವಿಷ್ಣು, ಮಹೇಶ್ವರ ಮೂರ್ತಿಗಳನ್ನು  ಪ್ರತಿಷ್ಠೆ ಮಾಡಿಸಿದಳು. ಅವನ ಭಾವಮೈದುನ ಆಳುಪ ವಂಶದ ಚಿತ್ರವಾಹನನು ಅವನ ತಂಗಿ ಕುಂಕುಮ ಮಹಾದೇವಿಯ ಪತಿ. ಆಕೆ ಗುಡ್ಡಿಗೆರೆ ಗ್ರಾಮವನ್ನು(ಗುಡಗೇರಿ), ತಾನು ಲಕ್ಷ್ಮೇಶ್ವರದಲ್ಲಿ ಕಟ್ಟಿಸಿದ ಜಿನ ಭವನಕ್ಕೆ ದಾನವಾಗಿ ಅರ್ಪಿಸಿದಳು. ಚಿತ್ರವಾಹನನು ಕೇರಳದ ಭಾಗದಿಂದ ಚಾಲುಕ್ಯರ ಗಡಿಗಳ ಮೇಲೆ ದಾಳಿ ಮಾಡಿದ ಕೊಚಡೈಯನ್‌ ಎಂಬ ಚೇರ ಅರಸನನ್ನು ಸದೆಬಡಿದು ಚಾಲುಕ್ಯರ ಗಡಿಗಳನ್ನು ರಕ್ಷಿಸಿದನು. ಕ್ರಿ.. ೭೨೩ರಲ್ಲಿ ಬಿಕ್ಕಿರಾಣಕನು, (ಇವನು ಇಮ್ಮಡಿ ವಿಕ್ರಮಾದಿತ್ಯನೆಂದು ಗುರುತಿಸಲಾಗಿದೆ) ಸಂಬೊಳಲ್ ಎಂಬ ಗ್ರಾಮವನ್ನು ವಿಜಯನೆಂಬ ಅಧಿಕಾರಿಯ (ಮಹತ್ತರ) ಕೋರಿಕೆಯಂತೆ ಲಕ್ಷ್ಮೇಶ್ವರದ ಶಂಖಬಸ್ತಿಗೆ ದಾನ ಮಾಡಿದನು. ಇವನು ದೇವಾಲಯಗಳನ್ನು ದುರಸ್ತಿ ಮಾಡಿಸಿ, ಅಲ್ಲಿ ಸಂಗೀತ ಕಚೇರಿಗಳು ನಡೆಯಲು ಏರ್ಪಾಟು ಮಾಡಿದನು. ಅವನ ಪತ್ನಿ ಮಹಾದೇವಿ ಕರಹಾಡದ ಸೇಂದ್ರಕನಾಯಕ ವಿಷ್ಣುರಾಜನ ಮಗಳು. ವೀಣಾ ಪೋಟಿಯೆನ್ನುವವಳು ಒಬ್ಬ ವೇಶ್ಯೆ ಯಾಗಿದ್ದು, ಮಹಾಕೂಟದ ಮುಕ್ತೇಶ್ವರನಿಗೆ ಒಂದು ರತ್ನಖಚಿತ ಪೀಠವನ್ನೂ ಬೆಳ್ಳಿಯ ಕೊಡೆಯನ್ನೂ ಅರ್ಪಿಸಿದಳು.

ಇಮ್ಮಡಿ ವಿಕ್ರಮಾದಿತ್ಯ (೭೩೩೭೪೪)

ವಯಸ್ಸಾಗಿದ್ದುದರಿಂದ ವಿಜಯಾದಿತ್ಯನು ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ತನ್ನ ಮಗ ಇಮ್ಮಡಿ ವಿಕ್ರಮಾದಿತ್ಯನನ್ನು ಆಡಳಿತದಲ್ಲಿ ಸಹಭಾಗಿಯಾಗಿ ಮಾಡಿಕೊಂಡನು. ಶಾಂತಿಯ ಕಾಲಾವಧಿಯನ್ನು ದೌರ್ಬಲ್ಯವೆಂದು ತಪ್ಪಾಗಿ ಲೆಕ್ಕ ಹಾಕಿದ ಸಾಂಪ್ರದಾಯಿಕ ಶತ್ರು ಪಲ್ಲವ ಪರಮೇಶ್ವರವರ್ಮನು ಚಾಲುಕ್ಯರ ವಿರುದ್ಧವಾಗಿ ಬಂಡೆದ್ದನು. ಆಗ ವಿಕ್ರಮಾದಿತ್ಯನು ದಂಡೆತ್ತಿ ಕಾಂಚೀಪುರಕ್ಕೆ ಹೋಗಿ, ಪಲ್ಲವನನ್ನು ಸೋಲಿಸಿ ಅವನಿಂದ ಕಪ್ಪ ವಸೂಲು ಮಾಡಿಕೊಂಡು ಬಂದನು. ಇದು ನಡೆದದ್ದು ೭೩೦-೩೧ರಲ್ಲಿ. ಇದರಲ್ಲಿ ಅವನಿಗೆ ದುರ್ವಿನೀತ ಎರೆಯಪ್ಪನ ಸಮರ್ಥ ನೆರವು ದೊರಕಿತು. ರಾಜನು ಅವನಿಗೆ ಉಳ್ಚಲು ಮತ್ತು ಪರಿಯಳಗಳೆಂಬ ಎರಡು ಗ್ರಾಮಗಳನ್ನು ಕೊಡುಗೆಯಾಗಿ ನೀಡಿದನು. ಗಂಗನನ್ನು ದುಗ್ಗಮಾರ, ಶ್ರೀಪುರುಷನ ಮಗ ಎಂದು ಗುರುತಿಸಲಾಗಿದೆ. ವಿಕ್ರಮಾದಿತ್ಯನು ಸು. ಕ್ರಿ..೭35ರಲ್ಲಿ ತನ್ನ ಸ್ವತಂತ್ರ ಆಳ್ವಿಕೆಯು ಪ್ರಾರಂಭವಾದ ಒಡನೆಯೇ ತನ್ನ ಅಧೀನರಾಜ ಗಂಗ ಪುರುಷನನ್ನು ಜೊತೆಗೆ ಸೇರಿಸಿಕೊಂಡು ಪಲ್ಲವನ ಮೇಲೆ ಯುದ್ಧಕ್ಕೆ ನಡೆದನು. ಆಗ ಇನ್ನೂ ಬಾಲಕನಾಗಿದ್ದರೂ ಪಲ್ಲವ ನಂದಿವರ್ಮನು ಉಗ್ರವಾದ ಪ್ರತಿಭಟನೆಯನ್ನು ಕೊಟ್ಟನು, ಆದರೂ ಫಲವಾಗಲಿಲ್ಲ. ಕಟಮುಖ(ಮದ್ದಳೆ), ಸಮುದ್ರಘೋಷ(ಒಂದು ಬಗೆಯ ಕಹಳೆ), ರಾಜದಂಡ ಮೊದಲಾದ ತನ್ನ ರಾಜಲಾಂಛನಗಳನ್ನು ತೊರೆದು ಪಲಾಯನ ಮಾಡಿದನು. ಚಾಲುಕ್ಯನು ರಾಜಧಾನಿಯನ್ನು ವಶಪಡಿಸಿಕೊಂಡನು. ಆದರೆ ಅದನ್ನು ಲೂಟಿ ಮಾಡದೆ, ಬ್ರಾಹ್ಮಣರಿಗೆ ದೀನ-ದರಿದ್ರರಿಗೆ ಬೇಕಾದಷ್ಟು ದಾನಧರ್ಮಗಳನ್ನು ಮಾಡಿದನು. ರಾಜಸಿಂಹೇಶ್ವರ ದೇವಾಲಯದಂತಹ ಭವ್ಯವಾದ ಶಿಲಾದೇವಾಲಯವನ್ನು ನೋಡಿ ಅವನು ಪ್ರಭಾವಿತನಾದನು. ದೇವಾಲಯದ ಸಂಪತ್ತನ್ನು ನೋಡಿ ಅವನಿಗೆ ಬೆರಗಾಯಿತು! ಅದಷ್ಟನ್ನೂ ಅವನು ಲೂಟಿ ಮಾಡಿಕೊಂಡು ತರಬಹುದಾಗಿತ್ತು. ಆದರೆ ಅಂತಹ ಹೀನಕಾರ್ಯಕ್ಕೆ ಅವನ ಮನಸ್ಸು ಒಪ್ಪದಾಯಿತು. ಅದಕ್ಕೆ ಬದಲು ತಾನೇ ಇನ್ನಷ್ಟು ದಾನಗಳನ್ನು ನೀಡಿದನು. ದಂಡಯಾತ್ರೆಯಲ್ಲಿ ಅವನು ಪಾಂಡ್ಯ, ಚೋಳ, ಕೇರಳ, ಕಳಭ್ರರಿಗೆ ತಲ್ಲಣವನ್ನುಂಟು ಮಾಡಿದನು. ಕೊನೆಗೆ ದಕ್ಷಿಣ ಸಮುದ್ರದ ತೀರದಲ್ಲಿ ಒಂದು ಜಯಸ್ತಂಭವನ್ನು ನೆಡಿಸಿದನು. ಕರ್ನಾಟಕದ ರಾಜನೊಬ್ಬನು ದಂಡಯಾತ್ರೆ ಮಾಡಿದ ವಿರಳ ಸಂದರ್ಭದಲ್ಲಿ ಇದೂ ಒಂದು.

ಮೂರನೆಯ ಸಾರಿ ಚಾಲುಕ್ಯರಿಗೂ ಪಲ್ಲವರಿಗೂ ಮುಖಾಮುಖಿಯಾದದ್ದು, ಕಾಂಚಿಯ ಅರಸನನ್ನು ಜಯಿಸಲು ಇಮ್ಮಡಿ ಕೀರ್ತಿವರ್ಮನು ತನ್ನ ತಂದೆಯ ಅನುಮತಿಯನ್ನು ಪಡೆದು ಯುದ್ಧಕ್ಕೆ ಹೋದಾಗ. ಬಾಲಕನಾಗಿದ್ದಾಗಲೇ ಅವನು ವಿವಿಧ ಆಯುಧಗಳ ಮೇಲೆ ಪ್ರಭುತ್ವವನ್ನು ಸಂಪಾದಿಸಿದ್ದನು. ಮೂರನೆಯ ದಂಡಯಾತ್ರೆ ನಡೆಸಿ ಪಲ್ಲವನನ್ನು ಸೋಲಿಸಿ ಅವನು ಕೋಟೆಯ ಹಿಂದೆ ಅಡಗಿಕೊಳ್ಳುವಂತೆ ಮಾಡಿದನು. ಜಯಶಾಲಿಯಾಗಿ, ಬೇಕಾದಷ್ಟು ಆನೆಗಳು, ಅಪಾರವಾದ ಧನಕನಕಗಳೊಂದಿಗೆ ಹಿಂದಿರುಗಿ ಬಂದು ತಂದೆಗೆ ಅವುಗಳನ್ನು ಒಪ್ಪಿಸಿದನು. ಬಹುಶಃ ಮೂರು ಕಾಂಚಿ ವಿಜಯಗಳ ಸ್ಮರಣಾರ್ಥವಾಗಿ, ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು, ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ತ್ರೈಲೋಕೇಶ್ವರ ದೇವಾಲಯಗಳನ್ನು ಕಟ್ಟಿಸಿದರು. ಈಗ ಅವೇ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳೆಂದು ಹೆಸರಾಗಿವೆ. ಹೀಗೆ ಅವನು ಯುವರಾಜನಾಗಿ ಒಮ್ಮೆ, ರಾಜನಾಗಿ ಇನ್ನೊಮ್ಮೆ ಪಲ್ಲವರ ಮೇಲೆ ಯುದ್ಧ ಮಾಡಿದುದಲ್ಲದೆ ತನ್ನ ಮಗನು ಅವರ ಮೇಲೆ ಕೊನೆಯ ಯುದ್ಧ ಮಾಡಲು ಅವಕಾಶ ಕೊಟ್ಟನು.

ಗುಜರಾತಿನಲ್ಲಿ ಧಾರಾಶ್ರಯ ಜಯಸಿಂಹನ ಮಗ ಅವನಿಜಾಶ್ರಯ ಪುಲಕೇಶಿಯು, ಗುಜರಾತಿನ ಮೇಲೆ ಸಾ.ಶ.ವ. 739ರಲ್ಲಿ ದಾಳಿ ಮಾಡಿದ್ದ ಜಾತಿಕರ (ಅರಬ್ಬರು) ವಿರುದ್ಧ ಯುದ್ಧ ಮಾಡ ಬೇಕಾಯಿತು. ಇಲ್ಲಿ ವಿಕ್ರಮಾದಿತ್ಯನಿಗೆ ಕುಳಿತು ನೋಡುವುದಲ್ಲದೆ ಬೇರೆ ಯಾವ ಪಾತ್ರವೂ ಇರಲಿಲ್ಲ. ಅವನಿಗೆ ತುಂಬಾ ಸಂತೋಷವಾಗಿ ಪುಲಕೇಶಿಗೆ ಅವನಿಜಾಶ್ರಯ ಎಂಬ ಬಿರುದು ನೀಡಿದನು.

ಎರಡನೇ ಕೀರ್ತಿವರ್ಮ (೭೪೪೭೫7)

ಇಮ್ಮಡಿ ಕೀರ್ತಿವರ್ಮನು ವಂಶದ ಕೊನೆಯ ಅರಸ. ಅವನು ಆಳತೊಡಗಿದುದು ಕ್ರಿ.. ೭೪೪ರಲ್ಲಿ. ಯುವರಾಜನಾಗಿದ್ದಾಗಲೇ ಪಲ್ಲವರ ಮೇಲೆ ಯಶಸ್ವಿ ಚೈತ್ರಯಾತ್ರೆಯನ್ನು ನಡೆಸಿದ್ದನು. ಆದರೆ ಅದು ಅವನ ಮೊದಲನೆಯದರಂತೆಯೇ ಕೊನೆಯ ಬಲಪ್ರದರ್ಶನವೂ ಆಯಿತು. ಅವನ ಅಧೀನರಾಗಿದ್ದ ಅರಸರು ಸ್ವಾತಂತ್ರ್ಯವನ್ನು ಸಾರಿಕೊಳ್ಳಲು ತೊಡಗಿದರು. ಇಮ್ಮಡಿ ಆಳುವರಸನು ನಂದಿವರ್ಮನ ಸೇನಾಪತಿ ಉದಯಚಂದ್ರನೊಂದಿಗೆ ಸೇರಿಕೊಂಡಂತೆ ತೋರುತ್ತದೆ. ರಾಷ್ಟ್ರಕೂಟ ದಂತಿಗನೇ ಮೊದಲು ದಂಗೆಯ ಧ್ವಜವನ್ನು ಹಾರಿಸಿದ್ದು. ತಾನು ಕರ್ನಾಟಬಲವನ್ನು-ಅದು ಚಾಲುಕ್ಯ ಸೇನೆಗೆ ಕೊಟ್ಟಿದ್ದ ಹೆಸರು-ಸೋಲಿಸಿದೆನೆಂದು ಹೇಳಿಕೊಂಡಿದ್ದಾನೆ. ಆದರೆ ಅವನು ಹೆಚ್ಚು ಕಾಲ ಬದುಕಿರಲಿಲ್ಲ. ಜವಾಬ್ದಾರಿ ಅವನ ಚಿಕ್ಕಪ್ಪ ಮೊದಲನೆಯ ಕೃಷ್ಣನ ಮೇಲೆ ಬಿದ್ದಿತು. ಈಗ ಕೃಷ್ಣನು ಚಾಲುಕ್ಯ ಸಾಮ್ರಾಜ್ಯದ ಉತ್ತರ ಭಾಗವನ್ನು ಆಳುತ್ತಿದ್ದನು. ಅವನು ಚಾಲುಕ್ಯರ ಮೇಲೆ ಕೊನೆಯ ಹೊಡೆತವನ್ನು ಕೊಟ್ಟಿದ್ದು ಕ್ರಿ.. ೭೫೭ರಲ್ಲಿ. ಆಗ ನಡೆದ ಯುದ್ಧದಲ್ಲಿ ಕೀರ್ತಿವರ್ಮನು ಹತನಾದನು. ಎರಡು ಶತಮಾನಗಳ ಆಳಿಕೆಯ ನಂತರ ಚಾಲುಕ್ಯರು ನೇಪಥ್ಯಕ್ಕೆ ಸರಿದರು.

ಆದರೂ ಅಲ್ಲಲ್ಲಿ ಚಾಲುಕ್ಯರ ವಂಶದ ಕೆಲವರು ಇದ್ದರು. ಉದಾಹರಣೆಗೆ ಕ್ರಿ..೮೦೦ರಲ್ಲಿ ಕತ್ತಿಯರಸನೆನ್ನುವವನು ಧಾರವಾಡ ಪ್ರದೇಶವನ್ನು ಆಳುತ್ತಿದ್ದನು. ರಾಜಾದಿತ್ಯನೆಂಬ ಇನ್ನೊಬ್ಬನು ಕಂದಬಳಿಗೆ ೧೦೦೦ವನ್ನು ಆಳುತ್ತಿದ್ದನು. ಇದು ತುಂಗಭದ್ರೆಯ ಪೂರ್ವಕ್ಕಿದ್ದ ಪ್ರದೇಶ. ಕ್ರಿ.. ೮೧೩ರಲ್ಲಿ ಕುಣಿಗಲ್ ದೇಶದಲ್ಲಿ ವಿಮಲಾದಿತ್ಯನೆಂಬುವನು ಆಳುತ್ತಿದ್ದನು. ಮೈಸೂರಿನ ಬಳಿಯ ವರುಣದಲ್ಲಿ ಕಂಡುಬಂದ 9-೧೦ನೇ ಶತಮಾನಗಳಿಗೆ ಸೇರಿದ ಶಾಸನವು ಚಾಲುಕ್ಯರ ನರಸಿಂಹನೆಂಬ ರಾಜನನ್ನೂ ಅವನ ರಾಣಿ ಗಾವಿಲಬ್ಬರಸಿಯನ್ನೂ ಉಲ್ಲೇಖಿಸುತ್ತದೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources