ಉಚ್ಚಂಗಿಯ ಪಾಂಡ್ಯರು
ಪೀಠಿಕೆ:- ಕರ್ನಾಟಕದ ಪಾಂಡ್ಯರ
ಮೂಲ ಕುರಿತು ಲಭ್ಯವಿರುವ ಮಾಹಿತಿಗಳ ಪ್ರಕಾರ ಇವರು ಸಪ್ತಕೊಂಕಣಗಳ ರಕ್ಷಕರೆಂದು ಕರೆಸಿಕೊಳ್ಳುತ್ತಿದ್ದ ಪಾಂಡ್ಯರ ವಂಶಕ್ಕೆ
ಸೇರಿದವರು. ಈ ಸಪ್ತಕೊಂಕಣವು ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಕರಾವಳಿ ಪ್ರದೇಶಗಳನ್ನು ಒಳಗೊಂಡಿತ್ತು. ಸಪ್ತಕೊಂಕಣಗಳಲ್ಲಿ ಅನೇಕ ಪಾಂಡ್ಯ ಮನೆತನಗಳು ಆಳುತ್ತಿದ್ದವು.
ಉದಾ: ಗೋವೆಯ ಪಾಂಡ್ಯರು, ಗೋಕರ್ಣದ ಪಾಂಡ್ಯರು, ಹೈಹಯದ ಪಾಂಡ್ಯರು ಇತ್ಯಾದಿ. ಹೈಹಯ ಇಂದಿನ ಕಾರವಾರದ
ಸುತ್ತಲಿನ ಪ್ರದೇಶವೆಂದು ತಿಳಿದುಬಂದಿದೆ. ಈ ಕೊಂಕಣದ ಪಾಂಡ್ಯರನ್ನು ಕಲ್ಯಾಣದ ಚಾಲುಕ್ಯರ ಸಾಮ್ರಾಟ
ಜಯಸಿಂಹನು (ಸಾ.ಶ.ವ. 1015-43)ಸೋಲಿಸಿ ತನ್ನ ಅಧೀನಕ್ಕೆ ಒಳಪಡಿಸಿದನು. ಮುಂದೆ ಅವರು ಕಲಚೂರಿಗಳ ಸಾಮಂತರಾಗಿ
ಮುಂದುವರಿದರು. ಹೀಗೆ ಕೊಂಕಣದಲ್ಲಿದ್ದ ಪಾಂಡ್ಯರ ಒಂದು ಶಾಖೆಯು ಕರ್ನಾಟಕದ ಒಳನಾಡನ್ನು ಪ್ರವೇಶಿಸಿ
ಉಚ್ಚಂಗಿಯಿಂದ ಆಳತೊಡಗಿತು. ಅವರೇ ಉಚ್ಚಂಗಿಯ ಪಾಂಡ್ಯರು.
ಆಳ್ವಿಕೆಯ ಪ್ರದೇಶ:- ಇಂದಿನ ಚಿತ್ರದುರ್ಗ ಜಿಲ್ಲೆಯನ್ನೂ ಅದರ ಸುತ್ತಣ ಪ್ರದೇಶಗಳನ್ನೂ ಒಳಗೊಂಡ ರಾಜ್ಯಕ್ಕೆ ನೊಳಂಬವಾಡಿ 32,000 ಎಂಬುದು ಆಗಿದ್ದ ಹೆಸರು. ನೊಳಂಬರು ಈ ಪ್ರಾಂತ್ಯವನ್ನು
ಆಳುತ್ತಿದ್ದರಿಂದ ಇದಕ್ಕೆ ನೊಳಂಬವಾಡಿ ಎಂಬ ಹೆಸರು ಬಂದಿತ್ತು. ಆದರೆ ನೊಳಂಬರು ಸಾ.ಶ.ವ. 1054 ರಲ್ಲಿ
ಪತನವಾದಾಗ ನೊಳಂಬವಾಡಿಯ ಉತ್ತರದ ಭಾಗಗಳನ್ನು ಪಾಂಡ್ಯರು ಆಳತೊಡಗಿದರು.
ತಮಿಳು ಪಾಂಡ್ಯರು ಮತ್ತು ಕರ್ನಾಟಕದ
ಪಾಂಡ್ಯರ ನಡುವಣದ ಸಂಬಂಧವೇನು?
ಕರ್ನಾಟಕದ ಈ ಪಾಂಡ್ಯರಿಗೂ ಮತ್ತು
ತಮಿಳುನಾಡಿನಲ್ಲಿ ಆಳುತ್ತಿದ್ದ ಮಧುರೈ ಪಾಂಡ್ಯರಿಗೂ ಯಾವುದೇ ಸಂಬಂಧವಿರುವ ಬಗ್ಗೆ ಇದುವರೆಗೂ ಶಾಸನಾಧಾರಗಳು
ಲಭಿಸಿಲ್ಲ. ಆದರೆ, ಕರ್ನಾಟಕ ಮತ್ತು ಮಧುರೈ ಪಾಂಡ್ಯರ ರಾಜಲಾಂಛನಗಳು ಮಾತ್ರ ಮತ್ಸ್ಯ ಆಗಿರುವುದು ವಿಶೇಷವಾಗಿದೆ.
ದ್ರಾವಿಡ ಪದಕೋಶದಲ್ಲಿ ಪಾಂಡ್ಯ ಎಂದರೆ ಮತ್ಸ್ಯಕುಲ ಎಂಬ ಅರ್ಥವಿದೆ. ಕರ್ನಾಟಕದ ಈ ಪಾಂಡ್ಯರೂ ಸಹಾ
ಸಮುದ್ರತೀರವಾದ ಕೊಂಕಣದಲ್ಲಿ ನೆಲೆಸಿದ್ದರಿಂದ ಅವರಿಗೆ ಈ ಹೆಸರು ಬಂದಿರಬಹುದು.
ರಾಜಧಾನಿ:- ಪ್ರಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಬೆಳ್ಳತ್ತೂರು ಅಥವಾ ಬೆಳ್ತೂರು ಗ್ರಾಮ ಇವರ ರಾಜಧಾನಿಯಾಗಿತ್ತು. ಮುಂದೆ ಬಳ್ಳಾರಿಯ ಉಚ್ಚಂಗಿದುರ್ಗ ಆ ಸ್ಥಾನವನ್ನು ಪಡೆಯಿತು. ಉಚ್ಚಂಗಿದುರ್ಗ ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿದೆ. ಇಲ್ಲಿ ಅವರು ಬಲವಾದ ಕೋಟೆ ಕಟ್ಟಿಕೊಂಡರಲ್ಲದೆ ಅನೇಕ ದೇವಾಲಯಗಳನ್ನೂ ನಿರ್ಮಿಸಿದರು.
ರಾಜಕೀಯ ಇತಿಹಾಸ:- ಆ ಕಾಲದ ಅನೇಕ ಶಾಸನಗಳಲ್ಲಿ ಉಚ್ಚಂಗಿಯ ಪಾಂಡ್ಯರ ವಂಶಾವಳಿಯ ಕಥನವಿದೆ. ಮರಿಗಯ್ಯ (ಮಂಗರಸ) ಈ ಸಂತತಿಯ ಸ್ಥಾಪಕ. ಇವನಿಗೆ ಆದಿತ್ಯದೇವ ಎಂಬ ಹೆಸರೂ ಇತ್ತು.
ಪಲಮಂಡ ಅಥವಾ ಪಲತ್ತ ಎಂಬುವನು
1040-50ರ ವರೆಗೆ ಆಳಿದನು. ಇವನು ಚೋಳರ ವಿರುದ್ಧದ ಯುದ್ಧಗಳಲ್ಲಿ ಚಾಲುಕ್ಯ ಸಾಮ್ರಾಟನಿಗೆ ಅಪಾರ
ನೆರವು ನೀಡಿದ್ದನು. ಅದಕ್ಕಾಗಿ ಅವನಿಗೆ ಕಾಂಚಿಪುರವರಾಧೀಶ್ವರ, ಚೋಳತಂತ್ರಭೇದಕ ಮತ್ತು ಮಹಾಮಾಂಡಲೇಶ್ವರ
ಎಂಬ ಬಿರುದುಗಳು ಲಭಿಸಿದವು.
ತ್ರಿಭುವನಮಲ್ಲ ಅಥವಾ ಇರುಕ್ಕವೇಲ
ಸಾ.ಶ.ವ. 1050-1124
ಸಾ.ಶ.ವ. 1054ರ ವೇಳೆಗೆ ನೊಳಂಬರು
ಪತನವಾದ ಕಾರಣ ಅವರ ಪ್ರದೇಶಗಳನ್ನೂ ಸಹಾ ಇವನಿಗೆ ವಹಿಸಿಕೊಡಲಾಯಿತು. ಇದರಿಂದ ಇವರ ರಾಜ್ಯದ ವಿಸ್ತಾರ
ಮತ್ತಷ್ಟು ಹೆಚ್ಚಿತು. ಕಲ್ಯಾಣಿ ಚಾಳುಕ್ಯ ಸಾರ್ವಭೌಮ 6ನೆಯ ವಿಕ್ರಮಾದಿತ್ಯನ (1075-1126) ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ಇರುಕ್ಕವೇಲ ಅವನಿಗೆ ಬಹಳ ಸಹಕಾರ ನೀಡಿದ. ಹಸ್ತದಂಡ ಮತ್ತು ತ್ರಿಭುವನಮಲ್ಲ ಎಂಬುವು ಇವನ ಬಿರುದುಗಳಾಗಿದ್ದವು. ವಿಕ್ರಮಾದಿತ್ಯನ ಬಲಭುಜವೆಂದು ಶಾಸನಗಳಲ್ಲಿ ಈತ ವರ್ಣಿತನಾಗಿದ್ದಾನೆ. ಇರುಕ್ಕವೇಲ ಪಾಂಡ್ಯ 1124ರವರೆಗೂ ಆಳಿದ.
ರಾಜಪಾಂಡ್ಯ ಸಾ.ಶ.ವ. 1124-1140
ರಾಜಪಾಂಡ್ಯ ದಕ್ಷ, ಸಾಹಸಿ. ಇವರ ಕಾಲದಲ್ಲಿ ಸೇಂದ್ರಕ
ರಾಜ್ಯವನ್ನು ಗೆದ್ದು ಚಾಲುಕ್ಯರ ಸಾಮ್ರಾಜ್ಯಕ್ಕೆ ಸೇರಿಸಲಾಯಿತು. ಈತನ ರಾಣಿ ಸೋಮಲದೇವಿ. ಕಲೆ ಸಾಹಿತ್ಯಗಳಿಗೆ ಇವಳಿಂದ ಸಾಕಷ್ಟು ಪ್ರೋತ್ಸಾಹ ದೊರೆಯಿತು. ಇವರಿಗೆ ಪಂಡಿತಪಾಂಡ್ಯ, ವೀರಪಾಂಡ್ಯ, ವಿಜಯಪಾಂಡ್ಯ ಮತ್ತು ಪಲಂತ (ಒಡೆಯ) ಎಂದು ನಾಲ್ವರು ಗಂಡು ಮಕ್ಕಳು. ಪಂಡಿತಪಾಂಡ್ಯ ಹೆಸರಿಗೆ ತಕ್ಕಂತೆ ವಿಶೇಷ ಜ್ಞಾನಿ. ಮಗಳು ಮಹಾದೇವಿ. ಇವಳನ್ನು ಹೊಯ್ಸಳ ರಾಜಕುಮಾರ ಎರಯಂಗನಿಗೆ ಕೊಟ್ಟು ವಿವಾಹ ಬೆಳೆಸಿದ್ದರಿಂದ ಈ ಎರಡು ಮನೆತನಗಳ ಸ್ನೇಹವೇರ್ಪಟ್ಟಿತು. 1140ರಲ್ಲಿ ರಾಜಪಾಂಡ್ಯ ಸತ್ತಾಗ ಸಿಂಹಾಸನವನ್ನೇರಲು ಪಂಡಿತಪಾಂಡ್ಯ ಒಪ್ಪಲಿಲ್ಲವಾದ್ದರಿಂದ ವೀರಪಾಂಡ್ಯ ರಾಜನಾದ.
ವೀರಪಾಂಡ್ಯನು ಸಾ.ಶ.ವ. 1160 ವರೆಗೆ
ಆಳಿದನು. ಆ ವೇಳೆಗೆ ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯ ವಿಪ್ಲವಕ್ಕೆ ಬಲಿಯಾಯಿತು. ಕಳಚೂರಿ ಬಿಜ್ಜಳ ಆ ಸಿಂಹಾಸನವನ್ನಾಕ್ರಮಿಸಿಕೊಂಡು ಚಾಲುಕ್ಯರ ಸಾಮಂತ ರಾಜರನ್ನೆಲ್ಲ ಸೋಲಿಸಿದ. ಆದರೆ ವೀರಪಾಂಡ್ಯ ಮಾತ್ರ ತಾನು ಬದುಕಿರುವವರೆಗೂ ಬಿಜ್ಜಳನ ಸಾರ್ವಭೌಮತ್ವವ ನ್ನೊಪ್ಪಲಿಲ್ಲ.
ವಿಜಯಪಾಂಡ್ಯ ಅಥವಾ ಕಾಮದೇವ ಸಾ.ಶ.ವ.
1160-87
ಈತನ ಮರಣಾನಂತರ ಇವನ ತಮ್ಮ ವಿಜಯಪಾಂಡ್ಯ(ಕಾಮದೇವ) ಉಚ್ಚಂಗಿಯ ರಾಜನಾದ. ಉಚ್ಚಂಗಿ ಪಾಂಡ್ಯ ಮನೆತನದ ಕೊನೆ ಅರಸ. 1162ರಲ್ಲಿ ವಿಜಯಪಾಂಡ್ಯನನ್ನು ಬಿಜ್ಜಳ ಸೋಲಿಸಿದ. ಆದರೂ ವಿಜಯಪಾಂಡ್ಯ ತನ್ನ ಪುರ್ವಿಕರಂತೆ ಚಾಳುಕ್ಯರಲ್ಲಿ ನಿಷ್ಠೆ ಹೊಂದಿದ್ದು ಆ ಮನೆತನವನ್ನು ಪುನಃ ಸ್ಥಾಪಿಸಲು ಪ್ರಯತ್ನಿಸಿದ. 1173ರಲ್ಲಿ 2ನೆಯ ವೀರಬಲ್ಲಾಳನ ಕಾಲದಲ್ಲಿ ಹೊಯ್ಸಳರು ಪ್ರಬಲರಾದರು. 1177ರಲ್ಲಿ ಹೊಯ್ಸಳ ಇಮ್ಮಡಿ ವೀರಬಲ್ಲಾಳ ಉಮ್ಮತ್ತೂರಿನಲ್ಲಿ ಕಾಮದೇವನನ್ನು ಸೋಲಿಸಿ ದುರ್ಗಮವಾದ ಉಚ್ಚಂಗಿಯನ್ನು ಮುತ್ತಿ, ಕಾಮದೇವನಿಂದ ಅಪಾರ ಕಪ್ಪಕಾಣಿಕೆಗಳನ್ನು ಪಡೆದ. ಅವನ ರಾಜ್ಯವನ್ನು ಅವನಿಗೇ ಹಿಂತಿರುಗಿಸಿ, ಪಾಂಡ್ಯರಾಜಪ್ರತಿಷ್ಠಾಪನಾಚಾರ್ಯ ಎಂಬ ಬಿರುದನ್ನು ತಳೆದ. ಆದರೆ ಶರಣಾಗತನಾದ ವಿಜಯಪಾಂಡ್ಯ ಮತ್ತೆ ಚೇತರಿಸಿಕೊಂಡು ಹೊಯ್ಸಳರ ಅಧಿಕಾರದಿಂದ ಹೊರಬಂದು, ಚಾಳುಕ್ಯರ ಅಧಿಕಾರವನ್ನು ಪುನಃ ಸ್ಥಾಪಿಸುವ ಯತ್ನದಲ್ಲಿ ತೊಡಗಿದನು. ಈ
ವೇಳೆ ಅವನು ಚಾಲುಕ್ಯರ ನಾಲ್ವಡಿ ವೀರಸೋಮೇಶ್ವರನ ಪಕ್ಷವನ್ನು ವಹಿಸಿದನು. ಇದರಿಂದ ಕ್ರುದ್ಧನಾದ ಹೊಯ್ಸಳ ವೀರಬಲ್ಲಾಳ ದೊರೆ ಕೋಪಗೊಂಡು 1187ರಲ್ಲಿ ಪುನಃ ಉಚ್ಚಂಗಿಯನ್ನು ಮುತ್ತಿ ಕಾಮದೇವ ಪಾಂಡ್ಯನನ್ನು ಸೋಲಿಸಿ ಕೊಂದ. ಯುದ್ಧದಲ್ಲಿ ಕಾಮದೇವನ ಮಗನಾದ ಒಡೆಯನೂ ಮರಣ ಹೊಂದಿದನು. ನೊಳಂಬವಾಡಿ ಹೊಯ್ಸಳ ಸಾಮ್ರಾಜ್ಯದಲ್ಲಿ ಸೇರಿತು. ಇಲ್ಲಿಗೆ ಉಚ್ಚಂಗಿ ಪಾಂಡ್ಯರ ಮನೆತನ ಇತಿಹಾಸದಿಂದ ಕಣ್ಮರೆಯಾಗಿ, ಪಾಂಡ್ಯರ
ರಾಜ್ಯವು ಹೊಯ್ಸಳ ಸಾಮ್ರಾಜ್ಯದ ಭಾಗವಾಯಿತು.
ಸಾಂಸ್ಕೃತಿಕ ಕೊಡುಗೆಗಳು:- ಉಚ್ಚಂಗಿ ಪಾಂಡ್ಯರು ಎರಡು ನೂರು ವರ್ಷಗಳ ಕಾಲ ಜನಪ್ರಿಯರಾಗಿ ಆಡಳಿತ ನಡೆಸಿ ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ್ದರು. ಪಾಂಡ್ಯರ ಆಸ್ಥಾನದಲ್ಲಿದ್ದ ಮಧುಸೂದನದೇವ ಕವಿಯೂ ಜ್ಞಾನಿಯೂ ಆಗಿದ್ದ. ಜಗನ್ನಾಥವಿಜಯದ ಕರ್ತೃವಾದ ರುದ್ರಭಟ್ಟನೂ ಪಾಂಡ್ಯರ ಆಸ್ಥಾನದಲ್ಲಿದ್ದಂತೆ ತೋರುತ್ತದೆ. ವೀರಬಲ್ಲಾಳ ಉಚ್ಚಂಗಿಯನ್ನು ಮುತ್ತಿ ಕಾಮದೇವನನ್ನು ಸೋಲಿಸಿದ್ದನ್ನು ಈತ ತನ್ನ ಕಾವ್ಯದಲ್ಲಿ ಪ್ರಸ್ತಾಪಿಸಿದ್ದಾನೆ. ಪಾಂಡ್ಯರಾಜರು ತಮ್ಮ ನಾಡಿನಲ್ಲಿ ಅನೇಕ ದೇವಾಲಯಗಳನ್ನೂ ಕೆರೆಗಳನ್ನೂ ಕಟ್ಟಿಸಿದ್ದರು. ಆಗ ಪ್ರಬಲವಾಗಿದ್ದ ಪಾಶುಪತ ಶೈವಮತಕ್ಕೆ ಇವರಿಂದ ವಿಶೇಷ ಪ್ರೋತ್ಸಾಹ ದೊರಕಿತ್ತು.
Comments
Post a Comment