ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆ - ಪುರಾತತ್ವ ಮತ್ತು ಸಾಹಿತ್ಯಾಧಾರಗಳು.

Unit- I Reconstructing Ancient Indian History

ಮೂಲಾಧಾರಗಳು ಮತ್ತು ವರ್ಗೀಕರಣ - SOURCES AND CLASSIFICATION

ಪೀಠಿಕೆ: ಗತಿಸಿಹೋದ ಘಟನೆಗಳ ವ್ಯವಸ್ಥಿತ ಅಧ್ಯಯನವೇ ಇತಿಹಾಸ. ಗತಕಾಲದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಸಂಯೋಜಿಸುವ ಕಾರ್ಯವನ್ನು ಇತಿಹಾಸದ ಪುನರ್‌ ರಚನೆ ಎನ್ನುವರು. ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಪೋಲಕಲ್ಪಿತ ಅಥವಾ ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳನ್ನು ಮೂಲಾಧಾರಗಳು ಎಂತಲೂ ಕರೆಯುವರು.  ಇಂತಹ ಮೂಲಾಧಾರಗಳು ಐತಿಹಾಸಿಕ ಮಹತ್ವವನ್ನು ಹೊಂದಿರಬೇಕು. ಯಾವುದೇ ದೇಶದ ಇತಿಹಾಸ ಪುನರ್‌ ರಚನೆಗೆ ವಿವಿಧ ಮೂಲಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚಿಸುವಲ್ಲಿ ಆಧಾರಗಳ ಕೊರತೆಯನ್ನು ವಿದ್ವಾಂಸರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದ್ದು, ಅವರು ಇತಿಹಾಸದ ಕೃತಿಗಳನ್ನು ರಚಿಸಿಲ್ಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಪ್ರಾಚೀನ ಭಾರತದ ಲಭ್ಯ ಸಾಹಿತ್ಯವು ಅಧಿಕ ಪ್ರಮಾಣದಲ್ಲಿ ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಅರಬ್‌ ವಿದ್ವಾಂಸ ಅಲ್ಬೇರೂನಿ (12 ನೆ ಶತಮಾನದ ಆದಿಭಾಗ) “ಭಾರತೀಯರನ್ನು ತಮ್ಮ ಪೂರ್ವ ಇತಿಹಾಸದ ಬಗ್ಗೆ ಕೇಳಿದರೆ ಒಂದೇಸಮನೇ ಕತೆ ಹೇಳಲು ತೊಡಗುತ್ತಾರೆ” ಎಂದಿದ್ದಾನೆ. R.C ಮಜೂಮದಾರ್‌ ಅವರೂ ಸಹಾ “ಇತಿಹಾಸ ಕೃತಿಗಳ ರಚನೆಗೆ ಸಂಬಂಧಿಸಿದಂತೆ ಭಾರತೀಯರು ತೋರಿಸಿರುವ ಅನಾಸ್ಥೆಯು ನಮ್ಮ ಸಂಸ್ಕೃತಿಯ ದೊಡ್ಡ ದೋಷವಾಗಿದೆ” ಎಂದಿದ್ದಾರೆ. ಶಾಸನತಜ್ಞ ಜಾನ್‌ ಫ್ಲೀಟ್‌ ಅವರೂ ಸಹಾ “ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದೆ” ಎಂದಿದ್ದಾರೆ.

   ಆದರೆ ಖ್ಯಾತ ವಿದ್ವಾಂಸರಾದ A.B. ಕೀತ್‌ ರವರು “ಪ್ರಾಚೀನ ಗ್ರೀಕರ ಮೇಲೆ ಪರ್ಷಿಯನ್ನರು ದಾಳಿ ಮಾಡಿದ ಕಾರಣ ಎರೊಡಟಾಸ್‌ ಮತ್ತು ತುಸಿಡೈಡಸ್‌ ರಂತಹ ಇತಿಹಾಸಕಾರರು ಗ್ರೀಕ್‌ ಇತಿಹಾಸದ ಕೃತಿಗಳನ್ನು ರಚಿಸಿದರು. ಆದರೆ, ಪ್ರಾಚೀನ ಭಾರತದಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿರದ ಕಾರಣ ಪ್ರಾಚೀನ ಭಾರತೀಯರು ಐತಿಹಾಸಿಕ ಕೃತಿ ರಚನೆಗೆ ಗಮನ ಹರಿಸಿಲ್ಲ. ಲಭ್ಯವಿರುವ ಪ್ರಾಚೀನ ಸಾಹಿತ್ಯದ ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವುಗಳಲ್ಲೂ ಸಹಾ ಐತಿಹಾಸಿಕ ಮಾಹಿತಿಗಳು ಲಭ್ಯವಾಗುತ್ತವೆ” ಎಂಬ ಮೌಲಿಕ ಅಭಿಪ್ರಾಯವನ್ನು ನೀಡಿದ್ದಾರೆ. ಕಾರಣ, ಋಗ್ವೇದ ಸೇರಿದಂತೆ ಇತರೆ ವೈದಿಕ ಸಾಹಿತ್ಯದಲ್ಲಿ ಹಲವಾರು ಐತಿಹಾಸಿಕ ಅಂಶಗಳನ್ನು ಅವರೇ ಸಂಶೋಧಿಸಿ ತೋರಿಸಿದ್ದಾರೆ. ಪುರಾಣಗಳಲ್ಲೂ ಸಹಾ ಸಾಕಷ್ಟು ಐತಿಹಾಸಿಕ ಘಟನೆಗಳ ವಿವರಗಳು ಲಭ್ಯವಿವೆ. ಅಂತೆಯೇ ಮಃಾಕಾವ್ಯ ಮಹಾಭಾರತವೂ ಸಹಾ ಒಂದು ಅರೆ ಐತಿಹಾಸಿಕ ಕೃತಿಯಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇತ್ತು ಎಂಬುದು ಚರ್ಚಾಸ್ಪದ ವಿಷಯವಾಗಿದೆ.  

      ಮೂಲಾಧಾರಗಳಲ್ಲಿ ಐತಿಹಾಸಿಕ   ಮೌಲ್ಯವುಳ್ಳ ಪಳೆಯುಳಿಕೆಗಳು, ಪ್ರಾಚ್ಯ ವಸ್ತುಗಳು, ಶಾಸನಗಳು, ಕಟ್ಟಡಗಳು, ಸ್ಮಾರಕಗಳು, ಹಸ್ತಲಿಪಿಗಳು, ಓಲೆಗರಿಗಳು, ನಾಣ್ಯಗಳು, ದೇಶೀಯ ಮತ್ತು ವಿದೇಶಿಯ ಲೇಖಕರ ಕೃತಿಗಳು, ಪ್ರವಾಸ ಕಥನಗಳು, ಆತ್ಮಕಥನಗಳು, ವಂಶಾವಳಿಗಳು ಇತ್ಯಾದಿಗಳು ಮೂಲಾಧಾರಗಳೇ ಆಗಿವೆ. ಅಧ್ಯಯನದ ಅನುಕೂಲಕ್ಕಾಗಿ ಅವುಗಳನ್ನು ಕೆಳಕಂಡಂತೆ ವರ್ಗೀಕರಣ ಮಾಡಲಾಗಿದೆ.

ಮೂಲಾಧಾರಗಳ ವರ್ಗೀಕರಣ:- ಮೂಲಾಧಾರಗಳನ್ನು ಪ್ರಮುಖವಾಗಿ  ಎರಡು ವಿಧಗಳಾಗಿ ವರ್ಗೀಕರಣ ಮಾಡಬಹುದು. ಅವುಗಳೆಂದರೆ:-

1.       ಪುರಾತತ್ವ ಆಧಾರಗಳು: ಉತ್ಖನನಗಳು, ಶಾಸನಗಳು, ನಾಣ್ಯಗಳು & ಸ್ಮಾರಕಗಳು ಒಳಗೊಳ್ಳುತ್ತವೆ.

2.     ಸಾಹಿತ್ಯದ ಆಧಾರಗಳು (Literary Sources) ಅಥವಾ ಲಿಖಿತ ಆಧಾರಗಳು.

೧. ಉತ್ಖನನಗಳು:- ಭೂಮಿಯೊಳಗೆ ಹೂತು ಹೋಗಿರುವ ಪ್ರಾಚೀನ ಅವಶೇಷಗಳನ್ನು ವ್ಯವಸ್ಥಿತವಾಗಿ ಅಗೆಯುವ, ದಾಖಲಿಸುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಉತ್ಖನನ ಎನ್ನುವರು. ಇದರಲ್ಲಿ ಮತ್ತೆ ಎರಡು ವಿಧಗಳಿವೆ. ಅವುಗಳೆಂದರೆ:

ಅ. ಸಮತಲ ಉತ್ಖನನ ಮತ್ತು ಆ. ಲಂಬ ಉತ್ಖನನ.

ಭಾರತದಲ್ಲಿನ ಕೆಲವು ಪ್ರಮುಖ ಉತ್ಖನನಗಳು ಮತ್ತು ಅವುಗಳ ಸಂಶೋಧಕರ ವಿವರಗಳು ಈ ಕೆಳಗಿನಂತಿವೆ:-

1. ಹರಪ್ಪಾ - ಡಾ. ದಯಾರಾಂ ಸಹಾನಿ - 1921

2. ಮೊಹೆಂಜೊದಾರೊ - R.D. ಬ್ಯಾನರ್ಜಿ - 1922

3. ತಕ್ಷಶಿಲೆ, ನಳಂದಾ ಮತ್ತು ಪಾಟಲೀಪುತ್ರಗಳು - ಡಾ. ಸ್ಪೂನರ್‌ - 1934

4. ನರ್ಮದಾ ನದಿ ತೀರ - H.D. ಸಂಕಾಲಿಯ

5. ದಕ್ಷಿಣ ಭಾರತದ ಪ್ರದೇಶಗಳು - ರಾಬರ್ಟ್‌ ಬ್ರೂಸ್‌ ಫೂಟ್

 

ಶಾಸನಗಳು:- ಇವು ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆಗೆ ಬಹುಮುಖ್ಯ ಆಧಾರಗಳಾಗಿವೆ. ಶಾಸನಗಳ ವ್ಯವಸ್ಥಿತ ಅಧ್ಯಯನವನ್ನು ಶಾಸನಶಾಸ್ತ್ರ ಅಥವಾ Epigraphy ಎನ್ನುವರು. ಸುಮಾರು 75-80 ಸಾವಿರದಷ್ಟು ಶಾಸನಗಳು ಲಭ್ಯ. ವಿವಿಧ ಭಾಷೆಗಳಲ್ಲಿ ರಚಿತ. ಬ್ರಾಹ್ಮಿ, ಕರೊಷ್ಠಿ, ಅರಾಮಿಕ್‌ ಮತ್ತು ದೇವನಾಗರಿ ಲಿಪಿಗಳನ್ನು ಬಳಸಿ ಬರೆಯಲಾಗಿದೆ. ಬಂಡೆಗಳು, ಸ್ತಂಭಗಳು, ಭಿತ್ತಿಗಳು, ವಿಗ್ರಹಗಳ ತಳಭಾಗ, ಗುಹೆಗಳು, ಮುದ್ರೆಗಳು, ಲೋಹಪಟಗಳ ಮೇಲೆ ಬರೆಯಲ್ಪಟ್ಟಿವೆ. ಶಾಸನಗಳನ್ನು ಚಿರಸ್ಥಾಯಿ ವಸ್ತುಗಳ ಮೇಲೆ ಬರೆಯಲಾಗುತ್ತಿತ್ತು. ಸಿಂಧೂ ಮುದ್ರೆಗಳು ಅತ್ಯಂತ ಪ್ರಾಚೀನ ಬರವಣಿಗೆಗಳು; ಆದರೆ ಅವುಗಳನ್ನು ಇನ್ನೂ ನಿಖರವಾಗಿ ಓದಲಾಗಿಲ್ಲ. ಪಾಕಿಸ್ತಾನದ ಸೊಹಗರ್‌ ನಲ್ಲಿ ಸಿಕ್ಕಿರುವ ಶಾಸನವೇ ಭಾರತದ ಅತ್ಯಂತ ಹಳೆಯ ಶಾಸನ. ಅಶೋಕನ ಶಾಸನಗಳು ಪ್ರಾಚೀನತೆಯಲ್ಲಿ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವನು ಸ್ಥಳೀಯ ಭಾಷೆಗಳಲ್ಲಿ ಶಾಸನಗಳನ್ನು ಬರೆಯಿಸಿದ್ದಾನೆ. ಆರಂಭಿಕ ಶಾಸನಗಳಲ್ಲಿ ಅವನ ಹೆಸರು ನಿಗೂಢ. ಸಾ.ಶ.ವ. 1915ರ ಮಸ್ಕಿ ಶಾಸನದಲ್ಲಿ ಬಿರುದುಸಹಿತ ಹೆಸರು ಉಲ್ಲೇಖ; ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು. ಮಧ್ಯಪ್ರದೇಶದ ಗುಜರ್ರಾ ಶಾಸನದಲ್ಲೂ ಇದೇ ಮಾಹಿತಿ. ಅವನ ಶಾಸನಗಳಿಂದ ನಿಖರ ಮಾಹಿತಿ ಲಭ್ಯವಾಗಿ ಇತಿಹಾಸ ಪುನರ್‌ ರಚನೆಗೆ ಆಧಾರ ಒದಗಿಸಿವೆ. ಕಾರಣ ಆತನನ್ನು “ಶಿಲಾಶಾಸನಗಳ ಪಿತಾಮಹಾ” ಎನ್ನಲಾಗಿದೆ.

ಶಾಸನಗಳ ವರ್ಗೀಕರಣ:- ವಿಷಯಾಧಾರಿತವಾಗಿ ವರ್ಗೀಕರಣ. ೧. ಐತಿಹಾಸಿಕ. ೨. ಧಾರ್ಮಿಕ. ೩. ದಾನ ಅಥವಾ ದತ್ತಿ ಮತ್ತು ೪. ಸ್ಮರಣ ಶಾಸನಗಳು ಎಂದು ವರ್ಗೀಕರಣ. ಶಾಸನಗಳನ್ನು ರಾಜ-ಮಹಾರಾಜರು, ಮಂತ್ರಿಗಳು, ಸೇನಾಧಿಪತಿಗಳು, ಪ್ರಾಂತೀಯ ಅಧಿಕಾರಿಗಳು, ರಾಣಿಯರು, ಶ್ರೀಮಂತರು, ವ್ಯಾಪಾರಿಗಳು, ಧರ್ಮಗುರುಗಳು, ಹೀಗೆ ವಿವಿಧ ವ್ಯಕ್ತಿಗಳಿಂದ ಬರೆಸಲ್ಪಡುತ್ತಿದ್ದವು.

ಭಾರತದ ಕೆಲವು ಪ್ರಮುಖ ಶಾಸನಗಳು:- ಶಾಸನದ ಹೆಸರು, ಸ್ಥಳ ಮತ್ತು ಒದಗಿಸುವ ಮಾಹಿತಿ

1. ಹಾಥಿಗುಂಫಾ ಶಾಸನ – ಒರಿಸ್ಸಾ, ಭುವನೇಶ್ವರ ಬಳಿಯ ಉದಯಗಿರಿ ಬೆಟ್ಟದಲ್ಲಿ. ಕಾರವೇಲನ ೧೪ ವರ್ಷಗಳ ಆಡಳಿತದ ಮಾಹಿತಿ. ಸಾ.ಶ.ಪೂ. 1ನೆ ಶತಮಾನ. ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿ.

2. ಗಿರ್‌ನಾರ್‌ ಶಾಸನ:- ಗುಜರಾತ್‌ ಬಳಿಯ ಜುನಾಘಡದಲ್ಲಿ. ಶಕಕ್ಷತ್ರಪ ರುದ್ರದಾಮನನು ಮೌರ್ಯರ ಕಾಲದ ಸುದರ್ಶನ ಕೆರೆಯನ್ನು ದುರಸ್ತಿ ಮಾಡಿಸಿದ ಮಾಹಿತಿ ಮತ್ತು ಅದೇ ಕೆರೆಯನ್ನು ಗುಪ್ತರ ಸ್ಕಂದಗುಪ್ತ ಮತ್ತೆ ಐದನೇ ಶತಮಾನದಲ್ಲಿ ದುರಸ್ತಿ ಮಾಡಿಸಿದ ಮಾಹಿತಿ. ಸುದರ್ಶನ ತಟಾಕ ಸಂಸ್ಕಾರ ಗ್ರಂಥ ಎಂದು ವರ್ಣನೆ.

3. ಪ್ರಯಾಗ (ಅಲಹಾಬಾದ್‌) ಶಾಸನ. ಉತ್ತರಪ್ರದೇಶದ ಅಲಹಾಬಾದ್‌ ನಲ್ಲಿದೆ. ಮೂಲಸ್ಥಳ ಕೌಶಾಂಬಿಯಲ್ಲಿ. ಅಶೋಕನ ಕಾಲದಲ್ಲಿ ಸ್ಥಾಪನೆ. ಸಮುದ್ರಗುಪ್ತನ ದಂಡನಾಯಕ ಅರಿಸೇನನಿಂದ ಸಂಸ್ಕೃತ ಭಾಷೆಯಲ್ಲಿ ರಚನೆ. ಇದರ ಮೇಲೆ ಜಹಾಂಗೀರನೂ ಶಾಸನ ಬರೆಯಿಸಿದ್ದಾನೆ. ಸಮುದ್ರಗುಪ್ತನ ದಿಗ್ವಿಜಯಗಳ ಮಾಹಿತಿ. ನಾಲ್ಕನೇ ಶತಮಾನ.

4. ಐಹೊಳೆ ಶಾಸನ: ಕರ್ನಾಟಕದ ಐಹೊಳೆಯಲ್ಲಿದೆ. ಇಮ್ಮಡಿ ಪುಲಕೇಶಿಯ ಸಾಧನೆಗಳು. ಮೇಗುತಿ ದೇವಾಲಯದ ಪೂರ್ವದ ಗೋಡೆಯ ಮೇಲೆ. ಅವನ ದಂಡನಾಯಕ ರವಿಕೀರ್ತಿಯಿಂದ ರಚಿತ. ಸಂಸ್ಕೃತದಲ್ಲಿ. ನರ್ಮದಾ ನದಿ ಯುದ್ಧದ ಮಾಹಿತಿ. ಶಾಲಿವಾಹನ ಶಕ 556 ರಿಂದ 634 ಎಂಬ ಮಾಃಇತಿ ಕಾಲಗಣನೆಗೆ ಪೂರಕ. 7ನೆ ಶತಮಾನ.

5. ಮೆಹರೌಲಿ ಸ್ತಂಭ ಶಾಸನ. ದೆಹಲಿ ಬಳಿ. ಗುಪ್ತರ ದೊರೆ ೆರಡನೆ ಚಂದ್ರಗುಪ್ತನ ಬಗ್ಗೆ. ಸಂಸ್ಕೃತದಲ್ಲಿದೆ. ಇದು ಕಬ್ಬಿಣದಿಂದ ನಿರ್ಮಿತ. ಬಂಗಾಳದ ಬುಡಕಟ್ಟು ಮತ್ತು ವಹ್ಲಿಕರನ್ನು ಸೋಲಿಸಿದ ಮಾಹಿತಿ.

6. ಉತ್ತರ ಮೇರೂರು ಶಾಸನ. ತಮಿಳುನಾಡು. ಚೋಳದೊರೆ ಒಂದನೇ ಪರಾಂತಕನ ಕಾಲ; 10ನೆ ಶತಮಾನ. ಚೋಳರ ಗ್ರಾಮಾಡಳಿತದ ಬಗ್ಗೆ ವಿಫುಲ ಮಾಹಿತಿ.

7. ಕುಡಿಮಿಯಾಮಲೈ ಶಾಸನ. ತಮಿಳುನಾಡು. ಪಲ್ಲವರ ಅರಸು ಒಂದನೇ ಮಹೇಂದ್ರವರ್ಮನಿಂದ ರಚಿತ. ದಕ್ಷಿಣ ಸಂಗೀತಕಲೆಯ ಬೆಳವಣಿಗೆ ಮತ್ತು ಮಹೇಂದ್ರವರ್ಮನ ಸಂಗೀತಾಸಕ್ತಿಯ ಮಾಹಿತಿ.

8. ಗ್ವಾಲಿಯರ್‌ ಪ್ರಶಸ್ತಿ ಶಾಸನ. ಮಧ್ಯಪ್ರದೇಶ. ಪ್ರತಿಹಾರರ ದೊರೆ ರಾಜಭೋಜನ ಬಗ್ಗೆ ಮಾಹಿತಿ.

9. ನಾಸಿಕ್‌ ಗುಹಾ ಶಾಸನ. ಮಹಾರಾಷ್ಟ್ರ. ಗೌತಮಿ ಬಾಲಾಶ್ರಿಯಿಂದ ರಚಿತ. ಗೌತಮಿಪುತ್ರ ಶಾತಕರ್ಣಿಯ ವಿಜಯಗಳ ಮಾಹಿತಿ. ಎರಡನೆ ಶತಮಾನ.

10.  ಹಲ್ಮಿಡಿ ಶಾಸನ. ಹಾಸನ ಜಿಲ್ಲೆ. ಕನ್ನಡದ ಮೊದಲ ಶಾಸನವೆಂದು ಪರಿಗಣನೆ. ಕದಂಬರ ಕಾಲದ ಮಾಹಿತಿ.

ಭಾರತದ ಹೊರಗೆ ಏಷ್ಯಾಮೈನರ್‌ ನಲ್ಲಿ ಸಿಕ್ಕಿರುವ ಶಾಸನಗಳು; ಭೋಗಜ್‌ ಕಾಯ್‌, ಪರ್ಸೆ ಪೋಲೀಸ್‌ ಮತ್ತು ನಕ್ಸ್‌ ಎ ರುಸ್ತುಂ ಗಳಲ್ಲಿ ಸಿಕ್ಕಿರುವ ಶಾಸನಗಳಿಂದ ವೇದಕಾಲದ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಃಇತಿ.

ಶಾಸನಗಳ ಮಹತ್ವ:- P.B. ದೇಸಾಯಿ- “ಶಾಸನಗಳಿಲ್ಲದಿದ್ದರೆ ನಮ್ಮ ಇತಿಹಾಸದ ಅಧ್ಯಯನವು ಕತ್ತಲೆ ಗವಿಯೊಳಗಿನ ಪ್ರಯಾಣದಂತಿರುತ್ತಿತ್ತು”

V.A. ಸ್ಮಿತ್‌ “ಶಾಸನಗಳು ನಂಬಿಕಾರ್ಹ ಆಧಾರಗಳು” ಎಂದಿದ್ದಾರೆ.

1.     ಶಾಸನಗಳಿಂದ ವಂಶಾವಳಿ ಮತ್ತು ಕಾಲಾನುಕ್ರಮಣಿಕೆ ತಿಳಿಯಲು ಸಾಧ್ಯವಿದೆ.

2.     ವಿವಿಧ ಶಕಗಳ ಮಾಹಿತಿಯ ಕಾರಣ ಕಾಲಗಣನಾ ಶಾಸ್ತ್ರದ ಅಧ್ಯಯನಕ್ಕೆ ಇವು ಪೂರಕವಾಗಿವೆ.

3.     ಸಮಕಾಲೀನ ಮತ್ತು ನಿರ್ದಿಷ್ಟ ಮಾಹಿತಿ ಒದಗಿಸುವ ಕಾರಣ ನಂಬಲರ್ಹ ಆಧಾರಗಳು.

4.     ದಿಗ್ವಿಜಯಗಳು, ಯಜ್ಞ-ಯಾಗಾದಿಗಳು, ಪ್ರಮುಖ ಘಟನೆಗಳ ಮಾಹಿತಿ ಇವುಗಳಿಂದ ಲಭ್ಯ.

5.     ರಾಜರುಗಳ ಅಭಿರುಚಿ ಮತ್ತು ವ್ಯಕ್ತಿತ್ವಗಳೂ ಸಹಾ ತಿಳಿದುಬರುತ್ತವೆ.

6.     ರಾಜ-ಮಹಾರಾಜರು ಮಾಡಿದ ಅಭಿವೃದ್ಧಿ ಕಾರ್ಯಗಳ ಮಾಹಿತಿ ತಿಳಿದು ಬರುತ್ತದೆ.

7.     ಸಾಮ್ರಾಜ್ಯಗಳ ಗಡಿಗಳನ್ನು ಗುರ್ತಿಸಲು ಸಾಧ್ಯವಾಗುತ್ತದೆ.

8.     ಸ್ಥಳ ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿಸುತ್ತವೆ. ಉದಾ: ಅಶೋಕನ ರುಮಿಂಡೈ ಶಾಸನದಿಂದ ಬುದ್ಧನ ಜನ್ಮಸ್ಥಳದ ಮಾಃಇತಿ.

9.     ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಮಾಃಇತಿಗಳ ಲಭ್ಯತೆ. ಆಡಳಿತ ವ್ಯವಸ್ಥೆಗಳ ಮಾಹಿತಿಗಳೂ ಲಭ್ಯ.

10.  ನಿಖರ ಮಾಹಿತಿ ಒದಗಿಸುತ್ತವೆ ಮತ್ತು ದೀರ್ಘಕಾಲ ಉಳಿದುಬರುತ್ತವೆ. ಮಾಃಇತಿ ಬದಲಾವಣೆ ಸುಲಭವಾಗಿ ಸಾಧ್ಯವಿಲ್ಲ.

11.  ಭಾಷಾ ಬೆಳವಣಿಗೆಯ ಅಧ್ಯಯನಕ್ಕೆ ಅವಕಾಶವಿದೆ.

12.  ಕಲಾನೈಪುಣ್ಯತೆ ಮತ್ತು ವೈಜ್ಞಾನಿಕ ಬೆಳವಣಿಗೆಯ ಅಧ್ಯಯನಕ್ಕೂ ಶಾಸನಗಳು ಪೂರಕವಾಗಿವೆ.

ಶಾಸನಗಳ ದೋಷಗಳು:- ಶಾಸನಗಳ ಕೆಲವು ದೋಷಗಳು ಇಂತಿವೆ:

1.     ಬಿರುದುಗಳ ಪುನರಾವರ್ತನೆ.

2.     ಅಧಿಕಾರವಧಿಯ ಗೊಂದಲಗಳು.

3.     ಅತಿಯಾದ ಪ್ರಶಂಸೆ ಮತ್ತು ಉತ್ಪ್ರೇಕ್ಷಿತ ಮಾಃಇತಿಗಳು.

4.     ಸೋಲಿನ ಮಾಹಿತಿಗಳ ನಿರಾಕರಣೆ.

5.     ನಕಲಿ ಶಾಸನಗಳ ಸೃಷ್ಠಿ.

6.     ಸ್ಥಳ ಬದಲಾವಣೆ ಗೊಂದಲಕ್ಕೆ ದಾರಿ.

7.     ಶಾಸನಗಳನ್ನು ಓದುವಾಗಿನ ತೊಡಕುಗಳು.

 

ನಾಣ್ಯಶಾಸ್ತ್ರ

   ನಾಣ್ಯಶಾಸ್ತ್ರವು ಪುರಾತತ್ವ ಶಾಸ್ತ್ರಾಧಾರಗಳ ಅಧ್ಯಯನದ ಒಂದು ಭಾಗವಾಗಿದೆ. “ನಾಣ್ಯಗಳ ವ್ಯವಸ್ಥಿತ ಅಧ್ಯಯನವನ್ನು ನಾಣ್ಯಶಾಸ್ತ್ರ ಅಥವಾ Numismatics ಎನ್ನುವರು.” ಇತರೆ ಮೂಲಗಳಿಂದ ಲಭ್ಯವಾಗುವ ಮಾಹಿತಿಗಳಿಗೆ ನಾಣ್ಯಗಳಿಂದ ಪೂರಕ ಅಂಶಗಳು ದೊರೆಯುತ್ತವೆ. ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ನಾಣ್ಯಗಳೇ ಏಕೈಕ ಲಭ್ಯ ಆಧಾರಗಳಾಗಿವೆ. ಉದಾ: ವಾಯುವ್ಯ ಭಾರತವನ್ನಾಳಿದ ಇಂಡೋ-ಗ್ರೀಕರ (ಸಾ.ಶ.ಪೂ. 1-2 ನೆ ಶತಮಾನಗಳಲ್ಲಿ) ಮೂವತ್ತು ಅರಸರ ಬಗ್ಗೆ ಮಾಹಿತಿ ಲಭ್ಯವಿರುವುದು ಕೇವಲ ನಾಣ್ಯಗಳಿಂದಲೇ. ಪ್ರಾಚೀನ ಕಾಲದಿಂದಲೂ ಅಂದರೆ, ವೈದಿಕ ಕಾಲದಿಂದಲೂ (ಸಾ.ಶ.ಪೂ 1300) ನಾಣ್ಯಗಳ ಬಳಕೆ ಭಾರತದಲ್ಲಿ ಕಂಡುಬರುತ್ತದೆ. ಪಣ, ಕರ್ಶಪಣ, ನಿಷ್ಕ, ಶತಮಾನ, ಕೃಷ್ಣಾಲ ಎಂಬ ನಾಣ್ಯಗಳ ಉಲ್ಲೇಖಗಳು ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತವೆ. ಅಲ್ಲದೇ ಮೌರ್ಯರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ದೊರೆತಿವೆ. ಅಂದಿನ ನಾಣ್ಯಗಳು ಗುರುತು ಹಾಕಿದ ಅಂದರೆ Punch marked ನಾಣ್ಯಗಳಾಗಿರುತ್ತಿದ್ದವು. ನಂತರದ ಕಾಲದಲ್ಲಿ ಎರಕ ಹಾಕುವ ನಾಣ್ಯ ಪದ್ಧತಿ ಆರಂಭವಾಯಿತು. ಪ್ರಾಚೀನ ಭಾರತದ ನಾಣ್ಯಗಳನ್ನು ಖಾಸಗಿ ನಾಣ್ಯಗಳೆಂದು ಕೆಲ ಯೂರೋಪಿನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರೂ, ಇತ್ತೀಚಿನ ಸಂಶೋಧನೆಗಳಿಂದ ಅವು ಸಾರ್ವಜನಿಕ ನಾಣ್ಯಗಳೆಂದು ಕಂಡುಬಂದಿದೆ. ಅಂತೆಯೇ ವಾಯುವ್ಯ ಭಾರತವನ್ನಾಳಿದ ಗ್ರೀಕರ ಪ್ರಭಾವದಿಂದ ಭಾರತದ ನಾಣ್ಯ ಪದ್ಧತಿಯಲ್ಲಿ ಕೆಲ ಬದಲಾವಣೆಗಳುಂಟಾದವು. ರಾಜರ ಹೆಸರುಗಳ ನಮೂದಿಸುವಿಕೆ, ಅವರ ಮುಖಮುದ್ರೆಗಳ ರಚನೆ, ತಂದೆಯ ಹೆಸರುಗಳನ್ನು ತಮ್ಮ ಹೆಸರಿನೊಂದಿಗೆ ಮುದ್ರಿಸುವುದು, ಕಲಾತ್ಮಕ ನಾಣ್ಯಗಳ ರಚನೆಯಂತಹ ಬದಲಾವಣೆಗಳು ಭಾರತೀಯ ನಾಣ್ಯ ಪದ್ಧತಿಯಲ್ಲಿ ಕಂಡುಬಂದವು. ನಂತರದ ಕಾಲದಲ್ಲಿ ಆಳಿದ ಕುಶಾಣರು, ಶಕರು ಸಹಾ ತಮ್ಮದೇ ನಾಣ್ಯಗಳನ್ನು ಟಂಕಿಸಿದರು. ಕುಶಾಣರು ದಿನಾರ ಎಂಬ ಚಿನ್ನದ ನಾಣ್ಯವನ್ನು ಮೊದಲಸಲ ಹೊರಡಿಸಿದರು. ಗುಪ್ತರಿಗಿಂತ ಮೊದಲು ಉತ್ತರ ಭಾರತವನ್ನಾಳಿದ ಯೌಧೇಯ ಗಣರಾಜ್ಯದ ಮಾಹಿತಿಯು “ಯೌಧೇಯಗಣಸ್ಯ ಜಯಃ ಎಂಬ ಬರಹವುಳ್ಳ ನಾಣ್ಯಗಳಿಂದ ತಿಳಿದು ಬರುತ್ತದೆ. ನಾಣ್ಯಗಳ ಅಧ್ಯಯನದ ಮಹತ್ವವನ್ನು ಕೆಳಕಂಡ ಅಂಶಗಳಿಂದ ಗುರ್ತಿಸಬಹುದು:-

1.    ನಾಣ್ಯಗಳ ಅಧ್ಯಯನದಿಂದ ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ಆಧಾರಗಳು ಲಭ್ಯ.

2.    ಅಂದಿನ ಕಾಲದ ಆರ್ಥಿಕ ಸ್ಥಿತಿ ತಿಳಿಯಲು ಸಾಧ್ಯವಾಗುತ್ತದೆ. ಉದಾ: ಗುಪ್ತರ ಆರಂಭದ ಮತ್ತು ಕೊನೆಯ ಕಾಲದ ನಾಣ್ಯಗಳು.

3.    ಅವುಗಳ ಮೇಲಿನ ಭಾಷೆಗಳ ಅಧ್ಯಯನದಿಂದ ಶಾಸನಗಳ ಭಾಷೆ ಮತ್ತು ಲಿಪಿ ತಿಳಿಯಲು ಸಾಧ್ಯವಾಗುತ್ತದೆ.

4.    ರಾಜ್ಯ ಮತ್ತು ಸಾಮ್ರಾಜ್ಯಗಳ ಗಡಿಗಳನ್ನು ಗುರ್ತಿಸಬಹುದು.

5.    ರಾಜರುಗಳ ಧಾರ್ಮಿಕ ಆಸಕ್ತಿಗಳು ಮತ್ತು ಅಭಿರುಚಿಗಳು ತಿಳಿದುಬರುತ್ತವೆ. ಉದಾ: ಸಮುದ್ರಗುಪ್ತನ ನಾಣ್ಯಗಳು.

6.    ಲೋಹಶಾಸ್ತ್ರದ ಬೆಳವಣಿಗೆಯ ಅಧ್ಯಯನಕ್ಕೂ ಇವು ಅವಕಾಶ ಒದಗಿಸುತ್ತವೆ.

7.    ವಿದೇಶಗಳೊಂದಿಗಿನ ಸಂಬಂಧಗಳ ಮಾಹಿತಿ ತಿಳಿದುಬರುತ್ತವೆ.

    ಆದರೆ, ಕೆಲವು ರಾಜಮನೆತನಗಳ ನಾಣ್ಯಗಳು ಅಲಭ್ಯವಾಗಿದ್ದು ಇದರಿಂದ ಅವರ ಇತಿಹಾಸ ಕುರಿತ ಕೆಲ ಮಾಹಿತಿಗಳು ಸಂಪೂರ್ಣವಾಗಿ ಲಭ್ಯವಾಗುವುದಿಲ್ಲ.

ಸ್ಮಾರಕಗಳು:-

    ಪ್ರಾಚೀನ ಕಾಲದ ದೇವಾಲಯಗಳು, ಕೋಟೆಗಳು, ಬಸದಿಗಳು, ಚೈತ್ಯಗಳು, ಸ್ತೂಪಗಳು, ಸ್ತಂಭಗಳು, ವಿಗ್ರಹಗಳು, ಮಸೀದಿಗಳು, ಸಮಾಧಿಗಳು ಇವೇ ಮೊದಲಾದವು ಸ್ಮಾರಕಗಳಾಗಿವೆ. ಇವುಗಳ ಅಧ್ಯಯನದಿಂದ ಇತಿಹಾಸದ ಪುನರ್‌ ರಚನೆಗೆ ವಿವಿಧ ಮಾಃಇತಿಗಳು ಲಭ್ಯವಾಗುತ್ತವೆ. ಅವುಗಳು ದೀರ್ಘಕಾಲದಿಂದ ಉಳಿದು ಬಂದಿದ್ದು ಮೂಕಸಾಕ್ಷಿಗಳಾಗಿ ಇತಿಹಾಸದ ಮಹತ್ವವನ್ನು ಸಾರುತ್ತವೆ. ಸ್ಮಾರಕಗಳ ಅಧ್ಯಯನದಿಂದ:-

1.    ವಿವಿಧ ವಾಸ್ತುಶಿಲ್ಪದ ಲಕ್ಷಣಗಳನ್ನು ತಿಳಿಯಬಹುದಾಗಿದೆ.

2.    ಶಿಲ್ಪಗಳ ಅಧ್ಯಯನವು ಶಿಲ್ಪಶೈಲಿಗಳ ಅಧ್ಯಯನಕ್ಕೆ ಮಹತ್ವದ ಆಧಾರಗಳಾಗಿವೆ.

3.    ನಿರ್ಮಾಣ ಕಲೆಯಲ್ಲಿ ಪ್ರಾಚೀನ ಕಾಲದಿಂದ ಆಗಿರುವ ಬದಲಾವಣೆಗಳನ್ನು ಅರಿಯಬಹುದು.

4.    ಅಂದಿನ ಜನರ ಹವ್ಯಾಸಗಳು, ಆಭರಣಗಳು, ಉಡುಗೆ ಮೊದಲಾದ ಸಾಮಾಜಿಕ ಸ್ಥಿತಿ-ಗತಿ ತಿಳಿಯಲು ಇವು ಪ್ರಮುಖ ಆಧಾರಗಳಾಗಿವೆ.

5.    ಶಿಲ್ಪಿಗಳ ನಿಪುಣತೆ, ಕಲಾಪ್ರಜ್ಞೆ ಮೊದಲಾದವುಗಳನ್ನು ಸ್ಮಾರಕಗಳ ಅಧ್ಯಯನದಿಂದ ತಿಳಿಯಬಹುದು.

   ಆದರೆ, ನಮ್ಮಲ್ಲಿನ ಐತಿಹಾಸಿಕ ಪ್ರಜ್ಞೆಯ ಕೊರತೆಯ ಕಾರಣ ಸ್ಮಾರಕಗಳು ಹಾಳಾಗುತ್ತಿದ್ದು ಇದು ನಮ್ಮ ಸಂಸ್ಕೃತಿಯ ನಾಶವಲ್ಲದೇ ಇತಿಹಾಸ ಪುನರ್‌ ರಚನೆಗೆ ತೊಡಕುಗಳನ್ನು ಉಂಟುಮಾಡುತ್ತದೆ. 

 

ಸಾಹಿತ್ಯಾಧಾರಗಳು - Literary Sources.

   ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಈ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್‌, ರೋಮನ್‌, ಪರ್ಷಿಯಾ, ಅರಬ್‌, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳು – ಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ.

    ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು.

1.     ದೇಶೀಯ ಬರವಣಿಗೆಗಳು: ಭಾರತೀಯ ಭಾಷೆಗಳಲ್ಲಿ (ಮೇಲೆ ಹೇಳಿರುವ), ಭಾರತೀಯರಿಂದಲೇ ರಚಿತವಾದ ಲಿಖಿತ ರೂಪದ ಆಧಾರಗಳಿವು. ಇವುಗಳನ್ನು ಮತ್ತೆ ೪ ಉಪವಿಭಾಗಗಳಾಗಿ ಮಾಡಬಹುದು: ಅವುಗಳೆಂದರೆ,

ಅ. ಧಾರ್ಮಿಕ ಸಾಹಿತ್ಯ.

ಆ. ಐತಿಹಾಸಿಕ ಸಾಹಿತ್ಯ.

ಇ. ಸಂಗಂ ಸಾಹಿತ್ಯ ಮತ್ತು

ಈ. ವೈಜ್ಞಾನಿಕ ಸಾಹಿತ್ಯ.

 

ಅ. ಧಾರ್ಮಿಕ ಸಾಹಿತ್ಯ: ಧರ್ಮನಿಷ್ಠರಾದ ಪ್ರಾಚೀನ ಭಾರತೀಯರು ವಿಫುಲ ಧಾರ್ಮಿಕ ಸಾಹಿತ್ಯ ರಚಿಸಿದ್ದಾರೆ. ಈ ಸಾಹಿತ್ಯವನ್ನು ಮತ್ತೆ ವೈದಿಕ, ಜೈನ ಮತ್ತು ಬೌದ್ಧ ಸಾಹಿತ್ಯವೆಂದು ಮರುವಿಭಾಗ ಮಾಡಬಹುದು.

1. ವೈದಿಕ ಸಾಹಿತ್ಯ: ಈ ಸಾಹಿತ್ಯದ ಕೃತಿಗಳು ವೇದಭಾಷೆ ಮತ್ತು ಸಂಸ್ಕೃತ ಭಾಷೆಗಳಲ್ಲಿವೆ. ವೇದಗಳು, ಬ್ರಾಹ್ಮಣಕಗಳು, ಅರಣ್ಯಕಗಳು, ಉಪನಿಷತ್ತುಗಳು, ಧರ್ಮಶಾಸ್ತ್ರಗಳು, ಸೂತ್ರಗಳು, ಪುರಾಣಗಳು ಮತ್ತು ಮಹಾಕಾವ್ಯಗಳು ಇದರಲ್ಲಿ ಸೇರಿವೆ.

2. ಜೈನ ಸಾಹಿತ್ಯ: ಅರ್ಧಮಾಗಧಿ ಭಾಷೆಯಲ್ಲಿವೆ. ಅಂಗಗಳು, ಉಪಾಂಗಗಳು ಮತ್ತು ಜೈನ ಸೂತ್ರಗಳು ಇವುಗಳಲ್ಲಿ ಸೇರಿವೆ. ಆಚಾರಾಂಗ, ಧವಳ ಮತ್ತು ಜಯಧವಳ ಮುಖ್ಯವಾದವು. ಮಹಾವೀರನ ಜೀವನ & ಬೋಧನೆಗಳನ್ನು ಒಳಗೊಂಡಿವೆ.

3. ಬೌದ್ಧ ಸಾಹಿತ್ಯ: ಪಾಲಿ ಭಾಷೆಗಳಲ್ಲಿವೆ. ತ್ರಿಪಿಠಕಗಳು ಮತ್ತು ಜಾತಕ ಕತೆಗಳು ಅಲ್ಲದೇ ಅನೇಕ ಬೌದ್ಧ ಕೃತಿಗಳು ಇದರಲ್ಲಿ ಸೇರಿವೆ.

ಕೃತಿ ಮತ್ತು ಒದಗಿಸುವ ಮಾಹಿತಿ

ವಿನಯಪೀಠಕ – ಬೌದ್ಧಭಿಕ್ಷುಗಳು ಪಾಲಿಸಬೇಕಾದ ನಿಯಮಗಳು.

ಸುತ್ತ ಪೀಠಕ – ಬುದ್ಧನ ಬೋಧನೆಗಳು.

ಅಭಿಧಮ್ಮ ಪೀಠಕ – ಬುದ್ಧನ ಜೀವನ ಮತ್ತು ಮಹಾಜನಪದಗಳ ಕುರಿತ ಮಾಃಇತಿ.ಅಂಗುತ್ತರ ನಿಖಾಯ – ಮಹಾಜನಪದಗಳ ಉಲ್ಲೇಖ, ಶ.ಪೂ. ಆರನೆ ಶತಮಾನದ ಸಾಮಾಜಿಕ ಜೀವನ.

ದಿಗ ನಿಖಾಯ – ಶ.ಪೂ. ಆರನೆ ಶತಮಾನದ ಸಾಮಾಜಿಕ ಜೀವನ ಕುರಿತ ಮಾಹಿತಿ.

ಜಾತಕ ಕತೆಗಳು – ಬುದ್ಧನ ಪೂರ್ವಜನ್ಮದ ಕತೆಗಳು. 549 ಇವೆ.

ದೀಪವಂಶ & ಮಹಾವಂಶ – ಸಿಂಹಳಿ ಭಾಷೆಯಲ್ಲಿರುವ ಇವು ಪ್ರಾಚೀನ ಶ್ರೀಲಂಕಾದ ಇತಿಹಾಸ ಮತ್ತು ಭಾರತದೊಂದಿಗಿನ ಸಂಬಂಧಗಳ ವಿವರಗಳನ್ನು ಒಳಗೊಂಡಿವೆ.

ಮಿಲಿಂದ ಪನ್ಹ – ಇಂಡೋ-ಗ್ರೀಕ್‌ ಅರಸ ಮಿನಾಂಡರ ಮತ್ತು ಬೌದ್ಧಪಂಡಿತ ನಾಗಸೇನರ ನಡುವಣ ಸಂಭಾಷಣೆಗಳ ಸಾರವನ್ನು ಒಳಗೊಂಡಿದೆ.

ಬುದ್ಧಚರಿತೆ-ಅಶ್ವಘೋಷ – ಬುದ್ಧನ ಜೀವನ ಚರಿತ್ರೆ.

   ಜೊತೆಗೆ, ಅಭಿಧಮ್ಮಕೋಶ, ದಿವ್ಯಾವದಾನ,, ಮಾಧ್ಯಮಿಕ ಸೂತ್ರ, ಮಹಾಭಾಷ್ಯ ಗಳಂತಹ ಬೌದ್ಧ ಕೃತಿಗಳಿಂದ ಹೇರಳ ಐತಿಹಾಸಿಕ ಮಾಹಿತಿ ಲಭ್ಯ.

 

ಆ. ಐತಿಹಾಸಿಕ ಅಥವಾ ಲೌಕಿಕ ಸಾಹಿತ್ಯ: ಇತಿಹಾಸ ಪುನರ್‌ ರಚನೆಗೆ ಹೆಚ್ಚಿನ ಮಾಹಿತಿ ಒದಗಿಸುವ ಸಾಹಿತ್ಯವಿದು. ಆಸ್ಥಾನಕವಿಗಳಿಂದ ರಚಿತವಾದ ಈ ಸಾಹಿತ್ಯದಲ್ಲಿ ಆತ್ಮಚರಿತ್ರೆಗಳು, ಜೀವನಚರಿತ್ರೆಗಳು, ರಾಜಾವಳಿಗಳು, ನಾಟಕಗಳು, ಕಾದಂಬರಿಗಳು, ವ್ಯಾಕರಣ ಗ್ರಂಥಗಳು ಒಳಗೊಂಡಿರುತ್ತವೆ. ಹೆಚ್ಚು ನಂಬಲರ್ಹ ಮಾಹಿತಿ ಇವುಗಳಿಂದ ಲಭ್ಯ.

   ಕೆಲವು ಪ್ರಮುಖ ಕೃತಿಗಳು ಮತ್ತು ಅವು ಒದಗಿಸುವ ಮಾಃಇತಿಗಳು ಕೆಳಕಂಡಂತಿವೆ:-

ಅರ್ಥಶಾಸ್ತ್ರ: ಕೌಟಿಲ್ಯ – ಮೌರ್ಯರ ಕುರಿತ ಮಾಹಿತಿ.

ಅಷ್ಟಾಧ್ಯಯಿ: ಫಾಣಿನಿ – ಪ್ರಾಚೀನ ಗಣರಾಜ್ಯಗಳು ಮತ್ತು ಭಾಷಾಶಾಸ್ತ್ರದ ಮಾಃಇತಿ.

ಬುದ್ಧಚರಿತೆ: ಅಶ್ವಘೋಷ – ಬುದ್ಧನ ಜೀವನ ಚರಿತ್ರೆ.

ಹರ್ಷಚರಿತೆ: ಬಾಣಭಟ್ಟ – ಹರ್ಷನ ಜೀವನ ಚರಿತ್ರೆ.

ಭೋಜಪ್ರಬಂಧಂ: ಬಲ್ಲಾಳ – ಭೋಜರಾಜನ ಜೀವನ ಚರಿತ್ರೆ.

ಗೌಡವಾಹೊ: ವಾಕ್ಪತಿ – ಕನೋಜದ ರಾಜ ಯಶೋವರ್ಮನ ಜೀವನ ಚರಿತ್ರೆ.

ಹಮ್ಮೀರಕಾವ್ಯ; ನಯಚಂದ್ರ – ಚೌಹಾಣ ರಾಜ ಹಮ್ಮೀರನ ಸಾಹಸಗಳು.

ಪೃಥ್ವಿರಾಜ ರಾಸೋ: ಚಾಂದ್‌ ಬರ್ದಾಯಿ – ಪೃಥ್ವಿರಾಜನ ಜೀವನ ಚರಿತ್ರೆ.

ವಿಕ್ರಮಾಂಕದೇವ ಚರಿತಂ: ಬಿಲ್ಹಣ – ಆರನೆ ವಿಕ್ರಮಾದಿತ್ಯನ ಜೀವನ ಚರಿತ್ರೆ.

ನೀತಿಸಾರ: ಕಾಮಂಡಕ – ಗುಪ್ತರ ಆಡಳಿತ ನೀತಿ ಕುರಿತ ಮಾಃಇತಿ.

ರಘುವಂಶ: ಕಾಳಿದಾಸ – ಗುಪ್ತರ ಎರಡನೆ ಚಂದ್ರಗುಪ್ತನ ಮಾಃಇತಿ.

ಮಾಳವಿಕಾಗ್ನಿಮಿತ್ರ: ಕಾಳಿದಾಸ – ವಿದಿಶಾ & ವಿದರ್ಭಗಳ ನಡುವಣ ಯುದ್ಧದ ಮಾಃಇತಿ.

ಮೇಘದೂತ, ವಿಕ್ರಮೋರ್ವಶೀಯ & ಶಾಕುಂತಲಾ ನಾಟಕಗಳಲ್ಲಿ ಗುಪ್ತರ ಕಾಲದ ಜನಜೀವನದ ಮಾಹಿತಿ.

ಮುದ್ರಾರಾಕ್ಷಸ: ವಿಶಾಖದತ್ತ – ನಂದರ ನಿರ್ಮೂಲನೆ ಮತ್ತು ಮೌರ್ಯ ರಾಜ್ಯದ ಸ್ಥಾಪನೆಯ ವಿವರಗಳು.

ದೇವಿಚಂದ್ರಗುಪ್ತಂ: ವಿಶಾಖದತ್ತ – ಒಂದನೇ ಚಂದ್ರಗುಪ್ತ & ಕುಮಾರದೇವಿಯರ ವಿವಾಹದ ಮಾಹಿತಿ.

ಭಾಸನ 13 ನಾಟಕಗಳು: ಗುಪ್ತರ ಕಾಲದ ಮಾಹಿತಿ.

ರತ್ನಾವಳಿ, ನಾಗಾನಂದ & ಪ್ರಿಯದರ್ಶಿಕಾ: ಹರ್ಷವರ್ಧನ – ಏಳನೆ ಶತಮಾನದ ಜನಜೀವನದ ಮಾಹಿತಿ.

ರಾಜತರಂಗಿಣಿ: ಕಲ್ಹಣ – ಕಾಶ್ಮೀರದ ಇತಿಹಾಸ.

  ಇವುಗಳಲ್ಲದೆ ಕೆಳಗಿನ ಕೃತಿಗಳಿಂದಲೂ ಸಹ ಐತಿಹಾಸಿಕ ಮಾಹಿತಿ ಲಭ್ಯ:

ಹರಿಸೇನನ ಬೃಹತ್‌ ಕಥಾಕೋಶ, ವಾತ್ಸಾಯನನ ಕಾಮಸೂತ್ರ, ಶೂದ್ರಕನ ಮೃಚ್ಛಕಟಿಕಾ, ಭಾರವಿಯ ಕಿರಾತಾರ್ಜುನೀಯ, ವಿಷ್ಣುಶರ್ಮನ ಪಂಚತಂತ್ರ, ದಂಡಿಯ ಕಾವ್ಯಾದರ್ಶ, ಆರ್ಯಭಟನ ಆರ್ಯಭಟೀಯಂ, ಜಯದೇವನ ಗೀತಗೋವಿಂದ, ಭಾಸ್ಕರಾಚಾರ್ಯನ ಲೀಲಾವತಿ, ರಾಜಶೇಖರನ ಪ್ರಬಂಧಕೋಶ, ಜಯಸಿಂಹನ ಹಮ್ಮೀರಮದಮರ್ದನ, ಪದ್ಮಗುಪ್ತನ ನವಶಶಾಂಕಚರಿತೆ ಮತ್ತು ದಕ್ಷಿಣ ಭಾರತದ ಚರಿತ್ರೆ ತಿಳಿಯಲು ಶಾತವಾಹನರ ದೊರೆ ಹಾಲನ ಗಾಥಾಸಪ್ತಶತಿ, ಗುಣಾಢ್ಯನ ಬೃಹತ್‌ ಕಥಾ (ವಡ್ಡಕಥಾ), ಅಮೋಘವರ್ಷನ ಕವಿರಾಜಮಾರ್ಗ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ರನ್ನನ ಗದಾಯುದ್ಧ, ಮತ್ತು ಕೃಷ್ಣದೇವರಾಯನ ಅಮುಕ್ತ ಮಾಲ್ಯದ ಮೊದಲಾದವು ವಿಫುಲ ಐತಿಹಾಸಿಕ ಮಾಹಿತಿ ಒದಗಿಸುತ್ತವೆ.

ಇ. ಸಂಗಂ ಸಾಹಿತ್ಯ: ಸಾ.ಶ.ವ. 1 ರಿಂದ 3 ನೆ ಶತಮಾನದ ಕಾಲಾವಧಿಯಲ್ಲಿ ರಚಿತವಾಗಿದೆ ಎನ್ನಲಾದ ಪ್ರಾಚೀನ ತಮಿಳು ಸಾಹಿತ್ಯವೇ ಸಂಗಂ ಸಾಹಿತ್ಯ. ಮೂರು ಸಂಗಂಗಳು ಅಸ್ಥಿತ್ವದಲ್ಲಿದ್ದ ಬಗ್ಗೆ ಮಾಹಿತಿಗಳಿದ್ದರೂ ಮೂರನೇ ಸಂಗಂ ಕಾಲದ ಸಾಹಿತ್ಯ ಕೃತಿಗಳು ಹೆಚ್ಚಾಗಿ ಲಭಿಸಿವೆ. ಅವುಗಳಲ್ಲಿ ಪ್ರಾಚೀನ ತಮಿಳುನಾಡಿನ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಗತಿಗಳು ತಿಳಿದುಬರುತ್ತವೆ. ಸಂಗಂ ಕಾಲದ ಕೆಲವು ಪ್ರಮುಖ ಸಾಹಿತ್ಯ ಕೃತಿಗಳು ಕೆಳಕಂಡಂತಿವೆ:

ಇಳಂಗೊ ಅಡಿಗಳ್ ರಚಿತ ಶಿಲಪ್ಪದಿಕಾರಂ, ಚತ್ತನಾರನ ಮಣಿಮೇಖಲೈ, ತಿರುವಳ್ಳುವರನ ತಿರುಕ್ಕುರಳ್‌ ಮತ್ತು ಸೆಕಿಲಾರನ ಪೆರಿಯಪುರಾಣಗಳು. ಅಲ್ಲದೇ ಜಯಗೊಂಡರ್‌ ರಚಿತ ಕಳಿಂಗತುಪ್ಪರಣಿ ಒಂದನೆ ಕುಲೋತ್ತುಂಗ ಚೋಳನ ಒರಿಸ್ಸಾ ಮೇಲಿನ ವಿಜಯದ ಮಾಹಿತಿ ಒದಗಿಸುತ್ತದೆ. ಮಾಣಿಕ್ಯ ವಾಚಕರ್‌ ಬರೆದಿರುವ ತಿರುವಾಚಕಂ ತಮಿಳುನಾಡಿನ ಅಂದಿನ ಭಕ್ತಿಪಂಥ ಕುರಿತ ಮಾಹಿತಿ ಒದಗಿಸುತ್ತದೆ.

ಈ. ವೈಜ್ಞಾನಿಕ ಸಾಹಿತ್ಯ: ಪ್ರಾಚೀನ ಭಾರತೀಯರು ಖಗೋಳ, ಗಣಿತ, ವೈದ್ಯ, ಪ್ರಾಣಿವೈದ್ಯ, ರಸವಿದ್ಯೆ, ಲೋಹಶಾಸ್ತ್ರ ಮೊದಲಾದ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ತಾವು ಗಳಿಸಿದ ಪರಿಣತಿಯನ್ನು ಗ್ರಂಥಗಳ ರೂಪದಲ್ಲಿ ದಾಖಲಿಸಿದ್ದಾರೆ. ಇವುಗಳನ್ನೇ ವೈಜ್ಞಾನಿಕ ಕೃತಿಗಳು ಎನ್ನಲಾಗಿದೆ. ಕೆಲವು ಪ್ರಮುಖ ವೈಜ್ಞಾನಿಕ ಕೃತಿಗಳು ಮತ್ತು ಕೃತಿಕಾರರ ವಿವರಗಳು ಕೆಳಕಂಡಂತಿವೆ:

ಶುಶ್ರೂತನ ಶುಶ್ರೂತ ಸಂಹಿತೆ, ಚರಕನ ಚರಕ ಸಂಹಿತೆ, ವಾಗ್ಭಟನ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ, ಬ್ರಹ್ಮಗುಪ್ತನ ಶೂನ್ಯಸಿದ್ಧಾಂತ, ವರಾಹಮಿಹಿರನ ಬೃಹತ್‌ ಜಾತಕ, ಲಘು ಜಾತಕ, ಬೃಹತ್‌ ಸಂಹಿತೆ, ಆರ್ಯಭಟನ ಆರ್ಯಭಟೀಯಂ, ಆರ್ಯಸಿದ್ಧಾಂತ, ದುರ್ವಿನೀತನ ಗಜಾಷ್ಟಕ, ಶಿವಮಾರನ ಗಜಶಾಸ್ತ್ರ, ಕೀರ್ತಿವರ್ಮನ ಗೋವೈದ್ಯ, ಚಾವುಂಡರಾಯನ ಲೋಕೋಪಕಾರ, ಭಾಸ್ಕರಾಚಾರ್ಯನ ಲೀಲಾವತಿ ಮೊದಲಾದವು ವಿಜ್ಞಾನದ ಹೇರಳ ಮಾಹಿತಿಗಳೊಂದಿಗೆ ಕೆಲವು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ & ಆರ್ಥಿಕ ಮಾಹಿತಿಗಳನ್ನೂ ಒದಗಿಸುತ್ತವೆ.

2.     ವಿದೇಶೀಯ ಸಾಹಿತ್ಯಾಧಾರಗಳು – Foreign Literary Sources: ಪ್ರಾಚೀನ ಕಾಲದಿಂದಲೂ ನಮ್ಮ ದೇಶಕ್ಕೆ ಭೇಟಿ ನೀಡಿದ ವಿದೇಶಿ ವ್ಯಾಪಾರಿಗಳು, ರಾಯಭಾರಿಗಳು, ಪ್ರವಾಸಿಗರು & ಧರ್ಮಪ್ರಚಾರಕರು ಭಾರತದಲ್ಲಿನ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೆ. ಅವರು ತಾವು ನೇರವಾಗಿ ಕಂಡ ಮತ್ತು ಸ್ಥಳೀಯರಿಂದ ಕೇಳಿ ತಿಳಿದ ಮಾಹಿತಿಗಳನ್ನು ತಮ್ಮ ದಾಖಲೆಗಳಲ್ಲಿ ನಿರೂಪಿಸಿದ್ದಾರೆ. ಅವರ ಇಂತಹ ಬರಹಗಳು ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆಯಲ್ಲಿ ಅಪಾರವಾದ ಐತಿಹಾಸಿಕ ಮಾಹಿತಿಗಳನ್ನು ಒದಗಿಸುತ್ತವೆ. ಹೀಗೆ ಭಾರತಕ್ಕೆ ಭೇಟಿ ನೀಡಿದ ವಿದೇಶಿಯರಲ್ಲಿ ಗ್ರೀಕರು, ರೋಮನ್ನರು, ಪರ್ಷಿಯನ್ನರು, ಚೀನಿಯರು ಮತ್ತು ಅರಬ್ಬರು ಪ್ರಮುಖರು. ದೇಶೀಯ ಬರವಣಿಗೆಗಳು ಒದಗಿಸದ ಮಾಹಿತಿಗಳು ಕೆಲವೊಮ್ಮೆ ವಿದೇಶೀಯ ಬರವಣಿಗೆಗಳಿಂದ ಲಭ್ಯವಾಗುತ್ತವೆ. ಅಲ್ಲದೇ ಇವು ಸತ್ಯನಿಷ್ಠ ಸಂಗತಿಗಳನ್ನು ಒಳಗೊಂಡಿರುತ್ತವೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಕೆಲವೊಮ್ಮೆ ಇವರ ಮಾಹಿತಿಗಳು ಅಪೂರ್ಣ ಮತ್ತು ಉತ್ಪ್ರೇಕ್ಷೆಗಳಿಂದ ಕೂಡಿರುತ್ತವೆ. ಕಾರಣ ಇವರ ಕೃತಿಗಳಲ್ಲಿನ ಮಾಹಿತಿಗಳನ್ನು ಆಧಾರಗಳಾಗಿ ಬಳಸುವಾಗ ಇತಿಹಾಸಕಾರನು ಎಚ್ಚರಿಕೆ ವಹಿಸಬೇಕಾಗುತ್ತದೆ. ಇವರ ಬರವಣಿಗೆಗಳಲ್ಲಿನ ಇಂತಹ ದೋಷಗಳಿಗೆ ಕಾರಣಗಳೆಂದರೆ, ಅವರು ಅಲ್ಪಕಾಲ ಭಾರತದಲ್ಲಿ ಉಳಿದಿರುವುದು, ಸ್ಥಳೀಯ ಭಾಷೆಗಳ ಜ್ಞಾನದ ಕೊರತೆ, ಕಂಡು, ಕೇಳಿದ್ದನ್ನು ಪರಿಶೀಲನೆಗೆ ಒಳಪಡಿಸದಿರುವುದು ಇತ್ಯಾದಿಗಳು. ವಿದೇಶಿ ಬರವಣಿಗೆಗಳನ್ನು ಗ್ರೀಕೋರೋಮನ್‌, ಚೀನೀ & ಮುಸ್ಲೀಂ ದಾಖಲೆಗಳೆಂದು ಮರುವಿಭಾಗ ಮಾಡಬಹುದು.

ಅ. ಗ್ರೀಕೋರೋಮನ್‌ ಬರವಣಿಗೆಗಳು: ಇತಿಹಾಸದ ಪಿತಾಮಹ ಅರೊಡಾಟಸನ ಹಿಸ್ಟರಿಸ್‌, ಟಾಲೆಮಿಯ ಭೂಗೋಳ ಅಥವಾ Geography, ಅನಾಮಧೇಯ ರಚಿತ ದಿ ಪೆರಿಪ್ಲಸ್‌ ಆಫ್‌ ದಿ ಎರಿತ್ರಿಯನ್‌ ಸೀ, ಗ್ರೀಕ್‌ ದೊರೆ ಡೇರಿಯಸ್ಸನ ದಾಳಿಗೆ ಮುನ್ನ ಇಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಅವನ ಪ್ರತಿನಿಧಿಯಾಗಿ ಭಾರತದ ವಾಯುವ್ಯ ಭಾಗವನ್ನು ಸಂದರ್ಶಿಸಿದ್ದ ಸ್ಕೈಲ್ಯಾಕ್ಸ್‌ ನ ಬರವಣಿಗೆಗಳು, ಅರಿಯನ್‌, ನಿಯಾರ್ಕಸ್‌ & ಅರಿಸ್ಟೋಬಲಸ್‌ ಅವರ ಯುದ್ಧದ ವಿವರಗಳು ಭಾರತದ ಮೇಲಿನ ಗ್ರೀಕರ ದಾಳಿಗಳು ಮತ್ತು ವಿದೇಶಿಯ ಸಂಬಂಧಗಳ ವಿವರಗಳನ್ನು ಒದಗಿಸುತ್ತವೆ. ಸಿರಿಯಾದ ಡಿಮ್ಯಾಕಸ್‌, ಡೆಮಿಟ್ರಿಯಸ್‌ ಮತ್ತು ಈಜಿಪ್ಟಿನ ಡಯೋನಿಸಿಸ್‌ ಇವರ ಬರವಣಿಗೆಗಳು ಪಾರ್ಥಿಯನ್ನರ ಬಗ್ಗೆ ವಿವರ ಒದಗಿಸುತ್ತವೆ. ಸೆಲ್ಯೂಕಸನ ರಾಯಭಾರಿ ಮೆಗಸ್ತಾನೀಸನ ಇಂಡಿಕಾ ಮೌರ್ಯರ ಕಾಲದ ಮಾಹಿತಿ ಒದಗಿಸುತ್ತದೆ. ಪ್ಲೀನಿಯ ಬರವಣಿಗೆಗಳು ಭಾರತದಲ್ಲಿನ ಪ್ರಕೃತಿ ಮತ್ತು ಪ್ರಾಣಿ ಹಾಗೂ ಸಸ್ಯವರ್ಗಗಳ ವಿವರ ನೀಡುತ್ತವೆ.

ಆ. ಚೀನೀ ಬರವಣಿಗೆಗಳು: ಭಾರತದ ನೆರೆರಾಷ್ಟ್ರ ಚೀನಾದಿಂದ ಫಾಹಿಯಾನ್‌ (ಸಾ.ಶ.ವ. 399-414) ಗುಪ್ತರ ದೊರೆ ಎರಡನೆ ಚಂದ್ರಗುಪ್ತನ ರಾಜ್ಯಕ್ಕೆ ಭೇಟಿ ನೀಡಿದ್ದು ತನ್ನ ಫೋ ಕ್ಯೂ ಕಿ ಎಂಬ ಕೃತಿಯಲ್ಲಿ ಅಂದಿನ ಕಾಲದ ವಿದ್ಯಮಾನಗಳನ್ನು ವಿವರಿಸಿದ್ದಾನೆ. ಸಾ.ಶ.ವ. 630-45ರ ಕಾಲಘಟ್ಟದಲ್ಲಿ ಭೇಟಿ ನೀಡಿದ್ದ ಯಾತ್ರಿಕರ ರಾಜ ಎಂದೇ ಹೆಸರಾದ ಹೂ ಎನ್ ತ್ಸಾಂಗನು ರಚಿಸಿದ ಸೀ ಯೂ ಕೀ ಕೃತಿಯಲ್ಲಿ ಅಂದಿನ ಬೌದ್ಧ ಧರ್ಮದ ಸ್ಥಿತಿಗತಿಗಳ ಜೊತೆಗೆ ವರ್ಧನ, ಚಾಲುಕ್ಯ ಮತ್ತು ಪಲ್ಲವರ ರಾಜ್ಯಗಳ ವಿವರಗಳನ್ನು ನೀಡಿದ್ದಾನೆ. ನರ್ಮದಾ ನದಿಯ ಯುದ್ಧದ ಮಾಃಇತಿಯು ಇದರಲ್ಲಿ ಸೇರಿದೆ. ಸಾ.ಶ.ವ. 675ರಲ್ಲಿ ಭಾರತಕ್ಕೆ ಬಂದಿದ್ದ ಇತ್ಸಿಂಗನು ತನ್ನ ಬರವಣಿಗೆ “ನಾನ್‌ ಹೈ ಕಿ ಕೂಚೆ ನೈಪಚೌ” ಅಂದರೆ ಬೌದ್ಧ ನಾಡಿನ ದಾಖಲೆಗಳು ಎಂಬ ಕೃತಿಯಲ್ಲಿ ತನ್ನ ಅನುಭವಗಳನ್ನು ದಾಖಲಿಸಿದ್ದಾನೆ. ಇವರನ್ನು ಯಾತ್ರಿಕತ್ರಯರು ಎಂದು ಕರೆಯುವರು.

ಇ. ಮುಸ್ಲೀಂ ಬರವಣಿಗೆಗಳು: ಎಂಟನೇ ಶತಮಾನದ ನಂತರ ಭಾರತಕ್ಕೆ ಮುಸ್ಲೀಂರ ಆಗಮನ ಆರಂಭವಾಯಿತು. ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಎರಡನೆ ಖುಸ್ರೊನ ರಾಯಬಾರಿ ತಬರಿ, ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿದ್ದ ಸುಲೇಮಾನ್‌ (ಸಾ.ಶ.ವ. 851), ಅಲ್‌ ಮಸೂದಿ, ಅಬು ರಿಹಾನ್‌ ಅಲ್ಬೇರೂನಿ, ಮತ್ತು ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಅಬ್ದುಲ್‌ ರಜಾಕ್‌ ಇವರಲ್ಲಿ ಪ್ರಮುಖರು. ಇವರಲ್ಲದೇ ಉದ್ಬಿ ರಚಿತ ತಾರಿಕ್‌ ಇ ಯಾಮಿನಿ, ಫಿರ್ದೂಸಿ ರಚಿತ ಶಹನಾಮಾ, ಅಲ್ಬೇರೂನಿ ರಚಿಸಿದ ತಹಕಿಕ್‌ ಎ ಹಿಂದ್‌ ಕೃತಿಗಳು ಪ್ರಮುಖ ಮುಸ್ಲೀಂ ಬರವಣಿಗೆಗಳಾಗಿವೆ.

   ಹೀಗೆ ವಿದೇಶೀಯ ಬರವಣಿಗೆಗಳು ಭಾರತದ ಇತಿಹಾಸ ಪುನರ್‌ ರಚನೆಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವಹಿಸಿವೆ.

********** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources