ಬಕ್ಸಾರ್‌ ಕದನ:- ಅಕ್ಟೋಬರ್‌ 22, ೧೭೬೪.

ಭಾಗವಹಿಸಿದವರು:-  ಮೀರ್ ಖಾಸೀಂ, ಶೂಜ ಉದ್ ದೌಲ ಮತ್ತು ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ.

 ಕೆಲವು ಪೂರಕ ಮಾಹಿತಿಗಳು:-  

ಬಕ್ಸಾರ್‌ - ಇದು ಪಾಟ್ನಾದಿಂದ (ಬಿಹಾರ) ಸು. ೧೮೦ ಕಿ.ಮೀ. ದೂರದಲ್ಲಿರುವ ಪ್ರದೇಶ.  ಅಂದಿಗೆ ಇದೊಂದು ವ್ಯಾಪಾರಿ ಕೇಂದ್ರ ಮತ್ತು ಸಣ್ಣ ಕೋಟೆಯೊಂದರಿಂದ ಕೂಡಿತ್ತು. ಇದು  ಗಂಗಾನದಿಯ ದಡದಲ್ಲಿದೆ.

ಯುದ್ಧದ ಹಿನ್ನೆಲೆ:-

ಪ್ಲಾಸಿ ಕದನಾನಂತರ ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಗಿತ್ತು.  ಈತ ಮತ್ತು ಕಂಪೆನಿಯ ನಡುವೆ ಆರಂಭದಲ್ಲಿ ಬಾಂಧವ್ಯ ಉತ್ತಮವಾಗಿತ್ತು.  ಆದರೆ, ಕ್ರಮೇಣ ಬ್ರಿಟಿಷರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಜಾಫರನಿಗೆ ಆಗಲಿಲ್ಲ.  ಪರಿಣಾಮವಾಗಿ ಅವನು ಬ್ರಿಟಿಷರ ಹಿಡಿತದಿಂದ ಮುಕ್ತನಾಗಲು ಬಂಗಾಳದ ಚಿನ್ಸುರದಲ್ಲಿದ್ದ ಡಚ್ಚರ ಸಹಾಯ ಕೋರಿದ.   ವೇಳೆಗೆ ಬಂಗಾಳದ ಗವರ್ನರ್ಆಗಿದ್ದ ರಾಬರ್ಟ್ ಕ್ಲೈವ್ ಡಚ್ಚರನ್ನು ಪುಲ್ಟಾ ಎಂಬಲ್ಲಿ ನಿರ್ಣಾಯಕವಾಗಿ ಸೋಲಿಸಿ ಅವರೊಂದಿಗೆ ಚಿನ್ಸುರ ಒಪ್ಪಂದಮಾಡಿಕೊಂಡ.

ಚಿನ್ಸುರ ಒಪ್ಪಂದಬ್ರಿಟಿಷರು ಮತ್ತು ಡಚ್ಚರ ನಡುವೆ.

ಡಚ್ಚರ ಅಧಿಕಾರ ಚಿನ್ಸುರಕ್ಕೆ ಸೀಮಿತವಾಯಿತು. ಅವರು  ದೇಶೀಯ ಅರಸರ ವ್ಯವಹಾರಗಳಲ್ಲಿ ತಲೆ ಹಾಕದಿರುವಂತೆ ನಿರ್ಬಂಧಿಸಲಾಯಿತು.

 ಇದರಿಂದ ಮೀರ್ ಜಾಫರ್ಮತ್ತು ಬ್ರಿಟಿಷರ ನಡುವೆ ಸಂಬಂಧ ಹದಗೆಟ್ಟಿತು.  ರಾಬರ್ಟನ ನಂತರ ಬಂದ ಗವರ್ನರ್ಗಳು ಮೀರ್ ಜಾಫರನನ್ನು 1760 ರಲ್ಲಿ ಪದಚ್ಯುತನನ್ನಾಗಿಸಿದರು. ನಂತರ ಅವನ ಅಳಿಯಮೀರ್ ಖಾಸಿಂನನ್ನು ಬಂಗಾಳದ ನವಾಬನ ಹುದ್ದೆಗೆ ಏರಿಸಿದರು.

    ಮೀರ್ ಖಾಸೀಂ ನವಾಬನಾದ ಮೇಲೆ ಬ್ರಿಟಿಷರಿಗೆ ಮಿಡ್ನಾಪುರ, ಚಿತ್ತಗಾಂಗ್ ಮತ್ತು ಬರ್ದ್ವಾನ್ಪ್ರದೇಶಗಳನ್ನು ಬಿಟ್ಟುಕೊಟ್ಟನು. ಆದರೆ, ಇವನು ಮಹತ್ವಾಕಾಂಕ್ಷಿಯಾಗಿದ್ದನು.  ಬಂಗಾಳದ  ಆಡಳಿತದ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡನು.  ರಾಜಧಾನಿಯನ್ನು ಮುರ್ಶಿದಾಬಾದ್‌ನಿಂದ ಬಿಹಾರದಲ್ಲಿದ್ದ ಮೋಂಗೇರ್‌ಗೆ ಬದಲಾಯಿಸಿದ. ಅಲ್ಲದೇ ತನ್ನ ಸೈನ್ಯವನ್ನು ತರಬೇತುಗೊಳಿಸಲು ಗುಟ್ಟಾಗಿ ವಿದೇಶಿ ಅಧಿಕಾರಿಗಳನ್ನು ನೇಮಿಸಿದನು.

ಘರ್ಷಣೆಗೆ ಕಾರಣವಾದ ಅಂಶಗಳು:-

 ದಸ್ತಕ್ (ಪರವಾನಗಿ ಪತ್ರ) ಗಳ ದುರುಪಯೋಗದಿಂದ ನವಾಬನ ಖಜಾನೆಗೆ ಆರ್ತಿಕ ನಷ್ಟ ಉಂಟಾಗುತ್ತಿತ್ತು.  ಇದನ್ನು  ತಡೆಯುವಂತೆ ಬ್ರಿಟಿಷ್ ಅಧಿಕಾರಿಗಳಿಗೆ ನವಾಬ ಸೂಚನೆ ನೀಡಿದನು;ಆದರೆ ಬ್ರಿಟಿಷರು ಇದಕ್ಕೆ ಯಾವುದೇ ಗಮನ ಕೊಡಲಿಲ್ಲ.  ಕಾರಣ, ನವಾಬ ಆಂಗ್ಲರ ಕೆಲವು ವಿಶೇಷ ಸವಲತ್ತುಗಳನ್ನು ರದ್ದುಪಡಿಸಿದ.  ಜೊತೆಗೆ, ಭಾರತೀಯ ವ್ಯಾಪಾರಿಗಳಿಗೂತೆರಿಗೆ ಮುಕ್ತ ವ್ಯಾಪಾರಮಾಡಲು ಅನುಮತಿ ನೀಡಿದ.  ನವಾಬನ ಕ್ರಮದಿಂದ ಮಾರುಕಟ್ಟೆಯಲ್ಲಿ ಬ್ರಿಟಿಷರು ಮತ್ತು ಭಾರತೀಯ ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತು.  ಬ್ರಿಟಿಷರು ನವಾಬನಿಗೆ ತನ್ನ ತೆರಿಗೆ ಮುಕ್ತ ವ್ಯಾಪಾರದ ಸೌಲಭ್ಯವನ್ನು ತಡೆಯುವಂತೆ ಸೂಚಿಸಿದರು. ನವಾಬ ಇದಕ್ಕೆ ಒಪ್ಪಲಿಲ್ಲ.  ಪರಿಣಾಮ ಘರ್ಷಣೆಗಳು ಆರಂಭವಾದವು.

ಆರಂಭಿಕ ಘರ್ಷಣೆಗಳು:-

1763ರಲ್ಲಿ  ಮೋಂಗೇರ್, ಮುರ್ಶಿದಾಬಾದ್, ಕಾಟ್ವಾ, ಗಿರಿಯ, ಸೂಟಾ ಮತ್ತು ಉದಯನಾಲಾಗಳಲ್ಲಿ ನಡೆದ ಕದನಗಳಲ್ಲಿ ಮೀರ್ ಖಾಸೀಂನಿಗೆ ಸೋಲುಂಟಾಯಿತು.  ಬ್ರಿಟೀಷರು ಪಾಟ್ನಾವನ್ನು ತಮ್ಮ ವಶಕ್ಕೆ ಪಡೆದರು.  ನವಾಬನು ಪುನಃ ಅದನ್ನು ತನ್ನ ವಶಕ್ಕೆ ಪಡೆದು ೧೪೮ ಕ್ಕೂ ಹೆಚ್ಚು ಆಂಗ್ಲರನ್ನು ಸೆರೆ ಹಿಡಿದನು.  ಇತ್ತ ಕಲ್ಕತ್ತಾ ಕೌನ್ಸಿಲ್ಮೀರ್ಖಾಸೀಂ ಬದಲಿಗೆ ಮತ್ತೆ ಮೀರ್ಜಾಫರನನ್ನು ನವಾಬನ ಹುದ್ದೆಗೇರಿಸಿತು.  ಕೋಪಗೊಂಡ ಮೀರ್ಖಾಸೀಂ ಬಂಧಿತ ಆಂಗ್ಲರನ್ನು ಕೊಂದನು.  ಮುಂದೆ ಮೀರ್ ಖಾಸೀಂ ಅವಧ್ ಪ್ರಾಂತ್ಯಕ್ಕೆ ಪಲಾಯನಮಾಡಿದನು.  ಅಲ್ಲಿ ಮೀರ್ ಖಾಸೀಂ ಬ್ರಿಟಿಷರ ವಿರುದ್ಧ ಮೈತ್ರಿಕೂಟ ರಚಿಸಿದ.

ಮೈತ್ರಿಕೂಟದ ಸದಸ್ಯರು ಮತ್ತು ಯುದ್ಧದ ಘಟನೆಗಳು:-

 ಅವಧ್‌  ನವಾಬ ಶೂಜ ಉದ್ ದೌಲ ಮತ್ತು ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಉಳಿದಿಬ್ಬರು ಸದಸ್ಯರು.  ಆಂಗ್ಲರನ್ನು ಬಂಗಾಳದಿಂದ ಓಡಿಸುವುದು ಮೈತ್ರಿಕೂಟದ ಉದ್ಧೇಶವಾಗಿತ್ತು.

 ಮೈತ್ರಿಕೂಟದಲ್ಲಿ ಸು. ೫೦ ಸಾವಿರದಷ್ಟು ಸೈನ್ಯವಿತ್ತು.  ಬ್ರಿಟಿಷರ ಬಳಿ  ೭೦೭೨ ರಷ್ಟು ಸೈನ್ಯವಿತ್ತು.  ಹೆಕ್ಟೆರ್ ಮನ್ರೊ ಅದರ ನಾಯಕತ್ವ ವಹಿಸಿದ್ದನು.  ಯುದ್ಧ ಕೇವಲ ಅರ್ಧ ದಿನದಲ್ಲಿ ಮುಗಿದು ಹೋಯಿತು.

ಪರಿಣಾಮಗಳು:- ಬ್ರಿಟಿಷರ ಕಡೆ ಸು. ೮೪೭ ರಷ್ಟು ಸಾವು ಮತ್ತು ಮೈತ್ರಿಕೂಟದ ಸು. ೨೦೦೦ ಸೈನಿಕರು ಸತ್ತರು. ಮೀರ್ ಖಾಸೀಂ ರಣರಂಗದಿಂದ ಪಲಾಯನ ಮಾಡಿದನು.  ಶೂಜ ಉದ್ ದೌಲ ಮತ್ತು ಮೊಗಲ್ ಚಕ್ರವರ್ತಿ ಇಬ್ಬರೂ ಬ್ರಿಟಿಷರಿಗೆ ಶರಣಾಗತರಾದರು.  ಅಲಹಾಬಾದ್ ಒಪ್ಪಂದದ ಮೂಲಕ ಬಕ್ಸಾರ್ಯುದ್ಧ ಮುಕ್ತಾಯವಾಯಿತು.

ಅಲಹಾಬಾದ್ ಒಪ್ಪಂದಆಗಸ್ಟ್ ೧೬, ೧೭೬೫.

ಬಕ್ಸಾರ್‌ ಯುದ್ಧ ಮುಗಿಯುವ ವೇಳೆಗೆ  ೧೭೬೫ ರಲ್ಲಿ ರಾಬರ್ಟ್ ಕ್ಲೈವ್ ೨ನೆ ಸಲ ಬಂಗಾಳದ ಗವರ್ನರ್ಆಗಿ ಭಾರತಕ್ಕೆ ಬಂದನು.  ಅವನು ಯುದ್ಧವನ್ನು ಮುಂದುವರಿಸಲು ಇಚ್ಛಿಸದೇ ಶೂಜ್ ಉದ್ ದೌಲ ಮತ್ತು ಶಾ ಆಲಂರೊಂದಿಗೆ ಒಪ್ಪಂದ ಮಾಡಿಕೊಂಡ.  ಒಪ್ಪಂದ ಅಲಹಾಬಾದ್ ನಲ್ಲಿ ನಡೆಯಿತು.  ಒಪ್ಪಂದದ ಕರಾರುಗಳೆಂದರೆ:-

 ಶೂಜ ಉದ್ ದೌಲನಿಗೆ ಕಾರಾ, ಮಾಣಿಕ್ ಪುರ ಮತ್ತು ಅಲಹಾಬಾಧ್ ಹೊರತು ಪಡಿಸಿದ ಅವಧ್ ಪ್ರಾಂತ್ಯವನ್ನು ಬಿಟ್ಟು ಕೊಡಲಾಯಿತು.  ಇದಕ್ಕೆ ಪ್ರತಿಯಾಗಿ ಅವನು ಕಂಪೆನಿಗೆ ೫೦ ಲಕ್ಷ ಕೊಡಲು ಒಪ್ಪಿದ.  ಅವಧ್ ನವಾಬನ ಆಸ್ಥಾನದಲ್ಲಿ ಬ್ರಿಟಿಷ್ ಸೈನ್ಯವೊಂದನ್ನು ಇಡುವುದು ಮತ್ತು ವಾರ್ಷಿಕವಾಗಿ ಅದರ ವೆಚ್ಚವನ್ನು ಕಂಪೆನಿಗೆ ನವಾಬ ಸಲ್ಲಿಸುವುದು. ಕಾರಾ ಮತ್ತು ಅಲಹಾಬಾದ್‌ಗಳನ್ನು ಮೊಗಲ್ ಚಕ್ರವರ್ತಿಗೆ ಕೊಡಲಾಯಿತು. ಬಂಗಾಳದದಿವಾನಿ ಹಕ್ಕು (ಕಂದಾಯ ವಸೂಲಿ ಮಾಡುವ ಅಧಿಕಾರ) ನ್ನು ಕಂಪೆನಿಗೆ ಕೊಡಲಾಯಿತು.  ಪ್ರತಿಯಾಗಿ ಕಂಪೆನಿ ಚಕ್ರವರ್ತಿಗೆ ವಾರ್ಷಿಕ ೨೬ ಲಕ್ಷಗಳ ಕಪ್ಪಕಾಣಿಕೆ ಅಥವಾ ಗೌರವ ಧನ ಕೊಡಲು ಒಪ್ಪಿತು.

ಯುದ್ಧದ ಪ್ರಾಮುಖ್ಯತೆ:- ಈ ಯುದ್ಧವು  ಪ್ಲಾಸಿ ಕದನಕ್ಕಿಂತಲೂ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಿತು.  ಪ್ಲಾಸಿಯ ಕದನದಂತೆ ಇದು ಮೋಸದ ಯುದ್ಧವಾಗಿರಲಿಲ್ಲ.  ಬ್ರಿಟಿಷರು ಮೂವರು ಧೇಶಿಯ ಅರಸರನ್ನು ಸೋಲಿಸಿದ್ದರು.

ಬ್ರೂಮನ್:- “ಭಾರತದ ಅದೃಷ್ಟವು ಬಕ್ಸಾರ್ಕದನದ ಮೇಲೆ ನಿಂತಿತ್ತು.”

 ರಾಮ್ಸೆ ಮೈರ್:- “ಯುದ್ಧವು ಬಂಗಾಳದಲ್ಲಿ ಬ್ರಿಟಿಷರ ಅಧಿಕಾರವನ್ನು ಸ್ಥಿರಪಡಿಸಿತು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources