ಬಹಮನಿ ಸುಲ್ತಾನರ ರಾಜಕೀಯ ಇತಿಹಾಸದ ಮುಖ್ಯಾಂಶಗಳು

ಬಹಮನೀ ರಾಜ್ಯ 1347-1538

ಬಹಮನೀ ರಾಜ್ಯವು ಉತ್ತರ ಕರ್ನಾಟಕ ಮತ್ತು ದಖನ್ನಿನ ಬಹುಭಾಗದ ಮೇಲೆ ಒಡೆತನ ನಡೆಸಿದ ಮತ್ತು ಕರ್ನಾಟಕದ ಭೂಭಾಗಗಳಲ್ಲಿ ಆಳ್ವಿಕೆ ನಡೆಸಿದ ಪ್ರಥಮ ಇಸ್ಲಾಮ್ ರಾಜ್ಯ. ಸುಮಾರು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದ ಇತಿಹಾಸದಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಿತ್ತು. ದೆಹಲಿಯ ಸುಲ್ತಾನ ಮಹಮ್ಮದ್-ಬಿನ್-ತುಗಲಕನ ಆಳ್ವಿಕೆಯ ಕಾಲದಲ್ಲಿ ಅವನ ದುರಾಡಳಿತದ ವಿರುದ್ಧ ದಖನ್ನಿನ ಸರದಾರರು ದಂಗೆಯೆದ್ದು ದೌಲತಾಬಾದ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ತಮ್ಮಲ್ಲೇ ಒಬ್ಬನಾದ ಆಫ್ಘನ್ ಮುಖಂಡ ಇಸ್ಮಾಯಿಲ್ ಮುಖ್ ಎಂಬುವನನ್ನು ನಾಸಿರ್ಉದ್ದೀನ್ ಷಾ ಎಂಬ ಬಿರುದನ್ನು ನೀಡಿ ದಖನ್ನಿನ ರಾಜನೆಂದು ಘೋಷಿಸಿದರು. ಇಸ್ಮಾಯಿಲ್ ಮುಖ್ ವೃದ್ಧ, ಸುಖಲೋಲುಪ, ಜವಾಬ್ದಾರಿ ಸ್ಥಾನಕ್ಕೆ ಅನರ್ಹನೆನಿಸಿದ. ಸ್ವಲ್ಪ ಕಾಲದಲ್ಲಿಯೇ ಈತ ತನಗಿಂತಲೂ ಸಮರ್ಥನಾದ ಹಸನ್ ಗಂಗುವಿಗೆ ಅಧಿಕಾರ ಬಿಟ್ಟುಕೊಟ್ಟ. ದಖನ್ನಿನ ಸರದಾರರು ಇವನನ್ನು ಅಬುಲ್ ಮುಜಫರ್ ಅಲ್ಲಾಉದ್ದೀನ್ ಹಸನ್ ಬಹಮನ್ ಷಾ ಎಂಬ ಬಿರುದಿನಿಂದ 1347 ಆಗಸ್ಟ್‌ನಲ್ಲಿ ಸುಲ್ತಾನನೆಂದು ಘೋಷಿಸಿದರು.

ಹಸನ್ ಪರ್ಷಿಯನ್ ವೀರ ಇಸ್ ಫಂದಿಯಾರ್ ಮಗ ಬಹುಮನನ ಸಂತತಿಯವನೆಂದು ಕೆಲವರ ಅಭಿಪ್ರಾಯ. ಕೆ. ಆರ್. ಕನುಂಗೋ ಅವರ ಪ್ರಕಾರ ಸಂತತಿಯ ಮೂಲಪುರುಷ ಹಸನ್ ಗಂಗು ಮತಾಂತರಗೊಂಡ ರೈನ್ ಎಂಬ ಹಿಂದು ಪಂಗಡಕ್ಕೆ ಸೇರಿದವ. ಗಂಗೂ ಎಂಬುವುದು ಪಶ್ಚಿಮ ಪಂಜಾಬಿನಲ್ಲಿದ್ದ ರೈನ ಪಂಗಡದ ಉಪಶಾಖೆ ಎಂದು ವಿಷಯದ ಮೇಲೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಹಸನ್ ಬಡತನದಲ್ಲಿ ಹುಟ್ಟಿ, ತನ್ನ ಸ್ವಸಾಮರ್ಥ್ಯದಿಂದ ಉಚ್ಛ ಸ್ಥಾನಕ್ಕೇರಿದ ಎಂಬುದು ನಿರ್ವಿವಾದದ ಸಂಗತಿ.

ಬಹಮನಿ ರಾಜ್ಯದ ಆಳ್ವಿಕೆಯ ಕಾಲವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.

೧. ಗುಲ್ಬರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದ ಕಾಲ (1347-1422)

೨. ಬಿದರೆಯನ್ನು ಅಥವಾ ಬೀದರ್‌ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ್ದು (ಜೂನ್ 1424-1528).

ಇದಾದ ನಂತರ ಬಹುಮನಿ ರಾಜ್ಯವು ಐದು ಷಾಹಿ ರಾಜ್ಯಗಳಾಗಿ ಒಡೆದು ಹೋಯಿತು. ಎರಡೂ ಕಾಲಗಳಲ್ಲಿ ಬಹುಮನೀ ರಾಜ್ಯ ವಿಸ್ತರಣೆಗಾಗಿ  ಮತ್ತು ವಿಜಯನಗರದೊಡನೆ ಸತತವಾಗಿ ಯುದ್ಧಗಳಲ್ಲಿ ತೊಡಗಿದ್ದುದು ಮುಖ್ಯಾಂಶ.

ಮೊದಲನೆಯ ದೊರೆ ಅಲ್ಲಾಉದ್ದೀನ್ ಹಸನ್ ಬಹಮನ್ ಷಾ (1347-58) ದೂರದೃಷ್ಟಿಯುಳ್ಳ ಸಮರ್ಥ ದೊರೆ. ರಾಜಧಾನಿಯನ್ನು ದೌಲತಾಬಾದಿನಿಂದ ಗುಲ್ಬರ್ಗಕ್ಕೆ ಬದಲಾಯಿಸಿ ಅದಕ್ಕೆ ಅಸ್ಸಾನಬಾದ್ ಎಂದು ಹೆಸರಿಟ್ಟ. ರಾಜಧಾನಿಯಾದ ಸ್ವಲ್ಪಕಾಲದಲ್ಲಿ ಗುಲ್ಬರ್ಗ ನಗರ ಪ್ರಸಿದ್ಧಿಗೆ ಬಂದಿತಲ್ಲದೆ, ಅಲ್ಲಿ ಅರಮನೆ, ಪೇಟೆಬೀದಿ, ಮಸೀದಿ ಮತ್ತು ಇತರ ಅನೇಕ ಸಾರ್ವಜನಿಕ ಕಟ್ಟಡಗಳು ತಲೆಯೆತ್ತಿದವು. ಇದು ದಖನ್ನಿನ ಕೇಂದ್ರದಲ್ಲಿದ್ದುದರಿಂದ ನಗರ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಪ್ರದೇಶಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿತ್ತು. ಅಧಿಕಾರ ಸ್ಥಾಪಿಸಿದ ತತ್ಕ್ಷಣ ಬಹಮನ್ ಷಾ ಚಿಕ್ಕಪುಟ್ಟ ಪಾಳೆಯಗಾರರನ್ನು ತನ್ನ ಹತೋಟಿಗೆ ಒಳಪಡಿಸಿದ. ದಖನ್ನಿನಲ್ಲಿದ್ದ ತೊಗಲಕ್ ಸೇನೆಯನ್ನು ಹೊಡೆದೋಡಿಸಲು ನಾಸಿಕ್ ನಗರಕ್ಕೆ ಈತ ಸೇನೆಯ ತುಕಡಿಯೊಂದನ್ನು ಕಳುಹಿಸಿದ. ಬಿಜಾಪುರವನ್ನು ಆಕ್ರಮಿಸಿಕೊಂಡು ಕೊಲ್ಲಾಪುರ, ಮತ್ತು ಕೊಂಕಣ ಬಂದರುಗಳಾದ ದಾಬೋಲ್ ಮತ್ತು ಖಾರೆ ಪಟ್ಟಣಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಗುಲ್ಬರ್ಗದ ಪೂರ್ವ ಮತ್ತು ದಕ್ಷಿಣ ಭಾಗಗಳಿಗೆ ದಂಡಯಾತ್ರೆ ಕೈಗೊಂಡ. ಸೂರೆ ಮಾಡಿದ ನಿಧಿಯಿಂದ ಬಲವಾದ ಸೇನೆ ಕಟ್ಟಿದ. ಈತನ ರಾಜ್ಯ ಉತ್ತರದಲ್ಲಿ ವೈನಗಂಗಾ ನದಿಯಿಂದ ದಕ್ಷಿಣದಲ್ಲಿ ಕೃಷ್ಣ ನದಿಯವರೆಗೂ ಪಶ್ಚಿಮದಲ್ಲಿ ದೌಲತಾಬಾದ್ನಿಂದ ಪೂರ್ವದಲ್ಲಿ ಬೊಂಗೀರ್ ನಡುವೆ ವ್ಯಾಪಿಸಿತ್ತು. ಆಡಳಿತ ವ್ಯವಸ್ಥೆಗಾಗಿ ಈತ ತನ್ನ ರಾಜ್ಯವನ್ನು ಗುಲ್ಬರ್ಗ, ದೌಲತಾಬಾದ್, ಬೀರಾರ್ ಮತ್ತು ಬೀದರ್ ಎಂಬ ನಾಲ್ಕು ಪ್ರಾಂತ್ಯಗಳಾಗಿ ವಿಂಗಡಿಸಿ, ಪ್ರಾಂತ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟ. ಈತನ ಸಾಹಸ ಕಾರ್ಯಗಳು ದಕ್ಷಿಣದ ಪ್ರಬಲ ರಾಜ್ಯಗಳಾದ ವಾರಂಗಲ್ ಮತ್ತು ವಿಜಯನಗರಗಳ ಗಮನ ಸೆಳೆಯುವಂತೆ ಮಾಡಿದುವು. ಸಮಕಾಲೀನ ಬರೆಹಗಾರರು, ಈತ ನಿಷ್ಪಕ್ಷಪಾತ ದೊರೆ, ಪ್ರಜಾರಕ್ಷಕ ಹಾಗೂ ಧರ್ಮಶ್ರದ್ಧೆಯುಳ್ಳವ, ಇವನ ಆಳ್ವಿಕೆಯ ಕಾಲದಲ್ಲಿ ಇವನ ಪ್ರಜೆಗಳೂ ಸೈನಿಕರೂ ಸಂಪೂರ್ಣವಾಗಿ ತೃಪ್ತ ಜೀವನ ನಡೆಸುತ್ತಿದ್ದರೆಂದು ಪ್ರಶಂಸಿಸಿದ್ದಾರೆ.

ಹಸನ್ ಗಂಗು 1358ರಲ್ಲಿ ಮರಣ ಹೊಂದಿದ ಮೇಲೆ ಅವನ ಮಗ ಒಂದನೆಯ ಮಹಮ್ಮದ್ (1358-75) ಸಿಂಹಾಸನಕ್ಕೆ ಬಂದ. ಈತನ ಆಳ್ವಿಕೆಯ ಉದ್ದಕ್ಕೂ ವಿಜಯನಗರದೊಡನೆ ಸತತವಾಗಿ ಯುದ್ಧ ನಡೆಯಿತು. ವಾರಂಗಲ್ ಮತ್ತು ವಿಜಯನಗರಗಳು ಒಂದುಗೂಡಿ ಬಹಮನೀ ರಾಜ್ಯದ ಮೇಲೆ ದಾಳಿ ನಡೆಸಿದುವು. ಮಹಮ್ಮದ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ.

ಮತೀಯವಾದ ಅಂಶಕ್ಕಿಂತ ರಾಜಕೀಯ ಮತ್ತು ಆರ್ಥಿಕ ಅಂಶಗಳೇ ಬಹಮನೀ ವಿಜಯನಗರಗಳ ನಡುವಣ ಕಹಿ ಸಂಬಂಧಗಳಿಗೆ ಪ್ರೇರಕಶಕ್ತಿಯಾಗಿದ್ದುವು. ವಾರಂಗಲ್ ಕಾಪಯ ನಾಯಕ ಕಾಟಾಲ ಕೋಟೆಯನ್ನೂ ಬುಕ್ಕ ಕೃಷ್ಣ-ತುಂಗ ನಡುವಣ ಪ್ರದೇಶವನ್ನೂ ಬಿಟ್ಟುಕೊಡುವಂತೆ ಬಹಮನಿ ಸುಲ್ತಾನನನ್ನು ಕೇಳಿಕೊಂಡರು. ಬೇಡಿಕೆಯನ್ನು ನಿರಾಕರಿಸಿದ್ದಲ್ಲದೆ ಮಹಮ್ಮದ್ ಎರಡೂ ರಾಜ್ಯಗಳ ಮೇಲೆ ತನ್ನದೆ ಆದ ಬೇಡಿಕೆಯನ್ನು ಮುಂದಿಟ್ಟಾಗ ಅದು ಯುದ್ಧದಲ್ಲಿ ಪರ್ಯವಸಾನಗೊಂಡಿತು. 1362ರಲ್ಲಿ ಬುಕ್ಕ ರಾಯಚೂರ್ ದೋ ಆಬ್ ಮೇಲೆ ದಾಳಿಮಾಡಿದ. ವಾರಂಗಲ್ ಸೇನೆ ಕೌಲಾಸ್ ಕೋಟೆಯನ್ನು ಮುತ್ತಿತು. ಮಹಮ್ಮದ್ ಕಾಪಯನಾಯಕನ ಮೇಲೆ ಎರಗಿ ಅವನನ್ನು ಸೋಲಿಸಿ ಯುದ್ಧದ ಪರಿಹಾರ ಕೊಡುವಂತೆ ಒಪ್ಪಿಸಿದ. 1363ರಲ್ಲಿ ಮತ್ತೆ ಯುದ್ಧ ಆರಂಭವಾಗಿ ಅದರಲ್ಲೂ ವಾರಂಗಲ್ಲಿನ ದೊರೆ ಸೋತು ಹೋದನಲ್ಲದೇ ಗೋಲ್ಕೊಂಡ ಕೋಟೆಯನ್ನೊಪ್ಪಿಸಿದ. ಅದು ಬಹಮನಿ ರಾಜ್ಯದ ಖಾಯಂ ಗಡಿಯಾಯಿತು. ಮಹಮ್ಮದ್ ಹೆಚ್ಚಿನ ಐಶ್ವರ್ಯವನ್ನು ಸೂರೆ ಮಾಡಿದ್ದರ ಜೊತೆಗೆ, ವಜ್ರವೈಢೂರ್ಯ ಖಚಿತ ಸಿಂಹಾಸನವನ್ನು ಪಡೆದುಕೊಂಡ. ಸಿಂಹಾಸನವೇ ಬಹಮನಿ ಮನೆತನದ ರಾಜಸಿಂಹಾಸನವಾಗಿ ಉಳಿಯಿತು. ವಿಜಯನಗರದ ವಿರುದ್ಧವೂ ಈತ ಜಯಶೀಲನಾಗಿ ಮುದಗಲ್ಲನ್ನು ಪಡೆದ.

ಮಹಮ್ಮದ್ ಉತ್ತರಾಧಿಕಾರಿಗಳು ಅಷ್ಟು ಸಮರ್ಥರಾಗಿರಲಿಲ್ಲ. ಈತನ ಮಗ ಮುಜಾಹಿದ್ (1775-78) ಮೂರು ವರ್ಷಗಳ ಕಾಲ ಆಳಿದ. ವಿಜಯನಗರದ ಮೇಲೆ ನಡೆಸಿದ ಯುದ್ಧದಿಂದ ಹಿಂತಿರುಗಿ ಬರುತ್ತಿದ್ದಾಗ ಇವನ ದಾಯಾದಿ ದಾವೂದ್ ಎಂಬಾತ ಇವನನ್ನು ಕೊಲೆ ಮಾಡಿದ. ಮುಂದೆ ದಾವೂದನಿಗೂ ಅದೇ ಗತಿಯಾಯಿತು. ದಾವೂದನ ತಮ್ಮ ಎರಡನೆಯ ಮಹಮ್ಮದ್ (1378-97) ಸಿಂಹಾಸನ ಏರಿದ. ಹದಗೆಟ್ಟ ದುಸ್ಥಿತಿಯನ್ನು ಉಪಯೋಗಿಸಿಕೊಂಡು ವಿಜಯನಗರದ ಸೇನೆ ಗೋವಾ ಸೇರಿದಂತೆ ಪಶ್ಚಿಮ ಕರಾವಳಿಯ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಸುಸಂಸ್ಕೃತನಾಗಿದ್ದ ಎರಡನೆಯ ಮಹಮ್ಮದ್ ಆಳ್ವಿಕೆ ಶಾಂತಿಪೂರ್ಣವಾಗಿತ್ತು. ಸಾಧುಸಂತರು ಮತ್ತು ಪಂಡಿತರಿಗೆ ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ. ಸ್ವತಃ ಪಂಡಿತನಾಗಿದ್ದ ಸುಲ್ತಾನನನ್ನು ಪ್ರಜೆಗಳು ಆದರದಿಂದ ಗೌರವಿಸಿದರು. ಕ್ಷಾಮ ತಲೆದೋರಿದಾಗ ಮಾಳವ ಮತ್ತು ಗುಜರಾತ್ಗಳಿಂದ ಧಾನ್ಯವನ್ನು ಆಮದು ಮಾಡಿಕೊಂಡ. ಅನಾಥಾಲಯಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದ.

ಎರಡನೆಯ ಮಹಮದ್ ಅನಂತರ ಎರಡನೆಯ ಘಿಯಾಸುದ್ದೀನ್ ಸಿಂಹಾಸನಕ್ಕೆ ಬಂದು ಸ್ವಲ್ಪಕಾಲ ಆಳಿ, ಆಸ್ಥಾನದ ಕುತಂತ್ರಗಳಿಗೆ ಬಲಿಯಾಗಿ ಸಿಂಹಾಸನ ಕಳೆದುಕೊಂಡ.

ಅನಂತರ ಅಧಿಕಾರಕ್ಕೆ ಬಂದವ ತಾಜುದ್ದೀನ್ ಫಿರೋಜ್ (1397-1422). 1397, 1406 ಮತ್ತು 1417 ರಲ್ಲಿ ಈತ ವಿಜಯನಗರದ ಮೇಲೆ ಯುದ್ಧ ನಡೆಸಿದ್ದರಿಂದ ಈತನ ಆಳ್ವಿಕೆ ಪ್ರಸಿದ್ಧಿ ಪಡೆಯಿತು. ಗುಲ್ಬರ್ಗದಲ್ಲಿ ಸಿಂಹಾಸನಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭ ಉಪಯೋಗಿಸಿಕೊಂಡು ಎರಡನೆಯ ಹರಿಹರ ಬಹಮನಿ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಸಾಗರ ಕೋಟೆಯನ್ನು ಆಕ್ರಮಿಸಿದ. ಸಮರ್ಥನಾಗಿದ್ದ ಫಿರೋಜ್ ಕೋಟೆಯನ್ನು ಮುತ್ತಿ ಪುನಃ ವಶಪಡಿಸಿಕೊಂಡು, ಕೃಷ್ಣಾ ನದಿ ದಾಟಿ ವಿಜಯನಗರದ ಮೇಲೆ ಹಠಾತ್ ದಾಳಿ ನಡೆಸಿದ. ಯುದ್ಧಗಳಿಂದ ಎರಡುಪಕ್ಷಗಳಿಗೂ ಯಾವ ರೀತಿಯ ಜಯವೂ ದೊರಕಲಿಲ್ಲ. ಮಧ್ಯಪ್ರದೇಶದ ಕೇರ್ಲಾದ ರಾಜ ನರಸಿಂಗರಾಯನ ಮೇಲೆ ಯುದ್ಧ ಮಾಡಿ ಅವನನ್ನು ಫಿರೋಜ್ ಸೋಲಿಸಿದ. ತೆಲಂಗಾಣದ ಕಾತಯ ವೇಮನನ್ನು ಶರಣಾಗತನಾಗುವಂತೆ ಮಾಡಿದ. ಆದರೆ ಅವನು ಬಹಮನಿ ಸೇನೆಯ ದಂಡನಾಯಕ ಆಲಿಖಾನನ್ನು ಸೋಲಿಸಿ ತನ್ನ ಪ್ರಾಬಲ್ಯವನ್ನು ಮತ್ತೆ ಪಡೆದ. 1406ರಲ್ಲಿ ದೇವರಾಯನೊಡನೆ ನಡೆದ ಯುದ್ಧದಲ್ಲಿ ಫಿರೋಜನಿಗೆ ಜಯ ದೊರೆಯಿತೆಂದು ಫೆರಿಸ್ತಾ ಹೇಳಿದ್ದಾನೆ. 1417-20ರಲ್ಲಿ ನಡೆದ ಮೂರನೆಯ ಯುದ್ಧದಲ್ಲಿ ಪಾನಗಲ್ ಅಥವಾ ಪಂಗಳ ಕೋಟೆಯನ್ನು ಮುತ್ತಿದಾಗ ವಿಜಯನಗರದ ಸೇನೆ ಫಿರೋಜನನ್ನು ಹಿಮ್ಮೆಟ್ಟುವಂತೆ ಮಾಡಿತು.

ವಿಜಯನಗರ ಮತ್ತು ಬಹಮನಿಗಳ ನಡುವಣ ದೀರ್ಘಕಾಲದ ಯುದ್ಧದಿಂದ ಯಾವ ಪರಿಣಾಮವೂ ಆಗಲಿಲ್ಲ. ಯುದ್ಧಪೂರ್ವದಲ್ಲಿ ಇದ್ದ ಸ್ಥಿತಿಯೇ ಮುಂದುವರಿಯಿತು. ರಾಯಚೂರ್ ದೋ ಅಬ್ ವಿಜಯನಗರದ ಕೈಯಲ್ಲೇ ಉಳಿಯಿತು. ಫಿರೋಜನ ಸೋಲಿನಿಂದ ಅವನಿಗೆ ತನ್ನ ರಾಜ್ಯದಲ್ಲಿ ಅನೇಕ ತೊಂದರೆಗಳು ಉಂಟಾದವು. ಅವನ ತಮ್ಮ ಅಹಮದ್ ಮತ್ತು ಮಗ ಹಸನ್ ನಡುವೆ ಭಿನ್ನತೆ ತಲೆದೋರಿತು. ಅಹಮದ್ಗೆ ಸೇನೆ ಬೆಂಬಲ ನೀಡಿತು. ಅವನು ರಾಜಧಾನಿಯನ್ನು ಮುತ್ತಿದ. ತಮ್ಮನ ಪರವಾಗಿ ಫಿರೋಜ್ ಸಿಂಹಾಸನ ತ್ಯಾಗ ಮಾಡಿದ ನಂತರ ಕೆಲವು ದಿವಸಗಳ ತರುವಾಯ ಫಿರೋಜ್ ಮರಣಹೊಂದಿದ.

ಫಿರೋಜ್ ಒಳ್ಳೆಯ ದೊರೆ, ಪಂಡಿತ. ಅವನು ತತ್ತ್ವಶಾಸ್ತ್ರಜ್ಞರಿಗೂ ಕವಿಗಳಿಗೂ ಇತಿಹಾಸಕಾರರಿಗೂ ಆಶ್ರಯ ನೀಡಿದ. ಖಗೋಳಶಾಸ್ತ್ರದಲ್ಲಿ ಅಪಾರ ಆಸಕ್ತಿ. ಈತ ದೌಲತಬಾದಿನಲ್ಲಿ ಒಂದು ವೀಕ್ಷಣಾಲಯವನ್ನು ಸ್ಥಾಪಿಸಿದ. ಭೀಮಾನದಿಯ ದಂಡೆಯ ಮೇಲೆ ಫಿರೋಜಾಬಾದ್ ಎಂಬ ಹೊಸನಗರವನ್ನು ನಿರ್ಮಿಸಿದ. ದಾಬಲ್ ಮತ್ತು ಚೌಲ್ ಬಂದರುಗಳನ್ನು ಅಭಿವೃದ್ಧಿಪಡಿಸಿದ. ಪರ್ಷಿಯ, ಅರೇಬಿಯ, ಆಫ್ರಿಕ ಮತ್ತು ಯೂರೋಪ್ ದೇಶಗಳ ಹಡಗುಗಳು ಬಂದರುಗಳಿಗೆ ಬರುತ್ತಿದ್ದವು.

1422 ಸೆಪ್ಟೆಂಬರ್ 22ರಂದು ಶಿಹಾಬುದ್ಧೀನ ಅಹ್ಮದ್ ಸಿಂಹಾಸನಕ್ಕೆ ಬಂದ. ಜೂನಿನಲ್ಲಿ ಅಹ್ಮದ್ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರಿಗೆ ಬದಲಾಯಿಸಿದ, ವಾರಂಗಲ್ಲಿನ ಕಡೆಗೆ ರಾಜ್ಯ ವಿಸ್ತರಿಸಿದ. ಇವನ ಕಾಲದಲ್ಲಿ ಆಸ್ಥಾನದ ಸರದಾರರ ನಡುವೆ ಅಧಿಕಾರಕ್ಕಾಗಿ ಅಂತಃಕಲಹ ಉಂಟಾಗಿ ಎರಡು ಪ್ರಮುಖ ಪಕ್ಷಗಳೇರ್ಪಟ್ಟು ರಾಜ್ಯದ ಏಕತೆ ಮತ್ತು ಸಮಗ್ರತೆಗೆ ಅಪಾಯ ಒದಗಿತು. ಒಂದು ಕಡೆ ದಖನ್ನಿನ ಸರದಾರರು ಮತ್ತೊಂದು ಕಡೆ ಪರದೇಶಿ ಸರದಾರರ ನಡುವೆ ಸ್ಥಾನಮಾನಗಳಿಗಾಗಿ ಪೈಪೋಟಿ ಆರಂಭವಾಗಿ ಅನೇಕ ಕೊಲೆ ಸುಲಿಗೆಗೆ ಕಾರಣವಾದವು. ದಖನ್ನಿನ ಪಕ್ಷದಲ್ಲಿ ಸ್ಥಳೀಯ ಮುಸ್ಲಿಮ್ ಸರದಾರರು ಮತ್ತು ಆಫ್ರಿಕನ್ ಮಿತ್ರರು, ವಿದೇಶಿ ಸರದಾರರಲ್ಲಿ ತುರ್ಕರು, ಅರಬರು, ಪರ್ಷಿಯನ್ನರು ಮತ್ತು ಮೊಗಲರು ಪ್ರಮುಖರಾಗಿದ್ದರು. ಸ್ಥಳೀಯರಿಗಿಂತ ವಿದೇಶೀ ಪಕ್ಷದವರು ರಾಜ್ಯದಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದುದರಿಂದ ಸ್ಥಳೀಯರಿಗೆ ಅವರ ಬಗ್ಗೆ ಅಸೂಯೆ ಮೂಡಿತು. ಧಾರ್ಮಿಕ ಭೇದಗಳಿಂದ ಇದು ಮತ್ತಷ್ಟು ತೀವ್ರಗೊಂಡಿತು. ದಖನ್ನಿಗಳು ಪ್ರಧಾನವಾಗಿ ಸುನ್ನಿ ಪಂಥಕ್ಕೆ ಸೇರಿದವರಾಗಿದ್ದರೆ ಅವರ ಎದುರಾಳಿಗಳು ಷಿಯಾ ಪಂಗಡಕ್ಕೆ ಸೇರಿದವರಾಗಿದ್ದರು. ಹೀಗಾಗಿ ಬಹಮನಿ ರಾಜ್ಯದ ಇತಿಹಾಸ ಇನ್ನು ಮುಂದೆ ಪಿತೂರಿ, ಕೊಲೆಗಳ ಕಥೆಯಾಗಿದ್ದು ಇದು ರಾಜ್ಯ ಛಿದ್ರಗೊಳ್ಳುವತನಕವೂ ಅದರ ಜೀವಸತ್ತ್ವವನ್ನು ಹೀರಿತು.

ಅಹ್ಮದ್ ಪ್ರಬಲವಾದ ವಿದೇಶಾಂಗ ನೀತಿಯನ್ನು ಅನುಸರಿಸಿ ವಿಜಯನಗರದ ಮೇಲೆ ಯುದ್ಧ ಘೋಷಿಸಿದ. ಫೆರಿಸ್ತನ ಪ್ರಕಾರ ಬಹಮನೀ ಸೇನೆಗೆ ಗೆಲುವಾಯಿತು. ಮಾಳ್ವ ಮತ್ತು ಗುಜರಾತ್ಗಳೊಡನೆ ಬಹಮನಿ ರಾಜ್ಯ ಕಾಲದಲ್ಲಿ ಸಂಪರ್ಕ ಪಡೆಯಿತು. ಮಾಳ್ವದ ಮುಸ್ಲಿಮ್ ದೊರೆಯ ಮೇಲೆ ಅಹಮ್ಮದ್ ದಂಡೆತ್ತಿ ಹೋಗಿ ಅವನನ್ನು ಸದೆಬಡಿದ. ಆದರೆ ಗುಜರಾತಿನ ಮೇಲೆ ಅವನ ದಾಳಿ ವಿಫಲವಾಯಿತು. 1430ರಲ್ಲಿ ನಡೆಸಿದ ಎರಡನೆಯ ದಂಡಯಾತ್ರೆಯೂ ವಿಫಲವಾಯಿತು. 1433ರಲ್ಲಿ ತೆಲಂಗಾಣದತ್ತ ನಡೆದು ವಾರಂಗಲ್ ಮೊದಲಾದ ಕೆಲವು ಭಾಗಗಳನ್ನು ವಶಪಡಿಸಿಕೊಂಡ. ಅಹ್ಮದ್ 1436 ಏಪ್ರಿಲ್ 17ರಂದು ನಿಧನನಾದ.

ಒಂದನೆಯ ಅಹ್ಮದ್ ಹಿರಿಯ ಮಗ ಅಲಾಉದ್ದೀನ್ II ಅಹ್ಮದ್ ಪಟ್ಟಕ್ಕೆ ಬಂದ (1436-58). ವಿಜಯನಗರದ ಎರಡನೆಯ ದೇವರಾಯನನ್ನು ಸೋಲಿಸಿ ಸಂಗಮೇಶ್ವರ ಮತ್ತು ಖಾನ್ದೇಶದ ರಾಜರುಗಳನ್ನು ಹತ್ತಿಕ್ಕಿದ. ತನ್ನ ತಂದೆಯ ಗೋರಿಯ ಮೇಲೆ ಭವ್ಯವಾದ ಗೋಳವನ್ನು ನಿರ್ಮಿಸಿದ. 1436ರಲ್ಲಿ ಮತ್ತು 1443ರಲ್ಲಿ ವಿಜಯನಗರದೊಡನೆ ದೋ ಅಬ್ನಲ್ಲಿ ಯುದ್ಧಗಳು ನಡೆದವು. ಅಲ್ಲಾವುದ್ದೀನ್ ಕೊಂಕಣದ ಪಾಳೆಯಗಾರರನ್ನು ಶರಣಾಗತರಾಗುವಂತೆ ಮಾಡಿದ. ಪ್ರಸಿದ್ಧ ಮಹಮ್ಮದ್ ಗವಾನ್ ಇವನ ಮಂತ್ರಿಯಾಗಿದ್ದ.

ಎರಡನೆಯ ಅಲಾಉದ್ದೀನ್ ಅಹ್ಮದ್ ಮರಣಾನಂತರ ಅವನ ಹಿರಿಯ ಮಗ ಹುಮಾಯೂನ್ ಪಟ್ಟಕ್ಕೆ ಬಂದು (1458-61) ಮೂರು ವರ್ಷಗಳ ಆಳ್ವಿಕೆ ನಡೆಸಿದ. ಇವನ ಮಗ ನಿಜಾಮುದ್ದೀನ್ ಅಹ್ಮದ್ (1461-63) ಸಿಂಹಾಸನಕ್ಕೆ ಬಂದಾಗ ಅವನು ಎಂಟು ವರ್ಷದ ಬಾಲಕ. ಕಾಲದಲ್ಲಿ ಮಹಮದ್ ಗವಾನ್ ಸಮರ್ಥ ಆಡಳಿತ ನಡೆಸಿದ. ಸುಲ್ತಾನ ಅಪ್ರಾಪ್ತವಯಸ್ಕನಾದ್ದರಿಂದ ಒಂದು ರಾಜಪ್ರತಿನಿಧಿ ಮಂಡಳಿಯನ್ನು ಸ್ಥಾಪಿಸಲಾಯಿತು. ಸುಲ್ತಾನನ ತಾಯಿ ಮತ್ತು ಪ್ರಧಾನಿಯೂ ಪ್ರತಿನಿಧಿ ಮಂಡಲಿಯಲ್ಲಿದ್ದರು. ಸುಲ್ತಾನನ ತಾಯಿ ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಒಬ್ಬ ಸಮರ್ಥ ಮಹಿಳೆಯಾಗಿದ್ದು, ಗವಾನನಂಥ ಶ್ರೇಷ್ಠ ಆಡಳಿತಾಧಿಕಾರಿಯನ್ನು ಆಯ್ಕೆಮಾಡಿ ರಾಜ್ಯ ಕಷ್ಟಕಾಲದಲ್ಲಿದ್ದಾಗ ಅದನ್ನು ಕಾಪಾಡುವ ಹೊಣೆ ಹೊತ್ತಳು. ಒರಿಸ್ಸಾದ ದೊರೆ ಕಪಿಲೇಂದ್ರ ಸಂದರ್ಭ ಉಪಯೋಗಿಸಿಕೊಂಡು ಬಿದರೆಯ ಮೇಲೆ ದಂಡಯಾತ್ರೆ ಕೈಗೊಂಡಾಗ ಗವಾನ್ ಅವನನ್ನು ಹಿಮ್ಮೆಟ್ಟಿಸಿದ. ಮಾಳ್ವದ ದೊರೆ ಇದನ್ನೇ ಅನುಸರಿಸಿದಾಗ ಗುಜರಾತಿನ ಸಹಾಯದಿಂದ ಗವಾನ್ ಅವನನ್ನು ಹಿಂದಕ್ಕಟ್ಟಿದ. ನಿಜಾಮುದ್ದೀನ್ ಅಹ್ಮದ್ ಮರಣಾ ನಂತರ ಅವನ ಕಿರಿಯ ತಮ್ಮ ಮೂರನೆಯ ಮಹಮ್ಮದ್ (1463-82) ಪಟ್ಟಕ್ಕೆ ಬಂದ. 1466 ತನಕ ರಾಜಪ್ರತಿನಿಧಿ ಮಂಡಲಿ ಅಸ್ತಿತ್ವದಲ್ಲಿತ್ತು. ವರ್ಷ ಗವಾನ್ ಪ್ರಧಾನಮಂತ್ರಿಯಾಗಿ ನೇಮಿಸಲ್ಪಟ್ಟ. ಗವಾನನ ಯುದ್ಧ ನಿಪುಣತೆಯಿಂದಾಗಿ, ರಾಜ್ಯ ಒರಿಸ್ಸಾದಿಂದ ಗೋವಾವರೆಗೆ ವಿಸ್ತರಿಸಿತು. ಹುಬ್ಬಳ್ಳಿ, ಬೆಳಗಾವಿ ಮತ್ತು ಬಾಗಲಕೋಟೆ ಗೆದ್ದು ಉತ್ತರ ಕರ್ನಾಟಕ ಹಾಗೂ ಕೊಂಕಣದ ಕರಾವಳಿ ಪ್ರದೇಶವನ್ನು ಸಂಪೂರ್ಣವಾಗಿ ತನ್ನ ಆಡಳಿತಕ್ಕೆ ಸೇರಿಸಿಕೊಂಡು ವಿಜಯನಗರದ ಅಧೀನದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡ. ಇದೆಲ್ಲದರ ಪರಿಣಾಮವಾಗಿ ರಾಜ್ಯದ ಐಶ್ವರ್ಯ ಹೆಚ್ಚಿತು. ಗವಾನನ ನೇತೃತ್ವದಲ್ಲಿ ಸುಲ್ತಾನ ರಣರಂಗದಲ್ಲಿ ಧೈರ್ಯ ಪ್ರದರ್ಶಿಸಿ ಲಷ್ಕರಿ ಎಂಬ ಬಿರುದಿಗೆ ಪಾತ್ರನಾದ. ಕಂಚಿಯವರೆಗೂ ಅವನು ನಡೆಸಿದ ದಾಳಿ ಖ್ಯಾತಿ ಪಡೆದಿದೆ.

ಗವಾನ್ ಪ್ರತಿಯೊಂದು ಇಲಾಖೆಯನ್ನೂ ಸುಧಾರಣೆಗೆ ಒಳಪಡಿಸಿದ. ಹಣಕಾಸು ನ್ಯಾಯಾಡಳಿತ ಮತ್ತು ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದ. ಪ್ರಾಂತ್ಯಗಳ ಸಂಖ್ಯೆ ದ್ವಿಗುಣವಾಯಿತು. ಪ್ರಾಂತ್ಯಾಧಿಕಾರಿಗಳ ಹೆಚ್ಚಿನ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರವನ್ನು ಬಲಪಡಿಸಿ ಪ್ರಾಂತೀಯ ಮನೋಭಾವನೆಯನ್ನು ಹತ್ತಿಕ್ಕಿದ. ಹೊಸ ಕಂದಾಯ ಪದ್ಧತಿ ಜಾರಿಗೆ ತಂದ. ಭೂಮಿಯನ್ನು ಅಳೆಸಿ ಕಂದಾಯವನ್ನು ಹಣದ ರೂಪದಲ್ಲಿ ಕೊಡುವ ಕ್ರಮ ಜಾರಿಗೆ ತಂದ. ಸೇನೆಯನ್ನು ಸುಧಾರಿಸಿ ಅದರ ಶಕ್ತಿಯನ್ನು ಹೆಚ್ಚಿಸಿದ. ಭ್ರಷ್ಟಾಚಾರವನ್ನು ನಿರ್ಮೂಲ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟ. ಸಾಹಿತ್ಯ ಕಲೆಗೆ ಪ್ರೋತ್ಸಾಹ ನೀಡಿದ. ರಾಜಧಾನಿ ಬಿದರೆಯಲ್ಲಿ ಮದ್ರಸಾವನ್ನು ಸ್ಥಾಪಿಸಿದ. ಸ್ವತಃ ಪಂಡಿತನಾಗಿದ್ದ ಗವಾನ ಅನೇಕ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ. ಮದ್ರಸಾಕ್ಕೆ ಅನೇಕ ಪಂಡಿತರನ್ನು ಆಹ್ವಾನಿಸಿದ. ಮೂರು ಅಂತಸ್ತುಳ್ಳ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಸ್ಥಳಾವಕಾಶ ಮಾಡಿಕೊಡಲಾಗಿದ್ದಿತು. ಗವಾನನ ಬಳಿ ಇದ್ದ ಪುಸ್ತಕ ಭಂಡಾರದಲ್ಲಿ 1000 ಹಸ್ತಪ್ರತಿಗಳಿದ್ದುವು. ಗ್ರಂಥಾಲಯದಲ್ಲಿ 3000 ಹಸ್ತಪ್ರತಿಗಳಿದ್ದುವು.

ಗವಾನನ ಆಡಳಿತ ವಿಚಕ್ಷಣೆ ಹಾಗೂ ಸರ್ಕಾರದ ಮೇಲಿನ ಅವನ ಹತೋಟಿಯಿಂದ ದಖ್ಖನ್ ಸರದಾರರಿಗೆ ಅಸೂಯೆಯುಂಟಾಯಿತು. ಅವನನ್ನು ಕೊಲೆ ಮಾಡಲು ಯೋಚಿಸಿದರು. ದಖ್ಖನ್ ಮತ್ತು ವಿದೇಶೀ ಸರದಾರರ ನಡುವೆ ಮನಸ್ತಾಪ ಉಂಟಾಯಿತು. ಗವಾನ ಸ್ವಲ್ಪಕಾಲ ಬುದ್ಧಿವಂತಿಕೆಯಿಂದ ಎರಡು ಪಕ್ಷಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸಿದ. ಆದರೂ ದಖನೀ ಸರದಾರರ ಕುತಂತ್ರಕ್ಕೆ ಬಲಿಯಾಗಬೇಕಾಗಿ ಬಂತು. ಗವಾನನ ಮರಣದಿಂದ ಬಹಮನೀರಾಜ್ಯದ ಶಕ್ತಿ ಉಡುಗಿಹೋಯಿತೆನ್ನಬಹುದು.

ಮೂರನೆಯ ಮಹಮ್ಮದ್ ಅನಂತರ ಶಿಹಾಬುದ್ದೀನ್ ಮಹ್ಮೂದ್ (1482-1518) ಪಟ್ಟಕ್ಕೆ ಬಂದ. ಇವನಿಗೆ ವೈಯಕ್ತಿಕ ಸಾಮರ್ಥ್ಯವಾಗಲಿ ಅಥವಾ ರಾಜ್ಯದ ಐಕ್ಯವನ್ನು ಉಳಿಸಿಕೊಳ್ಳಲು ನೆರವಾಗಬಲ್ಲ ಗವಾನನಂತಹ ದಕ್ಷಮಂತ್ರಿಯ ಮಾರ್ಗದರ್ಶನವಾಗಲಿ ದೊರಕಲಿಲ್ಲ. ದಖ್ಖನ್ನಿ ಮತ್ತು ಪರದೇಶೀ ಸರದಾರರ ನಡುವೆ ದ್ವೇಷಾಸೂಯೆ ನೂರ್ಮಡಿಗೊಂಡಿತು. ಪ್ರಾಂತೀಯ ಗೌರ್ನರುಗಳು ಅನಾಯಕತ್ವ ಪರಿಸ್ಥಿತಿಯ ಅವಕಾಶವನ್ನು ತಮ್ಮ ತಮ್ಮ ಸ್ವಾತಂತ್ರ್ಯ ಘೋಷಿಸಲು ಉಪಯೋಗಿಸಿಕೊಂಡರು. ಮಹಮ್ಮದ್ ನಾಮ ಮಾತ್ರದ ಅಧಿಕಾರ ರಾಜಧಾನಿಯ ಸುತ್ತ ಮುತ್ತಲ ಭಾಗಗಳಿಗೆ ಸೀಮಿತವಾಗಿತ್ತು. ಇವನು ಮತ್ತು ಇವನ ನಾಲ್ವರು ಉತ್ತರಾಧಿಕಾರಿಗಳು ತುರ್ಕಿವಂಶದ ಖಾಸಿಮ್ ಬರೀದ್ ಅನಂತರ ದಖನ್ನಿನ ನರಿ ಎಂದು ಪ್ರಸಿದ್ಧನಾದ ಅವನ ಮಗ ಆಮೀರ್ ಅಲಿ ಬರೀದ್ ಕೈಗೊಂಬೆಗಳಾಗಿದ್ದರು. ಸಂತತಿಯ ಕೊನೆಯ ದೊರೆ ಕಲೀಮುಲ್ಲಾ ಕಳೆದು ಹೋಗಿದ್ದ ತನ್ನ ರಾಜ್ಯದ ಭಾಗವನ್ನು ಮತ್ತೆ ಪಡೆದುಕೊಳ್ಳಲು ಬಾಬರನ ನೆರವನ್ನು ಪಡೆಯಲು ರಹಸ್ಯವಾಗಿ ಪ್ರಯತ್ನಿಸಿ ನಿರಾಶನಾದ. ಸುಮಾರು, 1538ರಲ್ಲಿ ಈತ ಕಾಲವಾದ ಮೇಲೆ ಸುಮಾರು ಒಂದು ನೂರ ಎಂಬತ್ತು ವರ್ಷಗಳ ಆಳ್ವಿಕೆಯ ಬಹಮನೀ ಮನೆತನ ಕೊನೆಗೊಂಡಿತು.

ಮಾಹಿತಿ ಮೂಲ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources