ಸಮಕಾಲೀನ ಭಾರತದಲ್ಲಿನ ಕಾರ್ಮಿಕರ ಚಳವಳಿಗಳು.

ಕಾರ್ಮಿಕ ಪದದ ಅರ್ಥ :- ಸಾಮಾನ್ಯ ಅರ್ಥದಲ್ಲಿ ಯಾರು ಕರ್ಮ ಅಂದರೆ ಕೆಲಸದಲ್ಲಿ ನಿರತರಾಗಿರುತ್ತಾರೊ ಅವರು ಕಾರ್ಮಿಕ ಎನಿಸಿಕೊಳ್ಳುತ್ತಾರೆ. ಅವರು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಉದಾಹರಣೆ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಾನೆ.

 ಕಾರ್ಮಿಕ ಪದದ ಸಮಾನಾರ್ಥಕ ಪದಗಳು:  ಆಳು, ಕೂಲಿ, ಕೆಲಸಗಾರ, ಪರಿಶ್ರಮಿಕ, ಶ್ರಮಜೀವಿ, ಶ್ರಮಿಕ

ಸಾಮಾನ್ಯ ಅರ್ಥದಲ್ಲಿ ಕಾರ್ಮಿಕ ಎಂದರೆ ದೈಹಿಕ ಇಲ್ಲವೇ ಬೌದ್ಧಿಕ ಶ್ರಮದಿಂದ ದುಡಿದು ಹಣ ಗಳಿಸುತ್ತಿರುವ ವ್ಯಕ್ತಿಗೆ ಕಾರ್ಮಿಕಎನ್ನುತ್ತೇವೆ. ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ.

 ಕೈಗಾರಿಕಾ ಕ್ರಾಂತಿಯ ಫಲವಾಗಿ ಸಮಾಜದಲ್ಲಿ ಬಂಡವಾಳಶಾಹಿ ವರ್ಗ ಮತ್ತು ಕಾರ್ಮಿಕ ವರ್ಗ ಎಂಬ ಎರಡು ವರ್ಗಗಳ ಉದಯವಾಯಿತು. ಈ ಎರಡು ವರ್ಗಗಳ ನಡುವೆ ಆರಂಭವಾದ ಸಂಘರ್ಷಗಳು ಮುಂದೆ ಕಾರ್ಮಿಕ ಚಳವಳಿಗಳಿಗೆ ಕಾರಣವಾದವು. ಏಕೆಂದರೆ, ಬಂಡವಾಳಶಾಹಿಗಳು ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದು, ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.

 ಕಾರ್ಮಿಕರ ದಿನಾಚರಣೆ:   ಆರಂಭದಲ್ಲಿ ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿಯವರೆಗೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಕಾರ್ಮಿಕರುದಿನದ 8 ಗಂಟೆ ದುಡಿವ ಅವಧಿ ನಿಗದಿ ಮಾಡಿಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆಗಳು ದೈನಂದಿನ ಚಟುವಟಿಕೆಗಳಿಗಾಗಿ, 8 ಗಂಟೆಗಳು ದುಡಿವ ಅವಧಿ ಹಾಗೂ ಇನ್ನುಳಿದ 8 ಗಂಟೆಗಳು ವಿಶ್ರಾಂತಿಗಾಗಿ ಮೀಸಲು ಇರಬೇಕು ಎಂಬ ಕೂಗು ಎದ್ದಿತು. 8 ಗಂಟೆ ದುಡಿವ ಅವಧಿಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಅಮೆರಿಕದ ಕಾರ್ಮಿಕರು ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡತೊಡಗಿದರು.  ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕಲು ಮೇ 4 ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು.  ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದರು. ಇದನ್ನು ಲೆಕ್ಕಿಸದೇ ಕಾರ್ಮಿಕರು ಹೋರಾಟವನ್ನು ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆಗಳ ಕಾರ್ಮಿಕರ ಕೆಲಸದ ಅವಧಿಯನ್ನು ನಿಗದಿಮಾಡಲಾಯಿತು.  ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತರರಾಷ್ಟೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ.

ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು:  ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ಇವರ ಪ್ರಮಾಣವು ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡು ಬಂದಿದ್ದು ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ.

ಇನ್ನೂಳಿದ ಶೇ 85 ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೋಟೆಲ್ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು, ಮುಂತಾದ ಕ್ಷೇತ್ರಗಳಲ್ಲಿ ದುಡಿಯುವ ಕೆಲಸಗಾರರೇ ಅಸಂಘಟಿತ ಕಾರ್ಮಿಕರು.  ಇವರಿಗೆ ಯಾವುದೇ ನೊಂದಾಯಿತ ಸಂಘಟನೆಗಳು ಇರುವುದಿಲ್ಲ.  ಕಾರಣ ಇವರ ಹಿತಾಸಕ್ತಿಗಳ ರಕ್ಷಣೆ ಅಷ್ಟಾಗಿ ಆಗುವುದಿಲ್ಲ.

ಕಾರ್ಮಿಕ ಚಳವಳಿಯ ಅರ್ಥ:  ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಶ್ರಮಿಕ ವರ್ಗ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಬಂಡವಾಳಗಾರರ ಕಪಿ ಮುಷ್ಟಿಯಲ್ಲಿ ವರ್ಗ ನಲುಗಿಹೋಗಿತ್ತು.  ಸ್ವಾರ್ಥರಾದ ಅವರು ಕಾರ್ಮಿಕರನ್ನು ಅಲ್ಪವೇತನಕ್ಕಾಗಿ ಹೆಚ್ಚಿನ ಅವಧಿಯಲ್ಲಿ ದುಡಿಸಿಕೊಳ್ಳುತ್ತಿದ್ದರು. ಸಾಲದೆ ಸ್ತ್ರೀಯರನ್ನು, ಮಕ್ಕಳನ್ನು ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುತ್ತಿದ್ದರು. ಅವಿದ್ಯಾವಂತರು, ಮುಗ್ಧರಾದ ಅವರು ಒಂದುಕಡೆ ಅಧಿಕಾರಿಶಾಹಿ, ಮತ್ತೊಂದು ಕಡೆ `ಬಂಡವಾಳಗಾರರ ಶೋಷಣೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿ ಕರಿನೆರಳಿನಲ್ಲಿ ಬಾಳುತ್ತಿದ್ದರು. ಇಂತಹ ಶ್ರಮಿಕ ವರ್ಗ ಎಚ್ಚೆತ್ತು ಸಂಘಟಿತರಾಗಿ ಹೋರಾಟಕ್ಕಿಳಿದು ಅನೇಕ ಕಾರ್ಮಿಕ ಸಂಘಗಳನ್ನು ಕಟ್ಟಿತು. ಹೀಗೆ 'ದುಡಿಯುವ ವರ್ಗ ತಮ್ಮ ಸೇವಾ ಸವಲತ್ತುಗಳನ್ನು ಉತ್ತಮಪಡಿಸಿಕೊಳ್ಳಲು ಸಂಘಟಿತರಾದ ಪ್ರಕ್ರಿಯೆಗೆ ಕಾರ್ಮಿಕ ಚಳುವಳಿ' ಎಂದು ಕರೆಯಲಾಗಿದೆ.

 ಭಾರತದಲ್ಲಿ ಕಾರ್ಮಿಕರ ಹೋರಾಟದ ಮೊದಲ ಪ್ರಯತ್ನಗಳು 1860 ರಲ್ಲಿಯೇ ಆರಂಭವಾದರೂ ಭಾರತದಲ್ಲಿನ ಕಾರ್ಮಿಕರ ಮೊದಲ ಪ್ರತಿಭಟನೆಯು 1875 ರಲ್ಲಿ ಬಾಂಬೆಯಲ್ಲಿ ನಡೆಯಿತು. ಆಗ S.S ಬೆಂಗಾಲಿ ಅವರು ಮಹಿಳಾ ಮತ್ತು ಬಾಲಕಾರ್ಮಿಕರ ಪರವಾಗಿ ಪ್ರತಿಭಟನೆಯನ್ನು ನಡೆಸಿದರು. ಇದರ ಪರಿಣಾಮವಾಗಿ ಬಾಂಬೆ ಸರ್ಕಾರವು ಪ್ರಥಮ ಕಾರ್ಖಾನೆಗಳ ಆಯೋಗವನ್ನು ರಚಿಸಿತು. ಇದರ ವರದಿಯನ್ನು ಆಧರಿಸಿ 1881 ರಲ್ಲಿ ಪ್ರಥಮ ಕಾರ್ಖಾನೆಗಳ ಕಾಯ್ದೆಯು ಜಾರಿಗೆ ಬಂದಿತು.

ಸೊರಾಬ್ಜಿ ಬೆಂಗಾಲಿ & N. M. ಲೋಕಂಡೆ ಅವರ ಕಾರ್ಯಗಳು:  1878ರಲ್ಲಿ ಸೊರಾಬ್ಜಿ ಬೆಂಗಾಲಿ ಎಂಬ ಮುಂಬೈ ವಿಧಾನಸಭೆಯ ಸದಸ್ಯರು ಕಾರ್ಮಿಕರ ಕೆಲಸದ ಅವದಿ ಮಿತಗೊಳಿಸಲು ಒಂದು ಖಾಸಗಿ ಮಸೂದೆ ಮಂಡಿಸಿದ್ದರು.

 1880ರಲ್ಲಿ ಭಾರತದ ಪ್ರಪ್ರಥಮ ಕಾರ್ಮಿಕ ಸಂಘವಾದ 'ಬಾಂಬೆ ಮಿಲ್ಸ್ & ಬಾಂಬೆ ಮಿಲ್ಸ್ ಯಾಂಡ್ಸ್ಅಸೊಸಿಯೇಶನ್ಅನ್ನು ನಾರಾಯಣ ಮೇಘಜಿ ಲೋಖಾಂಡೆ ಅವರು ಸ್ಥಾಪಿಸಿದರು. ಅಲ್ಲದೇ ಅವರು ದೀನಬಂಧು ಎಂಬ ಪತ್ರಿಕೆ ಹೊರಡಿಸಿದರು. ಸಂಘವು ಭಾರತದಲ್ಲಿ ಕಾರ್ಮಿಕ ಚಳುವಳಿಗೆ ಬುನಾದಿ ಹಾಕಿತು.

 

ಸ್ವಾತಂತ್ರ್ಯಾನಂತರದಲ್ಲಿ ಅಥವಾ ಸಮಕಾಲೀನ ಭಾರತದಲ್ಲಿನ ಕಾರ್ಮಿಕರ ಸಂಘಟನೆಗಳು ಮತ್ತು ಚಳವಳಿಗಳು: 1952ರಲ್ಲಿ ಆರಂಭವಾದ ಜನಸಂಘದ ಅಡಿಯಲ್ಲಿ ಭಾರತೀಯ ಮಜ್ದೂರ್ಸಂಘವು (BMS) 1955ರಲ್ಲಿ  ಸ್ಥಾಪನೆಗೊಂಡಿತು. ಅಂತೆಯೇ 1964 ರಲ್ಲಿ ಭಾರತೀಯ ಕಮ್ಯುನಿಸ್ಟ್ಪಕ್ಷದಲ್ಲಿನ ಒಡಕಿನಿಂದಾಗಿ 1970 ರಲ್ಲಿ AITUC ನಲ್ಲಿ ಒಡಕು ಮೂಡಿ  Centre of Indian Trade Unions (CITU) ಎಂಬ ಹೊಸದೊಂದು ಕಾರ್ಮಿಕರ ಸಂಘಟನೆಯು ಭಾರತೀಯ ಮಾರ್ಕ್ಸಿಸ್ಟ್ವಾದಿ ಕಮ್ಯುನಿಸ್ಟ್ಪಕ್ಷ (CPIM) ನೇತೃತ್ವದಲ್ಲಿ ಆರಂಭಗೊಂಡಿತು. ಹೀಗಾಗಿ 1920ರಲ್ಲಿ ರಾಷ್ಟ್ರಮಟ್ಟದ ಕಾರ್ಮಿಕರ ಚಳವಳಿಯಾಗಿ AITUC  ಹೆಸರಿನಲ್ಲಿ ಹೊರಹೊಮ್ಮಿದ್ದ ಇವರ ಚಳವಳಿಯು 1970 ವೇಳೆಗೆ 5 ಗುಂಪುಗಳಾಗಿ ವಿಭಜನೆ ಹೊಂದಿತು.

1960 ದಶಕದ ಅಂತ್ಯದಲ್ಲಿನ ಬೆಳವಣಿಗೆಗಳು: 1960 ದಶಕದ ಉತ್ತರಾರ್ಧದಲ್ಲಿ ನಡೆದ ಆರ್ಥಿಕ ಹಿಂಜರಿತವು ಬಾಂಬೆ ಕಾರ್ಮಿಕರಿಗೆ ಆರ್ಥಿಕ ತೊಂದರೆಗಳನ್ನು ಉಂಟುಮಾಡಿತು. ಇದು ಅಂದಿನ ಕಾರ್ಮಿಕರ ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಹೊರೆಯಲ್ಲಿ ಕಂಡುಬರುತ್ತದೆ. ವೇಳೆಯಲ್ಲಿ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಪರಿಹರಿಸಲು ಅಶಕ್ತವಾದ ಸಾಂಪ್ರದಾಯಿಕ ಕಾರ್ಮಿಕ ಸಂಘಗಳ ಅಸಮರ್ಥತೆಯು ಶಿವಸೇನೆಯ ಜನನ ಮತ್ತು ಬೆಳವಣಿಗೆಗೆ ಸೂಕ್ತ ಸಂದರ್ಭವನ್ನು ಒದಗಿಸಿತು.

ಶಿವಸೇನೆಯ ನೇತೃತ್ವದಲ್ಲಿ ಮತ್ತೊಂದು ಸಂಘಟನೆ: ಶಿವಸೇನೆಯುಭಾರತೀಯ ಕಾಮಗರ್ ಸೇನೆಎಂಬ ನೂತನ ಕಾರ್ಮಿಕ ಸಂಘಟನೆಯನ್ನು ಸ್ಥಾಪಿಸಿತು. ಇದು ಅದಾಗಲೇ  ಅಸ್ಥಿತ್ವದಲ್ಲಿದ್ದ ಕಾರ್ಮಿಕ ಸಂಘಗಳಿಗೆ ಪರ್ಯಾಯವಾಗಿ ಹೊರಹೊಮ್ಮಿತು. ಆದರೆ ಭಾರತೀಯ ಕಾಮಗರ್ ಸೇನೆಯು ಕಾರ್ಮಿಕ ವರ್ಗವನ್ನು ಜನಾಂಗೀಯ ಆಧಾರದ ಮೇಲೆ  ವಿಭಜಿಸಿತು.

ಪ್ರಾದೇಶಿಕತೆಯ ಬೆಳವಣಿಗೆಗೆ ಕಾರಣಗಳು: ಶಿವಸೇನೆಯ ಪ್ರಕಾರ ದೇಶದ ಇತರ ಪ್ರದೇಶಗಳಿಂದ, ಅದರಲ್ಲೂ ದಕ್ಷಿಣ ಭಾರತದಿಂದ ಬಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಂದಾಗಿ ಮರಾಠಿ ಕಾರ್ಮಿಕ ವರ್ಗದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಹೇಳಿತು. ಹೀಗೆ ಮಹಾರಾಷ್ಟ್ರಕ್ಕೆ ಬಂದಿರುವ ಹೊರಗಿನವರು ಬಾಂಬೆಯನ್ನು ತೊರೆದರೆ, ಸ್ಥಳೀಯ ಕಾರ್ಮಿಕರು ಉದ್ಯೋಗವನ್ನು ಪಡೆಯಬಹುದು ಮತ್ತು ಉತ್ತಮ ಜೀವನವನ್ನು ನಡೆಸಬಹುದು ಎಂಬುದು ಶಿವಸೇನೆಯ ವಾದವಾಗಿತ್ತು. ಕಾಲಕ್ರಮೇಣ ಶಿವಸೇನೆ ಕಮ್ಯುನಿಸ್ಟರ ವಿರುದ್ಧವೂ ತನ್ನ ವಾಗ್ದಾಳಿಯನ್ನು ಮುಂದುವರಿಸಿತು. ಪಕ್ಷದ ಇಂಥಹ ನಡವಳಿಕೆಯು ಕಾರ್ಮಿಕ ಚಳುವಳಿಯನ್ನು ಜನಾಂಗೀಯ ಆಧಾರದ ಮೇಲೆ ವಿಂಗಡಿಸಿತು ಮತ್ತು ಇದು ಬಾಂಬೆಯಲ್ಲಿನ ಕಾರ್ಮಿಕ ವರ್ಗದ ಏಕತೆಗೆ ಧಕ್ಕೆ ಉಂಟುಮಾಡಿತು. ಕಾರ್ಮಿಕರ ಸಂಘಟನೆಯಲ್ಲಿ ಉಂಟಾದ ಬಿರುಕು ಹಾಗೆಯೇ ಮುಂದುವರೆಯಿತು. ಆದರೆ ಕಾರ್ಮಿಕ ವರ್ಗದ ಒಗ್ಗಟ್ಟನ್ನು ಒಡೆಯಲು ಕೈಗಾರಿಕೋದ್ಯಮಿಗಳ ಪರವಾಗಿ ಶಿವಸೇನೆ ಕೆಲಸ ಮಾಡಿತು ಎಂದು ಇನ್ನೂ ಕೆಲವರು ವಾದಿಸುತ್ತಾರೆ. ಶಿವಸೇನೆಯ ಹಸ್ತಕ್ಷೇಪದ ಪರಿಣಾಮಗಳು ಆದರೆ, ಭಾರತೀಯ ಕಾಮಗರ್ ಸೇನೆಯೂ ಸಹ ಕಾರ್ಮಿಕರನ್ನು ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ. ಇದು ಮಹಾರಾಷ್ಟ್ರೇತರ ಕಾರ್ಮಿಕರಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡಿತಲ್ಲದೆ, ಅವರನ್ನು ಜನಾಂಗೀಯ ಮತ್ತು ಕೋಮು ಆಧಾರದಲ್ಲಿ ವಿಭಜಿಸಿತು.

1970 ನಂತರ ಆದ ಬೆಳವಣಿಗೆಗಳು: 1970 ದಶಕದ ಮಧ್ಯದ ಹೊತ್ತಿಗೆ ದೇಶದ ಜನರಲ್ಲಿ, ರಾಜಕೀಯ ಪಕ್ಷಗಳು ಮತ್ತು ಅವುಗಳನ್ನು ಅವಲಂಬಿಸಿದ್ದ ಕಾರ್ಮಿಕ ಸಂಘಗಳು, ಚುನಾವಣೆಗಳು, ವೃತ್ತಿಪರ ರಾಜಕೀಯ ಮುಖಂಡರ ವಿರುದ್ಧ ಅತೃಪ್ತಿಯ ಭಾವನೆಯೊಂದು ಮೂಡಿತ್ತು. ಪರಿಣಾಮವಾಗಿ ಅಸ್ಥಿತ್ವದಲ್ಲಿದ್ದ ರಾಜಕೀಯ ವ್ಯವಸ್ಥೆಗೆ ಬದಲಾಗಿ ಬೇರೊಂದು ವ್ಯವಸ್ಥೆಯ ನಿರೀಕ್ಷೆಯಲ್ಲಿ ಸಮಾಜ ಮತ್ತು ಜನರಿದ್ದರು.

ಕಾರ್ಮಿಕ ಸಂಘಟನೆಗಳಿಗೆ ಹೊರತಾದ ಗುಂಪುಗಳ ಏಳಿಗೆ: 1970-80 ದಶಕಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರದ ಸ್ವತಂತ್ರ ನಾಯಕರು ಸಾಂಪ್ರದಾಯಿಕ ಕಾರ್ಮಿಕ ಸಂಘಟನೆಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಹೊರಹೊಮ್ಮಿದರು,. ಅವರಲ್ಲಿ ದತ್ತಾ ಸಮಂತ್, .ಕೆ. ರಾಯ್, ಶಂಕರ್ ಗುಹಾ ನಿಯೋಗಿ ಮತ್ತು ಎಲಾ ಭಟ್ ಅತ್ಯಂತ ಪ್ರಮುಖ ನಾಯಕರಾಗಿದ್ದರು.

ಆಗ ಸ್ಥಾಪನೆಗೊಂಡ ಸಂಗಟನೆಗಳು ಯಾವುವೆಂದರೆ, ಕಾರ್ಯನಿರತ ಮಹಿಳೆಯರ ಸಂಘ, (ಚೆನ್ನೈ),  ಸ್ವ-ಉದ್ಯೋಗಿ ಮಹಿಳೆಯರ ಸಂಘ (ಗುಜರಾತ್),,  ತಾಂತ್ರಿಕತೆ ಮತ್ತು ಅಬಿವೃದ್ಧಿಯ ಸಂಘ (ಹಿಮಾಚಲ ಪ್ರದೇಶ),,  ಅಮ್ಮಾ ಸಂಘಟನೆ (ಒರಿಸ್ಸಾ),,  ಕೇರಳ ದಿನೇಶ್ಬೀಡಿ (ಕೇರಳ) ಮತ್ತು  ಕಾಗದ ಪತ್ರ ಶ್ರಮಿಕ ಪಂಚಾಯತ್‌ (ಮಹಾರಾಷ್ಟ್ರ).

ಪರಿಣಾಮಗಳು: ನಾಯಕರು ಮತ್ತು ಸಂಸ್ಥೆಗಳು ಅಲ್ಪ ಮಟ್ಟದ ಶ್ರೇಣಿಕೃತ ಅಧಿಕಾರಶಾಹಿ ವ್ಯವಸ್ಥೆ ಹೊಂದಿದ್ದವು;ಆದರೆ ಆಮೂಲಾಗ್ರ ಬದಲಾವಣೆಗಳಲ್ಲಿ ನಂಬಿಕೆ ಇರಲಿಲ್ಲ. ಸಂಸ್ಥೆಗಳು ತಮ್ಮ ಸದಸ್ಯರ ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಮಾಡಿದವು. ಆದಾಗ್ಯೂ, ಅವು ಕಾರ್ಮಿಕ ಸಂಘಗಳಿಗೆ ಬದಲಿ ವ್ಯವಸ್ಥೆ ಎನಿಸಿಕೊಳ್ಳಲಿಲ್ಲ.

1974 ರೈಲ್ವೆ ಕಾರ್ಮಿಕರ ಮುಷ್ಕರ: 1974 ರಲ್ಲಿ, ಕಾಂಗ್ರೆಸ್ ಅಂಗಸಂಸ್ಥೆ INTUC  ಹೊರತುಪಡಿಸಿ, ಮುಖ್ಯ ಕಾರ್ಮಿಕ ಸಂಘಗಳೊಂದಿಗೆ ಸಂಬಂಧ ಹೊಂದಿದ್ದ ರೈಲ್ವೆ ಕಾರ್ಮಿಕರು ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಿದರು. ಮುಷ್ಕರದ ಸಮಯದಲ್ಲಿ ರೈಲುಗಳು ಸ್ಥಗಿತಗೊಂಡವು. ಸರ್ಕಾರವು ಬಲವಾದ ಕಾರ್ಮಿಕ ವಿರೋಧಿ ಕ್ರಮಗಳಿಂದ ಮುಷ್ಕರವನ್ನು ತಡೆಯಲು ಪ್ರಯತ್ನಿಸಿತು.

1982-83 ಬಾಂಬೆ ಬಟ್ಟೆ ಮಿಲ್ಕಾರ್ಮಿಕರ ಮುಷ್ಕರ:  1982-83ರಲ್ಲಿ ಬಾಂಬೆಯ ಜವಳಿ ಕಾರ್ಮಿಕರು ಮುಷ್ಕರದಲ್ಲಿ ತೊಡಗಿದರು ಮತ್ತು ಇದು ದೇಶದ ಕಾರ್ಮಿಕ ವರ್ಗದ ಚಳವಳಿಯಲ್ಲಿ ಹೊಸ ಮಾರ್ಗವೆಂದು ಪರಿಗಣಿಸಲಾಯಿತು. ಸಾಂಪ್ರದಾಯಿಕ ನಾಯಕತ್ವ ಮತ್ತು ಕಾರ್ಮಿಕ ಸಂಘಗಳ ಬಗ್ಗೆ ಅತೃಪ್ತಿ ಹೊಂದಿದ್ದ ಬಾಂಬೆಯ ಜವಳಿ ಕಾರ್ಮಿಕರು ಹೊಸ ನಾಯಕ ಮತ್ತು ಸಂಘಟನೆಯ ಕರೆಗೆ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರ ಗಿರಣಿ ಕಾರ್ಮಿಕರ ಸಂಘದ (MGKU) ಅಧ್ಯಕ್ಷ ದತ್ತಾ ಸಮಂತ್ ಅವರು ಬಾಂಬೆಯ ಜವಳಿ ಕಾರ್ಮಿಕರ ದೊಡ್ಡ ಗುಂಪನ್ನು ಮುಷ್ಕರದಲ್ಲಿ ಭಾಗವಹಿಸುವಂತೆ ಮಾಡಿದರು.

ಮುಷ್ಕರದ ವಿಶೇಷತೆ ಮತ್ತು ಪರಿಣಾಮ:  ದತ್ತಾ ಸಮಂತ್ಅವರು ಮುಖ್ಯವಾಗಿ ಕಾರ್ಮಿಕರ ಆರ್ಥಿಕ ಸಮಸ್ಯೆಗಳತ್ತ ಗಮನ ಹರಿಸಿದರು. ಇದು ರಾಜಕೀಯ ವಿಷಯಗಳ ಬದಲಾಗಿ ಕಾರ್ಮಿಕರ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸಿದ ಸಂದರ್ಭವಾಗಿತ್ತು ಎಂದು ಸಲೀಮ್ ಲಕ್ರಾ ಅಭಿಪ್ರಾಯಪಡುತ್ತಾರೆ. ಇದರಿಂದ ದತ್ತಾ ಸಮಂತ್ಅವರು ಅದುವರೆಗಿನ ಕಾರ್ಮಿಕರ ಒಕ್ಕೂಟಗಳಿಗೆ ಒಂದು ಸವಾಲಾಗಿ ಪರಿಣಮಿಸಿದರು. ಮುಷ್ಕರವು ತನ್ನ ಗುರಿಗಳನ್ನು ಸಾಧಿಸದಿದ್ದರೂ ದತ್ತಾ ಸಮಂತ್ ಅವರು ಕಾರ್ಮಿಕರ ನಾಯಕರಾಗಿ ಹೊರಹೊಮ್ಮಿದರು.”.

ಉಪಸಂಹಾರ:  ನಂತರದ ದಶಕದಲ್ಲಿ LPG ಪರಿಣಾಮವಾಗಿ ಕಾರ್ಮಿಕರ ಸಂಘಟನೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆರ್ಥಿಕ ಪ್ರಗತಿ, ಜಾಗತಿಕ ಪೈಪೋಟಿಯಂತಹ ವಿಷಯಗಳತ್ತ ಅಧಿಕ ಗಮನ ಹರಿಸುತ್ತಿರುವ ಕೈಗಾರಿಕೆಗಳು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ನೇಮಕಾತಿಗಳಿಗೆ ಅಧಿಕ ಪ್ರಾಶಸ್ತ್ಯ ನೀಡುತ್ತಿರುವ ಕಾರಣ ಕಾರ್ಮಿಕರ ಒಕ್ಕೂಟಗಳು ಹಿನ್ನೆಲೆಗೆ ಸರಿಯುತ್ತಿವೆ.

*****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources