ಅಧ್ಯಾಯ-1. 18ನೆ ಶತಮಾನದ ಮಧ್ಯಭಾಗದಲ್ಲಿ ಭಾರತದ ರಾಜಕೀಯ, ಸಮಾಜ ಮತ್ತು ಆರ್ಥಿಕತೆ. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ.
I.
ಪೀಠಿಕೆ: ಭಾರತದ ಇತಿಹಾಸದಲ್ಲಿ ೧೮ನೆ ಶತಮಾನವು ಅನೇಕ ರಾಜಕೀಯ, ಆರ್ಥಿಕ, ಸಾಮಾಜಿಕ ಘಟನಾವಳಿಗಳಿಗೆ
ಸಾಕ್ಷಿಯಾಗಿದ್ದು, ಕೆಲವು ಇತಿಹಾಸಕಾರರು ಈ ಕಾಲವನ್ನು ಚಲನಶೀಲ ಯುಗವೆಂದಿದ್ದರೆ ಮತ್ತೆ ಕೆಲವರು ಅದನ್ನು
ಯುದ್ಧಗಳಿಂದ ಕೂಡಿದ ಕತ್ತಲೆಯ ಯುಗವೆಂತಲೂ ಕರೆದಿದ್ದಾರೆ. ಈ ಕಾಲದಲ್ಲಿ ಉಂಟಾದ ವಿವಿಧ ಕ್ಷೇತ್ರಗಳಲ್ಲಿನ
ಬದಲಾವಣೆಗಳು ಭಾರತದ ಇತಿಹಾಸದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಿವೆ. ಏಕೆಂದರೆ ಮೊಗಲರ ಪತನ, ಪ್ರಾದೇಶಿಕ
ಶಕ್ತಿಗಳ ಉದಯ, ವ್ಯಾಪಾರ-ವಾಣಿಜ್ಯಗಳಲ್ಲಿ ಉಂಟಾದ ಬದಲಾವಣೆ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳು,
ವಿದೇಶಿ ಶಕ್ತಿಗಳ ರಾಜಕೀಯ ಪ್ರಾಬಲ್ಯ – ಹೀಗೆ ಆ ಶತಮಾನವು ನಿರಂತರವಾದ ವೈವಿಧ್ಯಮಯವಾದ ಘಟನೆಗಳಿಂದ
ಕೂಡಿದ್ದು, ೧೯೯೦ರ ನಂತರ ಇತಿಹಾಸಜ್ಞರಲ್ಲಿ ಆಸಕ್ತಿ ಕೆರಳಿಸಿ ಕುತೂಹಲಕಾರಿ ಅಧ್ಯಯನಗಳಿಗೆ ಅವಕಾಶ
ಕಲ್ಪಿಸಿದೆ. ಆ ಶತಮಾನದ ಪ್ರಮುಖ ಘಟನಾವಳಿಗಳನ್ನು ಕೆಳಕಂಡಂತೆ ನೋಡಬಹುದು.
II.
ಉತ್ತರ ಭಾರತ: ಉತ್ತರ ಭಾರತದಲ್ಲಿ ಈ ಶತಮಾನವು ಮೊಗಲರ ಪತನದಿಂದಾಗಿ ಅವರ ಅಧೀನರಾಗಿದ್ದ ಬಂಗಾಳ ಮತ್ತು
ಅವಧ್ನ ಸುಬೆದಾರರು ಸ್ವತಂತ್ರರಾಗಿ ಆಳತೊಡಗಿದರು.
ಮೊಗಲರ ಸೈನಿಕ ದೌರ್ಬಲ್ಯದ ಕಾರಣ ನಾದಿರ್ ಷಾ ಮತ್ತು ಅಹಮದ್ ಷಾ ಅಬ್ದಾಲಿಗಳು ಭಾರತದ ಮೇಲೆ ಧಾಳಿ
ನಡೆಸಿದರು. ಅಲ್ಲದೇ ಮರಾಠರು ಪೇಶ್ವೆಗಳ ನೇತೃತ್ವದಲ್ಲಿ ಪ್ರಬಲರಾಗಿ ಮೊಗಲ್ ಬಾದಷಹಾರ ಮೇಲೆ ರಾಜಕೀಯ
ಹಿಡಿತ ಸಾಧಿಸಿದರು. ಅಲ್ಲದೇ ಸಿಖ್ಖರು, ಜಾಟರು ಮತ್ತು ರೋಹಿಲ್ಲರು ಸ್ವತಂತ್ರ ಶಕ್ತಿಗಳಾಗಿ ತಲೆ ಎತ್ತಿದರು.
ಜೊತೆಗೆ ಆಂಗ್ಲರ ರಾಜಕೀಯ ಪ್ರವೇಶದಿಂದಾಗಿ ಮೊಗಲ್ ಬಾದಷಹಾರು ಕೈಗೊಂಬೆ ಆಡಳಿತಗಾರರ ಮಟ್ಟಕ್ಕೆ ಕುಸಿದರು.
1.
ಮೊಗಲರ ಪತನ: ಸಾ.ಶ.ವ. ೧೭೦೭ರಲ್ಲಿ ಔರಂಗಜೇಬನ ಮರಣಾನಂತರ ಉತ್ತರ ಭಾರತದಲ್ಲಿ ೧೮ನೆ ಶತಮಾನದುದ್ದಕ್ಕೂ
ರಾಜಕೀಯ ವಿಪ್ಲವ ಏರ್ಪಟ್ಟಿತು. ಏಕೆಂದರೆ ಎಲ್ಲಾ ಮೊಗಲ್ ಬಾದಷಹಾರ ಮರಣದ ನಂತರ ಸಾಮಾನ್ಯವಾಗಿದ್ದ ಉತ್ತರಾಧಿಕಾರದ ಸಮಸ್ಯೆ ಆಗಲೂ ತಲೆದೋರಿತು.
ಅಂತಿಮವಾಗಿ ಬಹಾದೂರ್ ಷಾ (1707-1712)
ಗದ್ದುಗೆ ಏರಿದನು. ಅವನು ಮೊಗಲರ ವೈಭವವನ್ನು ಉಳಿಸಲು ಸರ್ವಪ್ರಯತ್ನ ನಡೆಸಿದನು. ಆದರೂ ಅವನ ಮರಣಾನಂತರ
ಕೇವಲ ೭ ವರ್ಷಗಳಲ್ಲಿ ನಾಲ್ವರು ಬಾದಶಹಾರು ಸಿಂಹಾಸನವೇರಿದರೂ ಅವರು ಅತ್ಯಂತ ಅಶಕ್ತರಾಗಿದ್ದರು. ನಂತರ
ಆಳಿದ ಮಹಮದ್ ಶಾ ರಂಗೀಲಾ (1719-1748)
ದೀರ್ಘ ಕಾಲ ಆಳಿದರೂ ಉತ್ತಮ ಆಡಳಿತ ನೀಡಲಿಲ್ಲ. ಇವನ ಕಾಲದಲ್ಲಿಯೇ ಪರ್ಷಿಯಾದ ನಾದಿರ್ ಷಾ (೧೭೩೯-೪೦) ರಲ್ಲಿ ಭಾರತದ ಮೇಲೆ ಧಾಳಿ ನಡೆಸಿ ಮೊಗಲರ
ಅಸ್ಥಿತ್ವಕ್ಕೆ ಪ್ರಬಲ ಪೆಟ್ಟು ಕೊಟ್ಟನು. ಅವನ ನಂತರ ಅಫ್ಘಾನಿಸ್ತಾನದ ಅಹಮದ್ ಷಾ ಅಬ್ದಾಲಿ ಕನಿಷ್ಠ
ಆರು ಬಾರಿ ಭಾರತದ ಮೇಲೆ ಧಾಳಿ ನಡೆಸಿ ಅಪಾರ ಸಂಪತ್ತನ್ನು ದೋಚುವುದರೊಂದಿಗೆ ೧೭೬೧ ರಲ್ಲಿ ನಡೆದ ತೃತೀಯ
ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸದೆಬಡಿದು ಏಳಿಗೆಯಲ್ಲಿದ್ದ ಮರಾಠರ ಸೈನಿಕ ಸಾಮರ್ಥ್ಯಕ್ಕೆ ದೊಡ್ಡ
ಪೆಟ್ಟು ಕೊಟ್ಟನು. ನಂತರದಲ್ಲಿ ನಡೆದ ಯೂರೋಪಿಯನ್ ಶಕ್ತಿಗಳ ಮೇಲಾಟದಲ್ಲಿ ಮೊಗಲ್ ಬಾದಶಹಾ ಅಲಹಾಬಾದ್
ಒಪ್ಪಂದದ ಮೂಲಕ ಬ್ರಿಟಿಷರ ಪಿಂಚಣಿದಾರನಾದನು. ತದನಂತರದ ಮೊಗಲ್ ಬಾದಷಹಾರು ಕೇವಲ ನಾಮಮಾತ್ರದ ಅಧಿಕಾರವನ್ನು
ಹೊಂದಿದ್ದರೇ ಹೊರತು ನಿಜವಾದ ಅಧಿಕಾರವೆಲ್ಲವೂ ಮರಾಠರ ಮತ್ತು ಆಂಗ್ಲರ ಕೈಯಲ್ಲಿತ್ತು. ಮೊಗಲರ ಪತನವು
ಭಾರತದಲ್ಲಿ ಪ್ರಾದೇಶಿಕ ಮತ್ತು ವಿದೇಶಿ ಶಕ್ತಿಗಳು ತಲೆ ಎತ್ತಲು ಅವಕಾಶ ಕಲ್ಪಿಸಿ, ೧೮ನೆ ಶತಮಾನದ
ಭಾರತದ ರಾಜಕೀಯದಲ್ಲಿ ಹೊಸ ಬದಲಾವಣೆಗಳು ಉಂಟಾದುದನ್ನು ಕಾಣಬಹುದು.
2.
ಪ್ರಾಂತೀಯ ರಾಜ್ಯಗಳ ಏಳಿಗೆ: ಔರಂಗಜೇಬನ ಕಾಲದವರೆಗೂ ಕೇಂದ್ರಶಕ್ತಿ ಪ್ರಬಲವಾಗಿದ್ದ ಕಾರಣ ಪ್ರಾಂತೀಯ
ಸುಬೆದಾರರು ಮೊಗಲ್ ಸತ್ತೆಗೆ ನಿಷ್ಠರಾಗಿದ್ದರು. ಆದರೆ ಅವನ ನಂತರದ ಮೊಗಲರ ಕಾಲದಲ್ಲಿನ ಕೇಂದ್ರದ
ದುರ್ಬಲತೆಯ ಕಾರಣದಿಂದಾಗಿ ಬಂಗಾಳ, ದಖನ್, ಅವಧದ
ಸುಬೆದಾರರು ಸ್ವತಂತ್ರರಾಗಿ ಆಳತೊಡಗಿದ ಕಾರಣದಿಂದಾಗಿ ಮೊಗಲ್ ಸಾಮ್ರಾಜ್ಯವು ವಿಸ್ತಾರದಲ್ಲಿ
ಕುಸಿಯಿತು.
A.
ಬಂಗಾಳದ ನವಾಬ: ಆರಂಭದಲ್ಲಿ ಔರಂಗಜೇಬನ ಕಾಲದಲ್ಲಿ ಬಂಗಾಳದ ಕಂದಾಯ ವಸೂಲಿಗೆ ನೇಮಕಗೊಂಡ ಮುರ್ಷಿದ್
ಖುಲಿ ಖಾನನು ಮುಂದೆ ಬಹಾದ್ದೂರ್ ಷಾ ಕಾಲದಲ್ಲಿ ಮರುನೇಮಕಗೊಂಡನು. ಫರುಕ್ಸಿಯಾರ್ ಕಾಲದಲ್ಲಿ ಬಂಗಾಳ
ಮತ್ತು ಒರಿಸ್ಸಾಗಳ ಸುಬೇದಾರನಾಗಿ ನೇಮಕಗೊಂಡನು. ಮುಂದೆ ೧೭೧೭ರಲ್ಲಿ ದಿವಾನಿ ಮತ್ತು ನಿಜಾಮತ್ ಎರಡೂ
ಅಧಿಕಾರಗಳನ್ನು ನಿರ್ವಹಿಸುವ ಜವಾಬ್ದಾರಿಗಳೊಂದಿಗೆ ಬಂಗಾಳದ ಗವರ್ನರ್ ಆದಾಗ ಅವನು ಕ್ರಮೇಣ ಸ್ವತಂತ್ರನಾಗಿ
ಆಳತೊಡಗಿದನು. ಆದರೆ ಬಾದಷಹಾನಿಗೆ ಸಲ್ಲಿಸಬೇಕಾದ ಕಪ್ಪವನ್ನು ಸಲ್ಲಿಸುತ್ತಿದ್ದನು. ಮುಂದೆ ೧೭೨೭ರಲ್ಲಿ
ಅವನು ಸಾಯುವ ವೇಳೆಗೆ ಅವನು ಆಂತರಿಕವಾಗಿ ಸ್ವತಂತ್ರ ಆಳ್ವಿಕೆ ಮಾಡುತ್ತಿದ್ದನು. ಹೀಗೆ ಬಂಗಾಳವು ಕೇವಲ
ದೆಹಲಿಗೆ ಕಪ್ಪ ನೀಡುವಷ್ಟರ ಮಟ್ಟಿಗೆ ವಿಧೇಯವಾಗಿತ್ತೇ ಹೊರತು ಆಂತರಿಕ ಆಡಳಿತದಲ್ಲಿ ಬಾದಷಹಾನ ಯಾವುದೇ
ಹಿಡಿತವಿರಲಿಲ್ಲ. ಮುಂದೆ ಅಲಿವರ್ದಿಖಾನನ ಕಾಲದಲ್ಲಿ ಬಂಗಾಳವು ಕಪ್ಪ ಕೊಡುವುದನ್ನೂ ಸಹ ನಿಲ್ಲಿಸಿ
ಸಂಪೂರ್ಣವಾಗಿ ಮೊಗಲ್ ಬಾದಷಹಾನ ಹಿಡಿತದಿಂದ ಮುಕ್ತವಾಯಿತು.
B.
ಹೈದ್ರಾಬಾದಿನ ನಿಜಾಮ: ದಖನ್ನಿನಲ್ಲಿದ್ದ ಹೈದ್ರಾಬಾದ್ ಪ್ರಾಂತ್ಯವನ್ನು ಮುಬಾರಿಜ್ ಖಾನ್ ಎಂಬುವವನು
೧೭೨೩ರ ವೇಳೆಯಲ್ಲಿ ಬಹುತೇಕ ಸ್ವತಂತ್ರನಾಗಿ ಆಳುತ್ತಿದ್ದನು. ಆದರೆ ದೆಹಲಿಯಲ್ಲಿದ್ದ ನಿಜಾಮ ಉಲ್
ಮುಲ್ಕ್ ಆಸಫ್ ಎಂಬುವವನು ಮೊಗಲ್ ಬಾದಷಹಾನಿಗೆ ವಜೀರನಾಗಿ ಸೇವೆ ಸಲ್ಲಿಸುತ್ತಿದ್ದನು. ಅವನು ದೆಹಲಿಯಲ್ಲಿನ
ರಾಜಕೀಯ ಸಂಘರ್ಷಗಳ ಕಾರಣದಿಂದಾಗಿ ದಖನ್ನಿನಲ್ಲಿದ್ದ ಹೈದ್ರಾಬಾದನ್ನು ಸ್ವತಂತ್ರನಾಗಿ ಆಳಲು ಬಯಸಿ
೧೭೨೩ರಲ್ಲಿ ಮುಬಾರಿಜ್ ಖಾನನನ್ನು ಸೋಲಿಸಿ ದಖನ್ ಪ್ರಾಂತ್ಯವನ್ನು ವಶಪಡಿಸಿಕೊಂಡನು. ನಂತರ ಅವನು
೧೭೪೦ ರಲ್ಲಿ ಶಾಶ್ವತವಾಗಿ ಹೈದ್ರಾಬಾದಿಗೆ ತೆರಳಿದಾಗ ಆ ಪ್ರಾಂತ್ಯವು ಸಂಪೂರ್ಣವಾಗಿ ಸ್ವತಂತ್ರಗೊಂಡಿತು.
C.
ಅವಧದ ನವಾಬ: ದೆಹಲಿಯ ಉತ್ತರಕ್ಕಿದ್ದ ಅವಧ್ ಸಹ ಬೃಹತ್ ಮತ್ತು ಫಲವತ್ತಾದ ಮೊಗಲ್ ಪ್ರಾಂತ್ಯಗಳಲ್ಲಿ
ಒಂದಾಗಿತ್ತು. ೧೭೨೨ರಲ್ಲಿ ಅವಧದಲ್ಲಿನ ದಂಗೆಗಳನ್ನು ಅಡಗಿಸುವ ಆದೇಶದೊಂದಿಗೆ ಸಾದತ್ ಖಾನ್ ಎಂಬುವವನು
ಅದರ ಗವರ್ನರ್ ಆಗಿ ನೇಮಕಗೊಂಡನು. ಅಲ್ಲಿನ ದಂಗೆಗಳ ದಮನಾನಂತರ ದೆಹಲಿಗೆ ಹಿಂದಿರುಗಿದ ಅವನು ಆಸ್ಥಾನದಲ್ಲಿ
ತನ್ನ ಸ್ಥಾನವನ್ನು ಗಳಿಸಿಕೊಳ್ಳಲಾಗದೇ ಪುನಃ ಅವಧ್ಗೆ ಮರಳಿ ಅಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸತೊಡಗಿದನು.
ಮೊದಲು ತನ್ನ ಅಳಿಯನಾದ ಸಫ್ತರ್ ಜಂಗನನ್ನು ಅವಧದ ಉಪ ಗವರ್ನರ್ ಎಂದು ಮೊಗಲ್ ಬಾದಷಹಾನು ಮಾನ್ಯ
ಮಾಡುವಂತೆ ಮಾಡಿದನು. ನಂತರ ಕಂದಾಯ ವಸೂಲಿಯ ದಿವಾನಿ ಕಛೇರಿಯನ್ನು ಬಾದಷಹಾನ ಹಿಡಿತದಿಂದ ಮುಕ್ತಗೊಳಿಸಿ,
ಪ್ರಾಂತ್ಯದ ಕಂದಾಯ ಆಡಳಿತವನ್ನು ಸುಧಾರಿಸಿದನು. ಇದರಿಂದ ಸ್ಥಳೀಯ ಜಮೀನುದಾರರ ಬೆಂಬಲ ಅವನಿಗೆ ದೊರೆಯಿತು.
ಅಲ್ಲದೇ ನೆರೆ-ಹೊರೆಯ ಪ್ರದೇಶಗಳನ್ನೂ ಅವನು ತನ್ನ ಆಡಳಿತಕ್ಕೆ ಸೇರಿಸಿಕೊಳ್ಳತೊಡಗಿದನು. ಮುಂದೆ ೧೭೩೯
ರಲ್ಲಿ ಅವನು ಪರ್ಷಿಯಾದ ನಾದಿರ್ ಷಾನ ದಾಳಿಯ ಕಾಲದಲ್ಲಿ ಮೊಗಲರಿಗೆ ಸಲ್ಲಿಸಿದ ಸೇವೆಯ ಹೊರತಾಗಿಯೂ
ಮೀರ್ ಭಕ್ಷಿ ಹುದ್ದೆಯನ್ನು ನಿಜಾಮನಿಗೆ ನೀಡಿದಾಗ ಬೇಸರಗೊಂಡ ಅವನು ನಾದಿರ್ ಶಾನ ಪಕ್ಷ ಸೇರಿದನು.
ಆದರೆ ನಾದಿರ್ ಷಾನ ದಬ್ಬಾಳಿಕೆಯ ಕಾರಣ ಆತ್ಮಹತ್ಯೆ ಮಾಡಿಕೊಂಡನು. ಅವನು ಸಾಯುವ ವೇಳೆಗೆ ಅವಧ್ ಬಹುತೇಕವಾಗಿ
ಸ್ವತಂತ್ರ ರಾಜ್ಯವಾಗಿ ರೂಪುಗೊಂಡಿತ್ತು. ನಂತರ ಅವನ ಅಳಿಯ ಸಪ್ತರ್ ಜಂಗ್ ಅವಧದ ಸುಬೇದಾರನಾದನು.
ಇವನ ಮರಣಾನಂತರ ೧೭೫೪ ರಲ್ಲಿ ಅವನ ಮಗ ಶೂಜ ಉದ್ ದೌಲನು ಬಂಗಾಳದ ನವಾಬನಾದನು. ಮುಂದೆ ಇವನು ಅಹಮದ್
ಷಾ ಅಬ್ದಾಲಿಯ ದಾಳಿಯ ಕಾಲಕ್ಕೆ ಮರಾಠರ ವಿರುದ್ಧ ಸೆಣಸಿದನಾದರೂ ಸ್ವತಂತ್ರ ಅಸ್ಥಿತ್ವವನ್ನು ಉಳಿಸಿಕೊಂಡಿದ್ದನು.
ಮುಂದೆ ಬಕ್ಸಾರ್ ಕದನದ ವೇಳೆಯಲ್ಲಿ ಅವಧದ ನವಾಬನು ಸ್ವತಂತ್ರನಾಗಿಯೇ ಬ್ರಿಟಿಷರೊಂದಿಗೆ ಸೆಣಸಿದನು.
3.
ಮರಾಠರು: ಶಿವಾಜಿಯ ನೇತೃತ್ವದಲ್ಲಿ ಸ್ಥಾಪನೆಗೊಂಡ ಮರಾಠಾ ರಾಜ್ಯವು ಅವನ ಮರಣಾನಂತರ ಔರಂಗಜೇಬನ ದಾಳಿಗಳ
ಕಾರಣ ವಿಸ್ತಾರದಲ್ಲಿ ಕುಸಿದರೂ ಪೇಶ್ವೆಗಳ (ಬಾಜಿರಾಯ ೧ ಮತ್ತು ಬಾಲಾಜಿ ಬಾಜಿರಾಯ) ಕಾಲದಲ್ಲಿ ಬಹುತೇಕ
ಭಾರತದಾದ್ಯಂತ ತನ್ನ ಪ್ರಭಾವವನ್ನು ಬೆಳೆಸಿಕೊಂಡಿತು. ನಂತರ ಮೊಗಲರ ಪ್ರಾಂತ್ಯಗಳ ಮೇಲೂ ಅಧಿಕಾರವನ್ನು
ವಿಸ್ತರಿಸಿತು. ೧೭೫೨ರಲ್ಲಿ ಅಫ್ಘನ್ ಧಾಳಿಗಳನ್ನು ತಡೆಯುವ ಸಲುವಾಗಿ ಏರ್ಪಟ್ಟ ಒಪ್ಪಂದದಂತೆ ಮೊಗಲರು
ಮರಾಠರ ರಕ್ಷಣೆಗೆ ಒಳಗಾದರು. ಇದರಿಂದಾಗಿ 1761 ರಲ್ಲಿ
ಪರ್ಷಿಯಾದ ಅಹಮದ್ ಶಾ ಅಬ್ದಾಲಿಯು ದೆಹಲಿಯ ಮೇಲೆ ದಾಳಿ ಮಾಡಿದಾಗ ಅವನ ಸೈನ್ಯವನ್ನು ಮೂರನೆ ಪಾಣಿಪತ್ ಕದನದಲ್ಲಿ ಎದುರಿಸಿ ಸೋತು
ಅಪಾರ ಸೈನಿಕ ನಷ್ಟಕ್ಕೆ ಒಳಗಾದರು.
4.
ಸಿಖ್ಖರು: ಸಿಖ್ಖರ ೯ನೆ ಗುರು ತೇಜ್ ಬಹಾದೂರನ ಘೋರ ಅಂತ್ಯದ ಕಾರಣ ೧೦ನೆ ಗುರು ಗೋವಿಂದ ಸಿಂಹನು ಖಾಲ್ಸಾ
ಎಂಬ ಸಿಖ್ ಸೈನಿಕ ಪಡೆಯನ್ನು ಸ್ಥಾಪಿಸಿದನು. ಅವನ ಮರಣಾನಂತರ ಬಂದಾ ಬಹಾದೂರ್ ಖಾಲ್ಸಾದ ನೇತೃತ್ವ
ವಹಿಸಿಕೊಂಡನು. ಅವನು ಮುಂದೆ ಮೊಗಲರ ಸೇನಾ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕು, ಮಾರ್ಚ್ ೧೭೧೬ರಲ್ಲಿ
ಮರಣದಂಡನೆಗೆ ಗುರಿಯಾದನು. ಆದರೆ ಸಿಖ್ಖರು ಆ ವೇಳೆಗೆ ಸ್ಥಳೀಯ ಪ್ರದೇಶಗಳ ಮೇಲೆ ಅಧಿಕಾರ ಸ್ಥಾಪಿಸಿಕೊಂಡು
ವ್ಯಾಪಾರ ಮಾರ್ಗಗಳ ಮೇಲೆ ಹಿಡಿತ ಸಾಧಿಸಿದ್ದರು. ಮುಂದೆ ನಾದಿರ್ ಷಾ ಮತ್ತು ಅಬ್ದಾಲಿಗಳ ಧಾಳಿಯ ಕಾಲಕ್ಕೆ
ಅವರ ಸೇನೆಗಳೊಂದಿಗಿನ ಸಂಘರ್ಷದಲ್ಲಿ ತೊಡಗಿ ಸೈನಿಕವಾಗಿ ಪ್ರಬಲರಾದರು. ನಂತರ ನೆರೆ-ಹೊರೆಯ ಭೂಪ್ರದೇಶಗಳನ್ನು
ಗೆದ್ದುಕೊಳ್ಳುತ್ತಾ ಮೀಸಲ್ ಎಂಬ ಆಡಳಿತ ಘಟಕಗಳನ್ನು ಸ್ಥಾಪಿಸಿಕೊಂಡರು. ಒಟ್ಟು ೬೦ ಮೀಸಲ್ಗಳನ್ನು
ಮುಂದೆ ಸುಕಿರಚಾಕಿಯಾ ಮಿಸಲ್ನ ಮುಖ್ಯಸ್ಥ ರಣಜಿತ್
ಸಿಂಗನು ಒಟ್ಟುಗೂಡಿಸಿ ಸ್ವತಂತ್ರ ಸಿಖ್ ಸಾಮ್ರಾಜ್ಯವನ್ನು ಸ್ಥಾಪಿಸಿ, ೧೮೦೯ರಲ್ಲಿ ಬ್ರಿಟಿಷರೊಂದಿಗೆ
ಮಾಡಿಕೊಂಡ ಅಮೃತಸರ ಒಪ್ಪಂದದ ಮೂಲಕ ಸಟ್ಲೆಜ್ ನದಿಯಿಂದ ಹಿಂದುಕುಷ್ ಸಾಲಿನವರೆಗೆ ಮತ್ತು ಕಾಶ್ಮೀರದಿಂದ
ಸಿಂಧ್ ತನಕ ರಾಜ್ಯ ವಿಸ್ತರಿಸಿದನು.
5.
ಜಾಟರು: ಇವರು ದೆಹಲಿ ಮತ್ತು ಮಥುರಾ ಸುತ್ತಲಿನ ಕೃಷಿ
ಸಮುದಾಯಕ್ಕೆ ಸೇರಿದವರಾಗಿದ್ದು, ಸಿಖ್ ಧರ್ಮದ ಸ್ಥಾಪನೆಯ ನಂತರ ಅದರ ಅನುಯಾಯಿಗಳಾದರು. ಆದರೆ ಔರಂಗಜೇಬನ
ದಬ್ಬಾಳಿಕೆಯ ಕಾರಣ ಗೋಕುಲ ಮತ್ತು ರಾಜಾರಾಂ ಎಂಬ ಜಾಟ ಮುಖಂಡರು ಮೊಗಲರ ವಿರುದ್ಧ ದಂಗೆ ನಡೆಸಿದರು.
ರಾಜಾಸ್ಥಾನದ ಭರತಪುರ ಅವರ ಕೇಂದ್ರವಾಗಿತ್ತು. ಚುರಾಮನ್
ಜಾಟನು ಮತ್ತು ಸೂರಜ್ ಮಲ್ (1756--63) ಕಾಲದಲ್ಲಿ
ಜಾಟರು ಮತ್ತಷ್ಟು ಸಂಘಟಿತರಾದರು. ಸೂರಜ್ ಮಲ್ನ ಕಾಲದಲ್ಲಿ ಪೂರ್ವದಲ್ಲಿ ಗಂಗಾ ನದಿಯಿಂದ ಪಶ್ಚಿಮದಲ್ಲಿ
ಆಗ್ರಾವರೆಗೆ ಮತ್ತು ಉತ್ತರದಲ್ಲಿ ದೆಹಲಿಯಿಂದ ದಕ್ಷಿಣದಲ್ಲಿ ಚಂಬಲ್ ವರೆಗೆ ಹರಡಿದ್ದ ಜಾಟರ ರಾಜ್ಯವು
ಅವನ ಮರಣಾನಂತರ ಕುಸಿಯಿತು.
6.
ರಜಪೂತರು: ಮೊಗಲ್ ಸಾಮ್ರಾಜ್ಯದ ಸ್ಥಾಪನೆಯ ಕಾಲಕ್ಕೆ ಬಾಬರನೊಂದಿಗೆ ಸಂಗ್ರಾಮಸಿಂಗನ ನೇತೃತ್ವದಲ್ಲಿ
ಸೆಣಸಿದ್ದ ರಜಪೂತರು ಅವನ ಮೊಮ್ಮೊಗ ಅಕ್ಬರನ ಕಾಲದಲ್ಲಿ ಮೇವಾರ ಹೊರತುಪಡಿಸಿ ಉಳಿದೆಲ್ಲಾ ರಜಪೂತರು
ಮೊಗಲರಿಗೆ ನಿಷ್ಠರಾದರು. ಆದರೆ ಔರಂಗಜೇಬನ ಕಾಲದಲ್ಲಿ ಮೇವಾರದ ಅಜಿತ್ಸಿಂಗನ ಉತ್ತರಾಧಿಕಾರದ ಸಮಸ್ಯೆಯ
ಕಾರಣ ಮೊಗಲರ ವಿರುದ್ಧ ರಜಪೂತರು ಬಂಡಾಯ ಹೂಡಿದರು. ಅವನ ಮರಣಾನಂತರ ರಜಪೂತರು ಬಹುತೇಕ ಸ್ವತಂತ್ರರಾಗಿ
ಆಳತೊಡಗಿದರು. ಅವರಲ್ಲಿ ಪ್ರಮುಖನಾದವನೆಂದರೆ ಅಂಬರದ ರಾಜ ಸವಾಯಿ ಜಯಸಿಂಗ್ (೧೬೯೯-೧೭೪೩). ಇವನು
ಪತನದ ಹಾದಿಯಲ್ಲಿದ್ದ ಮೊಗಲರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
III.
ದಕ್ಷಿಣ ಭಾರತ:
1.
ಮೈಸೂರು: ವಿಜಯನಗರ ಪತನಾನಂತರ ದಕ್ಷಿಣ ಭಾರತದಲ್ಲಿ ಏಳಿಗೆಗೆ ಬಂದ ಸಣ್ಣ ರಾಜಮನೆತನಗಳಲ್ಲಿ ಕರ್ನಾಟಕದ
ದಕ್ಷಿಣ ಭಾಗದಲ್ಲಿ ಏಳಿಗೆಗೆ ಬಂದ ಮೈಸೂರು ರಾಜ್ಯವು ಒಂದು. 18ನೆ ಶತಮಾನದ ಆದಿಯಲ್ಲಿ ಮೈಸೂರು ಒಡೆಯರ
ದೌರ್ಬಲ್ಯದ ಕಾರಣದಿಂದಾಗಿ ನಂಜರಾಜಯ್ಯ ಮತ್ತು ದೇವರಾಜಯ್ಯ ಎಂಬ ದಳವಾಯಿಗಳು ಪ್ರಬಲರಾದರು. ದಕ್ಷಿಣ
ಭಾರತದ ರಾಜಕೀಯ ಮೇಲಾಟದಲ್ಲಿ ಕರ್ನಾಟಿಕ್ ಯುದ್ಧಗಳಲ್ಲಿ ಪಾಲ್ಗೊಂಡ ಮೈಸೂರು ರಾಜ್ಯವು ದಿವಾಳಿಯತ್ತ
ಸಾಗಿತ್ತು. ವೇತನವಿಲ್ಲದೆ ಬಂಡಾಯವೆದ್ದಿದ್ದ ಸೈನಿಕರಿಗೆ ತನ್ನ ಬಳಿಯಲ್ಲಿದ್ದ ಹಣದಿಂದ ವೇತನ ನೀಡಿ,
ಪ್ರಭಾವ ಬೆಳೆಸಿಕೊಂಡ ಹೈದರಾಲಿಯು ಮುಂದೆ ದಳವಾಯಿಗಳನ್ನು ಮೂಲೆಗುಂಪಾಗಿಸಿ ತಾನು ಮೈಸೂರಿನ ಸರ್ವಾಧಿಕಾರಿಯಾದನು.
1761 ರಿಂದ 1782 ವರೆಗಿನ ಹೈದರನ ಆಳ್ವಿಕೆ ಮತ್ತು 1799ರವರೆಗಿನ ಅವನ ಮಗ ಟಿಪ್ಪುವಿನ ಆಡಳಿತದಲ್ಲಿ
ಮೈಸೂರು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಆದರೆ ಅದೇ ವೇಳೆಯಲ್ಲಿ ಅಧಿಕಾರ ವಿಸ್ತರಣೆಗೆ ತೊಡಗಿದ್ದ
ಬ್ರಿಟಿಷರು ಹೈದರಾಲಿ ಮತ್ತು ಟಿಪ್ಪುವನ್ನು ತಮ್ಮ ಪ್ರತಿಸ್ಪರ್ಧಿಗಳೆಂದು ಭಾವಿಸಿ ಅವರೊಂದಿಗೆ ಸಂಘರ್ಷದಲ್ಲಿ
ತೊಡಗಿದರು.
೨.
ತಿರುವಾಂಕೂರು: ಇದು ಕೇರಳ ರಾಜ್ಯದಲ್ಲಿದ್ದ ಒಂದು ಚಿಕ್ಕರಾಜ್ಯವಾಗಿತ್ತು. ಇದನ್ನು 1729-40ರ ನಡುವೆ
ಮಾರ್ತಾಂಡ ವರ್ಮ ಎಂಬ ಅರಸನು ಆಳುತ್ತಿದ್ದನು. ಅವನ ನಂತರ ಮಗ ರಾಮವರ್ಮ ಆಳ್ವಿಕೆ ನಡೆಸಿದನು. ಮಾರ್ತಾಂಡವರ್ಮನು
ತನ್ನ ಕಾಲದಲ್ಲಿ ತಿರುವಾಂಕೂರನ್ನು ಆಧುನೀಕರಣಗೊಳಿಸಿದ್ದಲ್ಲದೇ, ಸೇನೆಯನ್ನೂ ಸಹ ಯೂರೋಪಿನ ಮಾದರಿಯಲ್ಲಿ
ಸಜ್ಜುಗೊಳಿಸಿದನು. ಅಲ್ಲದೇ ಬ್ರಿಟಿಷರೊಂದಿಗೆ ಸ್ನೇಹ ಬೆಳೆಸಿದ್ದನು. ಆದರೆ ಅದು ಸ್ವತಂತ್ರ ರಾಜ್ಯವಾಗಿ
ಏಳಿಗೆ ಹೊಂದಿತ್ತು. ಅಲ್ಲದೇ ಮೊಗಲ್ ಸಾಮ್ರಾಜ್ಯದ ಪ್ರಭಾವದಾಚೆಗೆ ಈ ರಾಜ್ಯವು ಉಳಿದಿತ್ತು. ಮುಂದೆ
ಟಿಪ್ಪುವಿನ ಜೊತೆ ಸಂಘರ್ಷದಲ್ಲಿ ತೊಡಗಿದ್ದ ಇದರ ಮೇಲಿನ ದಾಳಿಯ ಕಾರಣದಿಂದಾಗಿ ಮೂರನೆ ಆಂಗ್ಲೊ-ಮೈಸೂರು
ಯುದ್ಧ ನಡೆಯಿತು.
IV.
ಬ್ರಿಟಿಷರ ಏಳಿಗೆ: 17ನೆ ಶತಮಾನದಲ್ಲಿಯೇ ಭಾರತಕ್ಕೆ ಬಂದರೂ ಬ್ರಿಟಿಷರು 18ನೆ ಶತಮಾನದ ಮಧ್ಯಭಾಗದವರೆಗೆ
ಕೇವಲ ವ್ಯಾಪಾರದಲ್ಲಿ ತೊಡಗಿದ್ದರು. ಆದರೆ ಪಾಂಡಿಚೇರಿಯ ಫ್ರೆಂಚ್ ಗವರ್ನರ್ ಡೂಪ್ಲೆಯ ರಾಜಕೀಯ ವಿಸ್ತರಣೆಯ ಆಕಾಂಕ್ಷೆಯಿಂದಾಗಿ
ಅವರು ಫ್ರೆಂಚರೊಂದಿಗೆ ಕರ್ನಾಟಿಕ್ ಯುದ್ಧಗಳಲ್ಲಿ ತೊಡಗಿ ಪ್ರಾದೇಶಿಕ ವಿಸ್ತರಣೆಗೆ ಕೈಹಾಕಿದರು.
ದಕ್ಷಿಣದಲ್ಲಿ ದೊರೆತ ಜಯಗಳಿಂದಾಗಿ ಉತ್ಸಾಹಿತರಾದ ಅವರು ಬಂಗಾಳದಲ್ಲಿ ಪ್ಲಾಸಿ (1757) ಮತ್ತು ಬಕ್ಸಾರ್
(1764) ಕದನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಬಂಗಾಳದಲ್ಲಿ ದಿವಾನಿ ಹಕ್ಕು ಪಡೆದುಕೊಂಡರು. ನಂತರ
ನಾಲ್ಕು ಆಂಗ್ಲೊ-ಮೈಸೂರು ಮತ್ತು ಮೂರು ಆಂಗ್ಲೊ-ಮರಾಠಾ ಯುದ್ಧಗಳಲ್ಲಿ ಭಾಗವಹಿಸಿ ದಕ್ಷಿಣದಲ್ಲಿ ತಮ್ಮ ರಾಜಕೀಯ ಪ್ರಾಬಲ್ಯ ಸ್ಥಾಪಿಸಿಕೊಂಡರು.
ರಾಜಕೀಯ ಹಸ್ತಕ್ಷೇಪಗಳು, ಸಹಾಯಕ ಸೈನ್ಯ ಪದ್ಧತಿ ಮತ್ತು ಆಕ್ರಮಣಗಳ ಮೂಲಕ ರಾಜಕೀಯ ಅಧಿಕಾರ ಸ್ಥಾಪನೆ
ಮಾಡಿಕೊಂಡರು.
V. ಸಾಮಾಜಿಕ ಜೀವನ: ವಿಭಿನ್ನ ದೃಷ್ಟಿಕೋನಗಳಿಂದ, ಹದಿನೆಂಟನೆಯ ಶತಮಾನವು
ಭಾರತದ ಇತಿಹಾಸದಲ್ಲಿಯೇ ಅಪಮಾನಕರವಾದ ಅವಧಿಯಾಗಿದೆ. ಮೊಗಲ್ ಸಾಮ್ರಾಜ್ಯಾಧಿಕಾರವು
ಕ್ರಮೇಣ ಶಿಥಿಲವಾಗುತ್ತ ಬಂದು, ಕೊನೆಯಲ್ಲಿ ಪತನ ಹೊಂದಿದುದರಿಂದಾಗಿ, ಹಾಗೂ ಗಣ್ಯ ವರ್ಗದವರ ಚಾರಿತ್ರ್ಯವೂ
ಕುಸಿದುದರಿಂದಾಗಿ ಆ ಅವಧಿಯಲ್ಲಿನ ಎಲ್ಲ ಪ್ರಗತಿಪರಬಲಗಳೂ ನಾಶವಾದುವು. ಪರಿಣಾಮವಾಗಿ ದೇಶದಲ್ಲಿ ಭಯಂಕರ
ರಾಜಕೀಯ ಶೋಭೆಗಳು, ಸಾಮಾಜಿಕ ಅಶಾಂತಿ ಮತ್ತು ಗೊಂದಲಗಳು ಹಾಗೂ ಶೋಚನೀಯ ಆರ್ಥಿಕ ಅವನತಿಗಳು ಕಾಣಿಸಿಕೊಂಡವು.
ಆ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ
ಸ್ಥಿತಿಗತಿಗಳು ಕೆಳಕಂಡಂತಿದ್ದವು.
1. ಧರ್ಮ: ಆ ಕಾಲದಲ್ಲಿದ್ದ ಅನಾರೋಗ್ಯಕರ ಸನ್ನಿವೇಶದಲ್ಲಿಯೂ ಕೆಲವು ಉತ್ತಮ ಸಾಂಪ್ರದಾಯಿಕ ವೈಶಿಷ್ಟ್ಯಗಳು
ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಮುಂದುವರಿದಿದ್ದವು. ಆಗಲೂ ಇತರ ಧರ್ಮಗಳತ್ತ
ಇರುವ ಸಹನಾಮನೋಭಾವ ಹಾಗೂ ಹೊಸ ಪರಿಸರ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಗುಣ ಇವು ಹಿಂದೂಧರ್ಮದ
ವಿಶೇಷ ಲಕ್ಷಣಗಳಾಗಿದ್ದವು. 1768-1771ರ ನಡುವಣ ಅವಧಿಯಲ್ಲಿ ಭಾರತವನ್ನು ಸಂದರ್ಶಿಸಿದ ಡಚ್ ಪ್ರವಾಸಿ
ಸ್ಟಾವೊರಿನಸ್ ಹೀಗೆ ಬರೆದಿದ್ದಾನೆ: "ಧರ್ಮಗಳು ಪರಸ್ಪರವಾಗಿ ಸಂಪೂರ್ಣ ವಿಭಿನ್ನವಾಗಿರುವ ಮುಸ್ಲಿಮರು,
ಹಿಂದೂಗಳು ಮತ್ತು ಪಾರ್ಸಿಗಳು - ಈ ಮೂರೂ ಪ್ರತ್ಯೇಕ ಧರ್ಮಿಯರು ಧಾರ್ಮಿಕ ವಿಚಾರಗಳಲ್ಲಿ ಪರಸ್ಪರವಾಗಿ
ತುಂಬ ಸಹನೆಯನ್ನು ತೋರಿಸುತ್ತಿದ್ದರು; ವಿಭಿನ್ನ ಧರ್ಮದ ಆಧಾರದ ಮೇಲೆ ಯಾರೂ ಯಾರನ್ನೂ ಪೀಡಿಸುತ್ತಿರಲಿಲ್ಲ;
ಹಿಂಸಿಸುತ್ತಿರಲಿಲ್ಲ. ಪೇಶ್ವೆಗಳ ಕೈಕೆಳಗೆ ಪದಾತಿ ಸೈನ್ಯವೊಂದರಲ್ಲಿ ನೇಮಕಗೊಂಡಿದ್ದ ವಿಲಿಯಮ್ ಹೆನ್ರಿ
ಟೋನ್ 1799ರಲ್ಲಿ ಪೂನಾದ ಬಗ್ಗೆ ಹೀಗೆ ವರದಿಮಾಡಿದ್ದಾನೆ : "(ಮರಾಠಾ) ಸಾಮ್ರಾಜ್ಯದ ರಾಜಧಾನಿಯೂ,
ಮುಖ್ಯ ನಗರವೂ ಬ್ರಾಹ್ಮಣ ವಿದ್ವಾಂಸರ ಕೇಂದ್ರಸ್ಥಾನವೂ ಆಗಿದ್ದ ಪೂನಾದಲ್ಲಿ, ಅನೇಕ ಮಸೀದಿಗಳು ಮತ್ತು
ಒಂದು ಕ್ರೈಸ್ತ ಚರ್ಚ್ ಕೂಡ ಇದ್ದಿತು. ಇವುಗಳಲ್ಲಿ ಎರಡೂ ಧರ್ಮಗಳಿಗೆ ಸೇರಿದ ಉಪಾಸಕರು ಯಾವುದೇ ಹಿಂಜರಿಕೆ ಅಥವಾ ಇತರರ ಹಿಂಸೆಯ ಭಯಗಳಿಲ್ಲದೆ ಪೂಜೆ-ಪ್ರಾರ್ಥನೆಗಳನ್ನು
ನಡೆಸಬಹುದಾಗಿತ್ತು"
ಹಿಂದೂ ಧರ್ಮಕ್ಕೆ ಸೇರಿದ ಬಹುಮಂದಿ ಸಾಮಾನ್ಯ ಜನರು ಧಾರ್ಮಿಕ ಉಪಾಸನೆಯ ಹಳೆಯ ರೀತಿನೀತಿಗಳನ್ನೂ
ಕಾರ್ಯವಿಧಾನಗಳನ್ನೂ ಅನುಸರಿಸುತ್ತಿದ್ದರು. ಅಲ್ಲಿ ಅನೇಕ ಸಂಖ್ಯೆಯ ಶಕ್ತಿ ಆರಾಧಕರಿದ್ದರು. ಶಕ್ತಿಯ
ಆರಾಧನೆಯೆಂದರೆ ಮಾತೃದೇವತೆ, ದುರ್ಗಾ, ಕಾಳಿ, ತಾರಾ, ಮಾನಸಾ
- ಇವರ ಪೂಜೆ. ಇದು ಬಂಗಾಳದಲ್ಲಿ ಹಾಗೂ ಬಿಹಾರದ ಪೂರ್ವ ಜಿಲ್ಲೆಗಳಲ್ಲಿ ಬಹು ವ್ಯಾಪಕವಾಗಿತ್ತು. ಅಂದು ಶೈವ ಹಾಗೂ ವೈಷ್ಣವ ಪಂಥಗಳಿಗೆ ಮತ್ತು ಅವುಗಳ ಉಪಪಂಥಗಳಿಗೆ ಸೇರಿದ ಅನೇಕ ಅನುಯಾಯಿಗಳೂ
ಇದ್ದರು. ಈ ಪಂಥಗಳು ಕ್ರಮೇಣ ದೇಶದ ವಿವಿಧ ಭಾಗಗಳಿಗೂ ವಿಸ್ತರಿಸಿದವು. ಶ್ರೀ ಚೈತನ್ಯ ಪಂಥದ ಅನುಯಾಯಿಗಳು
ಬಂಗಾಳ, ಒರಿಸ್ಸಗಳಲ್ಲಿ ಬಹುಸಂಖ್ಯೆಯಲ್ಲಿಯೂ, ಬಿಹಾರದಲ್ಲಿ ಕಡಿಮೆ ಸಂಖ್ಯೆಯಲ್ಲಿಯೂ ಇದ್ದರು. ರಾಮಾನುಜಿಗಳು,
ರಾಮಾನಂದಿಗಳು, ಕಬೀರಪಂಥಿಗಳು, ನಾನಕಪಂಥಿಗಳು, ರಾಧಾಬಲ್ಲವಿಗಳೇ ಮುಂತಾದ ಇತರ ಪಂಥಗಳ ಅನುಯಾಯಿಗಳು
ವಿವಿಧ ಭಾಗಗಳಲ್ಲಿ ಚದುರಿ ಹೋಗಿದ್ದರು. ಬಂಗಾಳ ಹಾಗೂ ಬಿಹಾರಗಳಲ್ಲಿ ಅನೇಕ ಜನರು ಸೂರ್ಯದೇವನ ಆರಾಧಕರಾಗಿದ್ದರು;
ಅವರು ಸೌರಪತ್ಯರು ಅಥವಾ ಸೌರರು ಎಂಬ ಹೆಸರುಪಡೆದಿದ್ದರು. ಅಲ್ಲಿ ಗಾಣಪತ್ಯರೆಂಬ ಹೆಸರಿನ ಗಣೇಶನ ಆರಾಧಕರೂ
ಇದ್ದರು.
ಮಾಟ ಹಾಗೂ ಮಂತ್ರವಾದಗಳಲ್ಲಿ ಜನಪ್ರಿಯ ನಂಬಿಕೆ
ಹೆಚ್ಚಾಗುತ್ತಿತ್ತು. ಮತಕ್ರಿಯಾವಿಧಿಗಳು ಮತ್ತು ಸಮಾರಂಭಗಳ ಪ್ರಾಮುಖ್ಯ ಹಾಗೂ ಪುರೋಹಿತರ ಮಿತಿಮೀರಿದ
ಪ್ರಾಬಲ್ಯಗಳು, ಧಾರ್ಮಿಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ಯಾತ್ರಾಸ್ಥಳಗಳಲ್ಲಿ ಕೂಡ, ಕೆಲವು ಅನಪೇಕ್ಷಣೀಯ
ಆಚರಣೆಗಳು ಪ್ರಾರಂಭವಾಗಲು ಕಾರಣವಾದವು.
2. ಶಿಕ್ಷಣ:- ಒಂದು ರಾಷ್ಟ್ರದ ಶೈಕ್ಷಣಿಕ ಪದ್ಧತಿಯು ಅದರ ಸಮಾಜವನ್ನು ರೂಪಿಸುವಲ್ಲಿ ಪರಿಗಣನಾರ್ಹವಾದ ಪ್ರಭಾವವನ್ನು ಹೊಂದಿರುತ್ತದೆ.
ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳ ಅವಧಿಯಲ್ಲಿ ಕೃತಿರಚನೆ ಮಾಡಿದ ಥಾಮಸ್ ಅವರ ಅಭಿಪ್ರಾಯದಂತೆ,
"ಭಾರತದಲ್ಲಿ ಇಂಗ್ಲಿಷರು ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ಬಹುವಿಸ್ತ್ರತ ಪದ್ಧತಿಯೊಂದನ್ನು
ಪ್ರಾರಂಭಿಸಿದರು; ಇವುಗಳಲ್ಲಿ ಪ್ರಾಥಮಿಕ ಶಿಕ್ಷಣವು ಮುಖ್ಯವಾಗಿ ಪ್ರಾಯೋಗಿಕ ಸ್ವರೂಪದ್ದಾಗಿತ್ತು
ಮತ್ತು ಉನ್ನತ ಶಿಕ್ಷಣವು ಮುಖ್ಯವಾಗಿ ಸಾಹಿತ್ಯಕ, ಸೈದ್ಧಾಂತಿಕ ಹಾಗೂ ಧಾರ್ಮಿಕ ಸ್ವರೂಪಗಳನ್ನು ಹೊಂದಿತ್ತು".34
ಅಲ್ಲಿ ಸರ್ಕಾರದಿಂದ ಸಂಘಟಿತವಾಗಿರುವಂತಹ ಯಾವುದೇ ಶೈಕ್ಷಣಿಕ ಪದ್ಧತಿಯಿರಲಿಲ್ಲ.
ಶಿಕ್ಷಣಕ್ಕೆ ಕೆಲವು ಸ್ಥಳೀಯ ದೊರೆಗಳು ಮತ್ತು
ಶ್ರೀಮಂತ ಪ್ರಭುತ್ವಕ್ಕೆ ಸೇರಿದ ಸದಸ್ಯರು ಆಶ್ರಯ ನೀಡುತ್ತಿದ್ದರು ಹಾಗೂ ಇತರ ವಿಭಾಗಗಳ ಉದಾರ ಮನೋಧರ್ಮದ
ಕೆಲವು ಜನರು ಕೊಡುಗೆಗಳನ್ನು ನೀಡಿ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದ್ದರು. ಪ್ರಸಿದ್ಧಿ ಹೊಂದಿದ ನಾಟೋರ್ನ
ರಾಣಿ ಭವಾನಿ ಹಾಗೂ ನಾದಿಯಾದ ರಾಜಾ ಕೃಷ್ಣ ಚಂದ್ರ - ಇವರು ತಮ್ಮ ಅನುಕ್ರಮವಾದ ಆಡಳಿತ ಪ್ರದೇಶಗಳಲ್ಲಿ
ಶಿಕ್ಷಣಕ್ಕೆ ತುಂಬ ಪ್ರೋತ್ಸಾಹ-ಉತ್ತೇಜನಗಳನ್ನು ನೀಡಿದರು; ಮಿಥಿಲಾದಲ್ಲಿ ದರ್ಭಾಂಗಾದ ರಾಜನು ಶಿಕ್ಷಣಕ್ಕೆ
ಬೆಂಬಲ ನೀಡಿದ. ಪೇಶ್ವೆಗಳು ಕೂಡ ಸಾಂಪ್ರದಾಯಿಕ ಶಿಕ್ಷಣಕ್ಕೆ ತುಂಬ ಪ್ರೋತ್ಸಾಹವನ್ನು ನೀಡಿದರು.
ಬಂಗಾಳ ಮತ್ತು ಬಿಹಾರಗಳಲ್ಲಿ 'ಚತುಷ್ಪಾರಿಗಳು' ಅಥವಾ 'ಟೊಲ್'ಗಳೆಂದು ಹೆಸರಾಗಿದ್ದ ಉನ್ನತ
ಸಂಸ್ಕೃತ ಶಿಕ್ಷಣ ಸಂಸ್ಥೆಗಳು, ದ್ರಾವಿಡ (ದಕ್ಷಿಣ ಭಾರತ), ಕಾಶಿ (ಬನಾರಸ್), ತಿರ್ಹುತ್ (ಮಿಥಿಲಾ),
ಮತ್ತು ಉತ್ಕಲಾ (ಒರಿಸ್ಸ)ಗಳಂಥ ದೇಶದ ಇತರ ಭಾಗಗಳಲ್ಲಿಯೂ ಇದ್ದವು. ನಾದಿಯಾ 'ಆ ಪ್ರಾಂತದ ಆಕ್ಸ್ಫರ್ಡ್
ಆಗಿತ್ತು" ಎಂದು ಒಬ್ಬ ಲೇಖಕ 1782ರಲ್ಲಿ ವರ್ಣಿಸಿದ್ದಾನೆ.
1787ರಲ್ಲಿ "ಬ್ರಾಹ್ಮಣರ ಒಂದು ಪ್ರಾಚೀನ
ವಿಶ್ವವಿದ್ಯಾನಿಲಯದ (ನಾದಿಯಾ) ಸಮೀಪ ಪ್ರತಿವರ್ಷವೂ ಸುಮಾರು ಮೂರು ತಿಂಗಳ ಕಾಲವನ್ನು ಕಳೆದುದರ ಹಾಗೂ
ಅಲ್ಲಿನ ಜನರೊಡನೆ ನಿರರ್ಗಳವಾಗಿ ಮಾತನಾಡಲು ತಾನು ಪ್ರಾರಂಭಿಸಿದುದರ ಬಗ್ಗೆ ಸರ್ ವಿಲಿಯಮ್ ಜೋನ್ಸ್
ಸಂತೋಷವನ್ನು ವ್ಯಕ್ತಪಡಿಸಿರುತ್ತಾನೆ.
17ನೆಯ ಶತಮಾನದಲ್ಲಿ ಬನಾರಸ್ "ಭಾರತದ ಅಥೆನ್ಸ್”
ಆಗಿತ್ತೆಂದೂ, ಭಾರತದಲ್ಲಿ ಸಂಸ್ಕೃತ ಕಲಿಕೆಯ ಕೇಂದ್ರವಾಗಿ ಅಗ್ರಸ್ಥಾನವನ್ನು ಹೊಂದಿತ್ತೆಂದೂ ಬೆರ್ನಿಯರ್
ವರ್ಣಿಸಿದ್ದಾನೆ. ಹದಿನೆಂಟನೆಯ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ ಕೆಲವು ಯೂರೋಪಿಯನ್ನರು ಬನಾರಸ್ನಲ್ಲಿ
ಸಿಗುತ್ತಿದ್ದ ಸಂಸ್ಕೃತ ಶಿಕ್ಷಣದ ಉಚ್ಚ ಗುಣಮಟ್ಟದ ಬಗ್ಗೆ ತುಂಬ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದರು
ಹಾಗೂ ಅಲ್ಲಿ ಜೈಪುರದ ರಾಜನಾದ ಎರಡನೆಯ ಜಯಸಿಂಗನು ನಿರ್ಮಿಸಿದ್ದ ಖಗೋಳ ವಿಜ್ಞಾನ ವೀಕ್ಷಣಾಲಯದಿಂದ
ಕೂಡ ಅವರು ಪ್ರಭಾವಿತರಾಗಿದ್ದರು. ಭಾರತದಲ್ಲಿ ಉನ್ನತ ಸಂಸ್ಕೃತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ,
ಫೋರ್ಟ್ಸ್ ಹೀಗೆ ಬರೆದಿದ್ದಾನೆ: "ಹಿಂದೂಸ್ಥಾನದ ಬನಾರಸ್ ಮತ್ತು ಇತರ ಭಾಗಗಳಲ್ಲಿರುವ ಹಿಂದೂ
ಕಾಲೇಜುಗಳನ್ನೂ ಬ್ರಾಹ್ಮಣ ಪಾಠಶಾಲೆಗಳನ್ನೂ ನೋಡಿ ನಮಗೆ ಸಂತೋಷವಾಗಿದೆ; ಅವು ಉಪಯುಕ್ತ ಸಂಸ್ಥೆಗಳಾಗಿವೆ;
ಆದರೆ ಅವುಗಳ ಉಪಯೋಗವು ಕೆಲವು ಜಾತಿಗಳು ಹಾಗೂ ಪಂಥಗಳಿಗಷ್ಟೇ ಸೀಮಿತ. ಹಿಂದೂ ಶಿಕ್ಷಣಸಂಸ್ಥೆಗಳು ಸಾಹಿತ್ಯ,
ವೈದ್ಯ ಮತ್ತು ವಿಜ್ಞಾನಗಳಿಗೆ ಪೋಷಣೆ ನೀಡುತ್ತಿದ್ದು, ಅವುಗಳನ್ನು ಹಿಂದೂಗಳಿಗೆ ಅತ್ಯಂತ ಆವಶ್ಯಕವಾದುದೆಂದು
ಪರಿಗಣಿಸಬಹುದಾಗಿದೆ'.
ಮುಸ್ಲಿಮ್ ದೊರೆಗಳು ಹಾಗೂ ಗಣ್ಯಕುಲೀನರು ನೀಡಿದ ಪೋಷಣೆಯಿಂದಾಗಿ, ಆಗ ಪರ್ಷಿಯನ್ ಶಿಕ್ಷಣವೂ
ಪ್ರವರ್ಧಮಾನ ಸ್ಥಿತಿಯಲ್ಲಿತ್ತು. ಮುಸ್ಲಿಮ್ ಜನರ ದೃಷ್ಟಿಯಲ್ಲಿ, ಪರ್ಷಿಯನ್ ಭಾಷೆಯು ಉನ್ನತ ಶಿಕ್ಷಣದ
ಪ್ರಮುಖ ಮಾಧ್ಯಮವಾಗಿತ್ತು, ಅನೇಕ ವರ್ಷಗಳ ಕಾಲ ಅದು ಅಧಿಕೃತ ಭಾಷೆಯಾಗಿ ಪಡೆದ ಮಹತ್ವದ ಹಿನ್ನೆಲೆಯಲ್ಲಿ
ಪರ್ಷಿಯನ್ ಭಾಷಾಜ್ಞಾನದ ಪ್ರಾಯೋಗಿಕ ಆವಶ್ಯಕತೆಯನ್ನು ಅರಿತ ಹಿಂದೂಗಳೂ ಆ ಭಾಷೆಯನ್ನು ಕಲಿಯುತ್ತಿದ್ದರು.
ಆ ಕಾಲದ ಹಲವು ಪರ್ಷಿಯನ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿದ್ದರು. ಪಾಟ್ನಾದ ಆಜಿಮಾಬಾದ್ ಎಂಬುದು
ಬಂಗಾಳ ಹಾಗೂ ಬಿಹಾರಗಳಲ್ಲಿನ ಪ್ರಮುಖ ಪರ್ಷಿಯನ್ ಶಿಕ್ಷಣ ಕೇಂದ್ರವಾಗಿತ್ತು. ಹದಿನೆಂಟನೆಯ ಶತಮಾನದ
ಮಧ್ಯಭಾಗದಲ್ಲಿ, ಪರ್ಷಿಯನ್ ಭಾಷಾ ಪ್ರಭುತ್ವ ಪಡೆದಿದ್ದ ಕೆಲವು ವಿದ್ವಾಂಸರು ಇರಾನಿನಿಂದ ಭಾರತಕ್ಕೆ
ಬಂದು ನೆಲೆಸಿ, ಭಾರತದ ಕೆಲವು ಸ್ಥಳಗಳಲ್ಲಿ ಅರಾಬಿಕ್ ಹಾಗೂ ಪರ್ಷಿಯನ್ ಉನ್ನತ ಶಿಕ್ಷಣ ನೀಡುವ 'ಮದರಸಾ'ಗಳನ್ನು
ನಿರ್ವಹಿಸಿದರು.
ಅ. ಪ್ರಾಥಮಿಕ ಶಿಕ್ಷಣ:- ಪ್ರಾಥಮಿಕ ಶಿಕ್ಷಣವು ಎಲ್ಲೆಡೆ ಪಸರಿಸಿತ್ತು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿದ್ದವು. ಸಮಾಜದ ಎಲ್ಲ ಸ್ತರಗಳಲ್ಲಿಯೂ
ಪ್ರಾಥಮಿಕ ಶಿಕ್ಷಣಕ್ಕೆ ಪ್ರೋತ್ಸಾಹವಿತ್ತು. ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಬಂಗಾಳಕ್ಕೆ ಬಂದ
ಎಡ್ವರ್ಡ್ ಈವ್, ಈ ಪ್ರಾಂತವನ್ನು ಕುರಿತು ಹೀಗೆ ಬರೆದಿದ್ದಾನೆ : "ಮಕ್ಕಳಿಗೆ ಶಿಕ್ಷಣ ನೀಡುವ
ಅನೇಕ ಶಾಲೆಗಳು ಇಲ್ಲಿವೆ” ಕೆಲಕಾಲದ ಬಳಿಕ ಬಂಗಾಳಕ್ಕೆ ಆಗಮಿಸಿದ ಕ್ರಾಫರ್ಡ್ ಕೂಡ "ಎಲ್ಲ ನಗರಗಳು
ಮತ್ತು ಪ್ರಮುಖ ಗ್ರಾಮಗಳಲ್ಲಿ ಶಾಲೆಗಳಿದ್ದವು'' ಎಂದು ಬರೆದಿದ್ದಾನೆ. ಮಧ್ಯ ಭಾರತದ ಬಗ್ಗೆ, 19ನೆಯ
ಶತಮಾನದ ಪ್ರಾರಂಭದಲ್ಲಿ ಮಾಲ್ಕಮ್ ಹೀಗೆ ಬರೆದಿದ್ದಾನೆ: ಈ ದೇಶದಲ್ಲಿ ಸರ್ಕಾರದ ಆಶ್ರಯ ಅಥವಾ ಬೆಂಬಲ
ಪಡೆದಿರುವ ಒಂದೇ ಒಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಯಿಲ್ಲವಾದರೂ ನಗರಗಳು ಹಾಗೂ ಗ್ರಾಮಗಳಲ್ಲಿ, ಅತ್ಯಧಿಕ
ಸಂಖ್ಯೆಯ ಖಾಸಗಿ ಶಾಲೆಗಳಿದ್ದವು”. ಅವನು ಅಂದಾಜು ಮಾಡಿದಂತೆ, ನೂರಕ್ಕಿಂತ ಹೆಚ್ಚು ಮನೆಗಳಿದ್ದ ಪ್ರತಿಯೊಂದು
ಗ್ರಾಮದಲ್ಲಿಯೂ ಒಬ್ಬ ಶಾಲಾ ಶಿಕ್ಷಕನಿದ್ದ; ಅವನು “ಬನಿಯಾ ಅಥವಾ ಅಂಗಡಿ ಮಾಲೀಕರ ಮಕ್ಕಳಿಗೂ ಆಯ್ಕೆ
ಮಾಡಲಾದ ಕೃಷಿಕರಂಥವರ ಮಕ್ಕಳಿಗೂ" ಬೋಧಿಸುತ್ತಿದ್ದ. ಬ್ರಿಟಿಷರು ಪೇಶ್ವೆಗಳಿಂದ ಜಯಿಸಿದ ಪ್ರಾಂತಗಳಲ್ಲಿನ
ಶಾಲೆಗಳ ಬಗ್ಗೆ
ಎಲ್ವಿನ್ಸ್ಟನ್ ಈ ಕೆಳಗಿನಂತೆ ವರದಿ ಮಾಡಿದ್ದಾನೆ.
"ಎಲ್ಲ ಪಟ್ಟಣಗಳಲ್ಲಿ ಹಾಗೂ ಅನೇಕ ಗ್ರಾಮಗಳಲ್ಲಿ ಆಗಲೇ ಶಾಲೆಗಳಿದ್ದವು; ಆದರೆ ವಿದ್ಯೆಯು ಬ್ರಾಹ್ಮಣರು,
ಬನಿಯಾಗಳು ಮತ್ತು ಲೆಕ್ಕ ಇಲಾಖೆಗಳಲ್ಲಿ ದುಡಿಯಬೇಕಾದ ಕೃಷಿಕರಂತಹ ಇತರ ಕೆಲವು ವರ್ಗಗಳಿಗಷ್ಟೇ ಸೀಮಿತವಾಗಿತ್ತು".
ಫೋರ್ಟ್ಸ್ ಗಮನಿಸಿದಂತೆ, ಅಲ್ಲಿ "ಎಲ್ಲ ಪಟ್ಟಣಗಳಲ್ಲಿಯೂ ಇತರ ಹುಡುಗರ ಶಿಕ್ಷಣಕ್ಕಾಗಿ ಅನೇಕ
ಶಾಲೆಗಳಿದ್ದವು; ಈ ಶಾಲೆಗಳು ಸಾಮಾನ್ಯವಾಗಿ ಮನೆಗಳ ನೆರಳು ಬೀಳುವ ತೆರೆದ ಸ್ಥಳಗಳಲ್ಲಿ ನಡೆಯುತ್ತಿದ್ದವು.
ವಿದ್ಯಾರ್ಥಿಗಳು ಚಾಪೆಗಳು ಅಥವಾ ಸಗಣಿಯಿಂದ ಸಾರಿಸಲಾದ ನೆಲದ ಮೇಲೆ ಕುಳಿತು ಕಲಿಯುತ್ತಿದ್ದರು. ಓದುವುದು,
ಬರೆಯುವುದು ಹಾಗೂ ಗಣಿತಗಳಲ್ಲದೆ, ಆಯಾ ಜಾತಿಯವರು ಅನುಸರಿಸುವ ಧರ್ಮಗಳ ಬಗ್ಗೆ ಕೂಡ ಅಲ್ಲಿ ಬೋಧನೆ
ನಡೆಯುತ್ತಿತ್ತು”. ಪ್ರತಿಯೊಂದು ಮಸೀದಿಗೂ ಹೊಂದಿಕೊಂಡಂತೆ, ಒಂದೊಂದು ಪರ್ಷಿಯನ್ ಶಾಲೆಯಿರುತ್ತಿತ್ತು.
ಇಂತಹ ಶಾಲೆಗಳು ಇತರ ಸ್ಥಳಗಳಲ್ಲಿಯೂ ನಡೆಯುತ್ತಿದ್ದವು. ಭಾರತದ ವಿವಿಧ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣದ ಸಾಮಾನ್ಯ
ಗುಣಲಕ್ಷಣಗಳು ಒಂದೇ ರೀತಿಯಲ್ಲಿದ್ದವು.
ಆ. ಶಿಕ್ಷಕರ ನೇಮಕ:- ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಅಧ್ಯಾಪಕರನ್ನು
ನೇಮಕಮಾಡಿಕೊಳ್ಳಲಾಗುತ್ತಿತ್ತು. ಬಂಗಾಳದ ಇಂಥ ಕೆಲವು ಶಾಲೆಗಳಲ್ಲಿ ದಲಿತವರ್ಗದವರೆಂದು ಕರೆಯಲಾದವರು
ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಕೆಲವು ಸ್ಥಳಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೋಧಿಸುವ
ಮುಸ್ಲಿಮ್ ಶಿಕ್ಷಕರೂ ಇದ್ದರು. ಜಾತಿ ಅಥವಾ ಮತಗಳಿಗೆ ವಿಶೇಷ ಗಮನ ನೀಡದೆ ವಿದ್ಯಾರ್ಥಿಗಳನ್ನು ಶಾಲೆಗೆ
ಸೇರಿಸಿಕೊಳ್ಳಲಾಗುತ್ತಿತ್ತು
ಇ. ಪಠ್ಯಕ್ರಮ:- ಗ್ರಾಮೀಣ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ
ನಾಲ್ಕು ಅನುಕ್ರಮ ಹಂತಗಳಲ್ಲಿ - ನೆಲದ ಮೇಲೆ, ತಾಡಪತ್ರದ ಮೇಲೆ, ಬಾಳೆ ಎಲೆಗಳ ಮೇಲೆ ಹಾಗೂ ಕಾಗದದ
ಮೇಲೆ - ಬರೆಯುವುದನ್ನು ಕಲಿಸಲಾಗುತ್ತಿತ್ತು. "ಉತ್ಕೃಷ್ಟ ಲೇಖನ ಕೌಶಲವನ್ನು ಮಹಾ ಸಾಧನೆಯೆಂದೇ"
ಪರಿಗಣಿಸಲಾಗಿತ್ತು. ಅವರು (ವ್ಯವಸಾಯಿಕ ಅಥವಾ ವಾಣಿಜ್ಯ ಸಂಬಂಧವಾದ) ಗಣಿತ ಹಾಗೂ ಲೆಕ್ಕ ಬರವಣಿಗೆಗಳನ್ನೂ
ಭೌತವಿಜ್ಞಾನ ಮತ್ತು ಪ್ರಕೃತಿ ವಿಜ್ಞಾನಗಳ ಕೆಲವು ಮೊದಲ ಪಾಠಗಳನ್ನೂ ಕಲಿಯುತ್ತಿದ್ದರು. ಹೀಗೆ ಸಾಮಾನ್ಯ
ಜೀವನಕ್ಕೆ ಅಗತ್ಯವಾದ ವಿಷಯಗಳ ಕೆಲಮಟ್ಟಿನ ಪರಿಚಯವನ್ನು ಅವರು ಮಾಡಿಕೊಳ್ಳುತ್ತಿದ್ದರು. ಜೀವನದ ಉನ್ನತ
ಮೌಲ್ಯಗಳನ್ನೂ ಅವರಿಗೆ ಬೋಧಿಸಲಾಗುತ್ತಿತ್ತು.
2.
ಸಾಮಾಜಿಕ ಜೀವನ:-
ದೇಶದ ಸಾಮಾನ್ಯ ಜೀವನ ಪರಿಸ್ಥಿತಿಗಳ ಮೇಲೆ ಪರಿಣಾಮ
ಬೀರುತ್ತಿದ್ದ ಅರಾಜಕತೆ ಹಾಗೂ ಗೊಂದಲಗಳು ಹದಿನೆಂಟನೆಯ
ಶತಮಾನದಲ್ಲಿ ಇದ್ದಾಗ್ಯೂ ಭಾರತದಲ್ಲಿನ ಸಮಾಜವು ಹಲವು ಸಾಂಪ್ರದಾಯಿಕ ಲಕ್ಷಣಗಳನ್ನು ಉಳಿಸಿಕೊಂಡು ಬಂದಿತ್ತು.
ಹೊಸ ಪರಿಸರದಲ್ಲಿ ಕೆಲವು ಬದಲಾವಣೆಗಳು ಮಾತ್ರ ಉಂಟಾಗಿದ್ದವು. ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ
ಅಧಿಕಾರಿಗಳು ಮತ್ತು ಸಹಾಯಕರಿಗೆ ನೀಡಿದ Notes of Instructions ನಲ್ಲಿ ಮಾಲ್ಕಮ್ ಎಂಬ ಬ್ರಿಟಿಷ್
ಅಧಿಕಾರಿ ಹೀಗೆ ಹೇಳಿದ್ದಾನೆ: "ಬದಲಾವಣೆಗಳು ಉಂಟಾಗುತ್ತಿರುವ ಹಾಗೂ ಭಾರತದಲ್ಲಿ ದಬ್ಬಾಳಿಕೆಯ
ರಾಜ್ಯಭಾರ ನಡೆಯುತ್ತಿರುವ ಅವಧಿಯಲ್ಲಿ ಕೂಡ, ದೇಶದ ಅತ್ಯಧಿಕ ಸಂಖ್ಯೆಯ ಜನರು ಮೌಲ್ಯಗಳನ್ನು ಮತ್ತು
ಉತ್ತಮ ಗುಣ-ಸ್ವಭಾವಗಳನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂಥ ಇನ್ನೊಂದು ನಿದರ್ಶನವನ್ನು ನಾನು ತಿಳಿದಿಲ್ಲ.
ಕಳ್ಳತನ, ಕುಡಿತ ಮತ್ತು ಹಿಂಸಾಚಾರಗಳಂತಹ ಸಾಮಾನ್ಯ ದುಶ್ಚಟಗಳು ಅವರಲ್ಲಿಲ್ಲ. ಅವರು ಕುಟುಂಬ ಹಾಗೂ
ರಕ್ತಸಂಬಂಧಗಳ ಎಲ್ಲ ಅಮೂಲ್ಯ ಸಂಬಂಧಗಳನ್ನೂ ಉಳಿಸಿಕೊಂಡು ಬಂದಿದ್ದಾರೆ.
ಅ. ಜಾತಿ ಪದ್ಧತಿಯು ಹಿಂದೂ
ಸಮಾಜದ ಅತ್ಯಂತ ಗಮನಾರ್ಹವಾದ ಪ್ರಧಾನ ಲಕ್ಷಣವಾಗಿತ್ತು. ಜಾತಿಗೆ ಸಂಬಂಧಿಸಿದ ನಿಯಮಗಳನ್ನು ಮದುವೆ
ಮತ್ತು ಆಹಾರಕ್ರಮವೇ ಮೊದಲಾದ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಜಾತಿ ನಿಯಮಗಳು
ವಿವಿಧ ದೋಷಗಳನ್ನೂ ಹೊಂದಿದ್ದವು. ಅಂದರೆ ಇದು ವೃತ್ತಿಯು ವಂಶಪಾರಂಪರ್ಯವಾಗಿ ಮುಂದುವರಿಯಲು ಸಹಾಯಕವಾಗಿತ್ತು.
ಆದರೆ ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಭಾರತದಲ್ಲಿ ಪ್ರಾರಂಭವಾಗ ತೊಡಗಿದ ಆರ್ಥಿಕ ಹಾಗೂ ಆಡಳಿತಾತ್ಮಕ
ಬದಲಾವಣೆಗಳಿಂದಾಗಿ, ಜಾತಿ ಆಧಾರಿತವಾದ ವೃತ್ತೀಯ ಪರಿಣತಿಗಳಲ್ಲಿ ಕೆಲಮಟ್ಟಿನ ಬದಲಾವಣೆಗಳು ಕಂಡುಬಂದವು.
ಜಾತಿ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದರ
ಮೇಲೆ ನಿಗಾವಹಿಸುವ ಕೆಲವು ಜಾತಿ ಸಂಪ್ರದಾಯಗಳೂ ಇದ್ದವು. ಜಾತಿಗೆ ಸಂಬಂಧಿಸಿದ ವಿವಾದಗಳನ್ನು ಜಾತಿ
ಸಮಿತಿಗಳ ಅಥವಾ ಜಾತಿಯ ಮುಖ್ಯಸ್ಥರು ತೀರ್ಮಾನಿಸುತ್ತಿದ್ದರು. ಮರಣದಂಡನೆಯೊಂದನ್ನು ಬಿಟ್ಟು ಉಳಿದಂತೆ
ದಂಡ, ಪಾಪನಿವೇದನೆ (ಪ್ರಾಯಶ್ಚಿತ್ತ), ಬಹಿಷ್ಕಾರಗಳೇ ಮುಂತಾದ ವಿವಿಧ ಶಿಕ್ಷೆಗಳನ್ನೂ ಜಾತಿ ನಿಯಮಗಳನ್ನು
ಮೀರಿ ನಡೆದ ಅಪರಾಧಿಗಳಿಗೆ ವಿಧಿಸಲಾಗುತ್ತಿತ್ತು.
ಇ. ಮಹಿಳೆಯರ ಸ್ಥಾನ-ಮಾನಗಳು:- ಮಲಬಾರ್ ಬಿಟ್ಟು ಉಳಿದಂತೆ, ಕುಟುಂಬ ಪದ್ಧತಿಯು ಮುಖ್ಯವಾಗಿ
ಪಿತೃಪ್ರಧಾನವಾಗಿತ್ತು. ಆದುದರಿಂದ ಕುಟುಂಬದ ಅತ್ಯಂತ ಹಿರಿಯ ಸದಸ್ಯನೇ ಅದರ ಮುಖ್ಯಸ್ಥನಾಗಿರುತ್ತಿದ್ದ
ಹಾಗೂ ಮಹಿಳೆಯರು ಸಾಮಾನ್ಯವಾಗಿ ಮುಖ್ಯಸ್ಥನ ಆಜ್ಞೆಗಳನ್ನು ಪಾಲಿಸುತ್ತಿದ್ದರು. ಆದರೆ ಕೂಡುಕುಟುಂಬದಲ್ಲಿ
ಮನೆಯ ಯಜಮಾನಿಗೆ ಗೌರವಾರ್ಹ ಸ್ಥಾನ ಇರುತ್ತಿತ್ತು; ಮನೆಯ ಆಗುಹೋಗುಗಳನ್ನು ನಿಯಂತ್ರಿಸುವ ಅಧಿಕಾರ
ಅವಳಿಗಿತ್ತು. ಧರ್ಮಶ್ರದ್ಧೆ, ಭೂತದಯೆ, ವಿನಯಶೀಲತೆ ಹಾಗೂ ವಾತ್ಸಲ್ಯಗಳನ್ನು ಹಿಂದೂ ಮಡದಿಗೆ ಆವಶ್ಯಕವಾಗಿ
ಇರಬೇಕಾದ ಗುಣಗಳೆಂದು ಪರಿಗಣಿಸಲಾಗಿತ್ತು. ಫೋರ್ಟ್ಸ್, ಓರ್ಮ ಮತ್ತು ಅಬ್ಬೆ ಡುಬಾಯಿಸ್ರಂತಹ ಕೆಲವು
ಸಮಕಾಲೀನ ಯೂರೋಪಿಯನ್ ಲೇಖಕರು, ಹಿಂದೂ ಮಹಿಳೆಯರ ಈ ಗುಣಗಳನ್ನು ತುಂಬ ಶ್ಲಾಘಿಸಿದ್ದಾರೆ. "ಪರಪುರುಷರ
ಸಂಗದಿಂದ ದೂರವಾಗಿರುವ, ಹಾಗೂ ಪರರ ಗಮನವನ್ನು ಆಕರ್ಷಿಸಬೇಕೆಂದು ಭಾವನೆಯನ್ನು ಹೊಂದಿರದ ಹಿಂದೂ ಮಹಿಳೆಯರು
ತಮ್ಮ ಅಮಾಯಕತೆಯಿಂದಾಗಿಯೇ ಅತ್ಯಂತ ಸುಂದರಿಯರಾಗಿದ್ದಾರೆ ಎಂಬುದು ಆ ಕಾಲದ ವಿದೇಶಿ ವಿದ್ವಾಂಸರ ಅಭಿಪ್ರಾಯವಾಗಿತ್ತು.
ಸಾಮಾನ್ಯವಾಗಿ
ಸಮಾಜದಲ್ಲಿ ಮಹಿಳೆಯರ ಬಗ್ಗೆ ಗೌರವಭಾವನೆಯಿತ್ತು. ಅಲೆಗ್ಸಾಂಡರ್
ಡೊವ್ ವಿಶೇಷವಾಗಿ ಗಮನಿಸಿದಂತೆ, "ಭಾರತದಲ್ಲಿ ಮಹಿಳೆಯರಿಗೆ ಎಂತಹ ಪೂಜ್ಯ ಸ್ಥಾನವಿತ್ತೆಂದರೆ,
ಹತ್ಯೆ ಹಾಗೂ ಹಿಂಸೆಗಳ ನಡುವೆ ಸೈನಿಕರು ಕೂಡ ಅವರನ್ನು
ಪೀಡಿಸದೆ ಬಿಟ್ಟು ಬಿಡುತ್ತಿದ್ದರು. ಮಹಿಳೆಯರಿರುವ ಅಂತಃಪುರ ಪವಿತ್ರವೆನಿಸಿತ್ತು. ಅಲ್ಲಿ ವಿಜಯೋತ್ಸವಕ್ಕೆ
ಸಂಬಂಧಿಸಿದ ಯಾವ ಸ್ವೇಚ್ಚಾಚಾರಗಳಿಗೂ ಆಸ್ಪದವಿರಲಿಲ್ಲ, ಗಂಡನ ಕೊಲೆಯ ರಕ್ತದಿಂದ ಆಚ್ಛಾದಿತರಾದ ಕೊಲೆಪಾತಕರು,
ಅವನ ಪತ್ನಿಯನ್ನು ಗೌರವದಿಂದಲೇ ಕಾಣುತ್ತಿದ್ದರು ". ಮಹಿಳೆಯರ ನಿತ್ಯಜೀವನಕ್ಕೆ ಸಂಬಂಧಿಸಿದಂತೆ
ಡುಬಾಯಿಸ್ ಹೀಗೆ ಬರೆಯುತ್ತಾನೆ: "ಅತ್ಯಂತ ಜನನಿಬಿಡವಾದ ಸ್ಥಳಗಳಲ್ಲಿ ಕೂಡ ಹಿಂದೂ ಮಹಿಳೆಯರು
ಒಂಟಿಯಾಗಿ ಎಲ್ಲಿಗಾದರೂ ಹೋಗಬಹುದಾಗಿತ್ತು. ಸೋಮಾರಿ
ಸ್ವೇಚ್ಛಾಚಾರಿಗಳ ಅಸಂಬದ್ಧ ತಮಾಷೆ ಅಥವಾ ನೋಟಗಳನ್ನು
ಎದುರಿಸುವ ಭಯ ಅವರಿಗಿರಲಿಲ್ಲ. ಮಹಿಳೆಯರೇ ಇರುವ ಮನೆಯು ಪವಿತ್ರ ಸ್ಥಳದಂತೆ ಇದ್ದು, ಸ್ವೇಚ್ಛಾವರ್ತನೆಯವರು ಕೂಡ ಅಲ್ಲಿಗೆ ಬರಲು ಹಿಂಜರಿಯುತ್ತಿದ್ದರು".
ಆದರೆ ಪರದಾ ಅಥವಾ ಮಹಿಳೆಯರನ್ನು
ಮನೆಗಳಲ್ಲಿಯೇ ದೂರವಾಗಿ ಇರಿಸುವ ಪದ್ಧತಿಯು ಹಿಂದೂ ಮತ್ತು ಮುಸ್ಲಿಮ್ ಕುಟುಂಬಗಳಲ್ಲಿ ಆಚರಣೆಯಲ್ಲಿತ್ತು.
ಮಲಬಾರಿನ ಮಾಪಿಳ್ಳೆಗಳಲ್ಲಿ ಕೂಡ ಈ ಪದ್ಧತಿ ಆಚರಣೆಯಲ್ಲಿತ್ತು. ತಮ್ಮ ಜೀವನೋಪಾಯಕ್ಕಾಗಿ ಕೆಲಸ ಮಾಡಲು
ಹೊರಗೆ ಹೋಗಲೇಬೇಕಾಗಿರುವ ಬಡ ಕುಟುಂಬಗಳ ಮಹಿಳೆಯರು ಈ ಪದ್ಧತಿಯನ್ನು ಆಚರಿಸಲು ಅಸಮರ್ಥರಾಗಿದ್ದರು.
ಧಾರ್ಮಿಕ ಉದ್ದೇಶಗಳಿಂದ ಬ್ರಹ್ಮಚರ್ಯೆಯನ್ನು ಆಚರಿಸುವವರನ್ನು
ಬಿಟ್ಟು, ಮದುವೆಯು ಸಾರ್ವತ್ರಿಕ ಸಾಮಾಜಿಕ ಆಚರಣೆಯಾಗಿತ್ತು. ತಮ್ಮ ಗಂಡು ಹಾಗೂ ಹೆಣ್ಣುಮಕ್ಕಳ ಮದುವೆಗಳನ್ನು
ಏರ್ಪಡಿಸುವುದು ತಂದೆತಾಯಿಗಳ ಕರ್ತವ್ಯವೆಂದು ಪರಿಗಣಿಸಲಾಗಿತ್ತು. ಹಿಂದೂ ಸಮಾಜದಲ್ಲಿ ಮದುವೆಯೆಂಬುದು
ಸುಖಕರವಾದ, ವೈವಾಹಿಕ ಜೀವನಕ್ಕೆ ಅಗತ್ಯವಾಗಿರುವ ಸುದೃಢವಾದ ಹಾಗೂ ಪವಿತ್ರವಾದ ಸಂಬಂಧವಾಗಿತ್ತು. ಮದುವೆ
ಐಹಿಕವಾದ ಸುಖಗಳಿಗೆ ಆವಶ್ಯಕವಾಗಿರುವ ಕರಾರುಬದ್ಧ ಸಂಬಂಧವಾಗಿರಲಿಲ್ಲ. ದೇವರುಗಳಿಗೆ ಪೂಜೆ ಮತ್ತು
ಪ್ರಾರ್ಥನೆಗಳನ್ನು ಸಲ್ಲಿಸುವುದರ ಮೂಲಕ ವಿಧ್ಯುಕ್ತವಾಗಿ ಮದುವೆಯನ್ನು ಆಚರಿಸಲಾಗುತ್ತಿತ್ತು. ಹೀಗೆ ವಿಧ್ಯುಕ್ತವಾಗಿ ವಿವಾಹವಾದ ಪತ್ನಿಯನ್ನು, ವ್ಯಭಿಚಾರದ ಆರೋಪದ
ಹೊರತಾಗಿ, ಇನ್ನಾವ ಸಂದರ್ಭಗಳಲ್ಲಿಯೂ ತೊರೆಯುವಂತೆ ಇರಲಿಲ್ಲ. ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ
ಬಾಲ್ಯದಲ್ಲಿಯೇ ಮದುವೆ ಮಾಡುತ್ತಿದ್ದರು, ಆದರೆ ಅವರು ಪ್ರಾಯಕ್ಕೆ ಬರುವವರೆಗೆ ನಿಷೇಕ ಪ್ರಸ್ತವನ್ನು
ನಡೆಸುತ್ತಿರಲಿಲ್ಲ.
ಒಳ್ಳೆಯ ಹೆಂಗಸರು ಮನೆಯಲ್ಲಿ ಆಡಳಿತ ನಡೆಸುವ ದೇವದೂತರಂತೆ"
ಸೇವೆ ಸಲ್ಲಿಸುತ್ತಿದ್ದರು. ಆದರೆ ಅಗತ್ಯವೆನಿಸಿದಾಗ ಅವರಲ್ಲಿ ಕೆಲವರು 'ಜಗತ್ತಿನ ವಿಸ್ತಾರವಾದ ಕ್ಷೇತ್ರದಲ್ಲಿ
" ಹಾಗೂ "ಜೀವನದ ರಣರಂಗದಲ್ಲಿ ಗಂಡಸರ ಸಮೀಪದಲ್ಲಿ ನಿಲ್ಲುತ್ತಿದ್ದರು. ಹದಿನೆಂಟನೆಯ ಶತಮಾನದಲ್ಲಿನ
ಮಹಾರಾಷ್ಟ್ರದ ಆಗುಹೋಗುಗಳ ಬಗ್ಗೆ ಅಪಾರ ಅನುಭವ ಹೊಂದಿದ್ದ ಮಾಲ್ಕಮ್, ಅಲ್ಲಿನ ಮಹಿಳೆಯರ ಬಗ್ಗೆ ಹೀಗೆ
ಬರೆದಿದ್ದಾನೆ: "ಬ್ರಾಹ್ಮಣ ಹಾಗೂ ಶೂದ್ರ ಮರಾಠಾ ಇವೆರಡೂ ಕುಟುಂಬಗಳ ಮಹಿಳೆಯರು, ಸಾಮಾನ್ಯವಾಗಿ
ಹೇಳುವುದಾದರೆ, ತಮ್ಮ ಗಂಡಂದಿರು, ಅರಸರು ಅಥವಾ ನಾಯಕರಾಗಿರುವಾಗ, ತುಂಬ ಪ್ರಭಾವಿಗಳಾಗಿರುತ್ತಿದ್ದರು;
ಅವರು ಜನರ ಮೇಲೆ ತಮಗಿರುವ ಅಧಿಕಾರದಿಂದಾಗಿ, ಜನರೊಡನೆ ಬೆರೆಯುತ್ತಿದ್ದರು, ಕೆಲವು ಸಲ ... ರಾಜ್ಯದ
ಆಗುಹೋಗುಗಳಲ್ಲಿ ಕೂಡ ಖಾಸಗಿಯಾಗಿ ಭಾಗವಹಿಸುತ್ತಿದ್ದರು. ಮೇಲ್ದರ್ಜೆಯ ಗಂಡಸರನ್ನು ಮದುವೆಯಾಗಿದ್ದ
ಪಕ್ಷದಲ್ಲಿ, ಅವರು ಸಾಮಾನ್ಯವಾಗಿ ತಮ್ಮದೇ ಆದ ವಿಶಿಷ್ಟ ಸ್ಥಾನಮಾನಗಳನ್ನು ಹೊಂದಿರುತ್ತಿದ್ದರು; ತಾವು
ಬಯಸುವ ಸ್ವಾತಂತ್ರ್ಯ ಅವರಿಗಿರುತ್ತಿತ್ತು. ಮದುವೆ ಮೊದಲಾದ ಸಮಾರಂಭಗಳಲ್ಲಿ ಮತ್ತು ಕೆಲವು ವಾರ್ಷಿಕೋತ್ಸವಗಳಲ್ಲಿ
ತಮ್ಮ ಸ್ನೇಹಿತೆಯರಿಗಾಗಿ ಭೋಜನಕೂಟಗಳನ್ನೂ ಮನೋರಂಜನಾ ಕೂಟಗಳನ್ನೂ ಏರ್ಪಡಿಸುತ್ತಿದ್ದರು”. ಹದಿನೆಂಟನೆಯ
ಶತಮಾನದಲ್ಲಿ ಮಹಿಳೆಯರು ವಹಿಸಿದ ಇಂಥ ಪಾತ್ರಗಳ ಎರಡು ಅತಿ ಪ್ರಮುಖ ನಿದರ್ಶನಗಳೆಂದರೆ ಬಂಗಾಳದ ನಾಟೋರಿನ
ರಾಣಿ ಭವಾನಿ ಹಾಗೂ 1766ರಿಂದ 1795ರವರೆಗೆ ಇಂದೋರನ್ನು ಆಳಿದ ಶ್ರೀದೇವಿ ಅಹಲ್ಯಾ ಬಾಯೀ. ಕೆಲವು ಮುಸ್ಲಿಮ್
ಮಹಿಳೆಯರು ಕೂಡ ರಾಜಕೀಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ. ಒರಿಸ್ಸದ ಗವರ್ನರ್ ಆಗಿದ್ದ ಮುರ್ಷಿದ್
ಕುಲಿಯ ಹೆಂಡತಿ ದರ್ದಾನಾ ಬೇಗಮ್, 'ಅಲಿ ವರ್ದಿ ಖಾನನು ಒರಿಸ್ಸವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ,
ಅವನೊಂದಿಗೆ ಹೋರಾಡುವಂತೆ ಆಕೆ ತನ್ನ ಗಂಡನಿಗೆ ಪ್ರಚೋದನೆ ನೀಡಿದಳು. ನವಾಬ್ ಶುಜಾ-ಉದ್-ದೀನನ ಮಡದಿ
ಜೇಬುನ್ನೀಸಾ ಆಡಳಿತ ವಿಷಯಗಳಲ್ಲಿ ಗಂಡನಿಗೆ ಸಹಾಯಮಾಡುತ್ತಿದ್ದಳು. 'ಆಲಿ ವರ್ದಿ'ಯ ಬೇಗಂ ಕೂಡ, ಆಡಳಿತ
ವಿಷಯಗಳಲ್ಲಿ ಗಂಡನಿಗೆ ಸಹಕಾರ ನೀಡುತ್ತಿದ್ದಳು ಮತ್ತು ಬಂಗಾಳದ ಮರಾಠಾ ಆಕ್ರಮಣಕಾರರ ವಿರುದ್ಧ ನಡೆದ
ಹೋರಾಟದಲ್ಲಿ ಅವನಿಗೆ ಪ್ರೋತ್ಸಾಹ ನೀಡಿದ್ದಳು. ಅವಳ ಬಗ್ಗೆ ಹಾಲ್ವೆಲ್ ಹೀಗೆ ಬರೆದಿದ್ದಾನೆ :
''ಇವಳ ಜ್ಞಾನ, ಉದಾರಹೃದಯ, ಉಪಕಾರ ಬುದ್ದಿ ಮತ್ತು ಹೊಂದಿಕೊಳ್ಳುವ ಪ್ರತಿಯೊಂದೂ ಗುಣಗಳು, ಹೆಂಗಸಾಗಿಯೂ
ಅವಳು ಹೊಂದಿದ ಗೌರವ ಹಾಗೂ ಸ್ಥಾನಮಾನಗಳಿಗೆ ಕಾರಣವಾಗಿವೆ. ರಕ್ತಪಾತದಿಂದ ಕೂಡಿದ ಹಾಗೂ ಭೀಕರವಾದ ಕ್ರಮಗಳ
ಬಗ್ಗೆ ತೀರ್ಮಾನ ಮಾಡಬೇಕಾದ ಸಂದರ್ಭವನ್ನು ಬಿಟ್ಟು ಉಳಿದಂತೆ, ಸರ್ಕಾರದ ಪ್ರತಿಯೊಂದೂ ವಿಷಯವನ್ನು
ಕುರಿತು ಅಲಿ ವರ್ದಿ ಅವಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದ.
ಆ
ಕಾಲದಲಿ ಉನ್ನತ ವರ್ಗದವರಲ್ಲಿ ಸಾಮಾನ್ಯವಾಗಿ ಬಹುಪತ್ನಿತ್ವವಿತ್ತು. ವಾರ್ಡ್ನ ಅಭಿಪ್ರಾಯದಲ್ಲಿ,
“ಒಬ್ಬ ವ್ಯಕ್ತಿ ಇಬ್ಬರು ಮಡದಿಯರನ್ನು ಹೊಂದಿರುವುದು ಮಹಾಪರಾಧ" ಎಂದು ಎಲ್ಲ ಸಾಮಾನ್ಯ ಹಿಂದೂಗಳೂ
ಭಾವಿಸುತ್ತಾರೆ. ಡುಬಾಯಸ್ ವಿಶೇಷವಾಗಿ ಗಮನಿಸಿರುವ ಹಾಗೆ "ರಾಜರು, ಸಾಮಂತರು, ರಾಜನೀತಿಜ್ಞರು
ಮತ್ತು ಇತರ ಮೇಲ್ದರ್ಜೆಯವರಲ್ಲಿ ಬಹುಪತ್ನಿತ್ವವಿತ್ತು. ಹಾಗಿದ್ದರೂ ಮೇಲ್ದರ್ಜೆಯವರಲ್ಲಿ ರೂಢಿಯಲ್ಲಿರುವ
ಬಹುಪತ್ನಿತ್ವವನ್ನು ಶಾಸನಬಾಹಿರ ಹಾಗೂ ಸಂಪ್ರದಾಯದ ಉಲ್ಲಂಘನೆಯೆಂದೂ ವಾಸ್ತವವಾಗಿ ಕೆಟ್ಟಪದ್ಧತಿಯೆಂದೂ
ಭಾವಿಸಲಾಗಿತ್ತು. ಆದರೆ ಬಂಗಾಳದಲ್ಲಿ ಕುಲೀನರೆಂದು ಭಾವಿಸಲಾಗಿರುವ ಜನರಲ್ಲಿ ಮತ್ತು ಮಿಥಿಲಾದ ಕೆಲವು
ಬ್ರಾಹ್ಮಣರಲ್ಲಿ ಬಹುಪತ್ನಿತ್ವವು ಕ್ರಮಬದ್ಧವೂ ಪ್ರಸಿದ್ಧವೂ ಆದ ಆಚರಣೆಯಾಗಿತ್ತು. ಆಧುನಿಕ ಭಾರತದಲ್ಲಿ
ಮಹಿಳೆಯರ ಹಕ್ಕುಗಳ ಬಗ್ಗೆ ನಿರ್ಭಯವಾಗಿ ಹೋರಾಡಿದ ರಾಜಾರಾಮಮೋಹನ ರಾಯ್ ಅವರು ಈ "ಭೀಕರ ಬಹುಪತ್ನಿತ್ವ
ಪದ್ಧತಿಯ ವಿರುದ್ಧವಾಗಿ ಪ್ರಬಲ ಪ್ರತಿಭಟನೆಯನ್ನು ತೋರಿಸಿದ್ದಾರೆ ಹಾಗೂ 'ಕುಲೀನ ಪದ್ದತಿ' ಮತ್ತು
ಬಹುಪತ್ನಿತ್ವ ಇವುಗಳ ವಿರುದ್ಧ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕುಲೀನ'ರಲ್ಲದವರಲ್ಲಿ ವರದಕ್ಷಿಣಾ
ಪದ್ಧತಿ ಇರಲಿಲ್ಲ, ಅದು ಕಡ್ಡಾಯವೂ ಆಗಿರಲಿಲ್ಲ. ಮಲಬಾರಿನ ತಿಯಾನ್ಗಳಲ್ಲಿ ಬಹುಪತ್ನಿತ್ವ ಪದ್ಧತಿ
ಇದ್ದುದಾಗಿ ಬುಕಾನನ್ ಬರೆದಿದ್ದಾನೆ. ನಾಯರ್ ಮಹಿಳೆಯರಿಗೆ ತಮ್ಮ ಗಂಡಂದಿರನ್ನು ಬದಲಾಯಿಸುವ ಅವಕಾಶ"
ಇದ್ದಾಗ್ಯೂ "ಅವರು ಏಕಕಾಲದಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಗಂಡಂದಿರು ಇರಲು ಅವಕಾಶಮಾಡಿಕೊಳ್ಳುತ್ತ
ಇರಲಿಲ್ಲ"
ಈ. ಗುಲಾಮ ಪದ್ಧತಿ:- ಗುಲಾಮಗಿರಿಯು ಇನ್ನೊಂದು ಸಾಮಾನ್ಯ ಸಾಮಾಜಿಕ ಕೆಡುಕಾಗಿತ್ತು.
ಮಧ್ಯಕಾಲೀನ ಅವಧಿಯಿಂದಲೂ "ಪ್ರತಿ ಗೌರವಾರ್ಹ ಮುಸ್ಲಿಮ್ ಮನೆಯಲ್ಲಿಯೂ ಗುಲಾಮರಿರುವುದು ಸಾಮಾನ್ಯವಾಗಿತ್ತು. ಹದಿನೆಂಟನೆಯ
ಶತಮಾನದಲ್ಲಿ ಗುಲಾಮಗಿರಿಯು ಭಾರತದಲ್ಲಿ ಬಹುವ್ಯಾಪಕವಾಗಿ ಚಾಲ್ತಿಯಲ್ಲಿತ್ತು. ಭಾರತದಲ್ಲಿ ಎರಡು ಬಗೆಯ
ಗುಲಾಮಗಿರಿಗಳಿದ್ದವು. ಮನವಾರ್ತೆ (ಮನೆ ಕೆಲಸ ಮಾಡುವವರು)
ಗುಲಾಮಗಿರಿ ಹಾಗೂ ಊಳಿಗಮಾನ್ಯ ಗುಲಾಮಗಿರಿ. ಎರಡನೆಯ ವಿಧದ ಗುಲಾಮಗಿರಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುವ
ಜೀತದಾಳುಗಳನ್ನು ದಣಿಗಳ ಆಸ್ತಿಯೆಂದು ಪರಿಗಣಿಸಲಾಗಿತ್ತು. ಜಮೀನು ಅಥವಾ ಭೂಮಿ ಒಬ್ಬ ದಣಿಯಿಂದ ಇನ್ನೊಬ್ಬ
ದಣಿಗೆ ವರ್ಗಾವಣೆಯಾದಾಗ ಜೀತದಾಳುಗಳ ದಣಿಗಳೂ ಬದಲಾಗುತ್ತಿದ್ದರು. ಈ ರೀತಿಯ ಗುಲಾಮಗಿರಿ ಭಾರತದ ಉತ್ತರ
ಹಾಗೂ ದಕ್ಷಿಣ ಭಾಗಗಳೆರಡರಲ್ಲಿಯೂ ಚಾಲ್ತಿಯಲ್ಲಿತ್ತು. ಮಲಬಾರಿನ ಪರಿಯಾಗಳಿಗೆ ಸಂಬಂಧಪಟ್ಟಂತೆ ಡುಬಾಯಿಸ್
ಹೀಗೆ ಬರೆದಿದ್ದಾನೆ: "ದೇಶದಲ್ಲಿ ಜನಿಸಿದ ಎಲ್ಲ ಪರಿಯಾಗಳೂ ಜೀವನವಿಡೀ ಜೀತದಾಳುಗಳಾಗಿಯೇ ಇರುತ್ತಿದ್ದರು.
ಗುಲಾಮಗಿರಿಯ ಪದ್ದತಿ ತಂದೆಯಿಂದ ಮಗನಿಗೆ ಮುಂದುವರಿಯುತ್ತಿತ್ತು. ಈ ಗುಲಾಮರು ತಮ್ಮ ಜನ್ಮಭೂಮಿಯ ಅನಿವಾರ್ಯಭಾಗವೆನಿಸಿದ್ದರು.
ಭೂಮಿಯೊಂದಿಗೆ ಅವರನ್ನೂ ಭೂಮಾಲಿಕರು ಮಾರಾಟಮಾಡಬಹುದಾಗಿತ್ತು ಹಾಗೂ ತನಗೆ ಇಚ್ಛೆ ಬಂದಾಗ ಹಾಗೂ ಇಚ್ಛೆ
ಬಂದ ರೀತಿಯಲ್ಲಿ ಅವರನ್ನು ಪರಾಧೀನ ಮಾಡಬಹುದಾಗಿತ್ತು" ಆದರೆ ಭೂಮಾಲಿಕರು ತಮ್ಮ ಗುಲಾಮರನ್ನು "ತುಂಬ ಜರೂರು
ಪ್ರಸಂಗಗಳಲ್ಲಿ ಮಾತ್ರ ಮಾರುತ್ತಿದ್ದರಲ್ಲದೆ, ಸಾಮಾನ್ಯ ಸಂದರ್ಭಗಳಲ್ಲಿ ಅಲ್ಲ. ಸ್ವತಃ ತಮ್ಮನ್ನೇ
ಗುಲಾಮರನ್ನಾಗಿ ಮಾರಾಟ ಮಾಡಲು ವ್ಯಕ್ತಿಗಳನ್ನು ಬಲವಂತಪಡಿಸಿದ ಸನ್ನಿವೇಶಗಳು, 18ನೆಯ ಶತಮಾನದ ಹಾಗೂ
ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕಾಲದ ಕೆಲವು ಗುಲಾಮಗಿರಿ ದಾಖಲೆಗಳಲ್ಲಿ ಉಲ್ಲೇಖಗೊಂಡಿವೆ. ಕ್ಷಾಮ ಹಾಗೂ ಪ್ರವಾಹಗಳೇ ಮೊದಲಾದಂತಹ ನೈಸರ್ಗಿಕ ದುರಂತಗಳಿಂದ ಉಂಟಾದ ಕಷ್ಟ-ಸಂಕಷ್ಟಗಳ
ಕಾರಣವಾಗಿ ಕೂಡ ಜನರು ತಮ್ಮನ್ನೂ ತಮ್ಮ ಮಕ್ಕಳನ್ನೂ ಗುಲಾಮರನ್ನಾಗಿ ಮಾರಿಕೊಳ್ಳುತ್ತಿದ್ದರು. ಆದರೆ
ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯವಾಗಿ ಗುಲಾಮರನ್ನು ಚೆನ್ನಾಗಿಯೇ ನಡೆಸಿಕೊಳ್ಳಲಾಗುತ್ತಿತ್ತು.
1792ರ ಜೂನ್ನಲ್ಲಿ ಕಮಿಟಿ ಆಫ್ ಸರ್ಕ್ಯುಟ್ ಗಮನಿಸಿದಂತೆ, " ನಮ್ಮ ದೇಶದಲ್ಲಿ ಗುಲಾಮಗಿರಿ
ಬೇರೆಯೇ ಆದ ರೀತಿಯಲ್ಲಿತ್ತು. ಇಲ್ಲಿ ಗುಲಾಮರನ್ನು ಅವರು ಸೇರಿರುವ ಕುಟುಂಬಗಳ ಮಕ್ಕಳಂತೆ ನೋಡಿಕೊಳ್ಳಲಾಗುತ್ತಿದೆ
ಹಾಗೂ ಕೆಲವು ಸಲ ಅವರು ತಮ್ಮ ಗುಲಾಮಗಿರಿಯಿಂದಾಗಿಯೇ ಅತ್ಯಂತ ಹೆಚ್ಚು ಸುಖಕರವಾದ ಸ್ಥಿತಿಯಲ್ಲಿ ಇರುವಂತೆ
ತೋರುತ್ತದೆ; ಅವರು ಬಯಸುವ ಸ್ವಾತಂತ್ರ್ಯವೂ ಅವರಿಗೆ ಇರುತ್ತದೆ”. ಮಾಲ್ಕಂನ ಅಭಿಪ್ರಾಯದಲ್ಲಿ ಗುಲಾಮರನ್ನು
"ಸಾಮಾನ್ಯವಾಗಿ ಮನೆಗೆಲಸದ ಆಳುಗಳಿಗಿಂತ ಹೆಚ್ಚಾಗಿ ದತ್ತು ತೆಗೆದುಕೊಂಡ ಮಕ್ಕಳಂತೆ ನಡೆಸಿಕೊಳ್ಳಲಾಗುತ್ತದೆ.
ಮೇವಾಡದಲ್ಲಿ ಗುಲಾಮರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆಂಬುದನ್ನು ಟಾಡ್ ಕೂಡ ಗಮನಿಸಿದ್ದಾನೆ.
ದಖನ್ನಿನ ಕಮಿಷನರ್ನ ಅಧಿಕಾರದ
ಕಾಲದಲ್ಲಿ ಮುದ್ರಣಗೊಂಡ, ವಿಲಿಯಮ್ ಚಾಪ್ಲಿನ್ನ ಒಂದು ವರದಿಯಲ್ಲಿ, ಭಾರತದಲ್ಲಿ ಚಾಲ್ತಿಯಲ್ಲಿದ್ದ
ಗುಲಾಮಗಿರಿಯನ್ನು ಕುರಿತ ಈ ಕೆಳಕಾಣಿಸಿದ ವರದಿಯಿರುವುದನ್ನು ನಾವು ನೋಡಬಹುದು: "ಸಂಪೂರ್ಣ ಗುಲಾಮಗಿರಿಗಿಂತ
ಹೆಚ್ಚಾಗಿ, ಇದು ಬಹಳ ಸೌಮ್ಯವಾದ ಹಾಗೂ ಸಹನೀಯವಾದ ದಾಸ್ಯವಾಗಿದೆ... ಗುಲಾಮರನ್ನು ಹಿಂದೂಗಳು ತುಂಬಾ
ತಾಳ್ಮೆಯಿಂದ ನಡೆಸಿಕೊಳ್ಳುತ್ತಾರೆ ಹಾಗೂ ಮನೆಗೆಲಸದ ಆಳುಗಳಿಗಿಂತ ಹೆಚ್ಚಾಗಿ ಕುಟುಂಬದ ಆನುವಂಶಿಕ
ಸೇವಕರಂತೆ ಪರಿಗಣಿಸುತ್ತಾರೆ. ಅವರು ಮೇಲ್ದರ್ಜೆಯ ದಣಿಗಳ ಮನೆಗಳಲ್ಲಿ ಮನೆಯವರಂತೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ.
ತಾವಿರುವ ಮನೆಗಳಲ್ಲಿ ಅವರಿಗೆ ಪ್ರೀತಿವಾತ್ಸಲ್ಯಗಳು ಸಿಗುತ್ತವೆ, ಗುಲಾಮ ಮಹಿಳೆಯರೊಂದಿಗೆ ಜಾತ್ಯಂತರ
ವಿವಾಹವಾಗುವ ಅವಕಾಶವೂ ಅವರಿಗಿರುತ್ತದೆ. ಹಲವು ಸಲ ಪುರುಷ ಗುಲಾಮರನ್ನು ಸ್ವತಂತ್ರರೆಂದು ಭಾವಿಸಲಾಗುತ್ತದೆ,
ಆದರೆ ಗುಲಾಮ ಮಹಿಳೆಯರು ಮಾತ್ರ ಸಾಮಾನ್ಯವಾಗಿ ಗುಲಾಮರಾಗಿಯೇ ಉಳಿಯುತ್ತಾರೆ. ಏನೇ ಇರಲಿ, ಗುಲಾಮ ಮಹಿಳೆಯರ
ಮದುವೆಗಳು ಬಹುಮಟ್ಟಿಗೆ ಅವರ ಬಿಡುಗಡೆಗೆ ಸರಿಸಮವಾಗಿರುತ್ತವೆ. ಏಕೆಂದರೆ ಮದುವೆಮಾಡಿಕೊಂಡ ಗುಲಾಮ
ಮಹಿಳೆಯರ ಜೀವನದ ಹೊಣೆ ಅವರನ್ನು ಮದುವೆಯಾದವರಿಗೆ ಸೇರುತ್ತದೆ. ಇದರೊಂದಿಗೆ ಹೋಲಿಸಿದಾಗ, ಯೂರೋಪಿಯನ್,
ಯುರೇಷಿಯನ್ ಮತ್ತು ಪೋರ್ಚುಗೀಸ್ ಕುಟುಂಬಗಳ, ವಿಶೇಷವಾಗಿ ಕಲ್ಕತ್ತದ, ಗುಲಾಮರ ಪರಿಸ್ಥಿತಿ ತುಂಬ ದುರ್ಭರವಾಗಿತ್ತು.
ಅವರು ವಿವಿಧ ಅಪಮಾನಗಳಿಗೆ ಮತ್ತು ಕ್ಷುಲ್ಲಕ ಅಪರಾಧಗಳನ್ನು ಮಾಡಿದ ಸಂದರ್ಭಗಳಲ್ಲಿ, ದೇಹ ದಂಡನೆಯ
ಶಿಕ್ಷೆಗೆ ಕೂಡ ಒಳಪಟ್ಟಿದ್ದರು. ಮಾನವ ಹಿತಸಾಧನಾ ಬಲಗಳ ಪ್ರಭಾವದಿಂದಾಗಿ, ಹತ್ತೊಂಬತ್ತನೆಯ ಶತಮಾನದ
ಪೂರ್ವಾರ್ಧ ಭಾಗದ ಅವಧಿಯಲ್ಲಿ ಗುಲಾಮಗಿರಿ ಪದ್ಧತಿ ರದ್ದಾಯಿತು ಹಾಗೂ 1843ರ ಭಾರತ ಕಾಯ್ದೆಯು ಗುಲಾಮಗಿರಿಗಿದ್ದ
ಶಾಸನಬದ್ದ ಮಾನ್ಯತೆಯನ್ನು ತೆಗೆದುಹಾಕಿತು.
VI. ಆರ್ಥಿಕತೆ:- 18
ನೇ ಶತಮಾನದ ಭಾರತವು ಆರ್ಥಿಕ ಪ್ರಗತಿಯನ್ನು ಸಾಧಿಸಲು ವಿಫಲವಾಗಿದ್ದು. ಏಕೆಂದರೆ, ಆಡಳಿತಗಾರರ ಅಧಿಕ ಆದಾಯದ ಬೇಡಿಕೆಗಳು, ಅಧಿಕಾರಿಗಳ ದಬ್ಬಾಳಿಕೆ, ಶ್ರೀಮಂತರು ಮತ್ತು ಜಮೀನ್ದಾರರ ದುರಾಸೆ, ಯುದ್ಧಗಳು ಮತ್ತು ದಂಗೆಗಳು 18ನೇ ಶತಮಾನದ ಮಧ್ಯಭಾಗದ
ಜನರ ಜೀವನವನ್ನು ತೀರಾ ಹೇಯವಾಗಿಸಿದ್ದವು.
ಭಾರತವು ಅಂದಿಗೆ ಆರ್ಥಿಕವಾಗಿ ವೈರುಧ್ಯಗಳ ನಾಡಾಗಿತ್ತು. ಒಂದೆಡೆ, ಐಷಾರಾಮಿ ಸೌಕರ್ಯದಲ್ಲಿ ವಾಸಿಸುವ ಶ್ರೀಮಂತ ಮತ್ತು ಶಕ್ತಿಯುತ ಗಣ್ಯರು ಇದ್ದರು
ಮತ್ತೊಂದೆಡೆ, ಹಿಂದುಳಿದ, ತುಳಿತಕ್ಕೊಳಗಾದ ಮತ್ತು ಬಡ ರೈತರು ಕನಿಷ್ಠಮಟ್ಟದ ಜೀವನ
ನಡೆಸುತ್ತಿದ್ದರು. ಅದೇನೇ ಇದ್ದರೂ, 100 ವರ್ಷಗಳ ಬ್ರಿಟಿಷ್ ಆಳ್ವಿಕೆಯ ನಂತರದ ಜೀವನಕ್ಕಿಂತ ಈ ಕಾಲದ
ಭಾರತೀಯ ಜನಸಾಮಾನ್ಯರ ಜೀವನವು ಉತ್ತಮವಾಗಿತ್ತು
ಅ. ಆರ್ಥಿಕತೆಯ ಲಕ್ಷಣಗಳು
ಶತಮಾನದ
ಆರಂಭದ ವೇಳೆಗೆ ಮೊಘಲರ ಆಳ್ವಿಕೆಯಲ್ಲಿ
ವಿದೇಶಿ ವ್ಯಾಪಾರವು ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಆದರೆ
ಕೃಷಿಯು ಜನರ ಪ್ರಾಥಮಿಕ ಆದಾಯದ ಮೂಲವಾಗಿತ್ತು. ಆದರೂ
ಆಡಳಿತಗಾರರು ನಿರಂತರವಾಗಿ
ಯುದ್ಧದಲ್ಲಿದ್ದ ಕಾರಣ, ಕೃಷಿ ಸೌಲಭ್ಯಗಳನ್ನು
ಸುಧಾರಿಸಲು ಅವರಿಗೆ ಸಮಯವಿರಲಿಲ್ಲ. ಸಿಖ್ಖರು, ಜಾಟ್ಗಳು ಮತ್ತು
ಮರಾಠರ ದಂಗೆಗಳು ಮತ್ತು ನಾದಿರ್ ಶಾ (1739) ಮತ್ತು ಅಹ್ಮದ್ ಶಾ ಅಬ್ದಾಲಿ (1761) ನಂತಹ
ವಿದೇಶಿ ಆಕ್ರಮಣಗಳು ಆರ್ಥಿಕತೆಗೆ ಹಿನ್ನಡೆಉಂಟು ಮಾಡಿದವು.
ಫ್ರಾನ್ಸ್, ಇಂಗ್ಲೆಂಡ್, ಪೋರ್ಚುಗಲ್
ಮತ್ತು ಸ್ಪೇನ್ನಂತಹ ಯುರೋಪಿಯನ್ ರಾಷ್ಟ್ರಗಳು
ಹದಿನೆಂಟನೇ ಶತಮಾನದ ವೇಳೆಗೆ ಭಾರತದೊಂದಿಗೆ ವ್ಯಾಪಾರ ಮಾಡಲು ಆಸಕ್ತಿ ಹೊಂದಿದ್ದವು. ಅವರು ದೇಶದ ರಾಜಕೀಯ
ಮತ್ತು ಆರ್ಥಿಕ ಅಸ್ಥಿರತೆಗೆ ಕೊಡುಗೆ ನೀಡಿದರೂ ಅಂತಿಮವಾಗಿ ಅದರ ಆರ್ಥಿಕತೆಯನ್ನು ನಾಶಪಡಿಸಿದರು.
ಆದಾಗ್ಯೂ, ಸುಂದರವಾದ
ಕರಕುಶಲ ವಸ್ತುಗಳ ನಾಡು ಎಂಬ ಭಾರತದ
ಖ್ಯಾತಿಯು ಆ ಕಾಲಕ್ಕೆ ಪ್ರಪಂಚದಾದ್ಯಂತ ಹರಡಿತ್ತು.
ಆ.
18 ನೇ ಶತಮಾನದಲ್ಲಿ ವ್ಯಾಪಾರ
ಭಾರತೀಯ
ಗ್ರಾಮಗಳು ಸ್ವಾವಲಂಬಿಯಾಗಿದ್ದು, ಕೆಲವೇ ವಸ್ತುಗಳನ್ನು ಮಾತ್ರ ಆಮದು
ಮಾಡಿಕೊಳ್ಳುತ್ತಿದ್ದವು. ಸಾರಿಗೆ ವ್ಯವಸ್ಥೆಯು ಉತ್ತಮವಾಗಿಲ್ಲದಿದ್ದರೂ ಮೊಘಲರು
ಆಂತರಿಕ ಮತ್ತು ವಿದೇಶಗಳೊಂದಿಗಿನ ವ್ಯಾಪಾರವನ್ನು
ಅಭಿವೃದ್ಧಿಗೊಳಿಸಿದ್ದರು. ಭಾರತವು ಅಂದಿಗೆ
ಕೆಳಗಿನ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು
ಪರ್ಷಿಯನ್
ಗಲ್ಫ್ ಪ್ರದೇಶದಿಂದ ಕಚ್ಚಾ ರೇಷ್ಮೆ, ಉಣ್ಣೆ, ಖರ್ಜೂರ, ಒಣಗಿದ ಹಣ್ಣುಗಳು ಮತ್ತು ರೋಸ್ ವಾಟರ್; ಅರೇಬಿಯಾದಿಂದ
ಕಾಫಿ, ಚಿನ್ನ, ಔಷಧಗಳು ಮತ್ತು ಜೇನುತುಪ್ಪ; ಚೀನಾದಿಂದ ಚಹಾ, ಸಕ್ಕರೆ, ಪಿಂಗಾಣಿ
ಮತ್ತು ರೇಷ್ಮೆ; ಟಿಬೆಟ್ನಿಂದ ಚಿನ್ನ, ಕಸ್ತೂರಿ
ಮತ್ತು ಉಣ್ಣೆಯ ಬಟ್ಟೆ; ಸಿಂಗಾಪುರದಿಂದ ತವರ; ಇಂಡೋನೇಷಿಯನ್ ದ್ವೀಪಗಳಿಂದ
ಮಸಾಲೆಗಳು, ಸುಗಂಧ ದ್ರವ್ಯಗಳು ಮತ್ತು ಸಕ್ಕರೆ; ಆಫ್ರಿಕಾದಿಂದ ದಂತ ಮತ್ತು ಔಷಧಗಳು;
ಮತ್ತು ಯುರೋಪ್ನಿಂದ ಉಣ್ಣೆಯ ಬಟ್ಟೆ,
ತಾಮ್ರ, ಕಬ್ಬಿಣ ಮತ್ತು ಸೀಸದಂತಹ ಲೋಹಗಳು ಮತ್ತು ಕಾಗದ.
ಭಾರತದ
ಪ್ರಮುಖ ರಫ್ತು ವಸ್ತುಗಳಾದ ಹತ್ತಿಬಟ್ಟೆಗಳು ತಮ್ಮ ಶ್ರೇಷ್ಠತೆಗಾಗಿ ಪ್ರಸಿದ್ಧವಾಗಿದ್ದು,
ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದವು. ಅಲ್ಲದೇ ರೇಷ್ಮೆ ಬಟ್ಟೆಗಳು, ಇಂಡಿಗೊ,
ಅಫೀಮು, ಅಕ್ಕಿ, ಗೋಧಿ, ಸಕ್ಕರೆ, ಮೆಣಸು ಮತ್ತು ಇತರ ಮಸಾಲೆಗಳು, ಅಮೂಲ್ಯ
ಕಲ್ಲುಗಳು ಮತ್ತು ಔಷಧಗಳನ್ನು ರಫ್ತು ಮಾಡುತ್ತಿತ್ತು.
ಪ್ರಮುಖ
ಜವಳಿ ಉದ್ಯಮ ಕೇಂದ್ರಗಳೆಂದರೆ ಬಂಗಾಳದ ಡಾಕಾ ಮತ್ತು ಮುರ್ಷಿದಾಬಾದ್;
ಬಿಹಾರದ ಪಾಟ್ನಾ;
ಗುಜರಾತ್ನ ಸೂರತ್, ಅಹಮದಾಬಾದ್
ಮತ್ತು ಬ್ರೋಚ್; ಮಧ್ಯಪ್ರದೇಶದ ಚಂದೇರಿ; ಮಹಾರಾಷ್ಟ್ರದ ಬುರ್ಹಾನ್ಪುರ; ಉತ್ತರ ಪ್ರದೇಶದ
ಜೌನ್ಪುರ್, ವಾರಣಾಸಿ, ಲಕ್ನೋ ಮತ್ತು ಆಗ್ರಾ; ಪಂಜಾಬ್ನಲ್ಲಿ ಮುಲ್ತಾನ್ ಮತ್ತು ಲಾಹೋರ್; ಆಂಧ್ರದಲ್ಲಿ ಮಚಲಿಪಟ್ಟಣಂ, ಔರಂಗಾಬಾದ್ ಮತ್ತು ವಿಶಾಖಪಟ್ಟಣಂ; ಮೈಸೂರಿನಲ್ಲಿ ಬೆಂಗಳೂರು, ಕೊಯಮತ್ತೂರು ಮತ್ತು ಮಧುರೈ. ಕಾಶ್ಮೀರವು ಉಣ್ಣೆಯ ತಯಾರಿಕೆಯ
ಕೇಂದ್ರವಾಗಿತ್ತು. ಜೊತೆಗೆ ಹಡಗು ನಿರ್ಮಾಣ
ಉದ್ಯಮವು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಬಂಗಾಳದಲ್ಲಿ ಪ್ರವರ್ಧಮಾನಕ್ಕೆ ಬಂದಿತ್ತು.
18 ನೇ
ಶತಮಾನದುದ್ದಕ್ಕೂ ನಡೆದ ನಿರಂತರ ಯುದ್ಧಗಳು ಮತ್ತು ಕಾನೂನು-ಸುವ್ಯವಸ್ಥೆಯ ಕೊರತೆಯಿಂದಾಗಿ ದೇಶದ ಆಂತರಿಕ ವ್ಯಾಪಾರವು ಕುಸಿಯಿತು ಮತ್ತು ವಿದೇಶಿ ವ್ಯಾಪಾರವು ತೊಂದರೆಗೀಡಾಯಿತು ದರೋಡೆಕೋರರ ಕಾರಣದಿಂದಾಗಿ ವ್ಯಾಪಾರಿ ಮಾರ್ಗಗಳು ಸುರಕ್ಷಿತವಾಗಿರಲಿಲ್ಲ. ಅನೇಕ ಸ್ಥಳೀಯ ಆಡಳಿತ ಕೇಂದ್ರಗಳ ಉದಯದಿಂದಾಗಿ ತೆರಿಗೆ ವಸೂಲಿ
ಮಾಡುವ ಸ್ಥಳಗಳು ಹೆಚ್ಚಾದವು. ಪ್ರತಿಯೊಬ್ಬ
ಆಡಳಿತಗಾರ ಹೆಚ್ಚಿನ ವ್ಯಾಪಾರಿ ಸುಂಕವನ್ನು ವಿಧಿಸುವ
ಮೂಲಕ ತನ್ನ ಆದಾಯವನ್ನು ಹೆಚ್ಚಿಸಲು
ಪ್ರಯತ್ನಿಸಿದನು ಐಷಾರಾಮಿ ವಸ್ತುಗಳ ಅತಿ ದೊಡ್ಡ ಬಳಕೆದಾರರಾಗಿದ್ದ
ಶ್ರೀಮಂತರ ಕುಸಿತದಿಂದಾಗಿ ಆಂತರಿಕ
ವ್ಯಾಪಾರಕ್ಕೂ ಹಾನಿಯಾಯಿತು. ಅನೇಕ ವ್ಯಾಪಾರಿ
ನಗರಗಳು ಮತ್ತು ಕೈಗಾರಿಕಾ ಕೇಂದ್ರಗಳನ್ನು ನಾಶಪಡಿಸಲಾಯಿತು. ಉದಾ: ನಾದಿರ್ ಶಾ
ದೆಹಲಿಯನ್ನು ಲೂಟಿ ಮಾಡಿದ; ಅಹ್ಮದ್ ಷಾ
ಅಬ್ದಾಲಿ ಲಾಹೋರ್, ದೆಹಲಿ ಮತ್ತು ಮಥುರಾವನ್ನು ಲೂಟಿ ಮಾಡಿದನು; ಜಾಟರು ಆಗ್ರಾವನ್ನು
ಲೂಟಿ ಮಾಡಿದರು; ಮರಾಠಾ ಮುಖ್ಯಸ್ಥರು
ಸೂರತ್, ಗುಜರಾತ್ ಮತ್ತು ಡೆಕ್ಕನ್ನ ಇತರ ನಗರಗಳನ್ನು
ಲೂಟಿ ಮಾಡಿದರು; ಸಿಖ್ಖರು ಸರ್ಹಿಂದ್
ಅನ್ನು ಲೂಟಿ ಮಾಡಿದರು.
ಹೀಗೆ ಆಂತರಿಕ ಮತ್ತು ವಿದೇಶಿ
ವ್ಯಾಪಾರದಲ್ಲಿನ ಕುಸಿತವು ದೇಶದ ಕೆಲವು ಭಾಗಗಳಲ್ಲಿನ
ಕೈಗಾರಿಕೆಗಳ ಮೇಲೆ ಗಮನಾರ್ಹ ಪರಿಣಾಮ
ಬೀರಿತು. ಆದರೂ, ಯುರೋಪಿಯನ್
ವ್ಯಾಪಾರ ಕಂಪನಿಗಳ ಚಟುವಟಿಕೆಗಳ ಪರಿಣಾಮವಾಗಿ ಯುರೋಪ್ನೊಂದಿಗೆ ಹೆಚ್ಚಿದ ವ್ಯಾಪಾರದಿಂದ ದೇಶದ ಇತರ ಭಾಗಗಳಲ್ಲಿನ
ಕೆಲವು ಕೈಗಾರಿಕೆಗಳು ಲಾಭ ಪಡೆದವು.
ಇ.
18 ನೇ ಶತಮಾನದ ಅವಧಿಯಲ್ಲಿ ಕೃಷಿ
ಭಾರತೀಯ
ಕೃಷಿಯು 18ನೇ ಶತಮಾನದಲ್ಲಿ ತಾಂತ್ರಿಕವಾಗಿ
ಹಿಂದುಳಿದಿತ್ತು. ಉತ್ಪಾದನಾ ತಂತ್ರಗಳು ಹಿಂದುಳಿದಿದ್ದವು. ಇದರಿಂದ ರೈತರು ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಮೂಲಕ
ತಮ್ಮ ತಾಂತ್ರಿಕ ಹಿನ್ನಡೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದರು. ಅಂದರೆ ಅವರು ಉತ್ಪಾದನೆಯನ್ನು
ಹೆಚ್ಚಿಸಲು ಅಧಿಕ ಶ್ರಮ ಹಾಕಬೇಕಾಗುತ್ತಿತ್ತು.
ಭೂಮಿಯ ಕೊರತೆ ಇಲ್ಲದಿದ್ದರೂ
ಕಡಿಮೆ ತಾಂತ್ರಿಕತೆಯ ಕಾರಣ ಉತ್ಪಾದನೆ ಕಡಿಮೆಯಾಗಿರುತ್ತಿತ್ತು. ರೈತರ ಉತ್ಪನ್ನವು
ಸಮಾಜದ ಬೇಡಿಕೆಗಳನ್ನು ಈಡೇರಿಸುತ್ತಿದ್ದರೂ ಅವರು ಅಸಂತುಷ್ಟರಾಗಿದ್ದರು.
ಕಾಲಾನಂತರದಲ್ಲಿ ಯುರೋಪಿಯನ್ ವ್ಯಾಪಾರ
ಶಕ್ತಿಗಳ ವಾಣಿಜ್ಯ ಉದ್ದೇಶಗಳು ಕಣ್ಮರೆಯಾಗಿ ರಾಜಕೀಯ ಮಹತ್ವಾಕಾಂಕ್ಷೆಗೆ ದಾರಿ ಮಾಡಿಕೊಟ್ಟವು ಮತ್ತು
ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ, ಭಾರತವು ಕೈಗಾರಿಕಾವಾಗಿ ತಯಾರಿಸಿದ ಸರಕುಗಳ ಬೃಹತ್ ರಫ್ತುದಾರ ದೇಶದ ಸ್ಥಾನದಿಂದ ಆಮದುದಾರ ದೇಶವಾಗಿ
ಬದಲಾಯಿತು.
VII. ವಾಣಿಜ್ಯ ನೀತಿಗಳು -ಮುಕ್ತ ವ್ಯಾಪಾರ ನೀತಿ ಮತ್ತು ಭಾರತೀಯ ವ್ಯಾಪಾರ:- ಆರಂಭದಲ್ಲಿ ಬ್ರಿಟಿಷ್ ಕಂಪೆನಿಯ ವ್ಯಾಪಾರವು ಭಾರತೀಯ ಸಿದ್ಧವಸ್ತುಗಳನ್ನು
ವಿದೇಶಗಳಲ್ಲಿ ಮಾರಾಟ ಮಾಡಿ ಲಾಭ ಗಳಿಸುವಷ್ಟಕ್ಕೆ ಸೀಮಿತವಾಗಿತ್ತು. ಇದರಿಂದ ಅದು ಭಾರತೀಯ ಸಿದ್ಧವಸ್ತುಗಳ
ಉತ್ಪಾದನೆಯನ್ನು ಪ್ರೋತ್ಸಾಹಿಸಿತು ಮತ್ತು ಭಾರತೀಯ ಉತ್ಪಾದಕರೂ ಸಹ ಆಂಗ್ಲ ಕಂಪೆನಿಯ ವ್ಯಾಪಾರವನ್ನು
ಉತ್ತೇಜಿಸಿದರು.
ಆದರೆ,
1757ರ ನಂತರ ಮೇಲಿನ ಕ್ರಮವು ಬದಲಾಯಿತು. ಏಕೆಂದರೆ ಪ್ಲಾಸಿ ಮತ್ತು ಬಕ್ಸಾರ್ ಕದನಗಳ ನಂತರ ಕಂಪೆನಿಯು
ಭಾರತದಲ್ಲಿ ರಾಜಕೀಯ ಅಧಿಕಾರ ಗಳಿಸಿತು. ಇದರಿಂದ ಅದು ರಾಜಕೀಯ ಶಕ್ತಿಯ ಬಳಕೆ ಮಾಡಿಕೊಂಡು ಭಾರತದಲ್ಲಿನ
ಅದುವರೆಗಿನ ತನ್ನ ವ್ಯಾಪಾರದ ನೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳತೊಡಗಿತು. ಇದಕ್ಕೆ ಇನ್ನೊಂದು
ಕಾರಣವೂ ಇದ್ದಿತು. ಅದೆಂದರೆ ಇದೇ ವೇಳೆಗೆ ಇಂಗ್ಲೆಂಡಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ. ಇದರಿಂದ
ಅಲ್ಲಿನ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳು ಬೇಕಾದವು. ಆದರೆ ಭಾರತದಿಂದ ಇಂಗ್ಲೆಂಡಿಗೆ ರಫ್ತಾಗುತ್ತಿದ್ದ
ಸಿದ್ಧವಸ್ತುಗಳ ಆಮದನ್ನು ತಡೆಯದೇ ಕಚ್ಚಾವಸ್ತುಗಳ ಆಮದನ್ನು ಹೆಚ್ಚಿಸಲು ಸಾಧ್ಯವಿರಲಿಲ್ಲ. ಹಾಗಾಗಿ
ಇಂಗ್ಲೆಂಡಿನ ತಮ್ಮ ಕೈಗಾರಿಕೆಗಳಿಗೆ ರಕ್ಷಣೆ ಒದಗಿಸಲು ಅಲ್ಲಿನ ಉದ್ಯಮಿಗಳು ಬ್ರಿಟನ್ ಪ್ರಭುತ್ವದ
ಮೇಲೆ ಒತ್ತಡ ಹೇರತೊಡಗಿದರು. ಪರಿಣಾಮವಾಗಿ ಬ್ರಿಟನ್ ಸರ್ಕಾರವು ಭಾರತದಿಂದ ಅಲ್ಲಿಗೆ ಆಮದಾಗುತ್ತಿದ್ದ
ಸಿದ್ಧವಸ್ತುಗಳ ಮೇಲೆ ಅಧಿಕ ತೆರಿಗೆ (ಆಮದು ಮತ್ತು ಮಾರಾಟ ತೆರಿಗೆ) ವಿಧಿಸತೊಡಗಿತು. ಇದರಿಂದಾಗಿ
ಅದುವರೆಗೂ ಇಂಗ್ಲೆಂಡಿನ ವಸ್ತುಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಭಾರತೀಯ ಉತ್ಪನ್ನಗಳು
ದುಬಾರಿಯಾದವು. ಇದರಿಂದ ಭಾರತದ ವಸ್ತುಗಳ ಬೇಡಿಕೆ ಕುಗ್ಗಿತು. ಅಲ್ಲದೇ ಭಾರತದಲ್ಲೂ ಅವುಗಳ ಉತ್ಪಾದನೆ
ಇಳಿಮುಖವಾಯಿತು. ಅದೇ ವೇಳೆಯಲ್ಲಿ ಕಂಪೆನಿಯು ಭಾರತದ ಕಚ್ಚಾವಸ್ತುಗಳನ್ನು ಇಂಗ್ಲೆಂಡಿಗೆ ರಫ್ತು ಮಾಡತೊಡಗಿತು.
ಇದರಿಂದಾಗಿ ಭಾರತದ ಕೈಗಾರಿಕೆಗಳು ನಾಶಗೊಂಡು ಭಾರತವು ಕೇವಲ ಇಂಗ್ಲೆಂಡಿಗೆ ಕಚ್ಚಾವಸ್ತುಗಳನ್ನು ರಫ್ತು
ಮಾಡುವ ರಾಷ್ಟ್ರವಾಯಿತು. ಅಲ್ಲದೇ ಬಕ್ಸಾರ್ ಯುದ್ಧಕ್ಕೂ ಮುನ್ನ ಕಂಪೆನಿಯು ಭಾರತದಲ್ಲಿ ವಸ್ತುಗಳನ್ನು
ಖರೀದಿಸಲು ಇಂಗ್ಲೆಂಡಿನಿಂದ ಹಣ ಅಥವಾ ಬೆಲೆಬಾಳುವ ಲೋಹಗಳನ್ನು ತರಬೇಕಾಗುತ್ತಿತ್ತು. ಆದರೆ ಅಲಹಾಬಾದ್
ಒಪ್ಪಂದದ ನಂತರ ದಿವಾನಿ ಹಕ್ಕು ದೊರೆತ ಕಾರಣ ಭಾರತೀಯರಿಂದಲೇ ವಸೂಲಿ ಮಾಡಿದ ಕಂದಾಯದ ಹಣದಿಂದ ಇಲ್ಲಿನ
ವಸ್ತುಗಳನ್ನು ಖರೀದಿಸಲು ಸಾಧ್ಯವಾಯಿತು. ಇದರಿಂದಾಗಿ ಕಂಪೆನಿಗೆ ಎರಡು ಬಗೆಯ ಲಾಭಗಳಾದವು. ಒಂದು ಅವರ
ದೇಶದ ಹಣ ಉಳಿತಾಯ ಆದುದು, ಮತ್ತೊಂದು ನಮ್ಮ ದೇಶದ ಕಚ್ಚಾವಸ್ತುಗಳನ್ನು ಖರೀದಿಸಲು ಕಂದಾಯದ ಹಣ ದೊರೆತುದು.
ಇದರಿಂದ ಭಾರತವು ಸಹಾ ಎರಡು ಬಗೆಯಲ್ಲಿ ನಷ್ಟಗಳನ್ನು ಅನುಭವಿಸಬೇಕಾಯಿತು.
1813ರ
ನಂತರ ಕಂಪೆನಿಯ ವಾಣಿಜ್ಯ ನೀತಿಯಲ್ಲಿ ಪ್ರಮುಖ ಬದಲಾವಣೆ ಉಂಟಾಯಿತು. ಅದೆಂದರೆ ಮುಕ್ತ ವ್ಯಾಪಾರ ನೀತಿಯ
ಅಳವಡಿಕೆ. ಏಕೆಂದರೆ 1813 ರಲ್ಲಿ ಕಂಪೆನಿಯ ವ್ಯಾಪಾರ ಪರವಾನಗಿ ನವೀಕರಣದ ಸನ್ನದು ಕಾಯ್ದೆ ಜಾರಿಗೆ
ಬಂದಿತು. ಆ ವೇಳೆಗೆ ಬ್ರಿಟನ್ನಿನಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಅದುವರೆಗೆ ಭಾರತದಲ್ಲಿ
ನೀಡಿದ್ದ ವ್ಯಾಪಾರದ ಏಕಸ್ವಾಮ್ಯವನ್ನು ರದ್ದುಗೊಳಿಸಿ, ಇಂಗ್ಲೆಂಡಿನಲ್ಲಿದ್ದ ಇತರ ಕಂಪೆನಿಗಳೂ ಸಹ
ಭಾರತದೊಂದಿಗೆ ಮುಕ್ತ ವ್ಯಾಪಾರದಲ್ಲಿ ತೊಡಗಲು ಅವಕಾಶ ನೀಡಲಾಯಿತು. ಇದರಿಂದಾಗಿ ಬ್ರಿಟನ್ನಿನ ಕೈಗಾರಿಕೆಗಳು
ಮತ್ತು ವ್ಯಾಪಾರಗಳನ್ನು ರಕ್ಷಿಸಲು ಬ್ರಿಟನ್ ಸರ್ಕಾರವು ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಅಂದರೆ
ಭಾರತೀಯ ವಸ್ತುಗಳಿಗೆ ಅಧಿಕ ಆಮದು ತೆರಿಗೆ ವಿಧಿಸುವುದು ಮತ್ತು ಇಂಗ್ಲೆಂಡಿನಿಂದ ಭಾರತಕ್ಕೆ ರಫ್ತಾಗುವ
ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸುವ ನೀತಿಯನ್ನು ಅಳವಡಿಸಿಕೊಂಡಿತು. ಇದರಿಂದಾಗಿ 1813 ರಲ್ಲಿ ಭಾರತಕ್ಕೆ
ಇಂಗ್ಲೆಂಡಿನಿಂದ ಆಮದಾಗುತ್ತಿದ್ದ ಸು. 11 ಲಕ್ಷ ಪೌಂಡುಗಳಷ್ಟಿದ್ದ
ಇಂಗ್ಲೆಂಡಿನ ಬಟ್ಟೆ ಉತ್ಪನ್ನಗಳ ಆಮದು 1856ರ ವೇಳೆಗೆ 63 ಲಕ್ಷ ಪೌಂಡುಗಳಿಗೆ ಏರಿತು. ಪರಿಣಾಮವಾಗಿ
ಸಿದ್ಧವಸ್ತುಗಳ ರಫ್ತು ದೇಶವಾಗಿದ್ದ ಭಾರತವು ಕಚ್ಚಾ ವಸ್ತುಗಳ ಪೂರೈಕೆ ದೇಶವಾಯಿತು. ಅಲ್ಲದೇ ಇಂಗ್ಲೆಂಡಿನ
ಸಿದ್ಧವಸ್ತುಗಳಿಗೆ ಭಾರತವು ಮಾರುಕಟ್ಟೆಯಾಯಿತು.
ಅಂದರೆ,
1813ರ ಚಾರ್ಟರ್ ಕಾಯ್ದೆಯ ನಂತರ ಬ್ರಿಟಿಷರ ವಾಣಿಜ್ಯ ನೀತಿಯು ಭಾರತವನ್ನು ಕಚ್ಚಾವಸ್ತುಗಳ ಪೂರೈಕೆ
ದೇಶವನ್ನಾಗಿಸುವುದು ಮತ್ತು ಅಲ್ಲಿನ ಸಿದ್ಧವಸ್ತುಗಳ ಮಾರುಕಟ್ಟೆಯನ್ನಾಗಿ ಪರಿವರ್ತಿಸುವುದೇ ಆಗಿತ್ತು.
ಅದುವರೆಗೂ ಸ್ವಾವಲಂಬಿ ಆರ್ಥಿಕತೆಯಾಗಿದ್ದ ಭಾರತವು ಬ್ರಿಟಿಷರ ಆಗಮನದಿಂದಾಗಿ ವಸಾಹತುಶಾಹಿ ಮಾರುಕಟ್ಟೆಯಾಯಿತು.
ಅಂತಿಮವಾಗಿ ಭಾರತದ ವ್ಯಾಪಾರಿಗಳ ಕೈಯಲ್ಲಿದ್ದ ದೇಶೀಯ ಉತ್ಪನ್ನಗಳ ವ್ಯಾಪಾರವು ಕುಸಿದು ಅದರ ಬದಲಿಗೆ ಕೇವಲ ಕಚ್ಚಾವಸ್ತುಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡುವ ಪರಿಸ್ಥಿತಿ ಭಾರತಕ್ಕೆ ಒದಗಿತು. ಇದರಿಂದಾಗಿ ನಮ್ಮ ಕಚ್ಚಾವಸ್ತುಗಳ ವ್ಯಾಪಾರವು ಕೇವಲ ದೇಶೀಯ ಮಾರುಕಟ್ಟೆಗಳಿಗೆ ಮಾತ್ರ ಸೀಮಿತಗೊಂಡಿತು. ಅಲ್ಲದೇ ಅದುವರೆಗೂ ವಿದೇಶಗಳಿಂದ ಹರಿದು ಬರುತ್ತಿದ್ದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಹರಿವು ಸಹಾ ನಿಂತಿತು. ಏಕೆಂದರೆ ಬ್ರಿಟಿಷರು ಭಾರತದಿಂದಲೇ ಸಂಗ್ರಹಿಸಿದ ಕಂದಾಯದ ಹಣದಿಂದ ಕಚ್ಚಾವಸ್ತುಗಳ ಖರೀದಿ ಮಾಡುವ ಅವಕಾಶವಿದ್ದರಿಂದ ವಿದೇಶದ ಹಣ ಭಾರತಕ್ಕೆ ಬರುವುದು ನಿಂತಿತು.
*****
Comments
Post a Comment