ಅಧ್ಯಾಯ 12. ನೊಂದಾಯಿತ ಕಾರ್ಮಿಕರ ಆರಂಭ - ಕಾರ್ಮಿಕರ ಸಂಘಟನೆಗಳ ಏಳಿಗೆ ಮತ್ತು ಚಳವಳಿಗಳು.

ಅ. ನೊಂದಾಯಿತ ಕಾರ್ಮಿಕರು.

I. ಪೀಠಿಕೆ:- ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ಬ್ರಿಟಿಷ್ಸಾಮ್ರಾಜ್ಯಶಾಹಿ ಆರ್ಥಿಕ ನೀತಿಯ ಒಂದು ಭಾಗವಾಗಿತ್ತು. ಬ್ರಿಟಿಷರು ಸಾಮ್ರಾಜ್ಯ ವಿಸ್ತರಣೆಯ ಜೊತೆಗೆ ಜಗತ್ತಿನ ವಿವಿಧೆಡೆಗಳಲ್ಲಿ ಕೃಷಿ ಭೂಮಿಗಳ ಅಭಿವೃದ್ಧಿ ಮತ್ತು ಕೃಷಿಯ ವಾಣೀಜ್ಯೀಕರಣದಲ್ಲಿ ತೊಡಗಿದರು. ಅಂದರೆ ಅಮೆರಿಕಾ, ವೆಸ್ಟ್‌ ಇಂಡೀಸ್‌ ದ್ವೀಪಗಳು, ದಕ್ಷಿಣ ಅಮೆರಿಕಾದ ರಾಜ್ಯಗಳು ಮತ್ತು ಆಸ್ಟ್ರೇಲಿಯ ಬಳಿಯ ದ್ವೀಪಗಳು ಅವುಗಳಲ್ಲಿ ಸೇರಿದ್ದವು.  ಹೀಗೆ ಅವರು ಅಭಿವೃದ್ಧಿಪಡಿಸಿದ ತಮ್ಮ ಕೃಷಿ ಭೂಮಿಗಳಲ್ಲಿ ದುಡಿಯಲು ಕಾರ್ಮಿಕರ ಅವಶ್ಯಕತೆ ಉಂಟಾಯಿತು. ಅದಕ್ಕಾಗಿ ವಾಣಿಜ್ಯ ಬೆಳೆಗಳ ಕೃಷಿಗೆ ಆರಂಭದಲ್ಲಿ ಆಫ್ರಿಕಾದ ಗುಲಾಮರ ಪೂರೈಕೆಗೆ ಬ್ರಿಟಿಷರು ತೊಡಗಿದರು. ಆಫ್ರಿಕಾದ ಕಪ್ಪು ಜನರನ್ನು (ನಿಗ್ರೊಗಳು) ಅದಕ್ಕಾಗಿ ಪ್ರಾಣಿಗಳ ರೀತಿಯಲ್ಲಿ ಹಡಗುಗಳಲ್ಲಿ ಅಮೆರಿಕಾ ಖಂಡಗಳಿಗೆ ಸಾಗಿಸಲಾಯಿತು. ಆದರೆ 19ನೆ ಶತಮಾನದ ಆದಿಯ ಲ್ಲಿ ಗುಲಾಮಗಿರಿಯ ವಿರುದ್ಧ ಇಂಗ್ಲೆಂಡಿನಲ್ಲಿ ವ್ಯಕ್ತವಾದ ಪ್ರತಿಭಟನೆಗಳು ಮತ್ತು ಅದರಿಂದಾಗಿ ಗುಲಾಮಗಿರಿಯನ್ನು ರದ್ದತಿಗೆ ಜಾರಿಗೆ ಬಂದ ಕಾಯ್ದೆಗಳ ಕಾರಣ ಆಫ್ರಿಕಾದ ಗುಲಾಮರ ಪೂರೈಕೆನಿಂತುಹೋಯಿತು.  ಇದರಿಂದಾಗಿ ಗುಲಾಮರ ಪೂರೈಕೆಗಾಗಿ ಬ್ರಿಟಿಷರು ಬದಲಿ ವ್ಯವಸ್ಥೆಗಾಗಿ ಚಿಂತಿಸತೊಡಗಿದರು. ಅದಕ್ಕಾಗಿ ಗುಲಾಮಗಿರಿಯಿಂದ ಬಿಡುಗಡೆಗೊಂಡ ನೀಗ್ರೊಗಳನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು.. ಆದರೆ 1838 ವೇಳೆಗೆ ಪದ್ಧತಿಯನ್ನೂ ಮಾರಿಷಸ್ಮತ್ತು ವೆಸ್ಟ್ಇಂಡೀಸ್ಗಳಲ್ಲಿ ನಿಷೇಧಿಸಲಾಯಿತು. ಏಕೆಂದರೆ ಆಗಲೂ ಸಹ ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಲಾಗುತ್ತಿತ್ತು. ಇದರಿಂದಾಗಿ ಬ್ರಿಟಿಷ್ಸರ್ಕಾರ ತನ್ನ ಭೂಮಾಲೀಕರಿಗೆ ಜಮೀನುಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಬದಲಿ ವ್ಯವಸ್ಥೆ ಮಾಡಬೇಕಾಯಿತು.

A. ಬದಲಿ ವ್ಯವಸ್ಥೆ?:- ಮಾರಿಷಸ್‌, ಫಿಜಿ, ಸುರಿನಾಮ್‌, ಟ್ರಿನಿಡಾಡ್‌, ವೆಸ್ಟ್ಇಂಡೀಸ್ಮೊದಲಾದ ನೆಲೆಗಳಿಗೆ ಪೂರ್ವ ಏಷ್ಯಾದ ಕಾರ್ಮಿಕರ ರವಾನೆ ಮಾಡಲಾಯಿತು. ಆರಂಭದಲ್ಲಿ ಚೀನಿಯರನ್ನು ಇದಕ್ಕಾಗಿ  ರವಾನೆ ಮಾಡಲಾಯಿತು. ಆದರೆ ಚೀನಿಯರು ಬಹುಬೇಗನೆ ಅಲ್ಲಿನ ಕೆಲಸಗಳನ್ನು ತೊರೆದು ತಮ್ಮದೇ ಆದ ವ್ಯಾಪಾರ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಗುಲಾಮಗಿರಿಯಿಂದ ಹೊರಬಂದರು. ನಂತರ ಬ್ರಿಟಿಷರು ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿನ ಬಡ ಭೂರಹಿತ ಮತ್ತು ಕೃಷಿ ಕಾರ್ಮಿಕರನ್ನು ತಮ್ಮ ವಸಾಹತುಗಳಿಗೆ ಪೂರೈಕೆ ಮಾಡತೊಡಗಿದರು. ಅದಕ್ಕಾಗಿ ಉತ್ತರ ಪ್ರದೇಶ, ಬಿಹಾರ, ಬಂಗಾಳ, ಮದ್ರಾಸು ಮತ್ತು ಆಂಧ್ರ ಪ್ರದೇಶಗಳಿಂದ ಜನರನ್ನು ಆಕರ್ಷಿಸಲಾಯಿತು.

II. ನೊಂದಾಯಿತ ಕಾರ್ಮಿಕರ ಅರ್ಥ?:- ಬ್ರಿಟಿಷರ ಕೃಷಿ ಭೂಮಿಗಳಲ್ಲಿ ಕನಿಷ್ಠ ಐದು ವರ್ಷಗಳ ಕಾಲ ದುಡಿಯಲು ಒಪ್ಪಿ ಷರತ್ತಿಗೊಳಪಟ್ಟು ಅವರ ವಸಾಹತುಗಳಿಗೆ ತೆರಳಿದ ಕಾರ್ಮಿಕರನ್ನೇ ನೊಂದಾಯಿತ ಕಾರ್ಮಿಕರು ಎಂದು ಕರೆಯಲಾಗಿದೆ. ಪೂರ್ವ ಏಷ್ಯಾದಿಂದ ಮೊದಲ ನೊಂದಾಯಿತ ಕಾರ್ಮಿಕರ ತಂಡವು 1834ರಲ್ಲಿ ಮಾರಿಷಸ್ಗೆ  ರವಾನೆಗೊಂಡಿತು. ಅದಕ್ಕಾಗಿ ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಉಪಯೋಗಿಸಲಾಯಿತು. ಪರಿಣಾಮವಾಗಿ 1838 ನಂತರ ಪೂರ್ವ ಏಷ್ಯಾದಿಂದ ತಮ್ಮ ವಸಾಹತುಗಳಿಗೆ ನೊಂದಾಯಿತ ಕಾರ್ಮಿಕರನ್ನು ರವಾನಿಸಲು ಬ್ರಿಟಿಷ್ಸರ್ಕಾರದಿಂದ ಅನುಮತಿ ದೊರೆಯಿತು. ಕಾಲಕ್ರಮದಲ್ಲಿ ಮೇಲೆ ತಿಳಿಸಿದಂತೆ ಭಾರತದಿಂದಲೂ ಈ ಪದ್ಧತಿಯಲ್ಲಿ ದುಡಿಯಲು  ಜನರನ್ನು ಕಳುಹಿಸಲಾಯಿತು.

III. ನೊಂದಾಯಿತ ಕಾರ್ಮಿಕರ ವ್ಯವಸ್ಥೆಯ ಆರಂಭಿಕ ಸ್ವರೂಪ:- ಭಾರತದ ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ಖಾಸಗಿಯಾಗಿರದೇ ಸರ್ಕಾರದಿಂದಲೇ ವ್ಯವಸ್ಥೆಗೊಳಿಸಿದ್ದಾಗಿತ್ತು. ಆದರೆ ಅದಕ್ಕಾಗಿ 1870ರವರೆಗೆ ಯಾವುದೇ ರೀತಿಯ ನಿರ್ದಿಷ್ಟ ನೀತಿ-ನಿಯಮಗಳು ಇರಲಿಲ್ಲ. ನಂತರ ಕಾರ್ಮಿಕರ ನೊಂದಣಿಗೆ ಕೆಲವು ನಿಯಮಗಳ ರಚನೆ ಮಾಡಲಾಯಿತು. ಅವುಗಳಲ್ಲಿ ದುಡಿಮೆಯ ಸ್ವರೂಪ, ಕೂಲಿಯ ಪ್ರಮಾಣ, ವೈದ್ಯಕೀಯ ಸೌಲಭ್ಯ, ವಸತಿ ಸೌಲಭ್ಯ ಮತ್ತು ಕರಾರು ಅವಧಿ ಮುಗಿದ ನಂತರ ಸ್ವದೇಶಕ್ಕೆ ಮರಳಲು ಅವಕಾಶಗಳಂತಹ ವಿವಿಧ ನಿಯಮಗಳ ಸೇರ್ಪಡೆ ಮಾಡಲಾಯಿತು. ಹೀಗೆ ನೊಂದಾಯಿತ ಕಾರ್ಮಿಕರ ಪೂರೈಕೆಗಾಗಿ ನಿಯಮಗಳು ರಚನೆಗೊಂಡ ನಂತರ ಅಂತಹ ಕಾರ್ಮಿಕರ ಪೂರೈಕೆಗಾಗಿ ಭಾರತದಲ್ಲಿ ಮಧ್ಯವರ್ತಿಗಳು ಮತ್ತು ಏಜೆಂಟರು ಹುಟ್ಟಿಕೊಂಡರು. ಹೀಗೆ ಮಧ್ಯವರ್ತಿಗಳಿಂದ ನೊಂದಣಿಗೆ ಒಳಗಾದ ಕಾರ್ಮಿಕರನ್ನು ದೂರದ ದೇಶಗಳಿಗೆ ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಇಂತಹ ಸಾಗರ ಪ್ರಯಾಣಗಳಲ್ಲಿ ಹಡಗುಗಳಲ್ಲಿ ಅವರಿಗೆ ನೀಡುತ್ತಿದ್ದ ಕಡಿಮೆ ಸೌಲಭ್ಯಗಳಿಂದಾಗಿ ಅನೇಕ ಮಂದಿ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗುತ್ತಿದ್ದರು.

   ಎಲ್ಲಾ ವರ್ಗಗಳ ಜನರೂ ನೊಂದಾಯಿತ ಕಾರ್ಮಿಕರಾಗಿ ವಿದೇಶಗಳಿಗೆ ಹೋಗುತ್ತಿದ್ದರು. ಉದಾ: ಫಿಜಿ ದೇಶಕ್ಕೆ ಹೋಗಿದ್ದ 45,000 ಉತ್ತರ ಭಾರತೀಯರಲ್ಲಿ ಬ್ರಾಹ್ಮಣ ಮತ್ತು ಅವರ ಗುಂಪಿಗೆ ಸೇರಿದವರು -  1,686; ಕ್ಷತ್ರೀಯ ಮತ್ತು ಅವರ ಗುಂಪಿಗೆ ಸೇರಿದವರು - 4,565; ಬನಿಯಾಗಳು -  1,592; ಕೃಷಿಕರು (ಕುರ್ಮಿ, ಅಹಿರ್, ಜಾಟ್, ಲೊಧಾ) - 15,800; ಕೆಳಜಾತಿಯವರು -  (ಚಮ್ಮಾರ, ಪಾಸಿ, ದುಸಾಧ್) - 11,907; ಮುಸ್ಲಿಂರು - 6,787 ಇದ್ದರು.

IV. ನೊಂದಾಯಿತ ಕಾರ್ಮಿಕರ ಪದ್ಧತಿಗೆ ಕಾರಣಗಳು:- ಭಾರತದಲ್ಲಿ ಈ ಪದ್ಧತಿಯ ಉಗಮಕ್ಕೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,

1.      ಬ್ರಿಟಿಷರು ಭಾರತದಲ್ಲಿ ಕಂದಾಯ ವಸೂಲಿ ಹಕ್ಕು ಪಡೆದ ನಂತರ ಯಾವುದೇ ತಾರ್ಕಿಕತೆಯಿಲ್ಲದೇ ಕೇವಲ ಲಾಭದ ಉದ್ದೇಶದಿಂದ ದ್ಭೂ ಕಂದಾಯದಲ್ಲಿ ಹೆಚ್ಚಳ ಮಾಡಿದರು. ಇದನ್ನು ಭರಿಸಲಾಗದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಭೂರಹಿತರಾದರು.

2.     ಕಂದಾಯವನ್ನು ಧನ ರೂಪದಲ್ಲಿಯೇ ಭರಿಸಬೇಕಾದ ಕಾರಣದಿಂದಾಗಿ ಕೃಷಿಕರು ಬರ ಮತ್ತು ಕಡಿಮೆ ಬೆಳೆ ಬಂದಾಗ ಲೇವಾದೇವಿಗಾರರಿಂದ ಸಾಲ ಮಾಡುವುದು ಮತ್ತು ಅದನ್ನು ತೀರಿಸಲಾಗದೇ ತಮ್ಮ ಜಮೀನುಗಳನ್ನು ಅವರಿಗೇ ಬಿಟ್ಟುಕೊಡುತ್ತಿದ್ದರು. ಇದಕ್ಕೆ ಲೇವಾದೇವಿಗಾರರ ಶೋಷಣೆಯು ಕಾರಣವಾಗಿತ್ತು.

3.     ಭೂ ವಿಭಜನೆಯ ಕಾರಣದಿಂದ  ಕೃಷಿಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ರೈತರು ಕಡಿಮೆ ಭೂಮಿಯಲ್ಲಿ ಬೆಳೆ ಬೆಳೆಯುವುದು ಮತ್ತು ಕೃಷಿಯ ವಾಣಿಜ್ಯೀಕರಣದಿಂದಾಗಿ ತಾವು ಬೆಳೆದ ವಾಣಿಜ್ಯ ಬೆಳೆಗಳನ್ನು ಆಂಗ್ಲ ವ್ಯಾಪಾರಿಗಳು ನಿಗದಿ ಮಾಡಿದ ಬೆಲೆಗಳಿಗೆ ಮಾರಾಟ ಮಾಡಬೇಕಾದ್ದರಿಂದ ಇನ್ನಷ್ಟು ಬಡತನಕ್ಕೆ ದೂಡಲ್ಪಟ್ಟರು.

4.    ಇಂಗ್ಲೆಂಡಿನ ಕೈಗಾರಿಕೀಕರಣದಿಂದಾಗಿ ಭಾರತದಲ್ಲಿನ ಗ್ರಾಮೀನ ಗುಡಿ ಕೈಗಾರಿಕೆಗಳ ನಾಶ ಉಂಟಾಯಿತು. ಇದರಿಂದಾಗಿ ನಿರುದ್ಯೋಗ ಸಮಸ್ಯೆಯು ಹೆಚ್ಚಿತು. ಅಂತಹ ನಿರುದ್ಯೋಗಿಗಳು ಕೆಲಸದ ಹುಡುಕಾಟದಲ್ಲಿ ನೊಂದಾಯಿತ ಕಾರ್ಮಿಕರ ವ್ಯವಸ್ಥೆಗೆ ಒಳಗಾದರು.

5.     ಇತ್ತೀಚಿನ ಸಂಶೋಧನೆಗಳ ಪ್ರಕಾರ ಅಧಿಕ ಸಂಖ್ಯೆಯ ಏಕಾಂಗಿ ಮಹಿಳೆಯರೂ ಸಹ ನೊಂದಾಯಿತ ಕಾರ್ಮಿಕರಾಗಿ ಹೋಗುತ್ತಿದ್ದರು. ಮಹಿಳಾವಾದಿಗಳ ಪ್ರಕಾರ ನೊಂದಾಯಿತ ಕಾರ್ಮಿಕರ ವ್ಯವಸ್ಥೆಯು ದುರ್ಬಲ ಆರ್ಥಿಕತೆ ಮತ್ತು ಪುರುಷರ ಶೋಷಣೆಯಿಂದ ಬಿಡುಗಡೆ ಪಡೆಯುವ ಮಾರ್ಗವಾಗಿ ಕಾಲದ ಮಹಿಳೆಯರಿಗೆ ಕಂಡುಬಂದಿತು. ಅದಕ್ಕಾಗಿ ಒಂಟಿ ಮಹಿಳೆಯರು ತಾತ್ಕಾಲಿಕ ವಿವಾಹಕ್ಕೆ ಒಳಪಟ್ಟು ತಾವು ಹೋಗಬೇಕಾದ ಸ್ಥಳ ತಲುಪಿದ ನಂತರ ಬಂಧನದಿಂದ ಬಿಡುಗಡೆ ಪಡೆಯುತ್ತಿದ್ದರು.

V. ರವಾನೆಗೊಂಡ ಕಾರ್ಮಿಕರ ಅಂಕಿ-ಅಂಶಗಳು:- 1870ರಲ್ಲಿ ಬ್ರಿಟಿಷ್ವಸಾಹತುಗಳಲ್ಲಿದ್ದ ನೊಂದಾಯಿತ ಭಾರತೀಯ ಕಾರ್ಮಿಕರ ಸಂಖ್ಯೆ ಕೆಳಕಂಡಂತಿದೆ:

1.       ಮಾರಿಷಸ್‌ - 351,401

2.       ಬ್ರಿಟಿಷ್ಗಯಾನಾ  - 79,691

3.       ಟ್ರಿನಿಡಾಡ್‌  - 42,519

4.       ಜಮೈಕಾ  - 15,169

5.       ವೆಸ್ಟ್ಇಂಡೀಸ್ದ್ವೀಪಗಳು  - 7,021

6.       ನೆಟಾಲ್‌ (ದಕ್ಷಿಣಾ ಆಫ್ರಿಕಾ) - 6,448

VI. ಕೆಲಸದ ಸ್ವರೂಪ ಮತ್ತು ಜೀವನ:- ನೊಂದಾಯಿತ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಇಲ್ಲವೇ ಗುಂಪು-ಗುಂಪಾಗಿ ಪ್ರತ್ಯೇಕ ಎಸ್ಟೇಟುಗಳಲ್ಲಿ ದುಡಿಯಲು ನೇಮಿಸಲಾಗುತ್ತಿತ್ತು. ಅಲ್ಲಿ ಅವರು ಅತಿ ಕಠಿಣ ದುಡಿಮೆಯಲ್ಲಿ ತೊಡಗಬೇಕಾಗುತ್ತಿತ್ತು. ಅಲ್ಲದೇ ಕೆಲಸದ ಸಮಯವು ಅಧಿಕವಾಗಿರುತ್ತಿತ್ತು. ಅಂದರೆ  ಬೆಳಿಗ್ಗೆ 5.00 ಗಂಟೆಗೆ ಎದ್ದು, ಅವಸರದ ಉಪಹಾರದ ನಂತರ ಕೃಷಿಭೂಮಿಗೆ ಸಂಜೆ 4.00 ವರೆಗೆ ದುಡಿಯಲು ತೆರಳಬೇಕಾಗುತ್ತಿತ್ತು. ಅವರ ಕೆಲಸವು ಕಬ್ಬು ಬೆಳೆಯ ವಿವಿಧ ಹಂತಗಳನ್ನು ಅವಲಂಬಿಸಿರುತ್ತಿತ್ತು. ಅವುಗಳಲ್ಲಿ ಕಬ್ಬು ನಾಟಿ ಮಾಡುವುದು, ನೀರುಣಿಸುವುದು, ನಂತರ ಕಟಾವು ಮಾಡುವುದರ ಜೊತೆಗೆ ಉಳುವುದು, ಕಳೆ ತೆಗೆಯುವುದು, ಕ್ರಿಮಿನಾಶಕಗಳ ಬಳಕೆ ಇತ್ಯಾದಿ ಕೆಲಸಗಳು ಸೇರಿದ್ದವು. ಅವರಿಗೆ ಸಮಯಾಧಾರಿತ ಇಲ್ಲವೇ ಗುರಿ ಆಧಾರಿತ ಕೆಲಸ ವಹಿಸಲಾಗುತ್ತಿತ್ತು. ಗುರಿ ಆಧಾರಿತ ಕೆಲಸವನ್ನು ಒಂದು ವೇಳೆ ಸಮಯಕ್ಕೆ ಮುನ್ನ ಮಾಡಿ ಮುಗಿಸಿದರೆ ಮರುದಿನ ಹಿಂದಿನ ದಿನದ ಕೆಲಸಕ್ಕಿಂತ ಹೆಚ್ಚಿನ ಕೆಲಸದ ಗುರಿ ನಿಗದಿ ಮಾಡಲಾಗುತ್ತಿತ್ತು. ಅಲ್ಲದೇ ಅವರು ತಮ್ಮ ಮಾಲೀಕರ ಮನೆಗಳಲ್ಲೂ ಸಹ ಉಚಿತ ಕೆಲಸಗಳನ್ನು ಮಾಡಬೇಕಾಗುತ್ತಿತ್ತು.

A. ಶಿಕ್ಷೆಗಳು:- ಕೆಲಸದ ಜಾಗದಲ್ಲಿ ಕಾರ್ಮಿಕರಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿತ್ತು. ಅಂದರೆ ವಿವಿಧ ತಪ್ಪುಗಳಿಗೆ ವಿಭಿನ್ನ ಬಗೆಯ ಶಿಕ್ಷೆಗಳಿದ್ದವು. ಏಕೆಂದರೆ ನೊಂದಾಯಿತ ಕಾರ್ಮಿಕರ ಕಾನೂನು ಮಾಲೀಕರಿಗೆ ತಮ್ಮ ನೊಂದಾಯಿತ ಕಾರ್ಮಿಕರು ತಪ್ಪು ಮಾಡಿದಾಗ ಶಿಕ್ಷೆ ನೀಡುವ ಕಠಿಣ ನಿಯಮಗಳನ್ನು ವಿಧಿಸಿತ್ತು. ಇವರು ವಿವಾಹವಾದಾಗ ಕಾನೂನಿನ ಅರಿವಿಲ್ಲದೇ ನೊಂದಣಿ ಮಾಡಿಸದಿದ್ದರೆ ಅದಕ್ಕೂ ಶಿಕ್ಷೆ ವಿಧಿಸಲಾಗುತ್ತಿತ್ತು. ಎಸ್ಟೇಟುಗಳ ಸುತ್ತಲಿನ 60 ಗಜಗಳಷ್ಟು ವ್ಯಾಪ್ತಿಯಲ್ಲಿ ಕಸ ಹರಡಿದರೆ ಒಂದು ವಾರದ ವೇತನ ಕಡಿತ ಇಲ್ಲವೇ ಒಂದು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುತ್ತಿತ್ತು.  ನೊಂದಾಯಿತ ಕಾರ್ಮಿಕರ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಅಥವಾ ಸೆರೆವಾಸದ ಶಿಕ್ಷೆ ನೀಡಲಾಗುತ್ತಿತ್ತು.  ಒಂದು ವೇಳೆ ಕಾರ್ಮಿಕರು ಕೆಲಸಕ್ಕೆ ಗೈರುಹಾಜರಾದರೆ ಕಾನೂನಿನ ಮೂಲಕವೇ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸಿ ಗೈರುಹಾಜರಾದ ಸಮಯದಷ್ಟೇ ಹೆಚ್ಚಿನ ಕೆಲಸ ಮಾಡಿಸಿಕೊಳ್ಳಬಹುದಾಗಿತ್ತು.

   1910-1912 ನಡುವೆ ಟ್ರಿನಿಡಾಡ್ನಲ್ಲಿ ಕಾರ್ಮಿಕರ ವಿರುದ್ಧ ದಾಖಲಾದ ಪ್ರಮುಖ ಅಪರಾಧದ ಪ್ರಕರಣಗಳೆಂದರೆ, ಕೆಲಸದ ಸ್ಥಳಗಳಿಂದ ಕದ್ದು ಹೋಗುವುದು (1,668); ಕಾರಣವಿಲ್ಲದೆ ಕೆಲಸಕ್ಕೆ ಗೈರುಹಾಜರಾಗುವುದು (1,466); ಕೆಲಸ ಮಾಡಲು ನಿರಾಕರಿಸುವುದು ಇಲ್ಲವೆ ನಿಗದಿತ ಕೆಲಸ ಮಾಡದಿರುವುದು (1,125); ಮತ್ತು ವಾಸರಹಿತರಾಗಿರುವುದು ಇಲ್ಲವೇ ಭಿಕ್ಷೆ ಬೇಡುವುದು (983).

   ಮೇಲಿನ ವಿವರಗಳು ನೊಂದಾಯಿತ ಕಾರ್ಮಿಕರ ದಯನೀಯ ಸ್ಥಿತಿಯನ್ನು ವಿವರಿಸುತ್ತವೆ ಅಲ್ಲದೇ ವೈಯುಕ್ತಿಕ ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ನೊಂದಾಯಿತ ಕಾರ್ಮಿಕರ ಕಾಯ್ದೆಯು ತಡೆಹಿಡಿದಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.

VII. ಸಾಮಾಜಿಕ ಸುಧಾರಣೆಗೆ ಕಾರಣ:- ನೊಂದಾಯಿತ ಕಾರ್ಮಿಕರ ಪದ್ಧತಿಯು ಶೋಷಣೆ ಮತ್ತು ದೋಷಗಳಿಂದ ಕೂಡಿದ್ದರೂ ಈ ವ್ಯವಸ್ಥೆಯಿಂದಾಗಿ ಅವರ ಜೀವನದಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದವು.  ಏಕೆಂದರೆ, ಕೆಲವು ವಿದ್ವಾಂಸರು ವ್ಯವಸ್ಥೆಗೆ ಒಳಪಟ್ಟವರು ಕೆಲವು ಸಾಂಪ್ರದಾಯಿಕ ಆಚರಣೆಗಳಿಂದ ದೂರವಾದುದನ್ನು ಗುರ್ತಿಸಿದ್ದಾರೆ. ಅಂತಹ ಬದಲಾವಣೆಗಳೆಂದರೆ, ಅಸ್ಥಿತ್ವದಲ್ಲಿದ್ದ ಜಾತಿ ಮತ್ತು ಧಾರ್ಮಿಕ ಶ್ರೇಷ್ಠತೆಗಳು ದೂರವಾಗಿ ಹೊಸ ರೀತಿಯ ಜೀವನ ಶೈಲಿ ಅವರಲ್ಲಿ ರೂಪುಗೊಳ್ಳತೊಡಗಿತು. ಬ್ರಿಜ್ಲಾಲ್ಎಂಬುವರು ತಿಳಿಸುವಂತೆ ವ್ಯವಸ್ಥೆಯು ಒಂದೆಡೆ ಗುಲಾಮಗಿರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಬಿಡುಗಡೆಗೂ ಕಾರಣವಾಗಿತ್ತು. ವ್ಯವಸ್ಥೆಯು ಅವರಿಗೆ ಮಾನವೀಯತೆಯ ಮುಖವನ್ನು ಪರಿಚಯಿಸಿತು. ಅಲ್ಲದೇ ನವಸಮಾಜದ ಉದಯಕ್ಕೂ ಕಾರಣವಾಯಿತು. ಸ್ಪೃಶ್ಯ-ಅಸ್ಪೃಶ್ಯ ಭಾವನೆಗಳು, ಆಹಾರ-ವಿಹಾರಗಳಲ್ಲಿನ ನಿರ್ಬಂಧಗಳು, ಆರಾಧನೆಗಳಲ್ಲಿನ ಮಡಿ-ಮೈಲಿಗೆಗಳು ಕಾಲಕಳೆದಂತೆ ಮರೆಯಾದವು. ಜಾತಿ ಎಂಬುದು ನಗಣ್ಯವಾಯಿತು. ಏಕೆಂದರೆ ಇವರಿಗೆ ದೊರೆಯುತ್ತಿದ್ದ ಕೂಲಿಯು ಅವರ ಶ್ರಮ ಆಧಾರಿತವಾಗಿತ್ತೇ ಹೊರತು ಸಾಮಾಜಿಕ ಅಂತಸ್ತನ್ನು ಅವಲಂಬಿಸಿರಲಿಲ್ಲ. ವಸಾಹತುಗಳಲ್ಲಿನ ಮಹಿಳೆಯರ ಕೊರತೆಯು ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳಿಗೆ ಅವಕಾಶ ಕಲ್ಪಿಸಿತು.

VIII. ಉಪಸಂಹಾರ: ನೊಂದಾಯಿತ ಕಾರ್ಮಿಕರ ಪದ್ಧತಿಗೆ ಒಳಗಾದವರ ಜೀವನದಲ್ಲೂ ಸಹ ಬದಲಾವಣೆಗಳು ಉಂಟಾದವು. ಅಂದರೆ ಅವರು ತಮ್ಮ ಗುತ್ತಿಗೆಯ ಕಾಲ ಮುಗಿದ ನಂತರ ಎಸ್ಟೇಟುಗಳಿಂದ ಹೊರಬಂದು ಹತ್ತಿರದ ಹಳ್ಳಿಗಳಲ್ಲಿ ನೆಲೆಸತೊಡಗಿದರು. ಹೀಗೆ ನೆಲೆಸಿದವರ ಸಂಖ್ಯೆಯು ವೃದ್ಧಿಗೊಂಡಂತೆ ಅವರದೇ ಆದ ವಾಸದ ನೆಲೆಗಳು ರಚನೆಗೊಂಡವು. ಹಾಗೆ ಒಂದೆಡೆ ನೆಲೆಸಿದ ನೊಂದಾಯಿತ ಕಾರ್ಮಿಕರು ತಾವು ಹಿಂದೆ ಗಳಿಸಿದ ಕೆಲಸದ ಅನುಭವಗಳನ್ನು ಉಪಯೋಗಿಸಿಕೊಂಡು ಸ್ವತಂತ್ರ ಜೀವನ ನಡೆಸಲು ತೊಡಗಿದರು. ಅದೇ ಸಮಯದಲ್ಲಿ 19ನೆಯ ಶತಮಾನದ ಕೊನೆಯ ವೇಳೆಗೆ ಸಕ್ಕರೆ ಉದ್ಯಮದಲ್ಲಿ ಕುಸಿತ ಉಂಟಾದ್ದರಿಂದ ಎಸ್ಟೇಟುಗಳ ಮಾಲೀಕರು ತಮ್ಮ ಭೂಮಿಯ ಕೆಲವು ಭಾಗಗಳನ್ನು ಮಾರಾಟಕ್ಕೆ ಕೊಡಬೇಕಾಯಿತು. ಆಗ ಮುಕ್ತ ನೊಂದಾಯಿತ ಕಾರ್ಮಿಕರು ಅವರಿಂದ ಕೃಷಿ ಭೂಮಿಗಳನ್ನು ಖರೀದಿಸಿ ಸ್ವತಂತ್ರ ಕೃಷಿಕರಾದರು. ಈ ಪ್ರಕ್ರಿಯೆಯು ಆರಂಭದಲ್ಲಿ ಸಣ್ಣ ಪ್ರಮಾಣದ ಭೂ ಹಿಡುವಳಿಗಳಿಗೆ ಸೀಮಿತವಾಗಿದ್ದರು ತದನಂತರ ಬೃಹತ್‌ ಪ್ರಮಾಣದ ಎಸ್ಟೇಟುಗಳೂ ಸಹ ಮಾರಟಕ್ಕೆ ಇಡಲ್ಪಟ್ಟವು. ಪರಿಣಾಮವಾಗಿ ಭೂಮಾಲೀಕರಾದ ಕಾರ್ಮಿಕರು ಸಕ್ಕರೆ ಉದ್ಯಮಗಳಿಗೆ ಕಬ್ಬಿನ ಪೂರೈಕೆದಾರರಾದರು. ಇದರಿಂದಾಗಿ ಒಮ್ಮೆ ಕಾರ್ಮಿಕರಾಗಿದ್ದವರು ಈಗ ಸಕ್ಕರೆ ಉದ್ಯಮದ ಕಚ್ಚಾವಸ್ತುಗಳ ಪೂರೈಕೆದಾರರಾದರು. ಈ ಬದಲಾವಣೆಯು ಮುಂದೆ ನೊಂದಾಯಿತ ಕಾರ್ಮಿಕರು ತಾವು ನೆಲೆಸಿದ ದೇಶಗಳಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜೀವನದ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರವಹಿಸಲು ಕಾರಣವಾಯಿತು. ಇದರಿಂದಾಗಿಯೇ ಇಂದು ಮಾರಿಷಸ್‌, ಸುರಿನಾಮ್‌, ಫಿಜಿ, ವೆಸ್ಟ್‌ ಇಂಡೀಸ್‌ಗಳಂತಹ ದೇಶಗಳಲ್ಲಿ ಭಾರತೀಯರು ರಾಜಕೀಯವಾಗಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದನ್ನು ನೋಡಬಹುದಾಗಿದೆ.

 

ಆ. ಕಾರ್ಮಿಕರ ಸಂಘಟನೆಗಳ ಏಳಿಗೆ
ಮತ್ತು ಚಳವಳಿಗಳು.

I. ಪೀಠಿಕೆ: “ಸಾಮಾನ್ಯ ಅರ್ಥದಲ್ಲಿ ಕಾರ್ಮಿಕ ಎಂದರೆ ದೈಹಿಕ ಇಲ್ಲವೇ ಬೌದ್ಧಿಕ ಶ್ರಮದಿಂದ ದುಡಿದು ಹಣ ಗಳಿಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.  ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ.  ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ.  ಕೈಗಾರಿಕಾ ಕ್ರಾಂತಿಯ ನಂತರ ಅದರ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು:- ಅವುಗಳೆಂದರೆ,  ಬಂಡವಾಳಶಾಹಿ ವರ್ಗ ಮತ್ತು ಕಾರ್ಮಿಕ ವರ್ಗ. ಬಂಡವಾಳಶಾಹಿಗಳು ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದು, ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.

A. ಕಾರ್ಮಿಕರ ದಿನಾಚರಣೆಯ ಮಹತ್ವ:  ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಆರಂಭದ ಇತಿಹಾಸವು ಅಮೆರಿಕಾದಲ್ಲಿ ನಡೆದ ಘಟನೆಯೊಂದನ್ನು ಅವಲಂಬಿಸಿದೆ. ಅಮೆರಿಕಾದಲ್ಲಿ ಕೈಗಾರಿಕೀಕರಣ ಆರಂಭವಾದ ಪ್ರಾರಂಭದಲ್ಲಿ ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿಯವರೆಗೆ ಕಾರ್ಮಿಕರನ್ನು ದುಡಿಸಿ ಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಕಾರ್ಮಿಕರು “ದಿನದ 8 ಗಂಟೆ ದುಡಿವ ಅವಧಿ ನಿಗದಿ ಮಾಡಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆಗಳು ದೈನಂದಿನ ಚಟುವಟಿಕೆಗಳಿಗಾಗಿ, 8 ಗಂಟೆಗಳು ದುಡಿವ ಅವಧಿ ಹಾಗೂ ಇನ್ನುಳಿದ 8 ಗಂಟೆಗಳು ವಿಶ್ರಾಂತಿಗಾಗಿ ಮೀಸಲು ಎಂಬ ಲೆಕ್ಕಾಚಾರ ಮುಂದಿಡಲಾಯಿತು.  ಹೀಗೆ “8 ಗಂಟೆ ದುಡಿವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಅಮೆರಿಕದ ಕಾರ್ಮಿಕರು ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡತೊಡಗಿದರು.  ಈ ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕಲು ಮೇ 4 ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.  ಅದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದರು. ಇದನ್ನು ಲೆಕ್ಕಿಸದೇ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆಗಳ ಕಾರ್ಮಿಕರ ಕೆಲಸದ ಅವಧಿಯನ್ನು ನಿಗದಿಮಾಡಲಾಯಿತು.  ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತರರಾಷ್ಟೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ.

II. ಸಂಘಟಿತ ಕಾರ್ಮಿಕರು:- ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ಇವರ ಪ್ರಮಾಣವು ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡು ಬಂದಿದ್ದು, ಸಂಘಟಿತ ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ.

III. ಅಸಂಘಟಿತ ಕಾರ್ಮಿಕರು :- ಇನ್ನೂಳಿದ ಶೇ 85 ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೋಟೆಲ್‌ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು, ಈ ಮುಂತಾದ ಕ್ಷೇತ್ರಗಳಲ್ಲಿ ದುಡಿಯುವ ಕೆಲಸಗಾರರೇ ಅಸಂಘಟಿತ ಕಾರ್ಮಿಕರು.  ಇವರಿಗೆ ಯಾವುದೇ ನೊಂದಾಯಿತ ಸಂಘಟನೆಗಳು ಇರುವುದಿಲ್ಲ.  ಕಾರಣ ಇವರ ಹಿತಾಸಕ್ತಿಗಳ ರಕ್ಷಣೆ ಅಷ್ಟಾಗಿ ಆಗುವುದಿಲ್ಲ.

IV. ಕಾರ್ಮಿಕ ಚಳುವಳಿಯ ಅರ್ಥ:- ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಶ್ರಮಿಕ ವರ್ಗ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅಲ್ಲದೇ ಬಂಡವಾಳಗಾರರ ಕಪಿ ಮುಷ್ಟಿಯಲ್ಲಿ ಆ ವರ್ಗ ನಲುಗಿಹೋಗಿತ್ತು.  ಸ್ವಾರ್ಥರಾದ ಅವರು ಕಾರ್ಮಿಕರನ್ನು ಅಲ್ಪವೇತನಕ್ಕಾಗಿ ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುತ್ತಿದ್ದರು.  ಸಾಲದೆ ಸ್ತ್ರೀಯರನ್ನು, ಮಕ್ಕಳನ್ನು ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುತ್ತಿದ್ದರು.  ಅವಿದ್ಯಾವಂತರು, ಮುಗ್ಧರಾದ ಅವರು ಒಂದುಕಡೆ ಅಧಿಕಾರಿಶಾಹಿ, ಮತ್ತೊಂದು ಕಡೆ `ಬಂಡವಾಳಗಾರರ ಶೋಷಣೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿ ಕರಿನೆರಳಿನಲ್ಲಿ ಬಾಳುತ್ತಿದ್ದರು.  ಇಂತಹ ಶ್ರಮಿಕ ವರ್ಗ ಎಚ್ಚೆತ್ತು ಸಂಘಟಿತರಾಗಿ ಹೋರಾಟಕ್ಕಿಳಿದು ಅನೇಕ ಟ್ರೇಡ್ ಯೂನಿಯನ್‌ಗಳನ್ನು ಕಟ್ಟಿತು. ಹೀಗೆ 'ದುಡಿಯುವ ವರ್ಗ ತಮ್ಮ ಸೇವಾ ಸವಲತ್ತುಗಳನ್ನು ಉತ್ತಮಪಡಿಸಿಕೊಳ್ಳಲು ಸಂಘಟಿತರಾಗಿ ಒಂದಾದ ಪ್ರಕ್ರಿಯೆಗೆ ಕಾರ್ಮಿಕ ಚಳುವಳಿ' ಎಂದು ಕರೆಯಲಾಗಿದೆ.

V. ವಸಾಹತು ಭಾರತದಲ್ಲಿ ಕಾರ್ಮಿಕ ಚಳವಳಿಯ ಇತಿಹಾಸ:- ವಸಾಹತು ಭಾರತದಲ್ಲಿನ ಕಾರ್ಮಿಕ ಚಳವಳಿಯಲ್ಲಿ ಅನೇಕ ಹಂತಗಳಿವೆ. ಅವುಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದು;

ಮೊದಲನೆ ಹಂತ - (- 875-1918

ಎರಡನೆ ಹಂತ - - 1918–24

ಮೂರನೆ ಹಂತ - - 1924–34

ನಾಲ್ಕನೆ ಹಂತ - - 1935–39

ಐದನೆ ಹಂತ - - 1939–45

ಆರನೆ ಹಂತ - - 1945–47.

 ಬ್ರಿಟಿಷ್‌ ಭಾರತದಲ್ಲಿನ ಕಾರ್ಮಿಕರ ಚಳವಳಿಯ ಇತಿಹಾಸವು   ಆರಂಭವಾಗುವುದಕ್ಕೆ ಮೊದಲೇ ಬಂಡವಾಳಶಾಹಿಗಳು ಮತ್ತು ಕೈಗಾರಿಕೆಗಳ ಮಾಲೀಕರು ಸಂಘಟಿತರಾಗಿದ್ದರು. ಏಕೆಂದರೆ, ಅವರು ತಮ್ಮ ಉದ್ಯಮಗಳ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಒಟ್ಟಾಗಿ ಸಂಘಟನೆಗಳನ್ನು ಕಟ್ಟಿಕೊಂಡರು. ಅವರ ಸಂಘಟಿತ ಪ್ರಯತ್ನದ ಫಲವಾಗಿ ಕಾರ್ಮಿಕರ ಒಪ್ಪಂದದ ಉಲ್ಲಂಘನಾ ಕಾಯ್ದೆಯು 1860 ರಲ್ಲಿ ಜಾರಿಗೆ ಬಂದಿತು. ಅದರ ಪ್ರಕಾರ ಒಪ್ಪಂದ ಉಲ್ಲಂಘಿಸುವ ಅಥವಾ ಪಾಲಿಸದ, ಅಂದರೆ ಮಾಲೀಕರ ಅನುಮತಿ ಇಲ್ಲದೇ ಕೆಲಸ ಬಿಟ್ಟು ಹೋಗುವ, ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬಹುದಾಗಿತ್ತು.

  ಆದರೆ 1854ರಲ್ಲಿ ಬಾಂಬೆಯಲ್ಲಿ ಹತ್ತಿ ಗಿರಣಿಗಳು ಹಾಗೂ ಕಲ್ಕತ್ತದ ಸೆಣಬು ಮಿಲ್ ಸ್ಥಾಪನೆಯೊಂದಿಗೆ ಭಾರತದಲ್ಲಿ ನಿಜವಾದ ಕಾರ್ಮಿಕ ಚಳುವಳಿಯ ಇತಿಹಾಸ ಆರಂಭವಾಗುತ್ತದೆ.  ಕಲ್ಕತ್ತಾ ಪಲ್ಲಕ್ಕಿ ಹೊರುವವರು (1827), ಕಾಚಾರ್‌ ಜಿಲ್ಲೆಯ ಚಹಾತೋಟಗಳ ಕಾರ್ಮಿಕರು  (1855-57), ಹೌರಾ ರೈಲ್ವೆ ಕಾರ್ಮಿಕರು (1862), ನಾಗಪುರ ಎಂಪ್ರೆಸ್ ಮಿಲ್ ಕಾರ್ಮಿಕರು (1877) ಸಂಪು ಹೂಡಿದ್ದರು. 1870ರಲ್ಲಿ ಶಶಿಪಾದ ಬ್ಯಾನರ್ಜಿ ಎಂಬುವವರು ವರ್ಕರ್ ಮೆನ್ಸ್ ಕ್ಲಬ್‌ ಎಂಬ ಕಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿ 'ಶ್ರಮಜೀವಿ' ಎಂಬ ಪತ್ರಿಕೆಯನ್ನು ಹೊರಡಿಸಿ ಕಾರ್ಮಿಕರ ಸಂಘಟನೆಗೆ ಶ್ರಮಿಸಿದರು.

VI. ಕಾರ್ಮಿಕರ ಚಳವಳಿಯ ಕಾರಣಗಳು:- ವಸಾಹತು ಭಾರತದಲ್ಲಿ ಆರಂಭವಾದ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸಂಘಟಿತರಾಗಿ ಕಾರ್ಮಿಕರ ಚಳವಳಿಗಳಲ್ಲಿ ತೊಡಗಲು ಅಂದಿಗೆ ಇದ್ದ ಕೆಲವು ಪ್ರಮುಖ ಕಾರಣಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು:

  1. ಕಡಿಮೆ ಕೂಲಿ  ಮತ್ತು ಸುಧೀರ್ಘ ಕೆಲಸದ ಅವಧಿ.
  2. ಕೆಲಸದ  ಅಭದ್ರತೆ  ಮತ್ತು ಸಾಮಾಜಿಕ ಸುರಕ್ಷತೆಯ ಕೊರತೆ.
  3. ಕಾರ್ಮಿಕರಾಗಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ನೇಮಕ.
  4. ಅಮಾನವೀಯ ಮತ್ತು ಬೇಜವಾಬ್ದಾರಿ ಮಾಲೀಕರು.
  5. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ನಿರ್ಲಕ್ಷ್ಯ.
  6. ಕಾರ್ಮಿಕರಲ್ಲಿನ ಅಧಿಕ ಪ್ರಮಾಣದ ಅನಕ್ಷರತೆ.
  7. ಕಾರ್ಕಾನೆಗಳಲ್ಲಿನ ಅಸಹನೀಯ ಮತ್ತು ಅಸುರಕ್ಷಿತ ಕೆಲಸದ ವಾತಾವರಣ.

VII. ಪ್ರಥಮ ಕಾರ್ಮಿಕರ ಚಳವಳಿ ಮತ್ತು ಪ್ರಥಮ ಕಾರ್ಖಾನೆಗಳ ಕಾಯ್ದೆ:- ಭಾರತದಲ್ಲಿ ಕಾರ್ಮಿಕರ ಹೋರಾಟದ ಮೊದಲ ಪ್ರಯತ್ನಗಳು 1860 ರಲ್ಲಿಯೇ ಆರಂಭವಾದರೂ ಭಾರತದಲ್ಲಿನ ಕಾರ್ಮಿಕರ ಮೊದಲ ಪ್ರತಿಭಟನೆಯು 1875 ರಲ್ಲಿ ಬಾಂಬೆಯಲ್ಲಿ ನಡೆಯಿತು.   ಆಗ S.S ಬೆಂಗಾಲಿ ಅವರು ಮಹಿಳಾ ಮತ್ತು ಬಾಲಕಾರ್ಮಿಕರ ಪರವಾಗಿ ಈ ಪ್ರತಿಭಟನೆಯನ್ನು ನಡೆಸಿದರು.  ಇದರ ಪರಿಣಾಮವಾಗಿ ಬಾಂಬೆ ಸರ್ಕಾರವು ಪ್ರಥಮ ಕಾರ್ಖಾನೆಗಳ ಆಯೋಗವನ್ನು ರಚಿಸಿತು.  ಇದರ ವರದಿಯನ್ನು ಆಧರಿಸಿ ಗವರ್ನರ್‌ ಜನರಲ್‌ ಲಾರ್ಡ್‌ ರಿಪ್ಪನ್‌ 1881 ರಲ್ಲಿ ಪ್ರಥಮ ಕಾರ್ಖಾನೆಗಳ ಕಾಯ್ದೆಯನ್ನು ಜಾರಿಗೊಳಿಸಿದನು. ಅದರ ಪ್ರಮುಖ ನಿಬಂಧನೆಗಳು ಕೆಳಕಂಡಂತಿವೆ:

  1. 7 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ.
  2. 7 ರಿಂದ 9 ರವರೆಗಿನ ಮಕ್ಕಳು ದಿನಕ್ಕೆ ಕೇವಲ ೯ ತಾಸುಗಳು ಮಾತ್ರ ದುಡಿಯಬೇಕು.
  3. ಮಕ್ಕಳು ಅಪಾಯಕಾರಿ ಯಂತ್ರಗಳ ಬಳಿಯಲ್ಲಿ ಕೆಲಸ ಮಾಡುವಂತಿಲ್ಲ.

4.           ಮಕ್ಕಳು ಒಂದೇ ದಿನ ಎರಡು ಕಾರ್ಖಾನೆಗಳಲ್ಲಿ ದುಡಿಯುವಂತಿಲ್ಲ.

5.           ಕಾರ್ಮಿಕರಿಗೆ ತಿಂಗಳಿಗೆ 4 ದಿನಗಳ ರಜೆ ಮತ್ತು ಕೆಲಸದ ಅವಧಿಯಲ್ಲಿ 1 ಗಂಟೆಯ ವಿಶ್ರಾಂತಿಯನ್ನು ನೀಡಬೇಕು.

6.           ವಯಸ್ಕರಿಗೆ ಕೆಲಸದ ಸ್ಥಳದಲ್ಲಿ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಅಪಾಯಕಾರಿ ಯಂತ್ರಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿತ್ತು.

7.           ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಅದರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು.

  1. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರವು ಕಾರ್ಖಾನೆಗಳ ಮೇಲ್ವಿಚಾರಕರನ್ನು ನೇಮಿಸಿತು.

A. ಕಾಯ್ದೆಯ ಜಾರಿಯ ನಿಜವಾದ ಉದ್ದೇಶ: ಆಗ ತಾನೇ ಚೇತರಿಸಿಕೊಳ್ಳುತ್ತಿದ್ದ ಭಾರತೀಯ ಜವಳಿ ಉದ್ಯಮದ ಕತ್ತು ಹಿಸುಕುವುದು ಕಾಯ್ದೆಯ ಹಿಂದಿನ ನಿಜವಾದ ಉದ್ದೇಶವಾಗಿತ್ತು.  ಏಕೆಂದರೆ, ಕಡಿಮೆ ಕೂಲಿ, ದೀರ್ಘ ಅವಧಿಯ ದುಡಿಮೆ ಮತ್ತು ಸ್ಥಳೀಯ ಕಚ್ಚಾವಸ್ತುಗಳು ದೊರೆತಿದ್ದರಿಂದ ಭಾರತದ ಬಟ್ಟೆ ಉದ್ಯಮ ದೇಶೀಯ ಮಿಲ್ಲುಗಳ ಬಟ್ಟೆ ಬ್ರಿಟನ್‌ನಿಂದ ಆಮದಾಗುತ್ತಿದ್ದ ಬಟ್ಟೆಗಿಂತ ಕಡಿಮೆ ದರದಲ್ಲಿ ಸಿಗುತ್ತಿತ್ತು.  ಇದರಿಂದ ಬ್ರಿಟನ್‌ ಬಟ್ಟೆಗೆ ಬೇಡಿಕೆ ಕುಂಠಿತವಾಗಿ ನಷ್ಟವಾಗುತ್ತಿತ್ತು.  ಕಾರಣ  ಬ್ರಿಟನ್‌ ಉದ್ಯಮಿಗಳು ಭಾರತದಲ್ಲಿದ್ದ ಕಂಪೆನಿ ಸರ್ಕಾರದ ಮೇಲೆ ತಮ್ಮ ಉದ್ದಿಮೆಗಳನ್ನು ರಕ್ಷಿಸಲು ಒತ್ತಡ ಹೇರಿದವು.  ಈ ಕಾಯ್ದೆಯ ಮೂಲಕ ದೇಶೀಯ ಬಟ್ಟೆಗಳ ಉತ್ಪಾದನಾ ವೆಚ್ಚ ಹೆಚ್ಚುವಂತೆ ಮಾಡಲಾಯಿತು ಮತ್ತು ಆಮದು ಬಟ್ಟೆಗಳಿಗಿಂತ ದೇಶೀಯ ಬಟ್ಟೆಗಳಿಗೆ ಅಧಿಕ ಮಾರಾಟದ ತೆರಿಗೆ ವಿಧಿಸಿ ಅವುಗಳ ಬೆಲೆ ಹೆಚ್ಚುವಂತೆ ಮಾಡಲಾಯಿತು.

   2ನೆ ಕಾರ್ಖಾನೆಗಳ ಕಾಯ್ದೆಯು 1891ರಲ್ಲಿ ಜಾರಿಗೆ ಬಂದಿತು. ಈ ಕಾಯ್ದೆಯು ಗಮನಾರ್ಹವಾದ ಯಾವುದೇ ಅನುಕೂಲಗಳನ್ನು ಕಾರ್ಮಿಕರಿಗೆ ನೀಡಲಿಲ್ಲ.  ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಾರದ ರಜೆ ನೀಡಲಾಯಿತು.  ಅವರ ಕೆಲಸದ ಸಮಯವನ್ನು ನಿಗದಿ ಮಾಡಲಾಯಿತು.  ಆದರೆ ಪುರುಷರ ಕೆಲಸದ ಸಮಯದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ.

VIII. ಆರಂಭಿಕ ಕಾರ್ಮಿಕ ಚಳವಳಿಗಳ ನಾಯಕರು:- ಸೊರಾಬ್ಜಿ ಬೆಂಗಾಲಿ & N. M. ಲೋಕಂಡೆ ಅವರು ತಮ್ಮ ಕಾರ್ಮಿಕಪರ ಕಾರ್ಯಗಳಿಂದಾಗಿ ಭಾರತದಲ್ಲಿ ಆರಂಭದ ಕಾರ್ಮಿಕ ಚಳವಳಿಗಳ ನೇತಾರರೆಂದು ಗುರ್ತಿಸಲ್ಪಟ್ಟಿದ್ದಾರೆ. ಿ ಿ ಅವರು ಮುಂಬೈ ವಿಧಾನಸಭೆಯ ಸದಸ್ಯರಾಗಿದ್ದರು. ಅವರು 1878ರಲ್ಲಿ ಕಾರ್ಮಿಕರ ಕೆಲಸದ ಅವದಿ ಮಿತಗೊಳಿಸಲು ವಿಧಾನ ಸಭೆಯಲ್ಲಿ ಒಂದು ಖಾಸಗಿ ಮಸೂದೆ ಮಂಡಿಸಿದ್ದರು.  1880ರಲ್ಲಿ ನಾರಾಯಣ ಮೇಘಜಿ ಲೋಖಾಂಡೆ ಅವರು ಭಾರತದ ಪ್ರಪ್ರಥಮ ಕಾರ್ಮಿಕ ಸಂಘವಾದ 'ಬಾಂಬೆ ಮಿಲ್ಸ್ & ಬಾಂಬೆ ಮಿಲ್ಸ್ ಯಾಂಡ್ಸ್‌ ಅಸೊಸಿಯೇಶನ್ ಅನ್ನು ಸ್ಥಾಪಿಸಿದರು.  ಇವರು ಬಾಂಬೆಯಲ್ಲಿನ ಕಾರ್ಖಾನೆಯೊಂದರಲ್ಲಿ ಉಗ್ರಾಣಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಅವರು ದೀನಬಂಧು ಎಂಬ ಪತ್ರಿಕೆ ಹೊರಡಿಸಿದರು.  ಈ ಸಂಘವು ಭಾರತದಲ್ಲಿ ಕಾರ್ಮಿಕ ಚಳುವಳಿಗೆ ಬುನಾದಿ ಹಾಕಿತು. ನಾರಾಯಣ ಮೇಘಜಿ ಲೋಖಾಂಡೆ ಅವರು ಕಾರ್ಮಿಕರ ಚಳವಳಿಯ ನೇತೃತ್ವ ವಹಿಸಿಕೊಳ್ಳುವುದಕ್ಕೆ ಮುನ್ನ ರೈಲ್ವೆ ಮತ್ತು ಅಂಚೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮುಂದೆ ಅವರು ಕಾರ್ಮಿಕರ ಹಿತಾಸಕ್ತಿಗಳ ರಕ್ಷಣೆಗಾಗಿ ತಮ್ಮ ಜೀವನವಿಡೀ ಶ್ರಮಿಸಿದರು.

IX. ಕಾರ್ಮಿಕರ ಚಳವಳಿಗಳಿಗೆ ರಾಷ್ಟ್ರೀಯ ಸ್ವರೂಪ:- 20ನೆ ಶತಮಾನದ ಆರಂಭದಿಂದ  ಕಾರ್ಮಿಕರ ಚಳುವಳಿಗಳಿಗೆ ರಾಷ್ಟ್ರೀಯ ನಾಯಕರ ಬೆಂಬಲ ದೊರೆಯತೊಡಗಿತು.  ಪರಿಣಾಮವಾಗಿ ಬಂಗಾಳ ವಿಭಜನೆಯ ಕಾಲದಲ್ಲಿ ನಡೆದ ಸ್ವದೇಶಿ ಚಳವಳಿಯಲ್ಲಿ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡರು.  ನಂತರ 1908ರಲ್ಲಿ ರಾಜದ್ರೋಹದ ಮೇಲೆ ತಿಲಕರಿಗೆ 6 ವರ್ಷಗಳ ಜೈಲುಶಿಕ್ಷೆ ವಿಧಿಸಿದಾಗ ಬಾಂಬೆ ಮಿಲ್‌ ಕಾರ್ಮಿಕರು ಸಾಂಕೇತಿಕವಾಗಿ 6 ದಿನಗಳ ಮುಷ್ಕರ ನಡೆಸಿದರು ತಮಿಳುನಾಡಿನಲ್ಲಿ ಚಿದಂಬರಂ ಪಿಳ್ಳೈ ಮತ್ತು ಸುಬ್ರಮಣ್ಯಂ ಶಿವ ಅವರು ಕಾರ್ಮಿಕರಲ್ಲಿ ಮೂಡಿಸಿದ ಜಾಗೃತಿಯಿಂದಾಗಿ 1908, ಫೆಬ್ರವರಿ 27ರಂದು ನಡೆಸಿದ ಮುಷ್ಕರಕ್ಕೆ ಅಪಾರ ಜನಬೆಂಬಲ ದೊರೆತ ಕಾರಣ ಕಂಪೆನಿಯು ಶೇ. 50 ರಷ್ಟು ವೇತನ ಹೆಚ್ಚಳ, ಭಾನುವಾರದ ರಜಾದಿನ ಮತ್ತು ಕೆಲಸದ ಅವದಿಯನ್ನು ಕಡಿಮೆ ಮಾಡಲು ಒಪ್ಪಿತು.

XII. ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳ ಏಳಿಗೆ:- 1900ರ ನಂತರ ಭಾರತದ ವಿವಿಧ ಕೇಂದ್ರಗಳಲ್ಲಿ ಕಾರ್ಮಿಕ ಸಂಘಟನೆಗಳು ಆರಂಭಗೊಂಡವು. 1918 ರಲ್ಲಿ B.P. ವಾಡಿಯ ಅವರ ನೇತೃತ್ವದಲ್ಲಿ ಮದ್ರಾಸ್‌ ಕಾರ್ಮಿಕರಸಂಘವು ಪ್ರಾರಂಭವಾಯಿತು. ಇವರು ಹೋಂ ರೂಲ್‌ ಚಳವಳಿಯ ಮುಖಂಡರೂ ಆಗಿದ್ದರು. ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿದ್ದ ಕೈಗಾರಿಕಾ ನಗರಗಳಲ್ಲಿ ಸ್ಥಳೀಯವಾಗಿ ಕಾರ್ಮಿಕರ ಸಂಘಟನೆಗಳು ಆರಂಭವಾದವು. ಮುಂದೆ ಅವುಗಳಿಗೆಲ್ಲಾ ಒಂದು ರಾಷ್ಟ್ರಮಟ್ಟದ ಒಕ್ಕೂಟವು ಆರಂಭವಾಯಿತು.  1920 ರಲ್ಲಿ ಬಾಂಬೆಯಲ್ಲಿ Aall India Trade Union Congress (AITUC) ಸ್ಥಾಪನೆಯಾಯಿತು. ಇದರ ನೇತೃತ್ವವನ್ನು N.M. ಜೋಶಿ ಮತ್ತು ಇತರರು ವಹಿಸಿದ್ದರು. ಅದು ಒಟ್ಟು 64 ಕಾರ್ಮಿಕರ ಸಂಘಗಳನ್ನು ಒಳಗೊಂಡಿದ್ದು, 1,40,000 ಕ್ಕೂ ಹೆಚ್ಚು ಕಾರ್ಮಿಕ ಸದಸ್ಯರಿದ್ದರು. ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಲಾಲಾ ಲಜಪತರಾಯ್‌ ಅವರು 1920ರಲ್ಲಿ ನಡೆದ ಇದರ ಪ್ರಥಮ ಅದಿವೇಶನದ ಅಧ್ಯಕ್ಷರಾಗಿದ್ದರು.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources